ಕೈಯಲ್ಲಿ ಗುಂಡು-ತುಂಡು, ಸಿಗರೇಟ್ ಇದ್ದರೆ ಮಾತ್ರ ಬುದ್ದಿಜೀವಿಗಳಾ? ಪಠ್ಯ ಪರಿಷ್ಕರಣೆ ವಿರುದ್ಧ ಸಿಟಿ ರವಿ ವಾಕ್ಪ್ರಹಾರ

|

Updated on: Jun 01, 2023 | 1:38 PM

ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಸಮಾನ ಮನಸ್ಕರ ಒಕ್ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕಿಡಿಕಾರಿದ್ದು, ಕೆಲ ಸಾಹಿತಿಗಳನ್ನು ಮೆಕಾಲೆಗೆ ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ.

ಕೈಯಲ್ಲಿ ಗುಂಡು-ತುಂಡು, ಸಿಗರೇಟ್ ಇದ್ದರೆ ಮಾತ್ರ ಬುದ್ದಿಜೀವಿಗಳಾ? ಪಠ್ಯ ಪರಿಷ್ಕರಣೆ ವಿರುದ್ಧ ಸಿಟಿ ರವಿ ವಾಕ್ಪ್ರಹಾರ
ಸಿಟಿ ರವಿ
Follow us on

ಬೆಂಗಳೂರು: ಶಾಲಾ ಪಠ್ಯಪುಸ್ತಕ ಪರಿಷ್ಕರಣೆ(textbook revision) ಕುರಿತು ಸಮಾನ ಮನಸ್ಕರ ಒಕ್ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿಶ್ರ(CT Ravi) ಆಕ್ರೋಶ ವ್ಯಕ್ತಪಡಿಸಿದ್ದು,  ಬುದ್ದಿಜೀವಿಗಳನ್ನು ಮೆಕಾಲೆ  ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ. ಇಂದು(ಜೂನ್ 1) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ  ಸಿಟಿ ರವಿ, ಗುಂಡು, ತುಂಡು, ಸಿಗರೇಟ್ ಕೈಯಲ್ಲಿ ಇದ್ದರೆ ಬುದ್ದಿ ಓಡುವ ಜನ ಮಾತ್ರ ಬುದ್ದಿಜೀವಿಗಳಾ? ಎಂದು ಪ್ರಶ್ನಿಸಿದರು.

ಇದನ್ನು ಓದಿ: ಮಕ್ಕಳ ಮನಸ್ಸಿಗೆ ವಿಷ ತುಂಬುವ ಪಠ್ಯ, ಪಾಠಗಳಿಗೆ ಅವಕಾಶ ಕೊಡುವುದಿಲ್ಲ; ಸಿಎಂ ಸಿದ್ದರಾಮಯ್ಯ

ಬುದ್ದಿಜೀವಿಗಳು ಮೆಕಾಲೆ ಗರಡಿಯಲ್ಲಿ ಪಳಗಿದವರು. ಮೆಕಾಲೆ ಸದಾ ಭಾರತವನ್ನು ದಾಸ್ಯದ ಚಿಂತನೆಯಲ್ಲೇ ನಮ್ಮ ಸಂಸ್ಕೃತಿಗಳ ವಿರುದ್ಧ ಇದ್ದವರು. ದಾಸ್ಯದಲ್ಲೇ ಇರಬೇಕು ಎನ್ನುವ ಯೋಚನೆಯಲ್ಲಿ ಜನರನ್ನು ತಯಾರು ಮಾಡುವ ಯೋಚನೆ ಅವನದ್ದಾಗಿತ್ತು. ಕುಟುಂಬ ಒಂದು ಸಂಸ್ಥೆ, ರಾಜ್ಯ ಇರಬಾರದು ಎನ್ನುವ ಚಿಂತನೆ ಕಾರ್ಲ್ ಮಾರ್ಕ್ಸ್ ದಾಗಿತ್ತು. ಅವರ ಚಿಂತನೆಯಲ್ಲಿರುವ ಜನ ಭಾರತ ಶ್ರೇಷ್ಠ ಎಂದು ಹೇಳಿದ್ದಾರಾ? ಅಲೆಗ್ಸಾಂಡರ್ ದಿ ಗ್ರೇಟ್, ಅಕ್ಬರ್ ದಿ ಗ್ರೇಟ್ ಎನ್ನುವ ಇವರು ಯಾರು? ಇವರು ದೇಶ ಲೂಟಿ ಮಾಡಿದ ದಾಳಿಕೋರರು. ನಮ್ಮ ಸಂಸ್ಕೃತಿ ನಾಶ ಮಾಡಿದವರು‌. ನಮ್ಮ ತಾಯಂದಿರ ಶೀಲವನ್ನು ಕೆಡಿಸಲು ಕೈ ಹಾಕಿದವರು. ಅಂತಹವರನ್ನು ದಿ ಗ್ರೇಟ್ ಎಂದು ನಮ್ಮ ದೇಶದಲ್ಲಿ ಹೇಳಿಕೊಳ್ಳುತ್ತಾರೆ ಎನ್ನುವುದೇ ದೇಶಕ್ಕೆ ಅಪಮಾನ ಎಂದು ಕಿಡಿಕಾರಿದರು.

ದೇಶದಲ್ಲಿ ಸಾಧನೆ ಮಾಡಿದವರು ಇರಲಿಲ್ಲವೇ? ಆರ್ಯಭಟ, ಚಾಣಕ್ಯ , ಅಶೋಕ ಚಕ್ರವರ್ತಿ, ರಾಜರಾಜ ಚೋಳ ಎಲ್ಲಿಯವರು? ಅವರ ಇತಿಹಾಸದ ಬಗ್ಗೆ ಎಲ್ಲಾದರೂ ಹೇಳಿದ್ರಾ? ರಾಜ ರಾಜ ಚೋಳ, ರಾಜೇಂದ್ರ ಚೋಳ, ಕರಿಕಾಳ ಚೋಳ ಇವರೆಲ್ಲಾ ಇಂಡೊನೇಷ್ಯಾ ಕಾಂಬೋಡಿಯಾವರೆಗೆ ಭಾರತವನ್ನು ವಿಸ್ತರಣೆ ಮಾಡಿದರು ಎನ್ನುವುದು ಇತಿಹಾಸದಲ್ಲಿ ಓದಿದ್ದೇವಾ? ಅಶೋಕ್ ಚಕ್ರವರ್ತಿ ಸಾಮ್ರಾಜ್ಯ ಪರ್ಷಿಯಾವನ್ನು ದಾಟಿ ಹೋಗಿತ್ತು, ಅದನ್ನು ಓದಿದ್ದೇವಾ? ಎಂದು ಪ್ರಶ್ನಿಸಿದರು.

ನಾವು ಹೇಳಿಕೊಟ್ಟಿದ್ದು ಅಕ್ಬರ್ ಗ್ರೇಟ್, ಅಲೆಗ್ಸಾಂಡರ್ ಗ್ರೇಟ್. ಈ ಬುದ್ದಿಜೀವಿಗಳು ಮೆಕಾಲೆ, ಕಾರ್ಲ್ ಮಾರ್ಕ್ಸ್ ಗರಡಿಯಲ್ಲಿ ಪಳಗಿದವರು. ಆ ಜನರಿಗೆ ಭಾರತೀಯತೆ, ಭಾರತದ ಹಿರಿಮೆ ಗರಿಮೆ ಹೇಳುವ ಸಂಗತಿ ಅಪಥ್ಯವಾಗಿ ಕಂಡಿದೆ. ಆ ಜನ ಇವತ್ತು ಸಿದ್ದರಾಮಯ್ಯ ಕಿವಿಗೆ ಪದೇ ಪದೇ ಊದುತ್ತಾ ಇದ್ದಾರೆ. ಭಾರತದ ಶ್ರೇಷ್ಠತೆಯನ್ನು ಹೇಳುವ ಕೆಲಸ ಆಗಬೇಕು. ಆಗ ಭಾರತ ಎದ್ದು ನಿಲ್ಲುತ್ತದೆ. ಸಾಮಾನ್ಯ ಜನ ದೇಶಕ್ಕೆ ಸಮರ್ಪಣೆ ಮಾಡಿದ್ದು, ವಿಜ್ಞಾನ, ತಂತ್ರಜ್ಞಾನದ ಬಗ್ಗೆ ಹೇಳಿದರೆ ಭಾರತ ಎದ್ದು ನಿಲ್ಲುತ್ತದೆ. ಈ ಜನರಿಗೆ ಭಾರತ ಎದ್ದು ನಿಲ್ಲಬಾರದು. ಹೀಗಾಗಿ ಈ ಜನ ಪಠ್ಯ ಪುಸ್ತಕ ನೆಪಮಾಡಿಕೊಂಡಿದ್ದಾರೆ. ಇವರು ಮಾತ್ರ ತಜ್ಞರಾ? ಎಂದು ಕುಟುಕಿದರು.

ಸಂಸತ್ ಉದ್ಘಾಟನೆಗೆ ಕಾಂಗ್ರೆಸ್ ಬಹಿಷ್ಕಾರದ ಬಗ್ಗೆ ಪ್ರತಿಕ್ರಿಯಿಸಿದ ಸಿಟಿ ರವಿ, ಇದು ಭಾರತದ ಪ್ರಜಾಪ್ರಭುತ್ವದ ದೇಗುಲ. ಈಗ ಸಂಸತ್ ಕಟ್ಟಿದ್ದು ಬ್ರಿಟಿಷರು ಎನ್ನುವ ಹಾಗಿಲ್ಲ, ನಮ್ಮವರೇ ಕಟ್ಟಿದ್ರು ಎಂದು ಹೇಳಬೇಕು ಅಂತಾ ದೇವೇಗೌಡರು ಚೆನ್ನಾಗಿ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಗೆ ಇದು ಸಹಿಸಿಕೊಳ್ಳಲು ಆಗುತ್ತಿಲ್ಲ. ಬಿಜೆಪಿಗರು ಕಟ್ಟಿದರು, ಮೋದಿ ಕಟ್ಟಿದರು ಎಂಬ ನೋವು ಕಾಂಗ್ರೆಸ್ ಗೆ ಇದೆ. ಪಾಂಡವರ ಇಂದ್ರಪ್ರಸ್ಥಕ್ಕೆ ಹೋಗಿದ್ದ ದುರ್ಯೋಧನಾದಿ ಕೌರವರು ಅದನ್ನು ನೋಡಿ ಹೊಟ್ಟೆ ಉರಿದುಕೊಂಡಿದ್ದರು. ಈಗ ಅದೇ ರೀತಿ ಹೊಸ ಸಂಸತ್ ವೈಭೋಗ ನೋಡಿ ಕಾಂಗ್ರೆಸ್ ಹೊಟ್ಟೆ ಉರಿದು ಕೊಳ್ಳುತ್ತಿದೆ‌ ಎಂದು ಟಾಂಗ್ ನೀಡಿದರು.

ಪಠ್ಯಪುಸ್ತಕ ಪರಿಷ್ಕರಣೆಗೆ ಸಮಾನ ಮನಸ್ಥರ ಒಕ್ಕೂಟ ಮನವಿ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಭಾರೀ ವಿವಾದ ಹುಟ್ಟುಹಾಕಿತ್ತು. ರೋಹಿತ್ ಚಕ್ರತೀರ್ಥ ಎನ್ನುವವರ ಮುಂದಾಳತ್ವದಲ್ಲಿ ನಡೆದ ಪರಿಷ್ಕರಣೆಯಲ್ಲಿ ಪಠ್ಯದಲ್ಲಿ ಅನೇಕ ಮುಖ್ಯವಾದ ವಿಚಾರಗಳನ್ನು ಕೈ ಬಿಟ್ಟು ಅನಗತ್ಯ ವಿಚಾರಗಳನ್ನು ಸೇರಿಸಲಾಗಿದೆ ಎಂದು ನಾಡಿನ ಸಾಹಿತಿಗಳು, ವಿಚಾರವಂತರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಪಠ್ಯಪುಸ್ತಕ ಪರಿಷ್ಕರಣೆಗೆ ತಕ್ಷಣವೇ ಸಮಿತಿ ರಚಿಸಬೇಕು ಎಂದು ಸಮಾನ ಮನಸ್ಕರ ಒಕ್ಕೂಟ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದು ಭೇಟಿ ಮಾಡಿದ್ದ ಹಿರಿಯ ಸಾಹಿತಿ, ಕಲಾವಿದರು, ಇಂದಿನ ಬದಲಾವಣೆಗೆ ತಕ್ಕಂತೆ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಲು ಕೂಡಲೇ ಒಂದು ತಜ್ಞರ ಸಮಿತಿಯನ್ನು ರಚಿಸಬೇಕು’ ಎಂದು ಸಮಾನ ಮನಸ್ಥರ ಒಕ್ಕೂಟದ ಮುಖಂಡರಾದ ಡಾ. ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಪ್ರೊ.ರವಿವರ್ಮಕುಮಾರ್, ಪ್ರೊ. ನಿರಂಜನಾರಾಧ್ಯ, ಡಾ.ವಸುಂಧರ ಭೂಪತಿ ಸೇರಿದಂತೆ ಹಿರಿಯ ಸಾಹಿತಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು.

Published On - 1:31 pm, Thu, 1 June 23