ಯಾದಗಿರಿ ನಗರದಲ್ಲಿರುವ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿಯರು ಹಾಗೂ ನವಜಾತ ಶಿಶುಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ವಾರ್ಡ್ಗಳಲ್ಲಿ ಫ್ಯಾನ್ಗಳು ಹಾಳಾಗಿ ಹೋಗಿದ್ದರಿಂದ ಬಿಸಿಲಿನ ಧಗೆ ಒಂದು ಕಡೆಯಾದರೆ, ಇನ್ನೊಂದು ಕಡೆ ಸೊಳ್ಳೆಗಳ ಕಾಟದಿಂದ ಹೈರಾಣಾಗಿರುವಂತಹ ಘಟನೆ ನಡೆದಿದೆ.
ಜಿಲ್ಲಾ ಕೇಂದ್ರದಲ್ಲಿ ಆಸ್ಪತ್ರೆ ಇರುವ ಕಾರಣಕ್ಕೆ ನಿತ್ಯ ಜಿಲ್ಲೆಯ ಆರು ತಾಲೂಕುಗಳಿಂದ ನೂರಾರು ಜನರ ಹೆರಿಗಾಗಿ ಬರುತ್ತಾರೆ. ಇದೆ ಆಸ್ಪತ್ರೆಯಲ್ಲಿ ನಿತ್ಯ 50ಕ್ಕೂ ಅಧಿಕ ಹೆರಿಗೆಗಳನ್ನ ಮಾಡಲಾಗುತ್ತೆ. ಹೆರಿಗೆ ಮಾಡಿದ ಬಳಿಕ ಬಾಣಂತಿ ಹಾಗೂ ನವಜಾತ ಶಿಶುವಿಗೆ ವಾರ್ಡ್ಗಳಿಗೆ ಶಿಫ್ಟ್ ಮಾಡುತ್ತಾರೆ. ಆದರೆ ವಾರ್ಡ್ಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣಕ್ಕೆ ಬಾಣಂತಿ ಹಾಗೂ ಮಗು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಪ್ರತಿಯೊಂದು ವಾರ್ಡ್ನಲ್ಲಿ ನಾಲ್ಕು ಫ್ಯಾನ್ಗಳ ವ್ಯವಸ್ಥೆ ಮಾಡಲಾಗಿದೆ. ಆದರೆ ಇದರಲ್ಲಿ ಬಹುತೇಕ ಫ್ಯಾನ್ ಗಳು ಹಾಳಾಗಿ ಹೋಗಿ ರಿಪೇರಿಗೆ ಬಂದಿವೆ. ರಿಪೇರಿ ಮಾಡಿ ವ್ಯವಸ್ಥೆ ಮಾಡಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಫ್ಯಾನ್ ಇಲ್ಲದ ಕಾರಣಕ್ಕೆ ಬಾಣಂತಿ ಮತ್ತು ನವಜಾತ ಶಿಶುಗಳಿಗೆ ನಿದ್ದೆ ಆಗ್ತಾಯಿಲ್ಲ. ಯಾಕೆಂದ್ರೆ ಬಿಸಿಲಿನಿಂದ ಉಂಟಾಗುವ ಧಗೆಯಿಂದ ವಿಪರೀತ ಬೆವರು ಹಾಗೂ ವಿಪರೀತವಾಗಿ ಕಚ್ಚುವ ಸೊಳ್ಳೆಗಳಿಂದ ಬಾಣಂತಿ ಅಷ್ಟೇ ಅಲ್ದೆ ಬಾಣಂತಿ ಹಿಂದೆ ಬರುವ ಕುಟುಂಬಸ್ಥರು ಸಹ ಪರದಾಡುವಂತಾಗಿದೆ.
ಅಧಿಕಾರಿಗಳು ಫ್ಯಾನ್ಗಳನ್ನ ರಿಪೇರಿ ಮಾಡದ ಕಾರಣಕ್ಕೆ ದೂರದ ಊರಿನಿಂದ ಬಂದು ಹೆರಿಗೆ ಮಾಡಿಸಿಕೊಂಡವರು ಅಂಗಡಿಗಳಿಗೆ ಹೋಗಿ ಹೊಸ ಫ್ಯಾನ್ಗಳನ್ನ ಖರೀದಿ ಮಾಡಿಕೊಂಡು ಬಂದಿದ್ದಾರೆ. ಒಂದು ಸಾವಿರದಿಂದ ಎರಡು ಸಾವಿರ ರೂ. ವರೆಗೆ ಹಣ ಖರ್ಚು ಮಾಡಿ ಹೊಸ ಫ್ಯಾನ್ಗಳನ್ನ ತಂದು ಬಾಣಂತಿ ಹಾಗೂ ನವಜಾತ ಶಿಶುಗಳಿಗೆ ಗಾಳಿ ವ್ಯವಸ್ಥೆ ಮಾಡಿದ್ದಾರೆ.
ಬಡವರು ಹಾಗೂ ಆರ್ಥಿಕವಾಗಿ ದುರ್ಬಲರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಆದರೆ ಇಲ್ಲಿಗೆ ಬರಬೇಕು ಅಂದರೆ ದುಡ್ಡು ಸುರಿಯುವಂತಾಗಿದೆ. ಇನ್ನು ಸಮೀಪದಿಂದ ಬಂದವರಂತೂ ಮನೆಗಳಿಗೆ ಹೋಗಿ ಮನೆಯಲ್ಲಿರುವ ಟೇಬಲ್ ಫ್ಯಾನ್ಗಳನ್ನ ತಂದು ಗಾಳಿಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಕೇವಲ ಫ್ಯಾನ್ ಗಳು ಖರೀದಿ ಮಾಡಿಕೊಂಡು ಬರೋದು ಅಲ್ಲ, ಬಾಣಂತಿಯರಿಗೆ ಬಿಸಿ ನೀರು ಹಾಗೂ ಹಿಂದೆ ಬಂದವರು ನೀರು ಕುಡಿಯಬೇಕು ಅಂದ್ರೆ ಅಂಗಡಿಯಿಂದ ಬಾಟಲ್ ನೀರು ಖರೀದಿ ಮಾಡಿಕೊಂಡು ಕುಡಿಯುವಂತಾಗಿದೆ.
ಯಾದಗಿರಿ ನಗರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿ ಮತ್ತು ನವಜಾತ ಶಿಶುಗಳಿಗೆ ಸರಿಯಾದ ವ್ಯವಸ್ಥೆ ಇಲ್ಲದಂತಾಗಿದೆ. ಕನಿಷ್ಟ ಪಕ್ಷ ಕೆಟ್ಟು ಹೋಗಿರುವ ಫ್ಯಾನ್ಗಳನ್ನ ರಿಪೇರಿ ಮಾಡುವ ಕೆಲಸವೂ ಅಧಿಕಾರಿಗಳು ಮಾಡ್ತಾಯಿಲ್ಲ. ಹೀಗಾಗಿ ವೈದ್ಯಾಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.