ಒಂದು ತಿಂಗಳಲ್ಲೇ ಬೀದಿಗೆ ಬಂತು ಗದ್ದುಗೆಗಾಗಿ ಎಟಿಎಂ ಸರ್ಕಾರದ ಗುದ್ದಾಟ: ಬಿಜೆಪಿ ಟ್ವೀಟ್

ಕಾಂಗ್ರೆಸ್ ಸರ್ಕಾರ ರಚನೆಯಾದ ಒಂದೇ ತಿಂಗಳಿಗೆ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಬಗ್ಗೆ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಈ ಬಗ್ಗೆ ಬಿಜೆಪಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.

ಒಂದು ತಿಂಗಳಲ್ಲೇ ಬೀದಿಗೆ ಬಂತು ಗದ್ದುಗೆಗಾಗಿ ಎಟಿಎಂ ಸರ್ಕಾರದ ಗುದ್ದಾಟ: ಬಿಜೆಪಿ ಟ್ವೀಟ್
ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ ನಾಯಕರ ಗುದ್ದಾಟದ ಬಗ್ಗೆ ಬಿಜೆಪಿ ಟ್ವೀಟ್
Rakesh Nayak Manchi

Updated on: Jun 19, 2023 | 4:39 PM

ಬೆಂಗಳೂರು: ಕಾಂಗ್ರೆಸ್ ಸರ್ಕಾರ ರಚನೆಯಾದ ಒಂದೇ ತಿಂಗಳಿಗೆ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಬಗ್ಗೆ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಆದರೆ ಇದು ಮಾಧ್ಯಮಗಳ ಸೃಷ್ಟಿ ಅಂತಾ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಬಿಜೆಪಿ (BJP), ‘ಮಾಧ್ಯಮ’ ಅಂದರೆ ಯಾರು ಸ್ವಾಮೀ? ಹೆಚ್. ಸಿ. ಮಹಾದೇವಪ್ಪ ಅವರಾ? ಅಥವಾ ಸತೀಶ್ ಜಾರಕಿಹೊಳಿ ಅವರಾ? ಅಂತ ಪ್ರಶ್ನಿಸಿ ಒಂದು ತಿಂಗಳಲ್ಲೇ ಬೀದಿಗೆ ಬಂತು ಗದ್ದುಗೆಗಾಗಿ ಎಟಿಎಂ ಸರ್ಕಾರದ ಗುದ್ದಾಟ ಅಂತ ವ್ಯಂಗ್ಯವಾಡಿದೆ.

ಒಂದು ತಿಂಗಳಲ್ಲೇ ಬೀದಿಗೆ ಬಂತು ಗದ್ದುಗೆಗಾಗಿ ಎಟಿಎಂ ಸರ್ಕಾರದ ಗುದ್ದಾಟ ಅಂತ ಟ್ವೀಟ್ ಮಾಡಿದ ಬಿಜೆಪಿ, ಸಿಎಂ ಸ್ಥಾನದ ಬಗ್ಗೆ ಕಾಂಗ್ರೆಸ್ ನಾಯಕರೇ ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿದೆ. “ಎಂಬಿ ಪಾಟೀಲ್ ಅವರು ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಅಂತ ಹೇಳಿದ್ದಾರೆ. ಇದಕ್ಕೆ ಟಕ್ಕರ್ ಕೊಟ್ಟ ಡಿಕೆ ಸುರೇಶ್, ಎಂ. ಬಿ. ಪಾಟೀಲ್ ಹೇಳಿಕೆಗೆ ಹೆಚ್ಚಿನ ಮಾಹಿತಿ ಬೇಕಾದರೆ ಸುರ್ಜೇವಾಲಾರನ್ನೇ ಕೇಳಿ” ಎಂದು ಹೇಳಿರುವುದನ್ನು ಬಿಜೆಪಿ ಟ್ವೀಟ್ ಮಾಡಿದೆ.

“ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಅಂತ ಸಿ ಮಹಾದೇವಪ್ಪ ಅವರು ಹೇಳಿದ್ದಾರೆ. ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ ಅಂತ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸಿದ್ದರಾಮಯ್ಯ ಮುಂದಿನ 5 ವರ್ಷವೂ ಸಿಎಂ ಆಗಿ ಅವರೇ ಇರುತ್ತಾರೆ ಎಂದು ಕೆಎನ್ ರಾಜಣ್ಣ ಹೇಳಿದ್ದಾರೆ. ಸಚಿವರಾಗಿ ಕೆಲಸ ಮಾಡುವುದಕ್ಕಿಂತ ಬೇರೆ ಆಸಕ್ತಿ ಜಾಸ್ತಿ ಅಂತಾ ಡಿಕೆ ಸುರೇಶ್ ಹೇಳಿದ್ದಾರೆ” ಅಂತ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಗ್ಯಾರಂಟಿಗಳ ಒತ್ತಡದಲ್ಲಿ ಕಾಂಗ್ರೆಸ್: ಗೃಹಜ್ಯೋತಿ ಯೋಜನೆ ಸರ್ವರ್ ಬಿಜಿ, ಇತರೆ ಯೋಜನೆಗಳು ಇನ್ನೂ ವಿಳಂಬ

ಇನ್ನು ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನೂ ಬಿಜೆಪಿ ಟ್ವೀಟ್ ಮಾಡಿದೆ. ನಾನು ಫುಟ್‌ಬಾಲ್ ಆಡೋಕೆ ಬಂದಿಲ್ಲ, ಸನ್ಯಾಸಿನೂ ಅಲ್ಲ. ಚೇಸ್ ಆಡೋದು ಗೊತ್ತಿದೆ ಅಂತ ಡಿಕೆಶಿ ಹೇಳಿರುವುದನ್ನು ಬಿಜೆಪಿ ಟ್ವೀಟ್ ಮಾಡಿದೆ. ಸಿಎಂ ಸ್ಥಾನದ ಬಿಸಿಬಿಸಿ ಚರ್ಚೆ ನಡುವೆ ರಣದೀಪ್ ಸುರ್ಜೇವಾಲ ಅವರ ಹೇಳಿಕೆಯನ್ನೂ ಉಲ್ಲೇಖಿಸಿದೆ.

“ನಾನೇ ಇಲ್ಲಿ ‘ಸೂಪರ್ ಸಿಎಂ’ ನಾನೇ ಕಲೆಕ್ಷನ್ ಏಜೆಂಟ್ ಇವರೆಲ್ಲಾ ನನ್ನ ಕೈಗೊಂಬೆಗಳು ಅಷ್ಟೇ” ಅಂತ ಸುರ್ಜೇವಾಲ ಹೇಳಿದ್ದಾಗಿ ಬಿಜೆಪಿ ಟ್ವೀಟ್ ಮಾಡಿದೆ. ಅಲ್ಲದೆ, ಒಬ್ಬರ ಚೆಸ್, ಮತ್ತೊಬ್ಬರ ಫುಟ್ಬಾಲ್ ಆಟಕ್ಕೆ ರಾಜ್ಯ ಮೈದಾನವಾಗಿರುವುದು ದುರಂತ. ಇವರ ನಡುವೆ ಬಡವಾಗುತ್ತಿದೆ ಕರ್ನಾಟಕ ಅಂತ ಬಿಜೆಪಿ ಹೇಳಿದೆ.

ನಾರದನ ತುತ್ತೂರಿ ಊದುತ್ತಿರುವುದು ಯಾರು?

ಸಿಎಂ ಸ್ಥಾನ ಬದಲಾವಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ ಇದು ಮಾಧ್ಯಮದವರ ಸೃಷ್ಟಿ ಅಂತ ಹೇಳಿದ್ದಾರೆ. ಈ ಬಗ್ಗೆಯೂ ಟ್ವೀಟ್ ಮಾಡಿದ ಬಿಜೆಪಿ, ಮಾನ್ಯ ಸಿದ್ದರಾಮಯ್ಯರವರೇ, ಹೌದಾ ‘ಮುಖ್ಯಮಂತ್ರಿ ಬದಲಾವಣೆ’ ಎಂಬುದು ಮಾಧ್ಯಮ ಸೃಷ್ಟಿಯೇ? ‘ಮಾಧ್ಯಮ’ ಅಂದರೆ ಯಾರು ಸ್ವಾಮೀ? ಹೆಚ್. ಸಿ. ಮಹಾದೇವಪ್ಪ ಅವರಾ ಅಥವಾ ಸತೀಶ್ ಜಾರಕಿಹೊಳಿ ಅವರಾ? ಸಚಿವರಾದ ಎಂ. ಬಿ. ಪಾಟೀಲ್ ಅವರಾ ಅಥವಾ ಕೆ. ಎನ್. ರಾಜಣ್ಣ ಅವರಾ? ನಾರದನ ತುತ್ತೂರಿ ಊದುತ್ತಿರುವುದು ಯಾರು? ಅಣ್ಣನನ್ನು ಮುಖ್ಯಮಂತ್ರಿ ಆಗಿ ನೋಡಲು ಕಾಯುತ್ತಿರುವ ಡಿ. ಕೆ. ಸುರೇಶ್ ಅವರು ಆಕ್ರಂದಿಸುವ ಮೊದಲು ಉತ್ತರಿಸಿ” ಅಂತ ಹೇಳಿದೆ.

“ರಾಜ್ಯದ 20 ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಶುರುವಾಗಿದೆ. ಆದರೆ ರಾಜ್ಯ ಕಾಂಗ್ರೆಸ್ ನಾಯಕರು ಮಾತ್ರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಇರಬೇಕೆಂದು ಒಂದು ಬಣ, ಡಿಕೆ ಶಿವಕುಮಾರ್ ಆಗಬೇಕೆಂದು ಇನ್ನೊಂದು ಬಣ, ಇವರಿಬ್ಬರೂ ಬೇಡ ಎಂದು ಮತ್ತೊಂದು ಬಣ ಪಿತೂರಿಯಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ಸಿಗರಿಗೆ ಬರವಾದರೂ ಒಂದೇ, ನೆರೆ ಬಂದರೂ ಒಂದೇ” ಅಂತ ಬಿಜೆಪಿ ಮತ್ತೊಂದು ಟ್ವೀಟ್ ಮಾಡಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us