
ಗಣೇಶ ಹಬ್ಬ ಬಂತ್ತು ಅಂದರೆ ನಗರದ ಯುವಕರಲ್ಲಿ ಎಲ್ಲಿಲ್ಲದ ಸಂಭ್ರಮ. ಅದರಲ್ಲೂ ವಿಭಿನ್ನ ಗಣೇಶ ಕೂರಿಸಿ ಎಲ್ಲರ ಗಮನ ಸೆಳೆಯಬೇಕು ಎನ್ನುವುದು ಕಾಮನ್. ಹಾಗಾಗಿ ಇಲ್ಲೊಂದು ಕಡೆ ಮಣ್ಣಿನಲ್ಲಿ ಆರ್ಸಿಬಿ ಸೇರಿದಂತೆ ವಿವಿಧ ಬಗೆಯ ಗಣೇಶ ಮೂರ್ತಿಗಳು ಸಿದ್ಧವಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಗಣೇಶೋತ್ಸವಕ್ಕೆ ಕೆರೆ ಮಣ್ಣಿನಿಂದ ವಿವಿಧ ಬಗೆಯ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದೆ. ಆ ಮೂಲಕ ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಒತ್ತು ನೀಡಲಾಗುತ್ತಿದೆ.

ಈ ಭಾರಿಯ ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಡಿಫರೆಂಟ್ ಗಣೇಶ ಮೂರ್ತಿ ತರಬೇಕು, ಅದ್ದೂರಿ ಸೆಟ್ ಹಾಕಬೇಕು ಅಂತ ಯುವಕರು ಈಗಾಗಲೇ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಯುವಕರಿಗಾಗಿಯೇ ಪಟ್ಟಣದ ರಾಜಗೋಪಾಲ್ ಕುಟುಂಬ ಕೆರೆ ಮಣ್ಣಿನಿಂದ ವಿವಿಧ ಬಗೆಯ ಮೂರ್ತಿಗಳನ್ನ ತಯಾರು ಮಾಡಿದ್ದಾರೆ. ಅದರಲ್ಲೂ 14 ವರ್ಷಗಳ ಬಳಿಕ ಆರ್ಸಿಬಿ ಕಪ್ ಗೆದ್ದ ಖುಷಿಗೆ ಗಣೇಶ ಕೈಯಲ್ಲಿ ಐಪಿಎಲ್ ಕಪ್ ಹಿಡಿದಿರುವ ರೀತಿಯಲ್ಲಿ ಮೂರ್ತಿ ತಯಾರಿಸಲಾಗಿದ್ದು, ಯುವಕರು ಫಿದಾ ಆಗಿದ್ದಾರೆ.

ಆರ್ಸಿಬಿ ಗಣೇಶ ಮಾತ್ರವಲ್ಲದೆ ಹನುಮಾನ್, ರಥದ ಇಲಿಗಳ ಗಣೇಶ, ವಿಷ್ಣು ಅವತಾರ ಸೇರಿದಂತೆ ವಿವಿಧ ಬಗೆಯ ಗಣೇಶ ಮೂರ್ತಿಗಳು ಎಲ್ಲರನ್ನೂ ಆಕರ್ಷಿಸುತ್ತಿವೆ. ಜೇಡಿ ಮಣ್ಣು ಮತ್ತು ಪೇಪರ್ ಮೂಲಕ ಇವುಗಳನ್ನು ತಯಾರು ಮಾಡಲಾಗಿದೆ. ಅಲ್ಲದೆ ಈ ಗಣೇಶ ಮೂರ್ತಿಗಳಿಗೆ ಕೆಮಿಕಲ್ ಮಿಶ್ರಿತ ಬಣ್ಣದ ಬದಲಿಗೆ ನೀರಿನಲ್ಲಿ ಸುಲಭವಾಗಿ ಕರಗುವ ಪರಿಸರ ಸ್ನೇಹಿ ಬಣ್ಣಗಳನ್ನು ಬಳಸಿದ್ದು, ಪರಿಸರ ಪ್ರೇಮಿಗಳ ಗಮನವೂ ಸೆಳೆಯುತ್ತಿವೆ.

ಕಳೆದ ಮೂರು ತಲೆ ಮಾರುಗಳಿಂದ ವಿಜಯಪುರ ಪಟ್ಟಣದ ರಾಜಗೋಪಾಲ್ ಎಂಬುವವರ ಕುಟುಂಬ ವರ್ಷ ಪೂರ್ತಿ ಗಣೇಶಗಳನ್ನ ನಿರ್ಮಾಣ ಮಾಡುವ ಕೆಲಸವನ್ನ ಮಾಡಿಕೊಂಡು ಬರುತ್ತಿದ್ದಾರೆ. ಇವರು ತಯಾರಿಸುವ ಗಣೇಶ ಮೂರ್ತಿಗಳಿಗೆ ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಹಲವಡೆ ಬೇಡಿಕೆ ಇದೆ.

ಗಣೇಶ ಹಬ್ಬ ಸಮೀಪಿಸುತ್ತಿರುವ ಬೆನ್ನಲ್ಲೇ ಯುವಕರ ಕಣ್ಮನ ಸೆಳೆಯಲು ವಿವಿಧ ಬಗೆಯ ಮೂರ್ತಿಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.