
ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಸಿ.ಹೆಚ್. ವಿಜಯ್ ಶಂಕರ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಿಸಿದ್ದಾರೆ.

ರಾಜಸ್ಥಾನ, ತೆಲಂಗಾಣ, ಪಂಜಾಬ್ ಸೇರಿದಂತೆ 10 ರಾಜ್ಯಗಳಿಗೆ ರಾಷ್ಟ್ರಪತಿ ಮುರ್ಮು ಅವರು ನೂತನ ರಾಜ್ಯಪಾಲರನ್ನು ನೇಮಕ ಮಾಡಿದ್ದಾರೆ. ಈ ವೇಳೆ ಮೇಘಾಲಯದ ನೂತನ ರಾಜ್ಯಪಾಲರಾಗಿ ಸಿ.ಹೆಚ್ ವಿಜಯ್ ಶಂಕರ್ ಅವರನ್ನ ನೇಮಕ ಮಾಡಲಾಗಿದೆ.

ರಾಣೆಬೆನ್ನೂರು ಮೂಲದವರಾದ ವಿಜಯ್ ಶಂಕರ್ ಅವರು 1956 ಅಕ್ಟೋಬರ್ 21ರಂದು ಜನಿಸಿದರು. ರಾಜಕೀಯ ಆರಂಭದ ದಿನಗಳಿಂದ ಬಿಜೆಪಿಯಲ್ಲಿದ್ದ ಇವರು, 2017ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. 2019ರಲ್ಲಿ ಮತ್ತೆ ಬಿಜೆಪಿಗೆ ಸೇರಿಕೊಂಡರು.

1994ರಲ್ಲಿ ಹುಣಸೂರಿನಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿದ್ದರು, ಅಲ್ಲದೇ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಉಳಿದಂತೆ 1988ರಲ್ಲಿ ಮೈಸೂರಿನಿಂದ 12ನೇ ಲೋಕಸಭೆಗೆ ಆಯ್ಕೆಯಾಗಿದ್ದರು.

ವಿಜಯ್ ಶಂಕರ್ 2010ರಲ್ಲಿ ಕರ್ನಾಟಕ ವಿಧಾನ ಪರಿಷತ್ ಗೆ ಆಯ್ಕೆ ಮಾಡಲಾಗಿತ್ತು, 2016ರ ವರೆಗೂ ಎಂಎಲ್ಸಿಯಾಗಿ ಕಾರ್ಯನಿರ್ವಹಿಸಿದ್ದರು. 1998, 2004 ರಲ್ಲಿ ವಿಜಯ್ ಶಂಕರ್ ಅವರು ಬಿಜೆಪಿಯಿಂದ ಸ್ಪರ್ಧಿಸಿ ಮೈಸೂರು ಸಂಸದರಾಗಿ ಆಯ್ಕೆ ಆಗಿದ್ದರು.

ಇನ್ನು 1950 ರ ನಡುವೆ ಮೈಸೂರು ಒಡೆಯರ್ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿರುದ್ಧ 2004 ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಮರು ಆಯ್ಕೆಯಾದರು.

2014ರಲ್ಲಿ ಹಾಸನದಿಂದ ಸ್ಪರ್ಧೆ ಮಾಡಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ವಿರುದ್ಧ ಸೋಲು ಕಂಡರು. 2019ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಪ್ರತಾಪ್ ಸಿಂಹ ವಿರುದ್ಧ ಸೋತಿದ್ದರು.

ವಿಜಯ್ ಶಂಕರ್ ಅವರು ಕರ್ನಾಟಕ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದು ಅರಣ್ಯ ಇಲಾಖೆ ಹಾಗೂ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸದ್ಯ ರಾಜ್ಯಪಾಲರಾಗಿ ಆಯ್ಕೆ ಆದ ಹಿನ್ನೆಲೆ ರಾಜಕೀಯ ನಾಯಕರು ಸಾಮಾಜಿಕ ಜಾಲತಾಣದ ಮೂಲಕ ವಿಜಯ್ ಶಂಕರ್ ಆವರಿಗೆ ಶುಭ ಕೋರಿದ್ದಾರೆ.