
ಕೋಲಾರಮ್ಮ ದೇವಸ್ಥಾನ (Kolaramma Temple) ಕೋಲಾರದ ಕೋಲಾರಮ್ಮ ದೇವಾಲಯವು ತನ್ನ ವಿಶೇಷ ಶಿಲ್ಪ ಕಲೆಯ ಮೂಲಕ ಜನರನ್ನು ಆಕರ್ಷಿಸುತ್ತಿದೆ. ಲಂಬಕೋನಾಕೃತಿಯ ವಾಸ್ತು ಶಿಲ್ಪವನ್ನು ಹೊಂದಿರುವ ಜೋಡಿ ಮಂದಿರಗಳಿಂದ ಕೂಡಿದ ಸಾವಿರ ವರ್ಷಗಳ ಹಿಂದಿನ ಈ ಅಲಯಕ್ಕೆ ಒಂದೇ ಮುಖಮಂಟಪವಿರುವುದು ವೈಶಿಷ್ಟ್ಯ. ದೇವಾಲಯದ ಶಿಲ್ಪ ಕಲೆಯು ಒಂದು ಉತ್ತಮ ಉದಾಹರಣೆಯಾಗಿದೆ.

ಅಂತರ ಗಂಗೆ (Antara Gange) ಕೋಲಾರ ನಗರದ ಪಶ್ಚಿಮಕ್ಕೆ ಮೂರು ಕಿಲೋಮೀಟರ್ ದೂರದಲ್ಲಿ ಶತಶೃಂಗ ಪರ್ವತ ಶ್ರೇಣಿಯಲ್ಲಿರುವ ಅಂತರಗಂಗೆ ಚೆಲುವಿನ ತಾಣವಾಗಿದೆ. ಇಲ್ಲಿರುವ ಬಸವಣ್ಣನ ಬಾಯಿಯಿಂದ ಸದಾ ಹೊರ ಹೊಮ್ಮುವ ಜಲಧಾರೆ ವಿಜ್ಞಾನ ವಿಸ್ಮಯವಾಗಿದೆ. ಶೃಂಗದ ಬೆಟ್ಟ ಗುಡ್ಡ, ಬಂಡೆಗಳು ಹಲವು ಆಕಾರಗಳನ್ನು ಪಡೆದಿದ್ದು, ಶಿಖರದಲ್ಲಿರುವ ಹಾವಿನಹೆಡೆ ಆಕಾರದ ಬಂಡೆಯಿಂದ ಏಳು ಹಳ್ಳಿಗಳ ಪಕ್ಷಿನೋಟ ಕಾಣಬಹುದಾಗಿದೆ. ಚಾರಣಪ್ರಿಯರ ಸ್ವರ್ಗವಾಗಿರುವ ಅಂತರಗಂಗೆ ಪ್ರದೇಶ ಹಲವು ಐತಿಹಾಸಿಕ ಗುಹೆಗಳನ್ನು ಬಳಗೊಂಡಿದೆ. ಬೆಟ್ಟದ ತಪ್ಪಲಿನಲ್ಲಿರುವ ಜಲಕಂಠೇಶ್ವರನನ್ನು ದರ್ಶನ ಮಾಡಿಕೊಂಡು ಮೆಟ್ಟಲು ಹತ್ತಿಕೊಂಡು ಮೇಲೆ ಹೋಗಿ ಕಾಶಿ ವಿಶ್ವೇಶ್ವರನನ್ನು ಕಾಣಬಹುದು ಬೆಟ್ಟದ ಇನ್ನೊಂದು ಭಾಗದಲ್ಲಿ ವಾಹನ ಸಂಚರಿಸಬಹುದಾದ ರಸ್ತೆಯಿದ್ದು, ತೇರಹಳ್ಳಿಯ ಗಂಗಾಧರೇಶ್ವರ ದೇಗುಲ ವಿಶಿಷ್ಟವಾದುದಾಗಿದೆ.

ಸೋಮೇಶ್ವರ ದೇವಸ್ಥಾನ ( Someshwara Temple) ಕೋಲಾರಮ್ಮ ದೇವಾಲಯ ಸಮೀಪ ದ್ರಾವಿಡ ಶೈಲಿಗೆ ಉತ್ತಮ ಮಾದರಿಯಾದ ಶಿಲ್ಪಕಲೆ ವೈವಿಧ್ಯ ತೋರಿದ ಸುಂದರ ಸೋಮೇಶ್ವರ ದೇವಾಲಯವಿದೆ. ಪ್ರತ್ಯೇಕ ಕಲ್ಯಾಣ ಮಂಟಪ, ಗರ್ಭಗೃಹ, ಅಂತರಾಳ, ನವರಂಗಗಳು ಕಲೆಗಾರಿಕೆಯ ಹೊರ ಮೈ ಹೊಂದಿದೆ. ಒಳಗಿನ ಕಂಬಗಳ ಮೇಲಿನ ಕೆತ್ತನೆ ನೋಡಿದಾಗ ಇದೊಂದು ಉತ್ತುಂಗವಾದ ರಾಜತಾಂತ್ರಿ ವಿಗ್ರಹವಿದೆ. ದೇಗುಲದ ಬಲಪಾಶ್ರ್ವದಲ್ಲಿ ಆಕರ್ಷಕ ಕೆತ್ತನೆಗಳಿಂದ ಕೂಡಿದ ಕಲ್ಯಾಣ ಮಂಟಪವಿದೆ ಆಲಯದ ಕಂಬಗಳಲ್ಲಿ ಹಲವು ಉಬ್ಬು ಚಿತ್ರಗಳನ್ನು ಕಾಣಬಹುದಾಗಿದೆ ಈಶಾನ್ಯದ ವಸಂತಮಂಟಪದ ಛಾವಣಿಯಲ್ಲಿ ಅಷ್ಟದಿಕ್ಪಾಲಕರ ವಿಗ್ರಹಗಳು ಆಕರ್ಷಕವಾಗಿದೆ.

ಕುರುಡುಮಲೆ (Kurudumale) “ಕೌಂಡಿನ್ಯಗಿರಿ” ಎಂದು ಪುರಾಣ ಪ್ರಸಿದ್ದವಾದ, ಹೊಯ್ಸಳರ ಸ್ಥಳೀಯ ರಾಜಧಾನಿಯಾಗಿದ್ದ ಕೂಡುಮಲೆ ಅಥವಾ ಕುರುಡುಮಲೆ ಮುಳಬಾಗಿಲು ನಗರಕ್ಕೆ 12 ಕಿಲೋಮೀಟರ್ ದೂರವಿದ್ದು, ತ್ರಿಮೂರ್ತಿಗಳಿಂದ ಪೂಜಿಸಲ್ಪಡುವ 13 ಅಡಿ ಎತ್ತರದ ಭವ್ಯ ವಿನಾಯಕ ಮೂರ್ತಿಯಿಂದ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರನ್ನು ಆಕರ್ಷಿಸುತ್ತಿದೆ. ವಿಜಯನಗರದ ಕಾಲದ ಆಲಯದ ಕಂಬಗಳು ಸುಂದರ ಕೆತ್ತನೆಗಳನ್ನು ಒಳಗೊಂಡಿವೆ, ಕುಸುರಿ ಕಲೆಯ ಬಾಗಿಲವಾಡ ಮೋಹಕವಾಗಿದ್ದು, ನವರಂಗವೂ ಇದೆ.

ಮುಳಬಾಗಿಲು (Mulbagal) ರಾಷ್ಟ್ರಿಯ ಹೆದ್ದಾರಿ-75ರಲ್ಲಿ ಅಂಜನಾದ್ರಿ ತಪ್ಪಲ್ಲಿನಲ್ಲಿ ಕರ್ನಾಟಕ ಮೂಡಣ ಬಾಗಿಲಾದ ಮುಳಬಾಗಿಲು ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿ ವಿಜಯನಗರದ ಕಾಲದ ಆಂಜನೇಯ ಸ್ವಾಮಿ ದೇಗುಲ ಸಂಕೀರ್ಣವಿದೆ. ಪ್ರಧಾನ ಪೂಜೆ ಪಡೆಯುವ ಮಾರುತಿಗೆ ಪ್ರತಿನಿತ್ಯ ಕೇದಿಗೆ ಹೂ ಪೂಜೆ ಆಗಲೇಬೇಕು ಎನ್ನುವುದು ವಿಶೇಷ. ಅರ್ಜುನ ಪ್ರತಿಷ್ಠೆ ಎನ್ನುವ ಆಂಜನೇಯ ಸನ್ನಿಧಿಯಲ್ಲಿ ಪೂರ್ಣಾವತಾರಿ ಸೀತಾ,ರಾಮ ಲಕ್ಷ್ಮಣ, ಕ್ಷಣಾವತಾರಿ ಲಕ್ಷ್ಮಿನರಸಿಂಹ, ವೇಣುಗೋಪಾಲರ ಉಪ ಆಲಯಗಳಿವೆ ದಕ್ಷಿನೋತ್ತರಗಳಲ್ಲಿ ತಿರುಮಲ ಶ್ರೀನಿವಾಸನನ್ನು ಹೋಲುವ ವೆಂಕಟರಮಣಸ್ವಾಮಿ ಗೋವಿಂದರಾಜ ಸ್ವಾಮಿಯ ಸ್ವತಂತ್ರ ಗುಡಿಗಳಿವೆ. ಕಂಚಿ ವರದರಾಜಸ್ವಾಮಿ ಆಲಯವು ಉಂಟು. ದೇಗುಲದಲ್ಲಿ ವರ್ಣಚಿತ್ರಗಳು, ದಶವತಾರದ ಗೂಡುಗಳು ಇವೆ ಎತ್ತರವಾದ ಗೋಪುರವನ್ನು ಹೊಂದಿದೆ.

ನರಸಿಂಹತೀರ್ಥ/ ಶ್ರೀ ಪಾದರಾಜ ಮಠ (Narasimhatirtha) ಮಧ್ವಾಚಾರ್ಯರ ಪರಂಪರೆಯ ಶ್ರೀ ಪಾದರಾಜರ ಮಠ ಪಟ್ಟಣದಲ್ಲಿದ್ದರೆ, ಅವರ ಬೃಂದಾವನ ಊರಿಗೆ 2 ಕೀಲೋಮೀಟರ್ ದೂರದ ನರಸಿಂಹತೀರ್ಥದಲ್ಲಿದೆ. ಪ್ರಶಾಂತ ವಾತಾವರಣದಲ್ಲಿ ನರಸಿಂಹತೀರ್ಥ ಕಲ್ಯಾಣಿ ಇದೆ. ದಾಸ ಸಾಹಿತ್ಯದ ವ್ಯಾಸರಾಯರು ವ್ಯಾಸಂಗ ಮಾಡಿದ ಗುಹೆ ಇದೆ. ಬಂಡೆಯಲ್ಲಿ ಉದ್ಭವವಾಗಿರುವ ಯೋಗನರಸಿಂಹ ದೇವರು ಇಲ್ಲಿನ ಪ್ರಮುಖ ಆರಾಧ್ಯದೈವ ವೇದ, ಸಂಸ್ಕೃತಿಗಳ ತಾಣವಾಗಿ ಮೆರೆಯುತ್ತಿದೆ ನರಸಿಂಹ, ಜೇಷ್ಠ ಮಾಸದಲ್ಲಿ ರಥೋತ್ಸವ ನಡೆಯುತ್ತದೆ.

ಅವಣಿ (Aavani) ಮುಳಬಾಗಿಲಿಂದ 12 ಕಿಲೋ ಮೀಟರ್ ದೂರದ ಅವಣಿಯು ರಾಮಲಿಂಗೇಶ್ವರ ದೇವಾಲಯ ಸಂಕೀರ್ಣ ಪಕ್ಕದ ಬೆಟ್ಟದ ಮೇಲಿರುವ ಸೀತಾ ಪಾರ್ವತಿ ಹಾಗೂ ಕಂಬ ಶಾಸನ ಶಂಕರ ಮಠಗಳಿಂದ ಖ್ಯಾತಿ ಹೊಂದಿದೆ. ರಾಮನ ಸೋದರರ ಹೆಸರಿನ ಆಲಯಗಳಲ್ಲದೆ ಹನುಮಂತ, ಅಂಗದ, ವಾಲಿ, ಸುಗ್ರಿವರ ಹೆಸರಿನಲ್ಲೂ ದೇಗುಲಗಳಿವೆ. ಸಮೂಹದಲ್ಲಿರುವ ದೇವಾಲಯಗಳಲ್ಲಿ ಲಕ್ಷ್ಮಣೇಶ್ವರ ದೇವಾಲಯ ಅದ್ಬುತ ಕಲಾಕುಸುಮವಾಗಿದೆ. ದಕ್ಷಿಣ ಗಯಾ ಎನ್ನುವ ಅವಣಿ ಉತ್ತರ ರಾಮಾಯಣದ ಕರ್ಮಭೂಮಿ ಎನಿಸಿಕೊಂಡಿದ್ದು, ಲವ-ಕುಶ, ಸೀತೆ, ವಾಲ್ಮೀಕಿಯ ಹೆಸರಿನ ನಂಟಿದೆ.

ಬಂಗಾರು ತಿರುಪತಿ ( Bangaruthirupathi) ಮುಳಬಾಗಿಲು-ಬೇತಮಂಗಲ ರಸ್ತೆಯಲ್ಲಿನ ಗುಟ್ಟಹಳ್ಳಿಯಲ್ಲಿ ತಿರುಪತಿ ವೆಂಕಟೇಶ್ವರಸ್ವಾಮಿ ಆಲಯ ಹೋಲುವ ದೇವಾಲಯವಿದ್ದು, ಬಂಗಾರುತಿರುಪತಿ ಎಂದು ಖ್ಯಾತವಾಗಿದೆ. ಪುಟ್ಟದಾದ ವೆಂಕಟರಮಣ ಮೂರ್ತಿಯನ್ನು ಕಿಂಡಿಯ ಮೂಲಕ ದರ್ಶಿಸಬಹುದಾಗಿದ್ದು, ಬೆಟ್ಟ ಹತ್ತುವಾಗ ಗರುಡ, ಅಂಜನೇಯ, ವಿನಾಯಕ, ವರಾಹಸ್ವಾಮಿಯನ್ನು ಕಾಣಬಹುದು. ಬೆಟ್ಟದ ಪಕ್ಕದ ಗುಡ್ಡದಲ್ಲಿ ಪದ್ಮಾವತಿ ದೇವಿಯ ಪ್ರತ್ಯೇಕ ಗುಡಿಯಿದೆ. ಬುಡದಲ್ಲಿ ಆಕರ್ಷಕ ಕಲ್ಯಾಣಿ ಇದೆ. ಶ್ರಾವಣ ಮಾಸದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

ವಿರೂಪಾಕ್ಷಿ (Virupakshi) ಶಿವತತ್ವ ಚಿಂತಾಮಣಿಯನ್ನು ಬರೆದ ವಿಜಯನಗರ ಅರಸರ ದಂಡನಾಯಕ ಲಕ್ಕಣ ನಿರ್ಮಿಸಿದ ಹಂಪೆಯ ಪ್ರತಿರೂಪದಂತಿದೆ ಈ ವಿರೂಪಾಕ್ಷಿ. ಮುಳಬಾಗಿಲಿಗೆ 4 ಕಿಲೋಮೀಟರ್ ದೂರದ ವಿರೂಪಾಕ್ಷಿ ದೇವಾಲಯದಲ್ಲಿ ಸಿಂಹದ ಮೇಲೆ ಕುಳಿತಿರುವ ಚತುರ್ಭುಜ ದುರ್ಗಾ ಗುಡಿಯಿದೆ. ವಿರೂಪಾಕ್ಷೇಶ್ವರ ಸನ್ನಿಧಿಯಲ್ಲಿ ಪಾರ್ವತಿಯ ಮುಂದೆ ಶಿವನ ಮುಂದೆ ನಂದಿ ಇರುವಂತೆ ಸಿಂಹದ ವಿಗ್ರಹವಿದೆ. ಪೂರ್ವಾಭಿಮುಖರಾಗಿರುವ ಆಲಯಕ್ಕೆ ಸುಂದರ ಗೋಪುರವಿದೆ. ಮನ್ಮಥ ಪುಷ್ಕರಣೆ ಎಂಬ ಕಲ್ಯಾಣಿಯೂ ಇದೆ.

ಶ್ರೀ ಕೋಟಿಲಿಂಗೇಶ್ವರ (kotilinga) ಕೆ.ಜಿ.ಎಫ್ (ಕೋಲಾರ ಚಿನ್ನದ ಗಣಿ ಪ್ರದೇಶ)ಗೆ 6 ಕಿಲೋಮೀಟರ್ ದೂರದಲ್ಲಿ ಬೇತಮಂಗಲ ರಸ್ತೆಯಲ್ಲಿ ಸಾವಿರಾರು ಶಿವಲಿಂಗಗಳನ್ನು ಒಳಗೊಂಡಿರುವ ಕೋಟಿ ಲಿಂಗೇಶ್ವರ ದೇವಾಲಯವಿದೆ. 20ನೇ ಶತಮಾನದ ಕೊಡುಗೆಯಾದ 1980 ರಲ್ಲಿ ನಿರ್ಮಿಸಿದ ಈ ದೇವಾಲಯ ಸಂಕೀರ್ಣದಲ್ಲಿ ಇನ್ನೂ ಹನ್ನೊಂದು ಬೇರೆ ದೇವರ ಗುಡಿಗಳಿವೆ. ಭಕ್ತಾಧಿಗಳು ಇಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಬಹುದಾಗಿದೆ. 13 ಎಕರೆ ಪ್ರದೇಶದಲ್ಲಿನ ದೇವಾಲಯ ಸಂಕೀರ್ಣದಲ್ಲಿ ದಶಲಕ್ಷಕ್ಕೂ ಹೆಚ್ಚು ಲಿಂಗಗಳಿದ್ದು, 1 ಅಡಿಯಿಂದ 3 ಅಡಿ ಎತ್ತರವಾಗಿದೆ. ಬೃಹತ್ ಶಿವಲಿಂಗ, ನಂದಿಯೂ ಇದೆ. ಪ್ರಧಾನ ದೇವರು ಕೋಟಿಲಿಂಗೇಶ್ವರ. ಇಲ್ಲಿ ಕೋಟಿ ಶಿವಲಿಂಗ ಸ್ಥಾಪಿಸುವ ಉದ್ದೇಶವಿದೆ.