- Kannada News Karnataka Warning notice to Congress MLA Vinay Kulkarni along with Koragajjana Abhaya, Mangalore news in kannada
ಕಾಂಗ್ರೆಸ್ ಶಾಸಕ ವಿನಯ್ ಕುಲರ್ಣಿಗೆ ಕೊರಗಜ್ಜನ ಅಭಯದ ಜತೆಗೆ ಎಚ್ಚರಿಕೆ ಸೂಚನೆ
ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ ಆರೋಪಿ ಎನಿಸಿರುವ ಧಾರವಾಡ ಗ್ರಾಮಾಂತರ ಶಾಸಕ ವಿನಯ್ ಕುಲಕರ್ಣಿ ಸಂಕಷ್ಟ ಪರಿಹಾರಕ್ಕೆ ಕೊರಗಜ್ಜನ ಮೊರೆ ಹೋಗಿದ್ದಾರೆ. ಕೊರಗಜ್ಜನ ಸನ್ನಿಧಿಯಲ್ಲಿ ಶಾಸಕ ವಿನಯ್ ಕುಲಕರ್ಣಿಯಲ್ಲಿ ದೈವ ನುಡಿದಿದ್ದೇನು? ಕಂಟಕ ಪರಿಹಾರಕ್ಕೆ ಕೊರಗಜ್ಜ ನೀಡಿದ ಅಭಯ ಎಂಥಾದ್ದು..? ಕಂಪ್ಲೀಟ್ಡೀಟೇಲ್ಸ್ ಇಲ್ಲಿದೆ.
Updated on:Jul 28, 2024 | 2:54 PM

ಧಾರವಾಡ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ ಗೌಡ ಹತ್ಯೆ ಪ್ರಕರಣದ ಆರೋಪ ಎದುರಿಸುತ್ತಿರೋದು, ಧಾರವಾಡ ಪ್ರವೇಶಿಸಿದಂತೆ ಕೋರ್ಟ್ ನಿರ್ಬಂಧ ಹೇರಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಇದೀಗ ಧಾರವಾಡಕ್ಕೆ ಪ್ರವೇಶ ನಿರ್ಬಂಧ ಸಂಬಂಧ ಮುಂದಿನ ತಿಂಗಳು ಕೋರ್ಟ್ ತೀರ್ಮಾನ ಹೊರಡಿಸಲಿದ್ದು, ಅದಕ್ಕೂ ಮುನ್ನ ಶಾಸಕ ವಿನಯ್ ಕುಲಕರ್ಣಿ ಕೊರಗಜ್ಜನ ಮೊರೆ ಹೋಗಿದ್ದಾರೆ. ಕೊರಗಜ್ಜನ ಅಭಯದ ಜೊತೆಯಲ್ಲಿ ಸಾಕಷ್ಟು ಎಚ್ಚರಿಕೆಯನ್ನೂ ನೀಡಿದೆ.

ಹೌದು, ಸಂಕಷ್ಟ ಪರಿಹಾರಕ್ಕಾಗಿ ಮಂಗಳೂರಿನ ತೊಕ್ಕೊಟ್ಟು ಜಂಕ್ಷನ್ನಲ್ಲಿರುವ ಕೊರಗಜ್ಜನ ಕಟ್ಟೆಯಲ್ಲಿ ಶಾಸಕ ವಿನಯ್ ಕುಲಕರ್ಣಿ ಹಾಗೂ ಕುಟುಂಬಸ್ಥರು ಹರಕೆ ಕೋಲ ಸೇವೆ ಸಲ್ಲಿಸಿದ್ದಾರೆ. ಧಾರವಾಡ ಪ್ರವೇಶದ ವಿಚಾರದಲ್ಲಿ ಸಿಬಿಐ ಕೋರ್ಟ್ನಲ್ಲಿ ಮುಂದಿನ 48 ದಿನಗಳಲ್ಲಿ ನಿರ್ಬಂಧ ತೆರವುಗೊಳ್ಳಲಿದೆ ಎಂದು ದೈವ ಕಾರ್ಣಿಕ ನುಡಿದಿದೆ. ಅಲ್ಲದೇ ಮುಂದಿನ ಮೂರು ವರ್ಷಗಳ ಕಾಲ ಭಾರೀ ಜಾಗೃತಿಯಿಂದ ಇರುವಂತೆ ಎಚ್ಚರಿಕೆ ಕೂಡ ನೀಡಿದೆ.

ಇನ್ನು ಶಾಸಕ ವಿನಯ್ ಕುಲಕರ್ಣಿಯ ಈ ಎಲ್ಲಾ ಕಂಟಕಕ್ಕೆ ಒಂದು ಹೆಣ್ಣು ಕಾರಣ ಎಂದು ಮಾರ್ಮಿಕವಾಗಿ ದೈವ ನುಡಿದಿದೆ. ಅಲ್ಲದೇ ಅಧರ್ಮದಲ್ಲಿ ಹೋದವರು ಯಾರೇ ಇದ್ದರೂ ಅವರನ್ನು ನಾನು ನೋಡಿಕೊಳ್ತೇನೆ. ಸಂಕಷ್ಟ ಪರಿಹಾರದ ಬಳಿಕ ಸಂತಸದಿಂದ ಬಂದು ನನ್ನ ಸನ್ನಿಧಿಯಲ್ಲಿ ಕೋಲಸೇವೆ ನೀಡು ಎಂದು ವಿನಯ್ ಕುಲಕರ್ಣಿಗೆ ದೈವ ಹೇಳಿದೆ.

ಈ ವಿಚಾರವಾಗಿ ಮಾತನಾಡಿದ ಶಾಸಕ ವಿನಯ್ ಕುಲಕರ್ಣಿ, ಚುನಾವಣಾ ಪೂರ್ವದಲ್ಲಿಯೇ ಕೋಲಸೇವೆ ಮಾಡಿಸಬೇಕು ಎಂದಿದ್ದೆ. ಆದರೆ ಈಗ ಸಮಯ ಕೂಡಿ ಬಂತು ಅಂತಾ ಹೇಳಿದರು.

ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಾಕಷ್ಟು ಸಂಕಷ್ಟ ಎದುರಿಸುತ್ತಿರುವ ವಿನಯ್ ಕುಲಕರ್ಣಿ ನ್ಯಾಯಾಂಗದಲ್ಲಿ ಯಾವುದೇ ರಿಲೀಫ್ ಸಿಗುವ ಲಕ್ಷಣ ಕಾಣದೇ ಇದೀಗ ದೈವದ ಮೊರೆ ಹೋಗಿದ್ದಾರೆ. ಕೊರಗಜ್ಜನ ಕೃಪೆಯಿಂದಾದರೂ ಈ ಪ್ರಕರಣ ಶೀಘ್ರದಲ್ಲಿಯೇ ಇತ್ಯರ್ಥವಾಗುತ್ತಾ? ವಿನಯ್ ಕುಲಕರ್ಣಿ ಧಾರವಾಡ ಪ್ರವೇಶದ ಹಾದಿ ಸುಗಮವಾಗುತ್ತಾ ಎಂದು ಕಾದು ನೋಡ್ಬೇಕಿದೆ.
Published On - 2:44 pm, Sun, 28 July 24




