ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬರಲಿದೆ ಕುತ್ತು; ಪರ್ಯಾಯ ನಾಯಕರ ಹುಡುಕಾಟದಲ್ಲಿ ಬಿಜೆಪಿ ಹೈಕಮಾಂಡ್

|

Updated on: Jun 03, 2023 | 7:04 PM

ಮೋದಿ ಬ್ರ್ಯಾಂಡ್‌ಗೆ ಹಾನಿಯಾಗಿದೆ ಎಂದು ಕೇಂದ್ರ ನಾಯಕರು ಕೋಪಗೊಂಡಿದ್ದಾರೆ ಮತ್ತು ವಿವರಣೆಯನ್ನು ಕೇಳುತ್ತಿದ್ದಾರೆ. ಈ ವರ್ಷದ ಆರಂಭದಿಂದಲೇ ಪಕ್ಷದ ಕ್ಷೀಣಿಸಿದ ವರ್ಚಸ್ಸಿನ ಬಗ್ಗೆ ಸತ್ಯವನ್ನು ಹೇಳುವ ಬದಲು ಸ್ಥಳೀಯ ನಾಯಕತ್ವವು ಪಕ್ಷದ ಭವಿಷ್ಯದ ಬಗ್ಗೆ ಏಕೆ ಸುಳ್ಳು ಚಿತ್ರಣವನ್ನು ನೀಡಿದೆ ಎಂಬುದನ್ನು ತಿಳಿಯಲು ಅವರು ಬಯಸುತ್ತಾರೆ ಎಂದು ರಾಜ್ಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬರಲಿದೆ ಕುತ್ತು; ಪರ್ಯಾಯ ನಾಯಕರ ಹುಡುಕಾಟದಲ್ಲಿ ಬಿಜೆಪಿ ಹೈಕಮಾಂಡ್
ನಳಿನ್ ಕುಮಾರ್ ಕಟೀಲ್
Follow us on

ಕರ್ನಾಟಕ ವಿಧಾನಸಭಾ ಚುನಾವಣಾ (Karnataka Assembly Election 2023) ಫಲಿತಾಂಶದ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ರಾಜ್ಯ ಬಿಜೆಪಿ (BJP) ಇದೀಗ ಉನ್ನತ ಮಟ್ಟದಲ್ಲಿ ನಾಯಕತ್ವ ಬದಲಾವಣೆಗೆ ಸಿದ್ಧತೆ ನಡೆಸಿದೆ. ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರನ್ನು ಸ್ಥಾನದಿಂದ ತೆಗೆದುಹಾಕಲು ಮುಂದಾಗುವ ಸಾಧ್ಯತೆ ದಟ್ಟವಾಗಿದೆ. ಆದರೆ, ಸೋಲಿಗೆ ನಿಖರವಾದ ಕಾರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವಷ್ಟೇ ಈ ಕ್ರಮ ಕೈಗೊಳ್ಳಬಹುದು ಎಂದು ವರದಿಯಾಗಿದೆ. ಸೋಲಿನ ಮೌಲ್ಯಮಾಪನ ಮಾಡಲು ಬಿಜೆಪಿಯ ಕೇಂದ್ರ ನಾಯಕತ್ವವು ಕ್ಷೇತ್ರವಾರು ಫಲಿತಾಂಶಗಳ ವರದಿಯನ್ನು ಕೇಳಿದೆ. ಮುಂದಿನ ದಿನಗಳಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಮುಖ್ಯ ಚುನಾವಣಾ ತಂತ್ರಜ್ಞ, ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆಗಾಗಿ ಕರ್ನಾಟಕದ ನಾಯಕರನ್ನು ದೆಹಲಿಗೆ ಕರೆಸುವ ಸಾಧ್ಯತೆಯಿದೆ. ಹೀನಾಯ ಸೋಲಿಗೆ ಕಾರಣಗಳನ್ನು ಗುರುತಿಸಲು ಪಕ್ಷದ ಘಟಕದಿಂದ, ಸ್ವತಂತ್ರ ವಿಶ್ಲೇಷಕರಿಂದ ವರದಿಗಳನ್ನು ಕೇಳಲಾಗಿದೆ ಎನ್ನಲಾಗುತ್ತಿದೆ.

ಸುಮಾರು ಐದು ಡಜನ್ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಮಾಡಿ ಹುರುಪು ಪ್ರದರ್ಶಿಸಿದರೂ ರಾಜ್ಯ ನಾಯಕರು ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಿಲ್ಲದಿರುವ ಬಗ್ಗೆ ಕೇಂದ್ರ ನಾಯಕತ್ವವು ಅಸಮಾಧಾನಗೊಂಡಿದೆ ಎಂದು ಕರ್ನಾಟಕದ ಮೂಲಗಳು ಹೇಳಿರುವುದಾಗಿ ನ್ಯೂಸ್9 ವರದಿ ಮಾಡಿದೆ.

ಮೋದಿ ಬ್ರ್ಯಾಂಡ್‌ಗೆ ಹಾನಿಯಾಗಿದೆ ಎಂದು ಕೇಂದ್ರ ನಾಯಕರು ಕೋಪಗೊಂಡಿದ್ದಾರೆ ಮತ್ತು ವಿವರಣೆಯನ್ನು ಕೇಳುತ್ತಿದ್ದಾರೆ. ಈ ವರ್ಷದ ಆರಂಭದಿಂದಲೇ ಪಕ್ಷದ ಕ್ಷೀಣಿಸಿದ ವರ್ಚಸ್ಸಿನ ಬಗ್ಗೆ ಸತ್ಯವನ್ನು ಹೇಳುವ ಬದಲು ಸ್ಥಳೀಯ ನಾಯಕತ್ವವು ಪಕ್ಷದ ಭವಿಷ್ಯದ ಬಗ್ಗೆ ಏಕೆ ಸುಳ್ಳು ಚಿತ್ರಣವನ್ನು ನೀಡಿದೆ ಎಂಬುದನ್ನು ತಿಳಿಯಲು ಅವರು ಬಯಸುತ್ತಾರೆ ಎಂದು ರಾಜ್ಯ ಬಿಜೆಪಿ ನಾಯಕರೊಬ್ಬರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಸೋಲಿನಿಂದ ಉಂಟಾದ ಕತ್ತಲೆಯ ನಡುವೆ, ಪಕ್ಷವು ತನ್ನ ಮತ ಗಳಿಕೆ ಪ್ರಮಾಣವನ್ನು ಉಳಿಸಿಕೊಳ್ಳಲೂ ಪೈಪೋಟಿ ಎದುರಿಸಿದ್ದನ್ನು ಕಾಣಬಹುದು (2018 ರಲ್ಲಿ ಶೇ 36.2 ಇದ್ದುದು ಈ ಬಾರಿ ಶೇ 36). 39 ಕ್ಷೇತ್ರಗಳಲ್ಲಿ 10,000 ಕ್ಕಿಂತ ಹೆಚ್ಚಿನ ಮತಗಳ ಅಂತರದ ಗೆಲುವಿನ ಬಗ್ಗೆ ಪಕ್ಷವು ತೃಪ್ತಿ ವ್ಯಕ್ತಪಡಿಸಿದೆ. ಗೆದ್ದ 66 ಸ್ಥಾನಗಳಲ್ಲಿ ಸುಮಾರು ಮೂರನೇ ಎರಡರಷ್ಟು ಸ್ಥಾನಗಳಲ್ಲಿ, ಬಿಜೆಪಿ ತನ್ನ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡಿದೆ.

ಪರಾಜಿತ ಅಭ್ಯರ್ಥಿಗಳು ರಾಜ್ಯ ನಾಯಕರನ್ನು ದೂಷಿಸುವ ಮೂಲಕ ಈಗಾಗಲೇ ಇನ್ನೊಬ್ಬರತ್ತ ಬೆರಳು ತೋರಿಸಲು ಪ್ರಾರಂಭಿಸಿದ್ದಾರೆ. 2018 ರಲ್ಲಿ ಗೆದ್ದು 2023 ರಲ್ಲಿ ಸ್ಥಾನ ಪಡೆಯದ ಬಿಜೆಪಿ ಶಾಸಕರು ಈಗ ಸನ್ನದ್ಧರಾಗಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಅವರು ಪಕ್ಷದ ಅತೃಪ್ತರ ಪ್ರಮುಖ ಗುರಿಯಾಗಿದ್ದಾರೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕಾಂಗ್ರೆಸ್ 2018ರಲ್ಲಿ ಗೆದ್ದಿದ್ದ ಏಕೈಕ ಸ್ಥಾನವನ್ನು ಮಂಗಳೂರಿನಲ್ಲಿ ಉಳಿಸಿಕೊಂಡರೆ, ಇದಕ್ಕೆ ಪುತ್ತೂರಿನಲ್ಲಿ ಮತ್ತೊಂದು ಸ್ಥಾನವನ್ನು ಸೇರ್ಪಡೆಗೊಳಿಸಿಕೊಂಡಿದೆ. ಇದಕ್ಕೆ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಫೈರ್‌ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಕಾರಣರಾಗಿದ್ದಾರೆ. ಪುತ್ತಿಲ ಅವರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ನಳಿನ್ ಕುಮಾರ್ ಕಟೀಲು ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿ ಸದಾನಂದ ಗೌಡ ಅವರ ವಿರುದ್ಧ ಇರುವ ಆಕ್ರೋಶವೇ ಪುತ್ತೂರಿನಲ್ಲಿ ಸೋಲಿಗೆ ಕಾರಣ ಎಂದು ಕಟೀಲ್ ಬಣದ ಆಪ್ತರೊಬ್ಬರು ತಿಳಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷ ತೊರೆದು ತಮ್ಮದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹಿಂದುತ್ವವಾದಿಗಳು ಬೆದರಿಕೆ ಹಾಕುತ್ತಿರುವ ಬೆಳವಣಿಗೆಗಳು ನಡೆದಿವೆ.

ಈ ಮಧ್ಯೆ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಕಟೀಲ್ ಅವರ ಮೂರು ವರ್ಷಗಳ ಅವಧಿ ಕಳೆದ ವರ್ಷ ಆಗಸ್ಟ್‌ನಲ್ಲಿ ಕೊನೆಗೊಂಡಿದೆ. ಆದರೆ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಿಸ್ತರಿಸಲಾಗಿತ್ತು. ಕಟೀಲ್ ಅವರನ್ನು ಬೆಂಬಲಿಸುವ ಬಣವು, ಬಿಬಿಎಂಪಿ ಮತ್ತು ವರ್ಷಾಂತ್ಯದಲ್ಲಿ ಪಂಚಾಯತ್‌ಗಳಿಗೆ ನಡೆಯಲಿರುವ ಚುನಾವಣೆ ಮುಗಿಯುವವರೆಗೆ ಅವರನ್ನು ಮುಂದುವರಿಸಲು ಇದೇ ರೀತಿಯ ವಿನಾಯಿತಿ ನೀಡಬೇಕು ಎಂದು ಹೇಳುತ್ತಿದೆ.

ಇದನ್ನೂ ಓದಿ: Nalin Kumar Kateel: ಸೋಲಿನ ಹೊಣೆ ಹೊತ್ತುಕೊಂಡ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

ಆದರೆ, ಮುಂದಿನ ವರ್ಷ ಮೇ ತಿಂಗಳಲ್ಲಿ ನಿರ್ಣಾಯಕ ಲೋಕಸಭೆ ನಡೆಯಲಿದೆ. ಹೀಗಾಗಿ ಪಕ್ಷದ ಹೈಕಮಾಂಡ್ ಕಟೀಲ್​ಗೆ ಪರ್ಯಾಯ ಆಯ್ಕೆಯನ್ನು ಎದುರುನೋಡುತ್ತಿದೆ. ವಿಜಯಪುರದ ಫೈರ್‌ಬ್ರಾಂಡ್ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ರೇಸ್​​ನಲ್ಲಿದ್ದಾರೆ. ಯತ್ನಾಳ್ ಅವರ ಉಮೇದುವಾರಿಕೆಯನ್ನು ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ವಿರೋಧಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಿಂದ ಮೂರನೇ ಬಾರಿಗೆ ಶಾಸಕರಾಗಿರುವ ಅರವಿಂದ ಬೆಲ್ಲದ್ ಅವರೂ ಸ್ಪರ್ಧೆಯಲ್ಲಿದ್ದಾರೆ. ಯತ್ನಾಳ್ ಅವರಂತೆ ಲಿಂಗಾಯತರಾಗಿದ್ದು ಕಾರ್ಯಕರ್ತರಲ್ಲಿ ಜನಪ್ರಿಯರಾಗಿದ್ದಾರೆ.

ಬಿಎಸ್ ಯಡಿಯೂರಪ್ಪ ಅವರು ತಮ್ಮ ಪುತ್ರ ಬಿವೈ ವಿಜಯೇಂದ್ರ ಅಥವಾ ಅವರ ಆಪ್ತರಾದ ಶೋಭಾ ಕರಂದ್ಲಾಜೆ ಅವರನ್ನು ಕಟೀಲ್ ಅವರ ಉತ್ತರಾಧಿಕಾರಿಯನ್ನಾಗಿ ಮಾಡಲು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. ವಿಜಯೇಂದ್ರ ಅವರು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷರಾಗಿದ್ದಾರೆ. ಕರಂದ್ಲಾಜೆ ಕೇಂದ್ರ ಸಚಿವರು.

ಬಿಎಲ್ ಸಂತೋಷ್ ನೇತೃತ್ವದ ಗುಂಪು ಮೇಲಿನ ಯಾವುದಕ್ಕೂ ಆದ್ಯತೆ ನೀಡುವುದಿಲ್ಲ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಅಥವಾ ಕಾರ್ಕಳದಿಂದ ಗೆದ್ದಿರುವ ಸುನೀಲ್ ಕುಮಾರ್ ಅವರನ್ನು ಬಯಸುತ್ತದೆ. ಆದರೆ ಒಕ್ಕಲಿಗರಾದ ರವಿ ಅವರು ಲಿಂಗಾಯತ, ಹೆಚ್​​ಡಿ ತಮ್ಮಯ್ಯ ಅವರ ಕೈಯಲ್ಲಿ ಸೋತಿದ್ದಾರೆ. ತಮ್ಮಯ್ಯ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಟಿಕೆಟ್‌ನಲ್ಲಿ ರವಿಯನ್ನು ಸೋಲಿಸಿದರು ಮತ್ತು ಕೇಂದ್ರ ನಾಯಕತ್ವವು ಲಿಂಗಾಯತರ ವಿಚಾರದಲ್ಲಿ ಜಾಗರೂಕವಾಗಿದೆ.

ಇಬ್ಬರು ಒಕ್ಕಲಿಗ ನಾಯಕರಾದ ಆರ್ ಅಶೋಕ ಮತ್ತು ಡಾ ಸಿಎನ್ ಅಶ್ವಥ್ ನಾರಾಯಣ ಅವರು ಬೆಂಗಳೂರಿನಿಂದ ಆಯ್ಕೆಯಾಗಿದ್ದಾರೆ. ಈ ಪೈಕಿ ಅಶ್ವಥ್ ನಾರಾಯಣ್, ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದು ಉತ್ತಮ ಸಂಘಟಕರೆಂದೇ ಹೆಸರುವಾಸಿಯಾಗಿರುವುದರಿಂದ ಅವರನ್ನು ಹೆಚ್ಚು ಸೂಕ್ತ ಅಭ್ಯರ್ಥಿ ಎಂದು ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಟೀಲ್ ಅವರನ್ನು ಯಾವಾಗ ವಜಾಗೊಳಿಸಬೇಕು ಎಂಬುದು ಪಕ್ಷದ ನಾಯಕತ್ವದ ಮುಂದಿರುವ ಸಂದಿಗ್ಧತೆಯಾಗಿದೆ. ಸರಿಯಾದ ಅಭ್ಯರ್ಥಿಯನ್ನು ಹುಡುಕುವವರೆಗೂ ಅದು ತನ್ನ ನಿರ್ಧಾರವನ್ನು ಆತುರಗೊಳಿಸಲು ಬಯಸುವುದಿಲ್ಲ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ