ನಿಗಮ ಮಂಡಳಿ ನೇಮಕಾತಿ ಸಭೆ ಅಪೂರ್ಣ: ಸಿಎಂ, ಡಿಸಿಎಂ ಮಧ್ಯೆ ಮೂಡದ ಒಮ್ಮತ

ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಕುತೂಹಲ ಹುಟ್ಟುಹಾಕಿದೆ. ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೆವಾಲಾ ನೇತೃತ್ವದಲ್ಲಿ ಮಂಗಳವಾರ ತಡರಾತ್ರಿವರೆಗು ತಾಜ್ ವೆಸ್ಟ್ ಎಂಡ್ ಹೋಟೆಲ್​​ನಲ್ಲಿ ಸಭೆ ನಡೆದರೂ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ಈ ಹಿನ್ನೆಲೆ ಸುರ್ಜೆವಾಲಾ ನ.28 ರಂದು ರಾಜ್ಯಕ್ಕೆ ಮತ್ತೆ ಬರುವ ಸಾಧ್ಯತೆ ಇದೆ.

ನಿಗಮ ಮಂಡಳಿ ನೇಮಕಾತಿ ಸಭೆ ಅಪೂರ್ಣ: ಸಿಎಂ, ಡಿಸಿಎಂ ಮಧ್ಯೆ ಮೂಡದ ಒಮ್ಮತ
ಡಿಕೆ ಶಿವಕುಮಾರ್​, ಸಿದ್ದರಾಮಯ್ಯ
Edited By: ವಿವೇಕ ಬಿರಾದಾರ

Updated on: Nov 22, 2023 | 10:23 AM

ಬೆಂಗಳೂರು ನ.22: ನಿಗಮ-ಮಂಡಳಿಗಳಿಗೆ (Corporation-Board) ಅಧ್ಯಕ್ಷರ ನೇಮಕ ವಿಚಾರವಾಗಿ ಮಂಗಳವಾರ (ನ.22) ರಾತ್ರಿ ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೆವಾಲಾ (Randeep Singh Surjewala) ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ (DK Shivakumar) ಭಾಗಿಯಾಗಿದ್ದರು. ತಡರಾತ್ರಿವರೆಗು ನಡೆದ ಸಭೆ ಅಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಹೌದು ಅಧ್ಯಕ್ಷರ ನೇಮಕ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಒಮ್ಮತಕ್ಕೆ ಬಂದಿಲ್ಲ. ಹೀಗಾಗಿ ರಣದೀಪ​ ಸುರ್ಜೆವಾಲಾ ಮತ್ತೊಮ್ಮೆ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ಈ ಸಂಬಂಧ ಸುರ್ಜೇವಾಲ ನವೆಂಬರ್​ 28ರಂದು ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಇನ್ನು ಮಂಗಳವಾರ ನಡೆದ ಸಭೆಯಲ್ಲಿ ಹಲವು ನಾಯಕರ ಹೆಸರು ಪ್ರಸ್ತಾಪವಾಗಿದ್ದು, ಶಾರ್ಟ್ ಲಿಸ್ಟ್ ಮಾಡಲಾಗಿದೆ. ಈ ಪಟ್ಟಿಯನ್ನು ತೆರಳಿರುವ ಸುರ್ಜೆವಾಲಾ ಎಐಸಿಸಿ ನಾಯಕರೊಂದಿಗೆ ಚರ್ಚಿಸಲಿದ್ದಾರೆ. ನಂತರ ರಾಜ್ಯಕ್ಕೆ ಆಗಮಿಸಿ ಅಂತಿಮ ತೀರ್ಮಾನ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಂಭಾವ್ಯರಿಗೆ ಕರೆ ಮಾಡಿ ವಿಚಾರಿಸುತ್ತಿರುವ ಸುರ್ಜೇವಾಲ, ಇಲ್ಲಿದೆ ಪಟ್ಟಿ

ಸಂಭಾವ್ಯರ ಪಟ್ಟಿ ಹೀಗಿದೆ

  • ಪಿ.ಎಂ ನರೇಂದ್ರ ಸ್ವಾಮಿ
  • ರಮೇಶ್ ಬಾಬು ಬಂಡಿಸಿದ್ದೇಗೌಡ
  • ಅನಿಲ್ ಚಿಕ್ಕಮಾದು
  • ಟಿ.ಡಿ ರಾಜೇಗೌಡ
  • ಶಿವಲಿಂಗೇಗೌಡ
  • ಬಿ.ಕೆ ಸಂಗಮೇಶ್
  • ಬಂಗಾರಪೇಟೆ ನಾರಾಯಣಸ್ವಾಮಿ
  • ಕೆ.ವೈ ನಂಜೇಗೌಡ
  • ಬಿ.ಆರ್ ಪಾಟೀಲ್
  • ಗಣೇಶ್ ಹುಕ್ಕೇರಿ
  • ಮಹಾಂತೇಶ್ ಕೌಜಲಗಿ
  • ಯಶವಂತ್ ರಾಯ್ ಗೌಡ ಪಾಟೀಲ್
  • ಬಿ.ಜಿ ಗೋವಿಂದಪ್ಪ
  • ರಾಘವೇಂದ್ರ ಹಿಟ್ನಾಳ್
  • ರಘುಮೂರ್ತಿ
  • ಭೀಮಣ್ಣ ನಾಯ್ಕ್
  • ಸತೀಶ್ ಸೈಲ್
  • ಪ್ರಸಾದ್ ಅಬ್ಬಯ್ಯ
  • ಜಿ.ಟಿ ಪಾಟೀಲ್
  • ಡಿ.ಆರ್ ಪಾಟೀಲ್
  • ಬಸನಗೌಡ ತುರುವಿಹಾಳ್

ಎಷ್ಟು ಮಂದಿಗೆ ಅವಕಾಶ?: ಸರ್ಕಾರದ ಅಧೀನದಲ್ಲಿ ಒಟ್ಟಾರೆ 85 ನಿಗಮಗಳಿದ್ದು, ಅಲ್ಲಿಗೆ ನೇಮಕ ಮಾಡುವ ಪೂರ್ಣ ಅಧಿಕಾರ ಸರ್ಕಾರಕ್ಕಿದೆ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಿರ್ದೇಶಕರನ್ನು ನೇಮಕ ಮಾಡಲಾಗುತ್ತದೆ. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅಧಿಕಾರದ ಸರದಿ ಬಂದಾಗ ನೇಮಕಗಳನ್ನು ಮಾಡುತ್ತವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Follow Us