ಪಕ್ಷ ಮರುಸಂಘಟಗೆ ಶರದ್ ಪವಾರ್ ಶಪಥ, ಎನ್​ಸಿಪಿ ನಮ್ಮ ಪಕ್ಷ ಎಂದ ಅಜಿತ್ ಪವಾರ್; ಶಿವಸೇನೆಯಂತೆ ವಿಭಾಗವಾಯ್ತಾ ಎನ್​ಸಿಪಿ?

|

Updated on: Jul 02, 2023 | 7:54 PM

ವಿಪಕ್ಷ ಎನ್​ಸಿಪಿಯ ಹಲವು ಶಾಸಕರ ಜೊತೆ ಮಹಾರಾಷ್ಟ್ರದ ಸರ್ಕಾರವನ್ನು ಬೆಂಬಲಿಸಿದ ಅಜಿತ್ ಪವಾರ್, ಎನ್​ಸಿಪಿ ನಮ್ಮ ಪಕ್ಷ ಎಂದು ಹೇಳುತ್ತಿದ್ದಾರೆ. ಇತ್ತ, ಹಲವು ಶಾಸಕರನ್ನು ಕಳೆದುಕೊಂಡ ಎನ್​ಸಿಪಿಯನ್ನು ಮತ್ತೆ ಸಂಘಟಿಸುತ್ತೇನೆ ಎಂದು ಮುಖ್ಯಸ್ಥ ಶರದ್ ಪವಾರ್ ಹೇಳುತ್ತಿದ್ದಾರೆ.

ಪಕ್ಷ ಮರುಸಂಘಟಗೆ ಶರದ್ ಪವಾರ್ ಶಪಥ, ಎನ್​ಸಿಪಿ ನಮ್ಮ ಪಕ್ಷ ಎಂದ ಅಜಿತ್ ಪವಾರ್; ಶಿವಸೇನೆಯಂತೆ ವಿಭಾಗವಾಯ್ತಾ ಎನ್​ಸಿಪಿ?
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮತ್ತು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್
Follow us on

ಮುಂಬೈ: ಸ್ವಪಕ್ಷದ ಹಲವು ಶಾಸಕರೊಂದಿಗೆ ವಿಪಕ್ಷ ನಾಯಕರಾಗಿದ್ದ ಅಜಿತ್ ಪವಾರ್ (Ajit Pawar) ಅವರು ಎನ್​ಸಿಪಿ ಪಕ್ಷ ತೊರೆಯದೇ ಶಿವಸೇನೆ (ಸಿಎಂ ಏಕನಾಥ್ ಶಿಂಧೆ ಬಣ) ಮತ್ತು ಬಿಜೆಪಿ ಸರ್ಕಾರದ ಜೊತೆ ಕೈಜೋಡಿಸಿದ್ದಾರೆ. ಅಲ್ಲದೆ, ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಅಜಿತ್, ಎನ್​ಸಿಪಿ ನಮ್ಮ ಪಕ್ಷ ಎಂದು ಘೋಷಿಸಿದ್ದಾರೆ. ಇತ್ತ, ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ (Sharad Pawar), ಪಕ್ಷವನ್ನು ಮರುಸಂಘಟಿಸುವ ಶಪಥ ಗೈದಿದ್ದಾರೆ. ಈ ಬೆಳವಣಿಗೆಗಳನ್ನು ಗಮನಿಸಿದಾಗ ಶಿವಸೇನೆಯಂತೆ ಎನ್​ಸಿಪಿ ಕೂಡ ವಿಭಾಗವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಶಿವಸೇನೆಯಲ್ಲಾದ ಬೆಳವಣಿಗೆ ಎನ್​ಸಿಪಿ ಪಕ್ಷದೊಳಗೆ ನಡೆಯಲು ಆರಂಭವಾಗಿದೆ. ಎನ್​ಸಿಪಿಯ ಭವಿಷ್ಯದ ದೃಷ್ಟಿಯಿಂದ ಯುವ ನಾಯಕರಿಗೆ ಪಕ್ಷದ ಮುಖ್ಯಸ್ಥ ಸ್ಥಾನ ನೀಡಲು ಶರದ್ ಪವಾರ್ ಅವರು ರಾಜೀನಾಮೆ ನೀಡಿದ್ದರು. ಆದರೆ ಇವರ ಬೆಂಬಲಿಗರ ಆಗ್ರಹದ ಮೇರೆಗೆ ರಾಜೀನಾಮೆ ವಾಪಸ್ ಪಡೆದು ಪಕ್ಷದ ಕಾರ್ಯಾಧ್ಯಕ್ಷ ಸ್ಥಾನ ರಚಿಸಿ ಪುತ್ರಿ ಸುಪ್ರಿಯಾ ಸುಳೆ ಮತ್ತು ರಾಜ್ಯಸಭಾ ಸಂಸದ ಪ್ರಫುಲ್ ಪಟೇಲ್ ಅವರನ್ನು ನೇಮಿಸಿದ್ದಾರೆ.

ಈ ನಡುವೆ ಆದ ಅಚ್ಚರಿಯ ಬೆಳವಣಿಗೆಯಂತೆ, ಅಜಿತ್ ಪವಾರ್ ಅವರು ಪಕ್ಷವನ್ನು ತೊರೆಯದೇ ಎನ್​ಸಿಪಿಯ ಹಲವು ಶಾಸಕರೊಂದಿಗೆ ಶಿಂಧೆ ಬಣ ಮತ್ತು ಬಿಜೆಪಿ ಮೈತ್ರಿ ಸರ್ಕಾರದ ಜೊತೆ ಕೈಜೋಡಿಸಿದ್ದಾರೆ. ಇದು ಇಡೀ ಮಹಾರಾಷ್ಟ್ರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದಲ್ಲದೆ, ಪಕ್ಷದ ಮುಖ್ಯಸ್ಥ ಶರದ್ ಪವಾರ್​ಗೆ ಶಾಕ್ ನೀಡಿದ್ದಾರೆ. ಅಲ್ಲದೆ, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಪ್ರಧಾನಿ ಮೋದಿ ಅವರ ಕಾರ್ಯವೈಕರಿ ಮೆಚ್ಚಿ ಶಿವಸೇನೆ (ಶಿಂಧೆ ಬಣ) ಮತ್ತು ಬಿಜೆಪಿ ಸರ್ಕಾರಕ್ಕೆ ಸೇರಿದ್ದೇನೆ ಅಂತಾನೂ ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ವಿಪಕ್ಷ ನಾಯಕರಾಗಿ ಜಿತೇಂದ್ರ ಅವಾದ್ ನೇಮಕ

ಪಕ್ಷದ ಬೆಳವಣಿಗೆ ಇಷ್ಟಕ್ಕೇ ನಿಲ್ಲದೆ, ಶರದ್ ಪವಾರ್ ಅವರು ಪಕ್ಷವನ್ನು ಮರುಸಂಘಟಿಸುವ ಶಪಥ ಗೈದಿದ್ದಾರೆ. ಇದರ ಬೆನ್ನಲ್ಲೇ ಹೇಳಿಕೆ ನೀಡಿದ ಮಹಾರಾಷ್ಟ್ರ ಸರ್ಕಾರದ ನೂತನ ಡಿಸಿಎಂ ಅಜಿತ್ ಪವಾರ್, ಎನ್​ಸಿಪಿ ನಮ್ಮ ಪಕ್ಷ ಎಂದು ಹೇಳುವ ಮೂಲಕ ಶರದ್ ಪವಾರ್​ಗೆ ಮತ್ತೊಂದು ದೊಡ್ಡ ಶಾಕ್ ನೀಡಿದ್ದಾರೆ. ನಾವು ಮುಂದಿನ ಎಲ್ಲಾ ಚುನಾವಣೆಗಳನ್ನು ಎನ್​ಸಿಪಿ ಹೆಸರು ಮತ್ತು ಚಿಹ್ನೆಯಡಿಯಲ್ಲೇ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಬೆಳವಣಿಗೆ ಠಾಕ್ರೆ ಬಣ ಮತ್ತು ಶಿಂಧೆ ಬಣದ ನಡುವೆ ಶಿವಸೇನೆ ಚಿಹ್ನೆಗಾಗಿ (ಬಿಲ್ಲು ಬಾಣ) ನಡೆದ ಪೈಪೋಟಿ ನೆನಪಿಸದೇ ಇರದು.

ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಮೈತ್ರಿ ಮುರಿದುಕೊಂಡಿದ್ದಲ್ಲದೆ, ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟುಹಿಡಿದಿದ್ದ ಉದ್ಧವ್ ಠಾಕ್ರೆ ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಚುನಾವಣೆ ಫಲಿತಾಂಶದ ನಂತರ ತತ್ವ ಸಿದ್ಧಾಂತಗಳನ್ನೆಲ್ಲಾ ಪಕ್ಕಕ್ಕಿಟ್ಟ ಉದ್ಧವ್ ಠಾಕ್ರೆ ಅವರು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ಜೊತೆ ಕೈ ಜೋಡಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದಾದ ನಂತರ ಠಾಕ್ರೆ ನಡೆ ವಿರುದ್ಧ ಸಿಡಿದೆದ್ದ ಏಕನಾಥ್ ಶಿಂಧೆ ಮತ್ತು ಬೆಂಬಲಿಗ ಶಾಸಕರು ಪಕ್ಷದ ವಿರುದ್ಧವೇ ಬಂಡಾಯವೆದ್ದು ಬಿಜೆಪಿ ಜೊತೆ ಸೇರಿಕೊಂಡು ಮೈತ್ರಿ ಸರ್ಕಾರ ರಚಿಸಿದ್ದರು. ನಂತರ ಠಾಕ್ರೆ ಬಣ ಮತ್ತು ಶಿಂಧೆ ಬಣದ ನಡುವೆ ಶಿವಸೇನೆ ಚಿಹ್ನೆಗಾಗಿ ಪೈಪೋಟಿ ನಡೆದು ಶಿಂಧೆ ಬಣ ಶಿವಸೇನೆಯ ಬಿಲ್ಲು ಬಾಣ ಚಿಹ್ನೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ, ನಮ್ಮದು ನೈಜ ಶಿವಸೇನೆ ಎಂದು ಶಿಂಧೆ ಬಣ ಹೇಳಿಕೊಂಡಿತ್ತು.

ಇದೀಗ ಅಜಿತ್ ಪವಾರ್ ಹೇಳಿಕೆ ಹಾಗೂ ಶರದ್ ಪವಾರ್ ಅವರ ಶಪಥ ನೋಡಿದಾಗ ಎನ್​ಸಿಪಿಯಲ್ಲೂ ಪಕ್ಷದ ಚಿಹ್ನೆಗಾಗಿ ಪೈಪೋಟಿ ನಡೆಯುವ ಸಾಧ್ಯತೆಗಳಿವೆ. ಲೋಕಸಭೆ ಚುನಾವಣೆ ನಂತರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕಾವೇರಲಿದೆ. ಒಂದೊಮ್ಮೆ ಎನ್​ಸಿಪಿ ಒಡೆದು ಎರಡು ಭಾಗವಾದರೆ ಚುನಾವಣಾ ಆಯೋಗವು ಎನ್​ಸಿಪಿ ಚಿಹ್ನೆಯನ್ನು ಅಜಿತ್ ಪವಾರ್​ ಬಣಕ್ಕೆ ನೀಡುತ್ತಾ? ಶರದ್ ಪವಾರ್ ಬಣಕ್ಕೆ ನೀಡುತ್ತಾ ಎಂಬುದನ್ನು ಕಾದುನೋಡಬೇಕಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ