
ಇನ್ನೇನು ಶ್ರಾವಣ ಮಾಸ ಆರಂಭವಾಗಲಿದೆ. ಆ ಸಂದರ್ಭದಲ್ಲಿ ಶಿವಭಕ್ತರು ವಿಶೇಷವಾಗಿ ಶಿವನನ್ನು ಪೂಜಿಸುತ್ತಾರೆ. ಶಿವ ದೇವಾಲಯಕ್ಕೆ ತೆರಳಿ ಶಿವನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಪ್ರತಿ ಶಿವ ದೇವಾಲಯದ ಗರ್ಭಗುಡಿಯ ಮಧ್ಯದಲ್ಲಿ ಶಿವಲಿಂಗ ಇರುತ್ತದೆ. ಶಿವನ ಎದುರು ನಂದಿ ವಿಗ್ರಹ ಇರುತ್ತದೆ. ಪಾರ್ವತಿ, ಗಣಪತಿ ಅಥವಾ ಕಾರ್ತಿಕೇಯ ಗುಡಿಗಳೂ ದೇವಾಲಯದಲ್ಲಿಇರುತ್ತವೆ. ಆದರೆ ಶಿವನ ಈ ದೇವಾಲಯವು ಜಗತ್ತಿನಲ್ಲೇ ಬಹಳ ವಿಶೇಷವಾಗಿದೆ. ಇಲ್ಲಿ ಶಿವನು ಶಿವಾಲಯದ ಗರ್ಭಗುಡಿಯಲ್ಲಿದ್ದರೆ, ಪಾರ್ವತಿ ದೇವಿಯು ಅವನ ಮುಂದೆ ಅಂದರೆ ಶಿವಾಲಯದ ಬಾಗಿಲಿನ ಬಳಿ ಶಿವನಿಗಾಗಿ ಕಾಯುತ್ತಿರುತ್ತಾಳೆ. ಈ ದೇವಾಲಯವು ಉತ್ತರ ಪ್ರದೇಶದ ವೃಂದಾವನದಲ್ಲಿದೆ.

ಈ ದೇವಾಲಯವನ್ನು ದ್ವಾಪರ ಯುಗದಲ್ಲಿ ಅಂದರೆ ಸುಮಾರು 5,300 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಪ್ರಸಿದ್ಧ ದೇವಾಲಯ ಗೋಪೇಶ್ವರ ಮಹಾದೇವ ದೇವಾಲಯ. ಶ್ರೀಮದ್ ಭಾಗವತ್ ಮಹಾಪುರಾಣದಲ್ಲಿ ಈ ದೇವಾಲಯದ ಮಹಿಮೆಯನ್ನು ಉಲ್ಲೇಖಿಸುತ್ತದೆ. ವೃಂದಾವನದಲ್ಲಿ ಸ್ಥಾಪಿಸಲಾಗಿರುವ ಈ ಗೋಪೇಶ್ವರ ಮಹಾದೇವ ದೇವ ಮಂದಿರವು ಶ್ರೀಕೃಷ್ಣನ ದ್ವಾಪರ ಯುಗಕ್ಕೆ ಸೇರಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಮಹಾಋಷಿಗಳನ್ನು ನೋಡಲು ಶಿವ ಇಲ್ಲಿಗೆ ಬಂದಿದ್ದ ಎಂಬುದರ ಉಲ್ಲೇಖವೂ ಇದೆ.

ಶಿವನು ಕೈಲಾಸದಲ್ಲಿ ಧ್ಯಾನಮಗ್ನನಾಗಿದ್ದಾಗ ವೃಂದಾವನದಲ್ಲಿ ಶ್ರೀಕೃಷ್ಣನ ಕೊಳಲಿನ ನಾದವನ್ನು ಕೇಳಿ ಮಂತ್ರಮುಗ್ಧನಾಗಿ ಕೈಲಾಸ ತೊರೆದು ವೃಂದಾವನದಲ್ಲಿರುವ ಶ್ರೀಕೃಷ್ಣನ ರಾಸಲೀಲೆಯನ್ನು ನೋಡಲು ಬಂದನು. ಆಗ ಅಲ್ಲಿ ಇದ್ದಿದ್ದು ಶ್ರೀಕೃಷ್ಣ ಮತ್ತು ಲಕ್ಷ ಲಕ್ಷ ಗೋಪಿಯರು ಮಾತ್ರ. ಅದ ಕಂಡು ಶಿವಯ್ಯನಿಗೂ ರಾಸಲಿಯಲ್ಲಿ ಭಾಗವಹಿಸುವ ಆಸೆ ಬಂದಿತು. ಇದರೊಂದಿಗೆ ಶಿವನು ಮಹಾರಾಸಲೀಲೆಯನ್ನು ಪ್ರವೇಶಿಸಲು ಪ್ರಯತ್ನಿಸಿದನು.

ಆದರೆ ಗೋಪಿಯರು ಅವನನ್ನು ಬಾಗಿಲಲ್ಲಿಯೇ ನಿಲ್ಲಿಸುತ್ತಾರೆ. ಆ ಸಮಯದಲ್ಲಿ ಒಬ್ಬ ಗೋಪಿಕೆ ಶಿವನಿಗೆ ಒಂದು ಸಲಹೆ ನೀಡುತ್ತಾಳೆ. ಅದರಂತೆ ಶಿವನು 16 ವೇಷಭೂಷಣಗಳೊಂದಿಗೆ ಸೀರೆ, ದೊಡ್ಡ ಮೂಗುತಿ ಮತ್ತು ಕಿವಿಯೋಲೆಯನ್ನು ಧರಿಸಿದ ಸುಂದರ ಯುವತಿಯಾಗಿ ಮಾರ್ಪಡುತ್ತಾನೆ. ತದನಂತರ ಮಹಾರಾಸಲೀಲೆ ವೀಕ್ಷಣೆಗೆ ಹಾಜರಾಗಲು ಬರುತ್ತಾನೆ.

ಶ್ರೀಮದ್ ಭಾಗವತ್ ಮಹಾಪುರಾಣಂ ಪ್ರಕಾರ.. ಕೊಳಲು ನಾದಕ್ಕೆ ಪರವಶನಾಗಿದ್ದ ಪರಮಶಿವನು ಪಾರ್ವತಿ ದೇವಿಗೆ ಹೇಳದೆ ವೃಂದಾವನವನ್ನು ತಲುಪಿಕೊಂಡಿದ್ದನು. ಇದೇ ವೇಳೆ ಪಾರ್ವತಿ ದೇವಿ ತನ್ನ ಪತಿಯನ್ನು ಹುಡುಕುತ್ತಾ ವೃಂದಾವನಕ್ಕೆ ಬಂದಳು. ಆದರೆ ಹೀಗೆ ಮೊದಲ ಬಾರಿಗೆ ಶಿವನು ತನ್ನ ಮಡದಿ ಪಾರ್ವತಿಗೆ ತಿಳಿಸದೆ, ಕೈಲಾಸದಿಂದ ಹೊರಬಂದಿದ್ದನು.

ಪತಿ ಪರಮೇಶ್ವರ ಕೊಳಲು ಕೇಳುತ್ತಾ ಕೃಷ್ಣನ ಆವಾಸಸ್ಥಾನವಾದ ವೃಂದಾನಕ್ಕೆ ಬಂದಿರುವ ವಿಷಯ ತಿಳಿದ ಕೂಡಲೇ ಪಾರ್ವತಿ ದೇವಿಯೂ ಶಿವನನ್ನು ಹಿಂಬಾಲಿಸಿ ಅಲ್ಲಿಗೆ ತಲುಪುತ್ತಾಳೆ. ಆದರೆ ಅಲ್ಲಿ ಶಿವನು ಗೋಪಿಕೆಯಾಗಿ ಮಾರ್ಪಟ್ಟು, ಶ್ರೀಕೃಷ್ಣನೊಂದಿಗೆ ನೃತ್ಯ ಮಾಡುತ್ತಿರುರುವುದು ಕಣ್ನೀಗೆ ಬೀಳುತ್ತದೆ.

ಅದನ್ನು ನೋಡಿ ಪಾರ್ವತಿಯೂ ಪರವಶಳಾದಳು. ಮಹಾರಾಸಲೀಲೆ ನಡೆಯುತ್ತಿದ್ದ ಸ್ಥಳಕ್ಕೆ ತಾನೂ ಹೋಗಬೇಕು ಎಂದು ಆಲೋಚಿಸುತ್ತಾಳೆ. ಆದರೆ ಶಿವ ವೃಂದಾವನಕ್ಕೆ ಹೋಗಿ ಹೆಣ್ಣಾಗಿ ಬದಲಾಗಿರುವುದನ್ನು ಅರಿತುಕೊಂಡು ತಾನೂ ಅಲ್ಲಿಗೆ ಹೋದರೆ ಏನಾಗುತ್ತದೋ ಎಂಬ ಭಯ ಕಾಡುತ್ತದೆ ಅವಳಿಗೆ.

ಗರ್ಭಗುಡಿಯ ಹೊರಗೆ ತನ್ನ ಪತಿಗಾಗಿ ಪಾರ್ವತಿ ದೇವಿ ಕಾಯುತ್ತಾ ಕೂರುತ್ತಾಳೆ. ಬಾಗಿಲಿನ ಹೊರಗೆ ನಿಂತಿದ್ದ ಪಾರ್ವತಿ ದೇವಿಯು ಶಿವನಿಗೆ ಹೊರಗೆ ಬರುವಂತೆ ಸನ್ನೆ ಮಾಡಿ ಹೇಳತೊಡಗಿದಳು. ಆ ಸಮಯದಲ್ಲಿ ಗೋಪಿಕೆಯಾಗಿ ಮಾರ್ಪಾಡಾಗಿದ್ದ ಈಶ್ವರನು ನೃತ್ಯದಲ್ಲಿ ತಲ್ಲೀನನಾಗಿರುತ್ತಾನೆ. ಅದ ಕಂಡು ಶ್ರೀಕೃಷ್ಣನು ಮಾರ್ಪಾಡುಗೊಂಡಿರುವ ಶಿವನಿಗೆ ಗೋಪೇಶ್ವರ ಎಂದು ಹೆಸರಿಸುತ್ತಾನೆ. ಆದರೆ ಪಾರ್ವತಿ ದೇವಿ ಗರ್ಭಗುಡಿಯ ಹೊರಗಡೆ ಪತಿಗಾಗಿ ಕಾಯುತ್ತಾ ಕುಳಿತುಬಿಡುತ್ತಾಳೆ. ಇಂದಿಗೂ ಈ ಕಾರಣಕ್ಕಾಗಿ ಇಲ್ಲಿನ ದೇವಸ್ಥಾನದಲ್ಲಿರುವ ಶಿವಲಿಂಗವನ್ನು ರಾತ್ರಿ ವೇಳೆ ಸ್ತ್ರೀ ರೂಪದಲ್ಲಿ ಅಲಂಕರಿಸುತ್ತಾರೆ.

ವಿಶೇಷವಾಗಿ ಶರದ್ ಪೂರ್ಣಿಮೆಯ ರಾತ್ರಿ, ಭಗವಾನ್ ಶಿವನು ಸುಂದರ ಮಹಿಳೆಯ ರೂಪದಲ್ಲಿ ಅಲಂಕರಿಸಲ್ಪಡುತ್ತಾನೆ. ಈ ಸಮಯದಲ್ಲಿ, ಶಿವನ ದರ್ಶನಕ್ಕಾಗಿ ಮತ್ತು ಆಶೀರ್ವಾದ ಪಡೆಯಲು ಅಪಾರ ಸಂಖ್ಯೆಯ ಭಕ್ತರು ಗೋಪೇಶ್ವರ ಮಹಾದೇವ ದೇವಸ್ಥಾನಕ್ಕೆ ತಲುಪುತ್ತಾರೆ.