
ರಾಶಿ ಚಕ್ರ

ಮೇಷ: ತಮ್ಮ ಗುರಿ ಕಡೆಗೆ ದೃಷ್ಟಿ ನೆಡುವ ಈ "ಟಗರು" ಆಚೀಚೆ ಕೂಡ ದೃಷ್ಟಿ ಹಾಯಿಸುವುದು ಕಷ್ಟ. ಹಾಗೊಂದು ವೇಳೆ ಕಣ್ಣು ಹಾಯಿಸಿದರೂ ಅದು ತನ್ನ ಕೈ ಕೆಳಗೆ ಕೆಲಸ ಮಾಡುವವರ ಬಗ್ಗೆ ಮಾತ್ರ. ಒಂದು ವೇಳೆ ಅವರದೇ ತಪ್ಪಿನಿಂದ ಏನಾದರೂ ಅನಾಹುತ ಮಾಡಿಕೊಂಡಿದ್ದರೆ ತಲೆ ಕೊಡವಿಕೊಂಡು ಮುಂದಕ್ಕೆ ಸಾಗುತ್ತಾ ಇರುತ್ತಾರೆ. ಇನ್ನು ಇವರೇ ಕಷ್ಟದಲ್ಲಿದ್ದಾಗ ಸಹಾಯ ಮಾಡುವ ಸ್ಥಿತಿಯಲ್ಲಿದ್ದರೂ ನೆರವಾಗಿಲ್ಲ ಅಂದರಂತೂ ಮುಗಿದೇ ಹೋಯಿತು. ಚುಚ್ಚು ಮಾತಿನ ಬೋನಸ್ ಕೂಡ ಸಿಗುತ್ತೆ.

ಕನ್ಯಾ: ಹನ್ನೆರಡಯ ರಾಶಿಗಳ ಪೈಕಿಯೇ ವಿಪರೀತ ಪ್ರಾಕ್ಟಿಕಲ್ ಅಂತಿದ್ದರೆ ಅದು ಕನ್ಯಾ ರಾಶಿಯವರು. ತಮ್ಮ ಕಷ್ಟದ ಬಗ್ಗೆಯೂ ಇತರರಿಗೆ ಹೇಳಲ್ಲ, ಇತರರು ಬಂದು ಹೇಳಿದರೆ ಆ ಬಗ್ಗೆ ತಲೆಯೂ ಕೆಡಿಸಿಕೊಳ್ಳಲ್ಲ. ಬದುಕನ್ನು ಸರಿಯಾಗಿ ಪ್ಲಾನ್ ಮಾಡದ ವ್ಯಕ್ತಿಗಳೆಂದರೆ ಇವರಿಗೆ ಪರಮ ಅಸಹ್ಯ. ಅಂಥವರನ್ನು ದೂರವೇ ಇಟ್ಟುಬಿಡುತ್ತಾರೆ. ತಮ್ಮ ತಪ್ಪುಗಳನ್ನೂ ನಿರ್ದಾಕ್ಷಿಣ್ಯವಾಗಿ ಹೇಳಿಕೊಳ್ಳುವ ಇವರು, ಯಾರಿಂದಲೂ ರಿಯಾಯಿತಿ ಬಯಸಲ್ಲ.

ಕುಂಭ: ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿ ಇವರು ಇರಲ್ಲ. ಇನ್ನು ಸಂದರ್ಭ- ಸೂಕ್ಷ್ಮತೆ ಎಲ್ಲವನ್ನೂ ನೋಡಿಕೊಂಡು, ಕುಂಭ ರಾಶಿಯವರು ಬದಲಾಗುತ್ತಾ ಹೋಗುತ್ತಾರೆ. ನಿರ್ದಾಕ್ಷಿಣ್ಯ ಹಾಗೂ ನಿಷ್ಠುರ ಇವೆರಡಕ್ಕೂ ಕೈ-ಕಾಲು ಬಂದು ನಡೆದುಕೊಂಡು ಹೋಗುತ್ತಿದ್ದರೆ ಹೇಗಿರಬಹುದು ಹೇಳಿ, ಅದೇ ಕುಂಭ ರಾಶಿಯ ಜನ. ಆದರೆ ಇವರ ಹತ್ತಿರ ಒಂದು ರಿಯಾಯಿತಿ ಇದೆ. ಇವರ ಸಲಹೆ- ಉಪದೇಶ ಕೇಳಿ, ಅಕಸ್ಮಾತ್ ಕಷ್ಟಕ್ಕೆ ಸಿಲುಕಿಕೊಂಡರೆ ನೆರವಿಗೆ ಬರುತ್ತಾರೆ.

ತುಲಾ: ತನ್ನ ಮೈ ಮೇಲೆ ಬರುವ ಸಂಗತಿಗಳು, ಜವಾಬ್ದಾರಿಗಳನ್ನು ಗುರುತಿಸುವುದರಲ್ಲಿ ಇವರನ್ನು ಬಿಟ್ಟರೆ ಇನ್ನೊಬ್ಬರಿಲ್ಲ. ಎಲ್ಲೋ ತಾಗಿದ ಬಾಣ ಇನ್ನು ನಾಲ್ಕಾರು ದಿನದಲ್ಲಿ ಯಾವ ಭಾಗಕ್ಕೆ ತಲುಪಬಹುದು ಎಂದು ಅಂದಾಜು ಮಾಡುವಷ್ಟು ನಿಪುಣರು ಇವರು. ಯಾವ ಏಟಿಗೂ ಸಿಗಲ್ಲ. ತಮಗೆ ಸಾವಿರ ರೂಪಾಯಿಯ ಲಾಭ ಆಗಬಹುದು ಎಂದಾಗಷ್ಟೇ ಜೇಬಿನಿಂದ ಹತ್ತು ರೂಪಾಯಿ ಆಚೆ ತೆಗೆಯಲು ಮನಸ್ಸು ಮಾಡುತ್ತಾರೆ.

ಮೀನ: ತಮ್ಮ ಕೆಲಸಗಳನ್ನೂ ಬೇರೆಯವರಿಗೆ ಅಂಟಿ ಹಾಕಿ, ತಾವು ನಿಶ್ಚಿಂತರಾಗಿ ಓಡಾಡಿಕೊಂಡು ಇರುವಂಥ ಜನ ಇವರು. ಮತ್ತು ಯಾರಿಂದ ಯಾವ ಕೆಲಸ ಆಗುತ್ತದೆ ಎಂದು ಸರಿಯಾಗಿ ಗುರುತಿಸುತ್ತಾರೆ. ಅವರು ಆ ಕೆಲಸ ಮಾಡುವುದಕ್ಕೆ ಏನೆಲ್ಲ ಪೂಸಿ ಹೊಡೆಯಬೇಕೋ ಅಷ್ಟನ್ನು ಮಾಡಿ, ತಾವು ನಿಶ್ಚಿಂತರಾಗಿ ಇರುತ್ತಾರೆ.
Published On - 7:21 am, Tue, 10 August 21