AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

18 ವರ್ಷಗಳ ಹಿಂದಿನ ಘಟನೆ ಪ್ರಸ್ತಾಪಿಸಿ ನನ್ನ ಚಾರಿತ್ರ್ಯ ವಧೆ: ಭೈರತಿ ಬಸವರಾಜ್

ನನ್ನ ವಿರುದ್ಧ ಪ್ರಕರಣ ದಾಖಲಿಸಿರುವ ವ್ಯಕ್ತಿಯ ಕುಟುಂಬದ 160 ಮಂದಿ ನನ್ನ ಪರವಾಗಿಯೇ ಇದ್ದಾರೆ ಎಂದು ಭೈರತಿ ಬಸವರಾಜ್ ಹೇಳಿದರು.

18 ವರ್ಷಗಳ ಹಿಂದಿನ ಘಟನೆ ಪ್ರಸ್ತಾಪಿಸಿ ನನ್ನ ಚಾರಿತ್ರ್ಯ ವಧೆ: ಭೈರತಿ ಬಸವರಾಜ್
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Dec 20, 2021 | 6:47 PM

Share

ಬೆಳಗಾವಿ: ಹದಿನೆಂಟು ವರ್ಷಗಳ ಹಿಂದಿನ ಘಟನೆಯನ್ನು ಪ್ರಸ್ತಾಪಿಸಿ ನನ್ನ ತೇಜೋವಧೆ ಮಾಡಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು. ತಮ್ಮ ವಿರುದ್ಧ ಕೇಳಿಬಂದಿರುವ ಭೂ ಹಗರಣದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, 18 ವರ್ಷಗಳ ಹಿಂದೆ ನಡೆದಿರುವ ಘಟನೆ ಅದು. ನಾನು ಆಗ ರಾಜಕೀಯದಲ್ಲೇ ಇರಲಿಲ್ಲ, ವ್ಯಾಪಾರಸ್ಥನಾಗಿದ್ದೆ. ಆದರೆ ಈಗ ರಾಜಕೀಯ ಚಾರಿತ್ರ್ಯವಧೆಗೆ ಈ ವಿಷಯ ಮುನ್ನೆಲೆಗೆ ಬಂದಿದೆ ಎಂದು ದೂರಿದರು. ಯಾರೋ ಒಬ್ಬರು ಈಗ ಪ್ರಕರಣವನ್ನು ನ್ಯಾಯಾಲಯದಲ್ಲಿ ದಾಖಲಿಸಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ನನ್ನ ವಿರುದ್ಧ ಪ್ರಕರಣ ದಾಖಲಿಸಿರುವ ವ್ಯಕ್ತಿಯ ಕುಟುಂಬದ 160 ಮಂದಿ ನನ್ನ ಪರವಾಗಿಯೇ ಇದ್ದಾರೆ. ಕೇವಲ ಒಬ್ಬ ಮಾತ್ರ ನನ್ನ ವಿರುದ್ಧ ಮಾತನಾಡುತ್ತಿದ್ದಾನೆ ಎಂದರು.

ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ, ಕಲಾಪಕ್ಕೆ ಬಹಿಷ್ಕಾರ ಭೂ ಅವ್ಯವಹಾರ ಆರೋಪ ಎದುರಿಸುತ್ತಿರುವ ಸಚಿವ ಭೈರತಿ ಬಸವರಾಜ್ ನಡೆಸಿದ್ದಾರೆ ಎನ್ನಲಾದ ಹಗರಣದ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ಕಾಂಗ್ರೆಸ್ ಶಾಸಕರು ಆಗ್ರಹಿಸಿದರು. ಸ್ಪೀಕರ್ ಅವಕಾಶ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಕಲಾಪ ಬಹಿಷ್ಕರಿಸಿ ಹೊರನಡೆದರು. ಸದನದಿಂದ ಹೊರನಡೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಭೂ ಅವ್ಯವಹಾರದ ಆರೋಪ ಎದುರಿಸುತ್ತಿರುವ ಐವರಲ್ಲಿ ಇಬ್ಬರು ರಾಜಕಾರಿಣಿಗಳು. ಒಬ್ಬರು ಸಚಿವ ಭೈರತಿ ಬಸವರಾಜ್, ಮತ್ತೊಬ್ಬರು ಶಂಕರ್. ಇವರ ವಿರುದ್ಧ ಸಹಿ ಫೋರ್ಜರಿ, ವಂಚನೆ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗಿ ತಿಂಗಳಾದರೂ ರಾಜೀನಾಮೆ ಪಡೆದಿಲ್ಲ. ಕೂಡಲೇ ರಾಜೀನಾಮೆ ನೀಡಬೇಕೆಂದು ನಾವು ಆಗ್ರಹಿಸಿದ್ದೇವೆ. ಈ ಹಿಂದೆ ಗಣಪತಿ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ರಾಜೀನಾಮೆಗೆ ಬಿಜೆಪಿಯವರು ಒತ್ತಾಯಿಸಿದ್ದರು. ಅವರೂ ನೀಡಿದ್ದರು. ಅಂದು ದಾಖಲಾಗಿದ್ದ ಪ್ರಕರಣದ ಮಾದರಿಯಂತೆಯೇ ಇಂದೂ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ಮನವಿಯನ್ನು ಸ್ಪೀಕರ್ ತಿರಸ್ಕಾರ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.

ಚರ್ಚೆಗೆ ಅವಕಾಶ ನೀಡದ ಕಾರಣ ನಾವು ಧರಣಿ ಮಾಡಿದೆವು. ಸದನದಲ್ಲಿ ನಾವು ಧರಣಿ ಮುಂದುವರಿಸಬೇಕಾಗಿತ್ತು ಆದರೆ ರಾಜ್ಯದಲ್ಲಿ ಹಲವು ಸಮಸ್ಯೆಗಳು ಇವೆ. ವಿಗ್ರಹ ವಿರೂಪಗೊಳಿಸಿದ ಪ್ರಕರಣಗಳು ವರದಿಯಾಗಿವೆ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆಯೂ ಚರ್ಚೆಯಾಗಬೇಕಿದೆ. ಸರ್ಕಾರದ ಮೇಲೆ ಇರುವ ಶೇ 40ರಷ್ಟು ಕಮಿಷನ್ ವಿಚಾರ, ಬಿಟ್ ಕಾಯಿನ್ ವಿಚಾರಗಳ ಬಗ್ಗೆಯೂ ಚರ್ಚೆ ನಡೆಯಬೇಕಿದೆ. ಹೀಗಾಗಿ ಸದನವನ್ನು ಇನ್ನೂ ಒಂದು ವಾರದ ಅವಧಿಗೆ ವಿಸ್ತರಿಸುವಂತೆ ಸ್ಪೀಕರ್‌ಗೆ ಪತ್ರ ಬರೆದಿದ್ದೆವು. ಇದನ್ನು ಸ್ಪೀಕರ್ ಒಪ್ಪಲಿಲ್ಲ. ನಮ್ಮ ನಿಲುವಳಿ ಸೂಚನೆ ತಿರಸ್ಕಾರ ಮಾಡಿದ್ದರಿಂದ ಸಭಾತ್ಯಾಗ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಸದನದಲ್ಲಿ ಕಲಾಪ ನಡೆಯಲು ನಾವು ಅವಕಾಶ ಮಾಡಿಕೊಡುತ್ತೇವೆ, ಮತ್ತೆ ಭಾಗವಹಿಸುತ್ತೇವೆ. ಎಂಇಎಸ್ ಪುಂಡತನವನ್ನೂ ಪ್ರಸ್ತಾಪಿಸುತ್ತೇವೆ ಎಂದರು. ಬಿಜೆಪಿ ನಾಯಕರು ದಿನೇಶ್ ಗುಂಡೂರಾವ್ ವಿರುದ್ಧ ಭೂ ಹಗರಣದ ಆರೋಪ ಪ್ರಸ್ತಾಪಿಸಿದ ಅವರು, ದಿನೇಶ್ ಗುಂಡೂರಾವ್ ಈಗ ಸಚಿವ ಸ್ಥಾನದಲ್ಲಿದ್ದಾರಾ? ಅಕ್ರಮ ಮಾಡಿದ್ದರೆ ಆಗಲೇ ಬಹಿರಂಗ ಮಾಡಬೇಕಿತ್ತು. ಆದರೆ ಈಗ ಭೈರತಿ ಬಸವರಾಜ್ ಸಚಿವ ಸ್ಥಾನದಲ್ಲಿದ್ದಾರೆ. ಹಳೆಯ ಪ್ರಕರಣ ಕೆದಕಿ ಈಗ ಯಾವುದೇ ಪ್ರಯೋಜನವಿಲ್ಲ. ಸಚಿವ ಭೈರತಿ ಬಸವರಾಜ್ ಅವರನ್ನು ಉಳಿಸಿಕೊಳ್ಳಲು ಈ ಸರ್ಕಾರ ಯತ್ನಿಸುತ್ತಿದೆ ಎಂದರು.

ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣಗೆ ಅವಮಾನ ಮಾಡಿದವರ ವಿರುದ್ಧ ದೇಶದ್ರೋಹ, ಗೂಂಡಾ ಕಾಯ್ದೆ ದಾಖಲು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದನ್ನೂ ಓದಿ: Karnataka Anti Conversion Bill 2021: ಮತಾಂತರ ನಿಷೇಧ ಮಸೂದೆಗೆ ಸಂಪುಟ ಒಪ್ಪಿಗೆ