- Kannada News Photo gallery Telangana Politics CM K Chandrashekar Rao performs rajashyamala shatachandi yaga at his farmhouse
ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ರಿಂದ ರಾಜಶ್ಯಾಮಲ ಯಾಗ: ಪುನರಾವರ್ತನೆಯಾಗಲಿದೆಯಾ 2018ರ ಫಲಿತಾಂಶ?
ಬಿಆರ್ಎಸ್ ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಆರಂಭದಿಂದಲೂ ಆಳವಾದ ಧಾರ್ಮಿಕ ನಂಬಿಕೆಯನ್ನು ಹೊಂದಿದ್ದಾರೆ. ಅದಕ್ಕಾಗಿಯೇ ಅವರು ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಕಾಲಕಾಲಕ್ಕೆ ಯಾಗಗಳನ್ನೂ ನಡೆಸುತ್ತಾರೆ. 2015ರಲ್ಲಿ ರಾಜ್ಯ ಅಭಿವೃದ್ಧಿ ಹೊಂದಿ, ಸಮಸ್ತ ಜನತೆ ಸುಭಿಕ್ಷವಾಗಿರಲಿ ಎಂಬ ಉದ್ದೇಶದಿಂದ ಚಂಡಿ ಯಾಗ ನೆರವೇರಿಸಿದ್ದರು. ಆ ಬಳಿಕ 2018ರಲ್ಲಿ ಎರಡನೇ ಬಾರಿಗೆ, ಚುನಾವಣೆಗೆ ಹೋಗುವ ಮುನ್ನವೇ ಸಿಎಂ ಕೆಸಿಆರ್ ತಮ್ಮ ತೋಟದ ಮನೆಯಲ್ಲಿ ರಾಜಶ್ಯಾಮಲ ಯಾಗ ನಡೆಸಿದ್ದರು. ಆ ನಂತರ ಚುನಾವಣೆ ಎದುರಿಸಿದ ಕೆಸಿಆರ್ ಮತ್ತೆ ಅಧಿಕಾರದ ಗದ್ದುಗೆ ಹಿಡಿದರು.
Updated on: Nov 01, 2023 | 6:18 PM

ಈ ಬಾರಿಯೂ 2018ರ ನಡೆಯನ್ನೇ ಕೆಸಿಆರ್ ಅನುಸರಿಸುತ್ತಿದ್ದಾರೆ. ಸಿದ್ದಿಪೇಟೆ ಜಿಲ್ಲೆಯ ಮರ್ಕೂಕ್ ಮಂಡಲದ ಎರ್ರವಳ್ಳಿಯಲ್ಲಿ ನವೆಂಬರ್ 1 ರಿಂದ ಮೂರು ದಿನಗಳ ಕಾಲ ರಾಜಶ್ಯಾಮಲ ಯಾಗವನ್ನು ನಡೆಸಲಾಗುತ್ತಿದೆ. ವಿಶಾಖ ಶಾರದಾ ಪೀಠಾಧಿಪತಿಗಳಾದ ಸ್ವರೂಪಾನಂದೇಂದ್ರ ಮತ್ತು ಸ್ವಾತ್ಮಾನಂದೇಂದ್ರ ಅವರ ನೇತೃತ್ವದಲ್ಲಿ ಯಾಗವನ್ನು ನಡೆಸಲಾಗುತ್ತಿದೆ. ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಹಲವು ಪೀಠಾಧಿಪತಿಗಳು ಯಾಗದಲ್ಲಿ ಭಾಗವಹಿಸಿದ್ದಾರೆ. ರಾಜಶ್ಯಾಮಲಾ ಯಾಗದ ಜತೆಗೆ ಲೋಕ ಕಲ್ಯಾಣಾರ್ಥವಾಗಿ ಶತಚಂಡಿ ಯಾಗ ಕೂಡ ನಡೆಸಲಾಗುತ್ತಿದೆ.

ಮಂಗಳವಾರ ಸಂಜೆ 200 ವೈದಿಕರು ಎರ್ರವಳ್ಳಿ ತಲುಪಿದರು. ಮೊದಲ ದಿನವೇ ದೃಢಸಂಕಲ್ಪದಿಂದ ಯಾಗವನ್ನು ಆರಂಭಿಸಿದರು. ಎರಡನೇ ದಿನ ವೇದ ಪಾರಾಯಣ, ಹೋಮ ಇತ್ಯಾದಿ ವಿಧಿವಿಧಾನಗಳು ನಡೆಯಲಿವೆ. ಕೊನೆಯ ದಿನ ಪೂರ್ಣಾಹುತಿಯೊಂದಿಗೆ ಯಾಗ ಮುಗಿಯುತ್ತದೆ.

ಬುಧವಾರ ಶತಚಂಡಿಯಾಗದ ಅಂಗವಾಗಿ ಗುರು, ದೇವತಾ ಪ್ರಾತ್ರ, ಮಹಾ ಸಂಕಲ್ಪ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ಆಚಾರ್ಯಾದಿ ಋತ್ವಿಗ್ವರಣ ಯಾಗಶಾಲಾ ಸಂಸ್ಕಾರ, ಗೋ ಪೂಜೆ, ಸಹಸ್ರ ಮೋದಕ ಗಣಪತಿ ಹೋಮ, ಆದಿತ್ಯಾದಿ ನವಗ್ರಹ ಹೋಮ, ನವಾಕ್ಷರಿ ಮೂಲ ಮಂತ್ರ ಜಪ ಅನುಷ್ಠಾನ, ನವಾಕ್ಷರಿ ಮೂಲ ಮಂತ್ರ ಜಪ ಅನುಷ್ಠಾನ, ರಾಹುಪತಿ ತ್ರಯಾಧೀಶನ ಅನುಸ್ಥಾನ, ಸಿಎಂ ಕೆಸಿಆರ್ ದಂಪತಿಗಳ ಹಸ್ತದಿಂದ ವೇದ ವಿದ್ವಾಂಸರಿಂದ ಮೋ ಹನಗೌರಿ ಹೋಮ, ಅಘೋರಾಷ್ಟ್ರ ಹೋಮ ಕಾರ್ಯಗಳು, ಚಂಡಿ ಸಪ್ತಶತಿ ಪಾರಾಯಣ, ಚತುರ್ವೇದ ಪಾರಾಯಣ, ಮಹಾಮಂಗಳಾರತಿ, ಮಂತ್ರಪುಷ್ಪಮು, ಅಷ್ಟಾವಧಾನ-ಸೇವೆ ಮತ್ತಿತರ ಕಾರ್ಯಕ್ರಮಗಳು ನಡೆದವು.

ತೆಲಂಗಾಣದ ಸರ್ವತೋಮುಖ ಅಭಿವೃದ್ಧಿಗಾಗಿ ಕೆಸಿಆರ್ ಯಾಗ ಮಾಡುತ್ತಿದ್ದಾರೆ ಎಂದು ಸ್ವರೂಪಾನಂದೇಂದ್ರ ಹೇಳಿದರು. ರಾಜಶ್ಯಾಮಲ ಯಾಗ ಶಕ್ತಿಶಾಲಿಯಾಗಿದೆ ಎಂದ ಅವರು, ರಾಜ್ಯವನ್ನು ಹಸಿರಾಗಿಸಲು ಕೆಸಿಆರ್ ಅವರು ರಾಜಶ್ಯಾಮಲ ಯಾಗ ಕೈಗೊಂಡಿದ್ದಾರೆ.

ರಾಜಶ್ಯಾಮಲಾ ರಾಜರು ಹಾಗೂ ಜನಸಾಮಾನ್ಯರನ್ನು ಅನುಗ್ರಹಿಸುವ ದೇವತೆ ಎಂದು ಸ್ವರೂಪಾನಂದೇಂದ್ರ ವಿವರಿಸಿದರು. ಹಿಂದಿನ ಯಾಗದ ಫಲವಾಗಿಯೇ ಹೈದರಾಬಾದ್ ಮಹಾನಗರವಾಗಿ ಹೊರಹೊಮ್ಮುತ್ತಿದೆ ಎಂದು ಅವರು ಹೇಳಿದರು.

ಕೆಸಿಆರ್ ಮಹಾಭಾರತ ಓದಿದ ಋಷಿ. ಹಿಂದೂ ತತ್ವಶಾಸ್ತ್ರವನ್ನು ಸಂಪೂರ್ಣವಾಗಿ ಬಲ್ಲ ನಾಯಕ ಎಂದು ಬಣ್ಣಿಸಿದ ಸ್ವರೂಪಾನಂದೇಂದ್ರ ಅವರು ಕೆಸಿಆರ್ ಅವರ ಕುಟುಂಬಕ್ಕೆ ಆಶೀರ್ವದಿಸಿದರು.

ಕೆಸಿಆರ್ ಯಾವಾಗ ಯಾಗ ಮಾಡಿದರೂ ಪ್ರತಿಫಲ ಸಿಗುತ್ತದೆ ಎಂಬ ವಿಶ್ವಾಸವನ್ನು ಅವರ ಪಕ್ಷದ ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಈ ಬಾರಿಯೂ ಕೆಸಿಆರ್ ಚುನಾವಣೆಯಲ್ಲಿ ಜಯಗಳಿಸಿ ಮತ್ತೆ ಅಧಿಕಾರ ಹಿಡಿಯಲಿದ್ದಾರೆ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ.



















