ಭಗವದ್ಗೀತೆಯ ಈ ಪಾಠಗಳು ಸಂಬಂಧವನ್ನು ಬಲಪಡಿಸಲು ಸಹಕಾರಿ
ಇಂದಿನ ಕಾಲದಲ್ಲಿ, ಪ್ರೀತಿ ಆಗಿರಲಿ ಅಥವಾ ದಾಂಪತ್ಯ ಜೀವನವೇ ಆಗಿರಲಿ ಸಂಬಂಧವನ್ನು ಕಾಪಾಡಿಕೊಳ್ಳುವುದು ತುಂಬಾನೇ ಕಷ್ಟಕರವಾಗಿದೆ. ಸಂಗಾತಿಗಳ ನಡುವೆ ಜಗಳ, ಅಪನಂಬಿಕೆ ಮನಸ್ತಾಪಗಳ ಕಾರಣದಿಂದಾಗಿ ಸಂಬಂಧಗಳು ಮುರಿದು ಬೀಳುತ್ತಿವೆ. ಹೀಗಿರುವಾಗ ಭಗವದ್ಗೀತೆಯ ಈ ಕೆಲವೊಂದು ಉಪದೇಶಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ನಿಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಬಹುದು. ಹೌದು ಭಗವದ್ಗೀತೆಯಲ್ಲಿ ನಾವು ಯಾವ ರೀತಿ ಯಶಸ್ವಿ ಜೀವನವನ್ನು ನಡೆಸಬೇಕು, ಸವಾಲುಗಳನ್ನು ಯಾವ ರೀತಿ ಎದುರಿಸಬೇಕು ಹೀಗೆ ನಮ್ಮ ಜೀವನಕ್ಕೆ ಬೇಕಾದ ಅನೇಕ ಒಳ್ಳೆಯ ವಿಷಯಗಳಿವೆ. ಅದೇ ರೀತಿ ಭಗವದ್ಗೀತೆಯ ಈ ಕೆಲವು ಉಪದೇಶಗಳನ್ನು ಪಾಲಿಸುವ ಮೂಲಕ ಸಂಬಂಧವನ್ನು ಮತ್ತಷ್ಟು ಬಲಪಡಿಸಬಹುದು.
Updated on: May 14, 2025 | 8:13 PM

ನಂಬಿಕೆ: ಸಂಬಂಧಗಳ ಅಡಿಪಾಯವೇ ನಂಬಿಕೆ. ಹೀಗಿರುವಾಗ ಸಂಗಾತಿಗಳ ನಡುವೆ ಪರಸ್ಪರ ನಂಬಿಕೆ ಇಲ್ಲದೆ ಹೋದರೆ ಆ ಸಂಬಂಧ ಎನ್ನುವಂತಹದ್ದು ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಹಾಗಾಗಿ ಒಂದು ಬಂಧ ಬಿಗಿಯಾಗಬೇಕೆಂದರೆ ಅಲ್ಲಿ ನಂಬಿಕೆ ಅನ್ನೋದು ತುಂಬಾನೇ ಮುಖ್ಯ.

ನಿರ್ಧಾರಗಳಿಗೆ ಗೌರವಕೊಡಿ: ನಿಮ್ಮ ಸಂಗಾತಿಯನ್ನು ಕಟ್ಟಿ ಹಾಕುವಂತಹ ಪ್ರಯತ್ನ ಮಾಡಬೇಡಿ. ಬದಲಿಗೆ ನಿಮ್ಮ ಸಂಗಾತಿ ಅವರ ಇಷ್ಟಾನಿಷ್ಟಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡಿ. ಇಬ್ಬರೂ ಒಟ್ಟಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಿ. ಹೀಗೆ ಒಬ್ಬರಿಗೊಬ್ಬರು ಪ್ರಾಮುಖ್ಯತೆ ನೀಡಿದಾಗ, ಸಂಬಂಧದ ಬಂಧವು ಇನ್ನಷ್ಟು ಬಲಗೊಳ್ಳುತ್ತದೆ.

ಯಾವುದಕ್ಕೂ ಅಡ್ಡಿಪಡಿಸಬೇಡಿ: ನೀವು ನಿಮ್ಮ ಸಂಗಾತಿಗೆ ಅಡ್ಡಿಪಡಿಸುತ್ತಲೇ ಇದ್ದರೆ ಮತ್ತು ಅವರು ಮುಕ್ತವಾಗಿ ಮತ್ತು ಸ್ವತಂತ್ರವಾಗಿ ಕೆಲಸಗಳನ್ನು ಮಾಡಲು ಬಿಡದಿದ್ದರೆ, ಅದು ಅವರಿಗೆ ಸಂಬಂಧದಲ್ಲಿ ಉಸಿರುಗಟ್ಟಿದ ಭಾವನೆಯನ್ನು ಮೂಡಿಸುತ್ತದೆ. ಹಾಗಾಗಿ ನಿಮ್ಮ ಸಂಗಾತಿಯನ್ನು ಅವರ ಆಯ್ಕೆಯ ಪ್ರಕಾರ ಬದುಕಲು ಬಿಡಿ. ಅದು ಮಾಡಬೇಡ, ಈ ಕೆಲಸ ಮಾಡಬೇಡ ಎಂದು ಅವರಿಗೆ ಯಾವತ್ತೂ ಅಡ್ಡಿಪಡಿಸಬೇಡಿ.

ನಿಷ್ಠೆ ತುಂಬಾ ಮುಖ್ಯ: ಸಂಗಾತಿ ಮತ್ತು ನಿಮ್ಮ ಪ್ರೀತಿಗೆ ಯಾವಾಗಲೂ ನಿಷ್ಠರಾಗಿರಿ. ಯಾವುದೇ ಕಾರಣಕ್ಕೂ ಸಂಗಾತಿಗೆ ಮೋಸ ಮಾಡುವಂತಹದ್ದು ಅಥವಾ ಸುಳ್ಳು ಹೇಳುವಂತಹದ್ದು ಮಾಡಲು ಹೋಗಬೇಡಿ. ಈ ನಡವಳಿಕೆ ಖಂಡಿತವಾಗಿಯೂ ಸಂಬಂಧವನ್ನು ಹಾಳು ಮಾಡುತ್ತದೆ. ಹಾಗಾಗಿ ನೀವು ಸಂಗಾತಿಯೊಂದಿಗೆ ನಿಷ್ಠೆಯಿಂದ ಇರುವುದು ಬಹಳ ಮುಖ್ಯ.

ಸಂಗಾತಿಯನ್ನು ಗೌರವಿಸಿ: ಯಾವುದೇ ಕಾರಣಕ್ಕೂ ನಿಮ್ಮ ಸಂಗಾತಿಯನ್ನು ಕೀಳಾಗಿ ಕಾಣಬೇಡಿ. ಅವರಿಗೆ ಗೌರವ ಕೊಡಿ. ಸಂಗಾತಿಗೆ ಹಾಗೂ ಪ್ರೀತಿ ಗೌರವ ಕೊಟ್ಟರೆ ಮಾತ್ರ ಆ ಸಂಬಂಧ ಎನ್ನುವಂತಹದ್ದು ಶಾಶ್ವತವಾಗಿರುತ್ತದೆ.

ಅಹಂಕಾರ: ಸಂಬಂಧದಲ್ಲಿ ಅಹಂಕಾರದ ಭಾವನೆ ಬಂದರೆ ಸಂಬಂಧವು ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಹೌದು ನೀವು ನಾನೇ ಶ್ರೇಷ್ಠ, ನನ್ನಿಂದಲೇ ಎಲ್ಲ ಎಂಬ ಅಹಂಕಾರದ ಭಾವನೆಯನ್ನು ಇಟ್ಟುಕೊಂಡರೆ ಇದು ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ. ಆದ್ದರಿಂದ ನಾವಿಬ್ಬರು ಸಮಾನರು ಎಂಬುದನ್ನು ನೆನಪಿಟ್ಟುಕೊಳ್ಳಿ.

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Read More



