ಲೋಕಸಭೆ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ; ಬಿಎಸ್​ ಯಡಿಯೂರಪ್ಪ ಹೇಳಿದ್ದಿಷ್ಟು…

| Updated By: ಗಣಪತಿ ಶರ್ಮ

Updated on: Sep 08, 2023 | 3:08 PM

BJP, JDS alliance; ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೊತೆಗೆ ದೇವೇಗೌಡರು ಈಗಾಗಲೇ ಮಾತುಕತೆ ನಡೆಸಿದ್ದಾರೆ. ಮಾತುಕತೆ ಪ್ರಕಾರ ಜೆಡಿಎಸ್​ಗೆ ನಾಲ್ಕು ಸೀಟು ಕೊಡಲು ಒಪ್ಪಿದ್ದಾರೆ. ದೆಹಲಿ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಿರುತ್ತೇವೆ. ಇದರಿಂದ 27-28 ಕ್ಷೇತ್ರ ಗೆಲ್ಲಲು ಅನುಕೂಲವಾಗಲಿದೆ. ಯಾವುದೇ ತೀರ್ಮಾನ ದೆಹಲಿಯವರು ತೆಗೆದುಕೊಂಡರೂ ಸ್ವಾಗತಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ; ಬಿಎಸ್​ ಯಡಿಯೂರಪ್ಪ ಹೇಳಿದ್ದಿಷ್ಟು...
ಬಿಎಸ್​ ಯಡಿಯೂರಪ್ಪ
Follow us on

ಬೆಂಗಳೂರು, ಸೆಪ್ಟೆಂಬರ್ 8: ಮುಂಬರುವ ಲೋಕಸಭಾ ಚುನಾವಣೆಗೆ (Lok Sabha elections 2024) ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ (BJP, JDS alliance) ಮಾಡಿಕೊಳ್ಳುವ ವಿಚಾರವಾಗಿ ಸಹಮತ ಇದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಹೇಳಿದ್ದಾರೆ. ಮೈತ್ರಿ ವಿಚಾರವಾಗಿ ಶುಕ್ರವಾರ ‘ಟಿವಿ 9’ಗೆ ಪ್ರತಿಕ್ರಿಯೆ ನೀಡಿದ ಅವರು, ವೈಯಕ್ತಿಕವಾಗಿ ಮೈತ್ರಿ ಬಗ್ಗೆ ನನಗೆ ಖಂಡಿತಾ ಒಪ್ಪಿಗೆ ಇದೆ. ಸೀಟು ಹಂಚಿಕೆ ಬಗ್ಗೆ ನಮ್ಮ ಜೊತೆ ಇದುವರೆಗೆ ಯಾವುದೇ ಚರ್ಚೆ ಮಾಡಿಲ್ಲ. ಬಿಜೆಪಿಯ ಹಾಲಿ ಸಂಸದರು ಇರುವ ಕ್ಷೇತ್ರಗಳನ್ನು ಜೆಡಿಎಸ್ ಕೇಳುವ ಪ್ರಶ್ನೆ ಉದ್ಭವಿಸುವುದಿಲ್ಲ. ಆ ಪ್ರಯತ್ನವನ್ನು ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡರು ಮಾಡಲ್ಲ ಅಂದುಕೊಂಡಿದ್ದೇನೆ. ಮಾತುಕತೆ ಪೂರ್ಣ ಆದ ಮೇಲೆ ನಾನೇ ಹೋಗಿ ದೇವೇಗೌಡರು, ಕುಮಾರಸ್ವಾಮಿ ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೊತೆಗೆ ದೇವೇಗೌಡರು ಈಗಾಗಲೇ ಮಾತುಕತೆ ನಡೆಸಿದ್ದಾರೆ. ಮಾತುಕತೆ ಪ್ರಕಾರ ಜೆಡಿಎಸ್​ಗೆ ನಾಲ್ಕು ಸೀಟು ಕೊಡಲು ಒಪ್ಪಿದ್ದಾರೆ. ದೆಹಲಿ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಿರುತ್ತೇವೆ. ಇದರಿಂದ 27-28 ಕ್ಷೇತ್ರ ಗೆಲ್ಲಲು ಅನುಕೂಲವಾಗಲಿದೆ. ಯಾವುದೇ ತೀರ್ಮಾನ ದೆಹಲಿಯವರು ತೆಗೆದುಕೊಂಡರೂ ಸ್ವಾಗತಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಎಲ್ಲರೂ ಒಟ್ಟಾಗಿ ದೆಹಲಿ ನಾಯಕರ ತೀರ್ಮಾನದಂತೆ ಹೆಚ್ಚು ಸೀಟು ಗೆಲ್ಲಲು ಪ್ರಯತ್ನ ಮಾಡುತ್ತೇವೆ. ನಾನು ಕೂಡಾ ವರಿಷ್ಠರ ಜೊತೆ ಮಾತನಾಡುತ್ತೇನೆ, ಅವರ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನಕ್ಕೆ ಬರುತ್ತೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಜೆಡಿಎಸ್​ ಜತೆ ಮೈತ್ರಿ ಖಚಿತಪಡಿಸಿದ ಬೊಮ್ಮಾಯಿ, ಶಾ ರವಾನಿಸಿದ ಮಾಹಿತಿ ಬಿಚ್ಚಿಟ್ಟ ಯಡಿಯೂರಪ್ಪ

ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ವಿರೋಧಿಸಿದ್ದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವರಿಷ್ಠರು ತೆಗೆದುಕೊಂಡಿರುವ ತೀರ್ಮಾನಕ್ಕೆ ನಾವು ಬದ್ಧರಾಗಿರಬೇಕು. ರಾಜಕಾರಣದ ಹೊಂದಾಣಿಕೆಯಲ್ಲಿ ವ್ಯತ್ಯಾಸ, ಏರುಪೇರು ಆಗುತ್ತಲೇ ಇರುತ್ತದೆ. ರಾಜಕಾರಣದಲ್ಲಿ ಇದು ಅನಿವಾರ್ಯ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಏನೇ ತೀರ್ಮಾನ ತೆಗೆದುಕೊಂಡರೂ ನನ್ನ ಸ್ವಾಗತವಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಇದಕ್ಕೂ ಮುನ್ನ, ಜೆಡಿಎಸ್​ ಹಾಗೂ ಬಿಜೆಪಿ ಮೈತ್ರಿಯೊಂದಿಗೆ ಲೋಕಸಭಾ ಚುನಾವಣೆ ಎದುರಿಸುವುದು ಖಚಿತವಾಗಿದೆ ಎಂದು ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮಾಧ್ಯಮಗಳಿಗೆ ತಿಳಿಸಿದ್ದರು. ಹೊಸ ಬೆಳವಣಿಗೆ ಇದೀಗ ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ