
ಕೊಪ್ಪಳ ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದು ಜನರ ಸಂಭ್ರಮವನ್ನು ಎಷ್ಟು ಹೆಚ್ಚಿಸಿದೆಯೋ ಅಷ್ಟೇ ಸಮಸ್ಯೆಗಳನ್ನು ಕೂಡ ತಂದೊಡ್ಡಿದ್ದು, ಕೊಪ್ಪಳ ಜಿಲ್ಲೆಯ ಬಹದ್ದೂರಬಂಡಿ, ಕನಕಗಿರಿ ತಾಲೂಕಿನ ಯರಡೋಣಾ, ಬಿಜನಳ್ಳಿ ಸೇರಿದಂತೆ ಜಿಲ್ಲೆಯ ಹಲವು ಗ್ರಾಮಗಳಲ್ಲಿನ ರಸ್ತೆಗಳು ಕೆಸರ ಗದ್ದೆಯಂತಾಗಿವೆ. ಹೆಚ್ಚಿನ ಕಡೆ ನೀರು ನಿಂತಿದ್ದರಿಂದ ದೊಡ್ಡ ಹೊಂಡಗಳಾಗಿದ್ದರೆ, ಅನೇಕ ಕಡೆ ಕೆಸರಿನಿಂದಾಗಿ ಕೆಸರು ಗದ್ದೆಗಳಂತಾಗಿ ಮಾರ್ಪಾಡಾಗಿವೆ.

ಇಂತಹ ದುಸ್ಥಿತಿಯಿದ್ದರೂ ಕೂಡ ರಸ್ತೆ ದುರಸ್ಥಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಿಲ್ಲ. ಇದೇ ಕಾರಣಕ್ಕೆ ಇಂದು ಬಹದ್ದೂರಬಂಡಿ ಗ್ರಾಮದ ನಿವಾಸಿಗಳು ತಮ್ಮೂರಿನ ಕೆಸರು ಗದ್ದೆಯಂತಾಗಿರುವ ರಸ್ತೆಯಲ್ಲಿ ಭತ್ತವನ್ನು ನಾಟಿ ಮಾಡುವ ಮೂಲಕ ವಿಭಿನ್ನವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಬಹದ್ದೂರಬಂಡಿಯಿಂದ ಹೂವಿನಾಳ ಗ್ರಾಮಕ್ಕೆ ಹೋಗುವ ರಸ್ತೆ ಹಾಳಾಗಿ ಅನೇಕ ವರ್ಷಗಳೆ ಕಳೆದಿವೆ. ಅನೇಕ ಬಾರಿ ರಸ್ತೆ ದುರಸ್ಥಿ ಮಾಡಿ ಎಂದು ಮನವಿ ಮಾಡಿದರೂ ಕೂಡ ಯಾರು ಸ್ಪಂಧಿಸುತ್ತಿಲ್ಲ. ಇದೀಗ ಮಳೆಗಾಲದಲ್ಲಿ ರಸ್ತೆ ಸಂಪೂರ್ಣವಾಗಿ ಕೆಸರು ಗದ್ದೆಯಾಗಿದೆ. ಇದರಿಂದ ಜನರು ನಡೆದಾಡಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಬೈಕ್ಗಳು ಸ್ಕಿಡ್ ಆಗುತ್ತಿದ್ದು, ಅನೇಕರು ಬಿದ್ದು ಗಾಯಗೊಳ್ಳುತ್ತಿದ್ದಾರೆ.

ವಯೋವೃದ್ದರು, ಮಕ್ಕಳು ರಸ್ತೆಯಲ್ಲಿ ನಡೆದುಕೊಂಡು ಹೋಗಲು ಸಂಕಷ್ಟ ಪಡುತ್ತಿದ್ದಾರೆ. ಹೀಗಾಗಿ ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಭತ್ತವನ್ನು ನಾಟಿ ಮಾಡುತ್ತಿದ್ದೇವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೊಪ್ಪಳ ಜಿಲ್ಲೆಯಲ್ಲಿ ಕೇವಲ ಬಹದ್ದೂರಬಂಡಿ ಗ್ರಾಮ ಮಾತ್ರವಲ್ಲ, ಜಿಲ್ಲೆಯ ಕನಕಗಿರಿ, ಕಾರಟಗಿ, ಗಂಗಾವತಿ, ಕುಷ್ಟಗಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಇದೇ ಸ್ಥಿತಿಯಿದೆ.

ಅನೇಕ ಕಡೆ ಗುಂಡಿಗಳು ಕೆರೆಯಂತೆ ಕಾಣುತ್ತಿವೆ. ಗ್ರಾಮಗಳಲ್ಲಿಯೇ ರಸ್ತೆಗಳು ಹಾಳಾಗಿ ಹೋಗಿದ್ದರಿಂದ ಜನರು ಸಾಕಷ್ಟು ಸಂಕಷ್ಟ ಪಡುತ್ತಿದ್ದಾರೆ. ಹಳ್ಳಿಗಳ ರಸ್ತೆಗಾಗಿ ಕೋಟಿ ಕೋಟಿ ಹಣ ಖರ್ಚು ಮಾಡಲಾಗಿದೆ. ಆದ್ರೆ, ಕಳಪೆ ಕಾಮಾಗರಿಗಳಿಂದ ರಸ್ತೆಗಳು ಒಂದೇ ವರ್ಷಕ್ಕೆ ಹಾಳಾಗಿ ಹೋಗುತ್ತಿವೆ. ಇನ್ನು ಅನೇಕ ಕಡೆ ರಸ್ತೆ ಕಾಮಗಾರಿಗಳನ್ನೇ ಮಾಡದೇ ಇರುವುದರಿಂದ ಕೆಸರು ಗದ್ದೆಗಳಾಗುತ್ತಿವೆ. ಇಷ್ಟಾದರೂ ಕೂಡ ರಸ್ತೆಯನ್ನು ದುರಸ್ಥಿ ಮಾಡೋ ಕೆಲಸವನ್ನು ಯಾವೊಬ್ಬ ಅಧಿಕಾರಿಗಳು, ಜನಪ್ರತಿನಿಧಿಗಳು ಮಾಡುತ್ತಿಲ್ಲ.

ಸದ್ಯ ಹದಗೆಟ್ಟಿರುವ ರಸ್ತೆಗಳ ಬಗ್ಗೆ ಜಿಲ್ಲಾಡಳಿತ ಮತ್ತು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಇನ್ನಾದರೂ ಕೂಡ ಹದಗೆಟ್ಟ ರಸ್ತೆಗಳ ದುರಸ್ಥಿ ಮಾಡುವ ಕೆಲಸ ಮಾಡಬೇಕಿದೆ. ಆ ಮೂಲಕ ಜನರ ನೆಮ್ಮದಿಯ ಬದುಕಿಗೆ ಬೇಕಾದ ಕ್ರಮಗಳನ್ನು ಸರ್ಕಾರ ಮಾಡಬೇಕಿದೆ.