
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸಹೋದರ, ವಿಧಾನಪರಿಷತ್ ಸದಸ್ಯ ಚೆನ್ನರಾಜು ಹಟ್ಟಿಹೊಳಿ ಪ್ರಯಾಣಿಸುತ್ತಿದ್ದ ಕಾರು ಬೆಳಗಾವಿಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಇಂದು (ಜನವರಿ 14) ಸಂಕ್ರಾಂತಿ ಹಬ್ಬದ ದಿನವೇ ಅಪಘಾತಕ್ಕೀಡಾಗಿದೆ.

ಸಂಕ್ರಾಂತಿ ಹಬ್ಬವನ್ನು ಮನೆಯಲ್ಲಿ ಆಚರಿಸಬೇಕೆಂದು ಕಾಂಗ್ರೆಸ್ ಶಾಸಕಾಂಗ ಸಭೆ ಮುಗಿಸಿ ಬೆಂಗಳೂರಿನಿಂದ ಬೆಳಗಾವಿಗೆ ವಾಪಸ್ ಬರುವಾಗ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರ್ ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣವಾಗಿ ಜಖಂ ಆಗಿದೆ.

ರಸ್ತೆಯಲ್ಲಿ ಅಡ್ಡಬಂದ ನಾಯಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ಮರಕ್ಕೆ ಡಿಕ್ಕಿ ಹೊಡೆದಿದೆ. ಹಾಗಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆನ್ನು ಮತ್ತು ಮುಖಕ್ಕೆ ಸಣ್ಣಪುಟ್ಟ ಗಾಯಗಳು ಆಗಿವೆ. ಎಂಎಲ್ಸಿ ಚೆನ್ನರಾಜ ಹಟ್ಟಿಹೊಳಿ ಅವರಿಗೂ ತಲೆಗೆ ಗಾಯ ಆಗಿದೆ ಎಂದು ತಿಳಿದುಬಂದಿದೆ.

ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆನ್ನಿಗೆ ಬಲವಾದ ಪೆಟ್ಟಾಗಿದೆ. ಇವರ ಬೆನ್ನಿನ ಎಲ್1 ಮತ್ತು ಎಲ್4 ಫ್ರಾಕ್ಚರ್ ಆಗಿರುವುದು ಧೃಡವಾಗಿದೆ. ಪೇನ್ ಕಿಲ್ಲರ್ ಕೊಟ್ಟ ಟ್ರೀಟ್ಮೆಂಟ್ ಮುಂದುವರಿಸಿದ್ದೇವೆ. ಈಗ ಸುಧಾರಿಸಿದ್ದು, ಇನ್ನೂ 2 ದಿನ ಚಿಕಿತ್ಸೆ ನೀಡಿ ಡಿಶ್ಚಾರ್ಜ್ ಮಾಡುತ್ತೇವೆ. ಹೆಬ್ಬಾಳ್ಕರ್ ಅವರು ಕನಿಷ್ಠ 1 ತಿಂಗಳು ಬೆಡ್ ರೆಸ್ಟ್ ಮಾಡಬೇಕು ಡಾ. ರವಿ ಪಾಟೀಲ್ ತಿಳಿಸಿದ್ದಾರೆ.

ಮರಕ್ಕೆ ಗುದ್ದಿದ ರಭಸಕ್ಕೆ ಇನೋವಾ ಹೈ ಕ್ರಾಸ್ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನ ಚಾಲಕ, ಗನ್ ಮ್ಯಾನ್, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅವರ ಸಹೋದರ ಬದುಕುಳಿದಿದ್ದೇ ಪವಾಡ. ಯಾಕಂದ್ರೆ ಕಾರಿನ ಸ್ಥಿತಿ ನೋಡಿದರೆ ಅಪಘಾತದ ಕರಾಳತೆ ಬಿಚ್ಚಿಡ್ತಿದೆ.

ಇನೋವಾ ಹೈ ಕ್ರಾಸ್ ಕಾರು ಫುಲ್ ಹೈಫೈ ಆಗಿರುವುದರಿಂದ ಎಲ್ಲರೂ ಬದುಕುಳಿದಿದ್ದಾರೆ. ಗುದ್ದಿದ ರಭಸಕ್ಕೆ ಕಾರಿನ ಹೆರ್ಬ್ಯಾಗ್ಗಳು ಓಪನ್ ಆಗಿವೆ. ಹೀಗಾಗಿ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದಾವೆ. ಇನ್ನೋವಾ ಬಿಟ್ಟರೇ ಬೇರೆ ಯಾವುದೇ ಸಣ್ಣ-ಪುಟ್ಟ ಕಾರು ಆಗಿದ್ದರೆ ದೊಡ್ಡ ದುರಂತವೇ ಆಗಿರೋದು.

ಬೆಳಗಾವಿ ನಗರದ ವಿಜಯ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ಗೆ ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ್ ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿದರು. ಅನಂತರ ಮಾತನಾಡಿದ ಅವರು, ''ಬೆಂಗಳೂರಿನಿಂದ ಸಚಿವರು ಕಾರಿನಲ್ಲಿ ಬರುವಾಗ ಶ್ವಾನ ಅಡ್ಡ ಬಂದಿದೆ. ಹಾಗೂ ವಾಹನ ಕೂಡ ಎದುರಿಗೆ ಬಂದಿದೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಚಾಲಕ ಕಾರನ್ನು ಪಕ್ಕಕ್ಕೆ ತಿರುಗಿಸಿದ್ದಾರೆ. ಕಾರು ಮರಕ್ಕೆ ಗುದ್ದಿ ನಿಂತಿದೆ' ಎಂದು ಮಾಹಿತಿ ನೀಡಿದ್ದಾರೆ.

ಆಧುನಿಕ ವಾಹನಗಳಲ್ಲಿ ಏರ್ ಬ್ಯಾಗ್ ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ. ಅಪಘಾತ ಸಂದರ್ಭಗಳಲ್ಲಿ ಚಾಲಕ ದಿಢೀರ್ ಬ್ರೇಕ್ ಹಾಕುವ ಸಂದರ್ಭದಲ್ಲಿ ಎದುರಿನ ಸ್ಟೀರಿಂಗ್ ಅಥವಾ ಡ್ಯಾಷ್ ಬೋರ್ಡ್ಗಳಿಗೆ ತಲೆ ಅಪ್ಪಳಿಸಿ ತೀವ್ರ ರೀತಿಯ ಪೆಟ್ಟು ಬೀಳುವ ಸಂಭವವಿರುತ್ತದೆ. ಇದನ್ನು ತಡೆಯುವಲ್ಲಿ ಏರ್ ಬ್ಯಾಗ್ಗಳು ನಿರ್ಣಾಯಕ ಪಾತ್ರವಹಿಸುತ್ತದೆ. ಅದರಂತೆ ಹೆಬ್ಬಾಳ್ಕರ್ ಮರಕ್ಕೆ ಡಿಕ್ಕಿ ಹೊಡೆದ ತಕ್ಷಣವೇ ಸ್ಟೇರಿಂಗ್ ಹಾಗೂ ಡ್ಯಾಶ್ ಬೋರ್ಡ್ನಿಂದ ಏರ್ ಬ್ಯಾಗ್ಗಳು ಓಪನ್ ಆಗಿದ್ದರಿಂದ ಪ್ರಾಣಾಪಯಾದಿಂದ ಪಾರಾಗಿದ್ದಾರೆ.

ಸೈಡ್ ಏರ್ ಬ್ಯಾಗ್ಗಳು ಬದಿಯಿಂದ ಢಿಕ್ಕಿಯಾದ ಸಂದರ್ಭದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತವೆ. ಸೈಡ್ ಏರ್ ಬ್ಯಾಗ್ ಎರಡು ವಿಧಗಳಲ್ಲಿರುತ್ತದೆ. ಇದರಲ್ಲಿ ಮೊದಲನೆಯದ್ದು ಸೈಡ್ ಟಾರ್ಸೊ (ದೇಹ) ಏರ್ ಬ್ಯಾಗ್ ಆಗಿದೆ. ಇದು ಸಾಮಾನ್ಯವಾಗಿ ಸೀಟಿನ ಬದಿಯಲ್ಲಿ ಲಗತ್ತಿಸಲಾಗಿದ್ದು, ಅಪಘಾತ ಸಂದರ್ಭದಲ್ಲಿ ಚಾಲಕ ಹಾಗೂ ಬಾಗಿಲು ನಡುವೆ ತೆರೆದುಕೊಳ್ಳುತ್ತದೆ. ಅದರಂತೆ ಹೆಬ್ಬಾಳ್ಕರ್ ಕಾರಿನಲ್ಲೂ ಸಹ ಸೈಡ್ ಏರ್ ಬ್ಯಾಗ್ಗಳು ಸಹ ಓಪನ್ ಆಗಿವೆ.

ಸೆಂಟ್ರಲ್ ಏರ್ ಬ್ಯಾಗ್ ಕಂಟ್ರೋಲ್ ಯುನಿಟ್ (ಎಸಿಯು) ವಾಹನಗಳಲ್ಲಿ ಸೆನ್ಸಾರುಗಳನ್ನು ಮಾನಿಟರ್ ಮಾಡುತ್ತದೆ. ಏರ್ ಬ್ಯಾಗ್ಗಳು ಸ್ಟೀರಿಂಗ್ ಒಳಗಡೆ ಪ್ಲಾಸ್ಟಿಕ್ ರೀತಿಯಲ್ಲಿ ಇರುತ್ತೆ. ಅಪಘಾತ ವೇಳೆ ತಕ್ಷಣ ಹೊರಚಿಮ್ಮುವಂತೆ ವ್ಯವಸ್ಥೆ ಮಾಡಲಾಗಿದ್ದು, ಇದು ಸ್ಟೀರಿಂಗ್ ಮೇಲೆ ಬಂದಪ್ಪಳಿಸುವ ಪ್ರಯಾಣಿಕರ ಮುಖಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತದೆ. ಅಲ್ಲದೆ ತೆರೆಯಲ್ಪಟ್ಟ ಕ್ಷಣಾರ್ಧದಲ್ಲೇ ಮುದುಡಿಕೊಳ್ಳುತ್ತದೆ. ವಾಹನದ ಮುಂಭಾಗದ ಬಂಪರ್ನಲ್ಲಿರುವ ಸೆನ್ಸಾರ್ ಮೇಲೆ ಕೊಂಚ ಒತ್ತಡದ ಸ್ಪರ್ಶ ಬಿದ್ದರೂ ಏರ್ ಬ್ಯಾಗ್ ತೆರೆದುಕೊಳ್ಳುವಂತೆ ಮಾಡಲಾಗಿರುತ್ತದೆ. ಅದರಂತೆ ಹೆಬ್ಬಾಳ್ಕರ್ ಅಪಘಾತದಲ್ಲೂ ಸಹ ಕಾರಿನ ಎಲ್ಲಾ ಏರ್ ಬ್ಯಾಗ್ಗಳು ತೆರೆದುಕೊಂಡಿದ್ದು, ನಾಲ್ವರ ಜೀವ ಕಾಪಾಡಿವೆ.