ಕಾಂಗ್ರೆಸ್​​ ಸರ್ಕಾರದ ಬಣ್ಣ ಬಯಲಾಗಿದೆ; ಬರ ಪೀಡಿತ ತಾಲೂಕುಗಳ ಘೋಷಣೆ ಮಾಡದ್ದಕ್ಕೆ ಬಸವರಾಜ ಬೊಮ್ಮಾಯಿ ವಾಗ್ದಾಳಿ

ಸರ್ಕಾರ ತನ್ನ ಕೆಲಸ ಮಾಡದೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಸರ್ಕಾರದ ಗೃಹಲಕ್ಷ್ಮೀ ಯೋಜನೆ ಕೆಲವು ಮಹಿಳೆಯರಿಗೆ ಮಾತ್ರ ಸಿಕ್ಕಿದೆ. ರಾಜ್ಯದಲ್ಲಿ ಲೋಡ್​ ಶೆಡ್ಡಿಂಗ್ ಮಾಡಲು ಆರಂಭವಾಗಿದೆ. ಸರ್ಕಾರದ ವಿರುದ್ಧ ಹೋರಾಟ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಾಂಗ್ರೆಸ್​​ ಸರ್ಕಾರದ ಬಣ್ಣ ಬಯಲಾಗಿದೆ; ಬರ ಪೀಡಿತ ತಾಲೂಕುಗಳ ಘೋಷಣೆ ಮಾಡದ್ದಕ್ಕೆ ಬಸವರಾಜ ಬೊಮ್ಮಾಯಿ ವಾಗ್ದಾಳಿ
ಬಸವರಾಜ ಬೊಮ್ಮಾಯಿ
Follow us
| Updated By: ಗಣಪತಿ ಶರ್ಮ

Updated on: Sep 11, 2023 | 9:45 PM

ಹುಬ್ಬಳ್ಳಿ, ಸೆಪ್ಟೆಂಬರ್ 11: ಇಷ್ಟೊತ್ತಿಗಾಗಲೇ ರಾಜ್ಯದಲ್ಲಿ ಬರ ಪೀಡಿತ ತಾಲೂಕುಗಳ ಘೋಷಣೆ ಆಗಬೇಕಿತ್ತು. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ (Congress Government) ನೆಪ ಹೇಳುತ್ತಾ ಮುಂದೂಡಿಕೆ ಮಾಡುತ್ತಿದೆ. ಕಾಂಗ್ರೆಸ್​​ ಸರ್ಕಾರದ ಬಣ್ಣ ಬಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆಯ ನಂತರ ಮಾತನಾಡಿದ ಅವರು, ಬರ ಪೀಡಿತ ತಾಲೂಕುಗಳ ಬಗ್ಗೆ ಜೂನ್‌ನಲ್ಲಿ ಕೇಳಿದ್ರೆ ಜುಲೈನಲ್ಲಿ ಘೋಷಣೆ ಮಾಡುತ್ತೇವೆ ಅಂತಾರೆ. ಜುಲೈನಲ್ಲಿ ಕೇಳಿದ್ರೆ ಆಗಸ್ಟ್​ ಅಂತಾರೆ. ಆಗಸ್ಟ್​ ಮುಗಿದು ಸೆಪ್ಟೆಂಬರ್​​​ ಬಂದರೂ ಬರ ಘೋಷಣೆ ಮಾಡುತ್ತಿಲ್ಲ. ಎಲ್ಲಾ ವಿಚಾರಗಳಲ್ಲೂ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಆಗ್ತಿದೆ ಎಂದರು.

ಸರ್ಕಾರ ತನ್ನ ಕೆಲಸ ಮಾಡದೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಸರ್ಕಾರದ ಗೃಹಲಕ್ಷ್ಮೀ ಯೋಜನೆ ಕೆಲವು ಮಹಿಳೆಯರಿಗೆ ಮಾತ್ರ ಸಿಕ್ಕಿದೆ. ರಾಜ್ಯದಲ್ಲಿ ಲೋಡ್​ ಶೆಡ್ಡಿಂಗ್ ಮಾಡಲು ಆರಂಭವಾಗಿದೆ. ಸರ್ಕಾರದ ವಿರುದ್ಧ ಹೋರಾಟ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ ಎಂದು ಅವರು ತಿಳಿಸಿದರು.

ಎಂಎಲ್​ಸಿ ಪ್ರದೀಪ್ ಶೆಟ್ಟರ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಅಲರ್ಟ್ ಆಗಿದ್ದ ಬಿಜೆಪಿ ಕೋರ್ ಕಮಿಟಿ ಸಭೆ ಕರೆದಿತ್ತು.

ಇದನ್ನೂ ಓದಿ: ಪ್ರದೀಪ್ ಶೆಟ್ಟರ್ ಅಸಮಾಧಾನ ಬೆನ್ನಲ್ಲೇ ಬಿಜೆಪಿ ಅಲರ್ಟ್; ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಮಹತ್ವದ ಸಭೆ

ಮಾಜಿ ಸಚಿವ ಮುನೇನಕೊಪ್ಪ​ ಗೈರು

ಕೋರ್ ಕಮಿಟಿ ಸಭೆಗೆ ಗೈರಾಗಿರುವ ಬಗ್ಗೆ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ‘ಟಿವಿ9’ಗೆ ಪ್ರತಿಕ್ರಿಯಿಸಿದ್ದು, ಅನುಮತಿ ಪಡೆದುಕೊಂಡೇ ನಾನು ಸಭೆಗೆ ಗೈರಾಗಿದ್ದೇನೆ. ಅನ್ಯ ಕೆಲಸ ನಿಮಿತ್ತ ಅನುಮತಿ ಪಡೆದು ನಾನು ಬೆಂಗಳೂರಿಗೆ ಬಂದಿದ್ದೇನೆ ಎಂದು ತಿಳಿಸಿದರು.

ರಾಜಸ್ಥಾನ ಪ್ರವಾಸದಲ್ಲಿದ್ದೇನೆ; ಪ್ರದೀಪ್ ಶೆಟ್ಟರ್

ನಾನು ಗುಜರಾತ್​, ರಾಜಸ್ಥಾನ ಪ್ರವಾಸದಲ್ಲಿದ್ದೇನೆ. ಸರ್ವಪಕ್ಷಗಳ ಅಧ್ಯಯನಕ್ಕೆ ಗುಜರಾತ್, ರಾಜಸ್ಥಾನ ಪ್ರವಾಸ ಕೈಗೊಂಡಿದ್ದೇನೆ. ಹೀಗಾಗಿ ಕೋರ್ ಕಮೀಟಿ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಎಂಎಲ್​ಸಿ ಪ್ರದೀಪ್ ಶೆಟ್ಟರ್ ‘ಟಿವಿ9’ಗೆ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ