
ವಿಧಾನಸಭೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲೆಜಿಸ್ಲೇಜರ್ ಕಪ್-2024 ಚೆಸ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಒಟ್ಟು 6 ಸುತ್ತುಗಳಲ್ಲಿ ಪಂದ್ಯಗಳು ನಡೆದಿದ್ದವು. ಈ ಟೂರ್ನಿಯಲ್ಲಿ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಚಾಂಪಿಯನ್ ಆಗಿದ್ದರೆ, ಖಾನಾಪುರ ಶಾಸಕ ವಿಠ್ಠಲ್ ಸೋಮಣ್ಣ ಹಲಗೇಕರ್ ರನರ್ ಅಪ್ ಅಗಿದ್ದಾರೆ. ಇನ್ನು ಪ್ರತಾಪ್ ಸಿಂಹ ನಾಯಕ್ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಇದೇ ಮೊದಲ ಬಾರಿಗೆ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಲೆಜಿಸ್ಲೇಚರ್ ಕಪ್-2024 ಚೆಸ್ ಟೂರ್ನಿ ಅಂತ್ಯವಾಗಿದ್ದು, ಚಾಂಪಿಯನ್, ರನರ್ ಅಪ್ ಹಾಗೂ ತೃತೀಯ ಸ್ಥಾನ ಪಡೆದುಕೊಂಡವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುಮಾನ ವಿತರಿಸಿದರು.

ಜೇವರ್ಗಿ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಅವರು ಈ ಚೊಚ್ಚಲ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಟ್ರೋಫಿ ನೀಡಿದರು. ಅಲ್ಲದೇ ಚಾಂಪಿಯನ್ ಆದ ಅಜಯ್ ಸಿಂಗ್ ಅವರಿಗೆ 2 ಲಕ್ಷ ರೂ. ನಗದು ಬಹುಮಾನ ಸಹ ಸಿಕ್ಕಿದೆ.

ಇನ್ನು ಫೈನಲ್ ಪಂದ್ಯದಲ್ಲಿ ಅಜಯ್ ಸಿಂಗ್ ವಿರುದ್ಧ ಪರಾಭವಗೊಂಡು ರನರ್ ಅಪ್ ಆಗಿರುವ ಖಾನಾಪುರ ಶಾಸಕ ವಿಠ್ಠಲ್ ಸೋಮಣ್ಣ ಹಲಗೇಕರ್ ಅವರು ದ್ವಿತೀಯ ಬಹುಮಾನಕ್ಕೆ ತೃಪ್ತಿಪಟ್ಟಿದ್ದು, ಅವರಿಗೆ ಸಿಎಂ ಬಹುಮಾನ ವಿತರಿಸಿ ಶುಭ ಹಾರೈಸಿದರು.

ಇನ್ನು ಬಿಜೆಪಿ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಈ ಲೆಜಿಸ್ಲೇಚರ್ ಕಪ್-2024 ಚೆಸ್ ಟೂರ್ನಿಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದು, ಅವರಿಗೂ ಸಹ ಸಿದ್ದರಾಮಯ್ಯ ಅವರು ಪ್ರಶಸ್ತಿ ನೀಡಿದರು.

ವಿಧಾನಸೌಧ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕರ್ನಾಟಕ ವಿಧಾನ ಮಂಡಲ ಮತ್ತು ಅಖಿಲ ಭಾರತ ಚೆಸ್ ಫೆಡರೇಷನ್ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಚೆಸ್ ದಿನಾಚರಣೆ ಹಾಗೂ ಶತಮಾನೋತ್ಸವದ ಅಂಗವಾಗಿ ಈ ಹಬ್ಬ ಆಯೋಜಿಸಲಾಗಿತ್ತು. ಸಚಿವರು, ಶಾಸಕರು ಮತ್ತು ಅಧಿಕಾರಿ/ಸಿಬ್ಬಂದಿಗಾಗಿ ಓಪನ್ ರಾಪಿಡ್ ಚೆಸ್ ಟೂರ್ನ್ಮೆಂಟ್ 2024 ಲೆಜಿಸ್ಲೇಚರ್ ಕಪ್-2024 ಚೆಸ್ ಪಂದ್ಯವನ್ನು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಉದ್ಘಾಟಿಸಿದ್ದರು.