ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಲಾಡು ತಯಾರಿಸುವ ಕೇಂದ್ರದಲ್ಲಿ ಬೆಂಕಿ ಹೊತ್ತಿ ಉರಿದ ಘಟನೆ ಶುಕ್ರವಾರ ನಡೆದಿದೆ.
ಗ್ಯಾಸ್ ಸೋರಿಕೆಯಿಂದ ಲಾಡು ತಯಾರಿಕಾ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಅಗ್ನಿ ಅವಘಡದಲ್ಲಿ 36,000ಕ್ಕೂ ಹೆಚ್ಚು ಲಾಡು ಪ್ರಸಾದ ಬೆಂಕಿಗಾಹುತಿಯಾಗಿದೆ.
ಲಡ್ಡು ತಯಾರಿಸುವ ಓವನ್ಗೆ ಸಂಪರ್ಕ ಕಲ್ಪಿಸಿದ್ದ ಅಡುಗೆ ಮನೆಯ ಹೊರಭಾಗದಲ್ಲಿ ಇರಿಸಲಾಗಿದ್ದ ಸಿಲಿಂಡರ್ ಖಾಲಿಯಾಗಿದ್ದು ಅದನ್ನು ಬದಲಾಯಿಸಲು ಸಿಬ್ಬಂದಿ ಹೋದಾಗ ಘಟನೆ ನಡೆದಿದೆ.
ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಇತರರು ಆತಂಕದಿಂದ ಹೊರ ಬಂದಿದ್ದಾರೆ. 36 ಸಾವಿರಕ್ಕೂ ಹೆಚ್ಚು ಲಾಡು ಪ್ರಸಾದ ಬೆಂಕಿಗಾಹುತಿಯಾಗಿದೆ. ಸದ್ಯ ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ.
ಲಾಡು ತಯಾರಿಸಲು ಇಟ್ಟಿದ್ದ 9 ಕ್ವಿಂಟಾಲ್ ಸಕ್ಕರೆ, 96 ಕೆಜಿ ಕಡ್ಲೆಹಿಟ್ಟು, 40 ಕೆಜಿ ನಂದಿನಿ ತುಪ್ಪ, 30 ಕೆಜಿ ದ್ರಾಕ್ಷಿ, 20 ಕೆಜಿ ಗೋಡಂಬಿ ನಾಶವಾಗಿದ್ದು ಅಗ್ನಿ ಅವಘಡದಲ್ಲಿ 10.26 ಲಕ್ಷ ರೂ. ಮೌಲ್ಯದ ವಸ್ತುಗಳು ಸುಟ್ಟ ಭಸ್ಮವಾಗಿವೆ.
ಲಾಡು ಕೊರತೆ ಕಾರಣ ಮಲೆ ಮಹದೇಶ್ವರ ಬೆಟ್ಟದಲ್ಲಿ ಲಾಡು ಪ್ರಸಾದ ಮಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.