ಕೇರಳದ ವಯನಾಡು ಜಿಲ್ಲೆಯಲ್ಲಿ ಗುಡ್ಡ ಕುಸಿದು ಸಾವು ನೋವು ಸಂಭವಿಸಿದೆ. ಈ ದುರಂತದಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ 293ಕ್ಕೆ ಏರಿಕೆಯಾಗದ್ದು, 200ಕ್ಕೂ ಹೆಚ್ಚು ಜನ ನಾಪತ್ತೆಯಾಗಿರುವ ಮಾಹಿತಿ ದೊರೆತಿದೆ. ಜೊತೆಗೆ ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಇಂತಹ ದುರಂತದಲ್ಲಿ ಪಾರಾಗಿದ್ದ ಚಾಮರಾಜನಗರ ಜಿಲ್ಲೆಯ 6 ಮಂದಿಯನ್ನು ಇದೀಗ ಅವರವರ ಸ್ವಗ್ರಾಮಗಳಿಗೆ ಸುರಕ್ಷಿತವಾಗಿ ವಾಪಸ್ ಕರೆದುಕೊಂಡು ಬಿಡಲಾಗಿದೆ. ಹೌದು, ಚಾಮರಾಜನಗರ ಜಿಲ್ಲಾಡಳಿತ, ಮೇಪ್ಪಾಡಿ ಕಾಳಜಿ ಕೇಂದ್ರದಿಂದ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ.
ಇವರೆಲ್ಲರೂ ನೆರೆ ರಾಜ್ಯ ಕೇರಳದ ಚೂರಲ್ಮಲಾ ಟೀ ಎಸ್ಟೇಟ್ಗಳಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಮಾಡಿಕೊಂಡಿದ್ದರು. ದುರಂತದಿಂದ ಪಾರಾಗಿ ಮೇಪ್ಪಾಡಿ ಕಾಳಜಿ ಕೇಂದ್ರದಲ್ಲಿ ಈ ಕಾರ್ಮಿಕರನ್ನು ಇರಿಸಲಾಗಿತ್ತು.
ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದ ನಾಗಶೆಟ್ಟಿ, ಗೌರಮ್ಮ, ದಿವ್ಯಾ, ಚಾಮರಾಜನಗರ ತಾಲೋಕಿನ ಮಂಗಲ ಗ್ರಾಮದ ಜಯಶ್ರೀ, ಮಂಜುಳಾ, ಹಾಗೂ ಸಿದ್ದರಾಜು ಎಂಬುವವರನ್ನು ಅಧಿಕಾರಿಗಳು ಟೆಂಪೋ ಟ್ರಾವೆಲ್ಲರ್ ಮೂಲಕ ಸ್ವಗ್ರಾಮಗಳಿಗೆ ಕರೆತಂದು ಬಿಟ್ಟಿದ್ದಾರೆ.
ಇನ್ನು ದೇವರನಾಡು ಕೇರಳದ ವಯನಾಡು ಜಿಲ್ಲೆಯ ಚೂರಲಮಲದ ಚಹಾ ಎಸ್ಟೇಟ್ನಲ್ಲಿ ಕೂಲಿ ಮಾಡುತ್ತಾ ಇದ್ದ ರತ್ನಮ್ಮ ಹಾಗೂ ರಾಜೇಂದ್ರ ದಂಪತಿ ಗುಡ್ಡ ಕುಸಿತದಲ್ಲಿ ಸಾವಿಗೀಡಾಗಿದ್ದರು. ಇದೀಗ ಉಳಿದವರನ್ನು ರಕ್ಷಿಸಿ ಕರೆತರಲಾಗಿದೆ.
ಕೇರಳದ ಮೆಪ್ಪಾಡಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ವಯನಾಡು ಜಿಲ್ಲೆಯ ಜನ ತತ್ತರಿಸಿದ್ದಾರೆ. ಬೆಳಿಗ್ಗೆ ಕೆಲ ಸಮಯ ಬಿಡುವು ನೀಡಿದ್ದ ಮಳೆ, ಸಂಜೆಯಾಗುತ್ತಿದ್ದಂತೆ ಮತ್ತೆ ವರುಣಾರ್ಭಟ ಜೋರಾಗಿದೆ.
Published On - 8:56 pm, Thu, 1 August 24