AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AICC President Poll: ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಶಶಿ ತರೂರ್, ಕೆಎನ್ ತ್ರಿಪಾಠಿ ನಾಮಪತ್ರ ಸಲ್ಲಿಕೆ

ಶಶಿ ತರೂರ್ ಅವರು ನಾಮಪತ್ರ ಸಲ್ಲಿಸುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವುದನ್ನು ಖಚಿತಪಡಿಸಿದ್ದಾರೆ. ಇದರ ಜೊತೆಗೆ ಕೆಎನ್ ತ್ರಿಪಾಠಿ ಕೂಡ ನಾಮಪತ್ರ ಸಲ್ಲಿಸಿದ್ದಾರೆ.

AICC President Poll: ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ  ಶಶಿ ತರೂರ್, ಕೆಎನ್  ತ್ರಿಪಾಠಿ ನಾಮಪತ್ರ ಸಲ್ಲಿಕೆ
ಶಶಿ ತರೂರ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Sep 30, 2022 | 2:59 PM

Share

ಶಶಿ ತರೂರ್ (Shashi Tharoor)  ಅವರು ನಾಮಪತ್ರ ಸಲ್ಲಿಸುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವುದನ್ನು ಖಚಿತಪಡಿಸಿದ್ದಾರೆ. ದಿಗ್ವಿಜಯ ಸಿಂಗ್ ರೇಸ್ ನಿಂದ ಹೊರಬಿದ್ದಿದ್ದು, ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸಲಿದ್ದಾರೆ. ಶಶಿ  ತರೂರ್ ಜತೆ ಕೆಎನ್ ತ್ರಿಪಾಠಿ (KN Tripathi) ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ (Congress President Election )ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ,ಸಂಸದ  ಶಶಿ ತರೂರ್ ನನಗೆ ಕಾಂಗ್ರೆಸ್ ಬಗ್ಗೆ ಕನಸು ಇದೆ. ಅದನ್ನು ನಾನು  ಎಲ್ಲ ಪ್ರತಿನಿಧಿಗಳಿಗೂ ಕಳುಹಿಸುತ್ತಿದ್ದು, ನಾನು ಅವರಿಂದ ಬೆಂಬಲ ಬಯಸುತ್ತೇನೆ. ನಾನು ಪಕ್ಷದ ಎಲ್ಲರ ದನಿಯಾಗಲು ಇಲ್ಲಿದ್ದೇನೆ ಎಂದು ಹೇಳಿದ್ದಾರೆ. ಭಾರತದ ವಿವಿಧ  ರಾಜ್ಯಗಳ  ಪಕ್ಷದ ಕಾರ್ಯಕರ್ತರನ್ನು ಇದು ಪ್ರತಿನಿಧಿಸುತ್ತದೆ. ಕಾಶ್ಮೀರದಿಂದ ಕೇರಳವರೆಗೆ, ಪಂಜಾಬ್​​ನಿಂದ ನಾಗಾಲ್ಯಾಂಡ್ ವರೆಗೆ ಇರುವ ಪಕ್ಷದ ಕಾರ್ಯಕರ್ತರು ಚುನಾವಣೆಯಲ್ಲಿ ಭಾಗವಹಿಸಲು ನಾನು ಕೋರುತ್ತೇನೆ.  ನನ್ನ ಪ್ರಚಾರ ಅವರಿಗೆ ತಲುಪುತ್ತದೆ ಮತ್ತು ಪಕ್ಷದ ಮುಂದಿನ ದಾರಿಯನ್ನು ಪ್ರತಿನಿಧಿಸುತ್ತದೆ ಎಂದು ನಾನು ಭಾವಿಸುತ್ತೇನೆ.  ನಾನು ಹೈಕಮಾಂಡ್ ಸಂಸ್ಕೃತಿಯವನ್ನು ಬದಲಿಸುತ್ತೇನೆ ಎಂದು  ಶಶಿ ತರೂರ್  ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ನಮ್ಮ  ಪಕ್ಷದ ಭೀಷ್ಮ ಪಿತಾಮಹ:ತರೂರ್

ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಲು ಪಕ್ಷದಿಂದ ಯಾವುದೇ ಅಧಿಕೃತ ಅಭ್ಯರ್ಥಿ ಇರುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ನನಗೆ ಭರವಸೆ  ನೀಡಿದ್ದಾರೆ. ಗಾಂಧಿ  ಕುಟುಂಬ ಈ  ಚುನಾವಣೆಯಲ್ಲಿ  ನಿಷ್ಪಕ್ಷವಾಗಿರುತ್ತದೆ  ಮತ್ತು ಎಷ್ಟೇ ಜನ ಸ್ಪರ್ಧಿಗಳಿದ್ದರೂ ಅವರು ಅದನ್ನು ಸ್ವಾಗತಿಸುತ್ತಾರೆ. ಈ ಉತ್ಸಾಹದಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಇದು ಯಾರಿಗೂ ಅಗೌರವ ತೋರಿಸುವ ಉದ್ದೇಶ ಹೊಂದಿಲ್ಲ. ಇದು ಸೌಹಾರ್ದ ಸ್ಪರ್ಧೆ.  ನಾವು ಶತ್ರುಗಳಲ್ಲ, ಪ್ರತಿಸ್ಪರ್ಧಿಗಳೂ ಅಲ್ಲ. ನಾವು ಸಹೋದ್ಯೋಗಿಗಳು.  ನಮ್ಮ ಪಕ್ಷವನ್ನು ಮುನ್ನಡೆಸಲು ನಾವು ಆಸಕ್ತಿ ವಹಿಸಿದ್ದೇವೆ.  ಲೋಕಸಭೆಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಮ್ಮ  ಪಕ್ಷದ ಭೀಷ್ಮ ಪಿತಾಮಹ. ಮುಂದೆ ಹೇಗೆ ಸಾಗಬೇಕು ಎಂಬುದನ್ನು ಪಕ್ಷದ ಕಾರ್ಯಕರ್ತರು ನಿರ್ಧರಿಸಲಿ.  ನಾನು ಖರ್ಗೆ, ದಿಗ್ವಜಯ ಸಿಂಗ್, ತ್ರಿಪಾಠಿ ಬಗ್ಗೆ ಯಾವುದೇ ರೀತಿಯ ನಕಾರಾತ್ಮ ವಿಷಯ ಮಾತನಾಡಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ.

ಆದರೆ ಯಥಾಸ್ಥಿತಿಯನ್ನು ಮುಂದುವರಿಸಲು ಬಯಸುವವರು ನನಗೆ ಮತ ಹಾಕಲು ಒಲವು ತೋರುವುದಿಲ್ಲ ಏಕೆಂದರೆ ನಾನು ಬದಲಾವಣೆ, ವಿಭಿನ್ನ ವಿಧಾನ ಮತ್ತು ಪಕ್ಷವನ್ನು ವಿಭಿನ್ನ ರೀತಿಯಲ್ಲಿ ಮುನ್ನಡೆಸುವ ದೃಷ್ಟಿಯನ್ನು ಪ್ರತಿನಿಧಿಸುತ್ತೇನೆ. ಯಾಕೆಂದರೆ ಕೆಲವು ವರ್ಷಗಳಿಂದ ನಾವು ಹಿನ್ನಡೆ ಅನುಭವಿಸುತ್ತಿದ್ದೇವೆ.  ಖರ್ಗೆ ಅವರ ಉಮೇದುವಾರಿಕೆ ಸ್ವಾಗತಾರ್ಹ. ಪಕ್ಷದ ಲಾಭಕ್ಕಾಗಿ ಹಲವು ಅಭ್ಯರ್ಥಿಗಳು ಬೇಕು. ನನಗೆ ಬೆಂಬಲ ನೀಡಲು ಹೊರಟಿರುವ ದೇಶಾದ್ಯಂತದ ಕಾರ್ಯಕರ್ತರನ್ನು ನಿರಾಸೆಗೊಳಿಸಲು ಬಯಸುವುದಿಲ್ಲ.ಹಾಗಾಗಿ  ನಾನು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ.

ನೋಟು ಅಮಾನ್ಯೀಕರಣ, ನಿರುದ್ಯೋಗ, ಹಣದುಬ್ಬರ ಹೀಗೆ ನಮ್ಮ ದೇಶದಲ್ಲಿ ಕೆಲವು ವಿಷಯಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ನಾವು ನೋಡಿದ್ದೇವೆ. ಬದಲಾವಣೆ ತರುವ ಪಕ್ಷ ಕಾಂಗ್ರೆಸ್ ಆಗಬೇಕು ಎಂದು ಶಶಿ ತರೂರ್ ಹೇಳಿದ್ದಾರೆ.

Published On - 1:48 pm, Fri, 30 September 22