ಕರ್ನಾಟಕದಲ್ಲಿ ಜೆಡಿಎಸ್ ಫಿನಿಶ್ ಆಗುತ್ತೆ ಎಂದುಕೊಂಡಿದ್ದಾರೆ; ಕಾಂಗ್ರೆಸ್ ವಿರುದ್ಧ ದೇವೇಗೌಡ ತೀವ್ರ ವಾಗ್ದಾಳಿ

|

Updated on: Oct 03, 2023 | 8:00 PM

ನಾನು ವಿರೋಧ ಪಕ್ಷಗಳ ಮೈತ್ರಿಕೂಟದ ಬಣ ಸೇರಿಕೊಳ್ಳಲು ನಿರಾಕರಿಸಿದ್ದಕ್ಕೆ ಆ ಬಣದಲ್ಲಿ ಕಾಂಗ್ರೆಸ್ ಕೂಡ ಇರುವುದೇ ಕಾರಣ. ಕರ್ನಾಟಕದಲ್ಲಿ ಜೆಡಿಎಸ್ ಭವಿಷ್ಯವನ್ನು ಮುಗಿಸುತ್ತೇವೆ ಎಂದು ಕಾಂಗ್ರೆಸ್ ಅಂದುಕೊಂಡಿದೆ. ಅದಕ್ಕೆ ನಾನೆಂದೂ ಅವಕಾಶ ನೀಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ಜೆಡಿಎಸ್ ಫಿನಿಶ್ ಆಗುತ್ತೆ ಎಂದುಕೊಂಡಿದ್ದಾರೆ; ಕಾಂಗ್ರೆಸ್ ವಿರುದ್ಧ ದೇವೇಗೌಡ ತೀವ್ರ ವಾಗ್ದಾಳಿ
ಎಚ್‌.ಡಿ ದೇವೇಗೌಡ
Follow us on

ಬೆಂಗಳೂರು: ನನಗೆ ಈಗ 91 ವರ್ಷ, ಈ ವಯಸ್ಸಿನಲ್ಲಿ ನಾನು ಯಾವುದೇ ಪ್ರಯೋಗಗಳನ್ನು ಬಯಸುವುದಿಲ್ಲ. ಅಗತ್ಯಕ್ಕೆ ಬಳಸಿಕೊಂಡು ಕಾಂಗ್ರೆಸ್ ನನ್ನನ್ನು ಹೇಗೆ ಕೈಬಿಟ್ಟಿತು ಎಂಬುದನ್ನು ನೋಡಿದ್ದೇನೆ. ಕರ್ನಾಟಕದಲ್ಲಿ ಜೆಡಿಎಸ್​ ಭವಿಷ್ಯವನ್ನು ಮುಗಿಸಲು ಕಾಂಗ್ರೆಸ್ ಪ್ಲಾನ್ ಮಾಡುತ್ತಲೇ ಇದೆ. ನಾನು ವಿರೋಧ ಪಕ್ಷಗಳ ಮೈತ್ರಿಕೂಟದ ಬಣ ಸೇರಿಕೊಳ್ಳಲು ನಿರಾಕರಿಸಿದ್ದಕ್ಕೆ ಆ ಬಣದಲ್ಲಿ ಕಾಂಗ್ರೆಸ್ ಕೂಡ ಇರುವುದೇ ಕಾರಣ. ನಾನೇ ರಾಜಕೀಯಕ್ಕೆ ಕರೆದುಕೊಂಡುಬಂದ ವ್ಯಕ್ತಿ ಸಿದ್ದರಾಮಯ್ಯ. ಆದರೆ, ಅವರೇ ಒಂದುವೇಳೆ ಕಾಂಗ್ರೆಸ್ ಜೊತೆ ಜೆಡಿಎಸ್​ ಬಂದರೆ ನಾನು ಹೊರನಡೆಯುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿದ್ದರು. ಆ ಬಗ್ಗೆ ನನಗೆ ಮಾತನಾಡಲು ಮನಸಿಲ್ಲ. ನಾನು ಕಾಂಗ್ರೆಸ್​ನಿಂದ ಬಹಳಷ್ಟು ಅನುಭವಿಸಿಬಿಟ್ಟಿದ್ದೇನೆ. ಐಎನ್‌ಡಿಐಎ (ಇಂಡಿಯಾ) ಕುರಿತು ನಮ್ಮ ಜತೆ ಕಾಂಗ್ರೆಸ್ ಚರ್ಚೆಯನ್ನೇ ಮಾಡಿಲ್ಲ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್‌.ಡಿ ದೇವೇಗೌಡ ಹೇಳಿದ್ದಾರೆ.

ಈಗಾಗಲೇ ಬಿಜೆಪಿ ಜೊತೆ ಕರ್ನಾಟಕದಲ್ಲಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಅದರ ಬೆನ್ನಲ್ಲೇ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಎಚ್​ಡಿ ದೇವೇಗೌಡ, ಜೆಡಿಎಸ್ ಪಕ್ಷವನ್ನು ತಮ್ಮ ಜೆಡಿಯು ಜೊತೆ ವಿಲೀನಗೊಳಿಸಲು ಹಾಗೂ ವಿರೋಧ ಪಕ್ಷಗಳ ಬಣವಾದ ಐಎನ್‌ಡಿಐಎ ಸೇರಲು ನನಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಹ್ವಾನ ನೀಡಿದ್ದರು. ಆದರೆ, ಅದನ್ನು ನಾನು ನಿರಾಕರಿಸಿದ್ದೆ. ಜನತಾದಳದ ಹಳೆಯ ಪಕ್ಷಗಳನ್ನು ಒಳಗೊಂಡ ‘ಜನತಾ ಫ್ರೀಡಂ ಫ್ರಂಟ್’ ರಚನೆಯ ಬಗ್ಗೆ 4 ತಿಂಗಳ ಹಿಂದೆ ನನ್ನ ಬಳಿ ಪ್ರಸ್ತಾಪ ಮಾಡಿದ್ದರು. ಅದಕ್ಕೆ ನಾನು ಒಪ್ಪಲಿಲ್ಲ. ನನಗೆ ರಾಷ್ಟ್ರೀಯ ಹುದ್ದೆಗಳಲ್ಲಿ ಯಾವುದೇ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಜತೆ ಮೈತ್ರಿ ಎಫೆಕ್ಟ್: ದೇವೇಗೌಡ್ರು ಭರವಸೆ ಕೊಟ್ಟರೂ ಜೆಡಿಎಸ್​ನಲ್ಲಿ ಮುಂದುವರೆದ ರಾಜೀನಾಮೆ ಪರ್ವ

ನನ್ನ ಮನವೊಲಿಸಲು ನಿತೀಶ್ ಕುಮಾರ್ ತಮ್ಮ ಪಕ್ಷದ ಅಧ್ಯಕ್ಷರು ಮತ್ತು ಹಿರಿಯ ನಾಯಕರನ್ನು ಕಳುಹಿಸಿದ್ದರು. ಆದರೆ ನಾನು ಅದಕ್ಕೆ ಒಪ್ಪಲಿಲ್ಲ. ನಿಮಗೆ ಇಚ್ಛೆಯಿದ್ದರೆ ನೀವು ಇತರ ಪಕ್ಷಗಳನ್ನು ಬೇಕಾದರೆ ಸಂಪರ್ಕಿಸಬಹುದು. ಆದರೆ, ನನಗೆ ಈ ವಿಲೀನದಲ್ಲಿ ಆಸಕ್ತಿ ಇಲ್ಲ ಎಂದು ಹೇಳಿ ಕಳುಹಿಸಿದ್ದೆ ಎಂದಿದ್ದಾರೆ.

ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಕಾಂಗ್ರೆಸ್ ಎರಡೂ ಇಂಡಿಯಾ ಬಣದಲ್ಲಿವೆ. ಹಾಗೆಯೇ ಕೆಲವು ಇತರ ಮಾಜಿ ಜನತಾ ದಳ ಪಕ್ಷಗಳಾದ ಆರ್​ಜೆಡಿ, ಸಮಾಜವಾದಿ ಪಕ್ಷ ಕೂಡ ಈ ಬಣದಲ್ಲಿವೆ.

ಇದನ್ನೂ ಓದಿ: ದೇವೇಗೌಡರ ಹಾಗೆ ಅದೃಷ್ಟ ಮತ್ತು ಅವಕಾಶ ಕೂಡಿಬಂದರೆ ಸಿದ್ದರಾಮಯ್ಯ ಪ್ರಧಾನ ಮಂತ್ರಿಯಾಗಬಹುದು: ಹೆಚ್ ವಿಶ್ವನಾಥ್

ಬಿಜೆಪಿ- ಜೆಡಿಎಸ್​ ನಡುವೆ ಸೀಟು ಹಂಚಿಕೆ ಕುರಿತ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಅಕ್ಟೋಬರ್ 24ರಂದು ದಸರಾ ನಂತರ ಈ ಬಗ್ಗೆ ಮಾತುಕತೆಗಳು ಪ್ರಾರಂಭವಾಗಲಿವೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ