ಪ್ರಭು ಚೌಹಾಣ್ ವಿರುದ್ಧ 100 ಕೋಟಿ ಮಾನನಷ್ಟ ಪ್ರಕರಣ ದಾಖಲಿಸಲು ನಿರ್ಧಾರ: ಭಗವಂತ ಖೂಬಾ

| Updated By: Rakesh Nayak Manchi

Updated on: Aug 11, 2023 | 4:12 PM

ಕೇಂದ್ರ ಸಚಿವ ಭಗವಂತ ಖೂಬಾ ಅವರು ತನ್ನ ವಿರುದ್ಧ ಹತ್ಯೆ ಸಂಚು ರೂಪಿಸಿದ್ದಾರೆ ಎಂದು ಮಾಜಿ ಸಚಿವ ಪ್ರಭು ಚೌಹಾಣ್ ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ಮಾನನಷ್ಟ ಮೊಕದಮೆ ಹೂಡಲು ಖೂಬಾ ಅವರು ನಿರ್ಧರಿಸಿದ್ದಾರೆ.

ಪ್ರಭು ಚೌಹಾಣ್ ವಿರುದ್ಧ 100 ಕೋಟಿ ಮಾನನಷ್ಟ ಪ್ರಕರಣ ದಾಖಲಿಸಲು ನಿರ್ಧಾರ: ಭಗವಂತ ಖೂಬಾ
ಭಗವಂತ ಖೂಬಾ ಮತ್ತು ಪ್ರಭು ಚೌಹಾಣ್
Follow us on

ನವದೆಹಲಿ, ಆಗಸ್ಟ್ 11: ಮಾಜಿ ಸಚಿವ ಪ್ರಭು ಚೌಹಾಣ್ (Prabhu Chauhan) ಆರೋಪ ಮೋಸ ಮತ್ತು ಕಪಟದಿಂದ ಕೂಡಿದ್ದು, ಅವರ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇನೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ (Bhagwanth Khuba) ಹೇಳಿದ್ದಾರೆ. ತನ್ನನ್ನು ಹತ್ಯೆ ಮಾಡಿ ಉಪ ಚುನಾವಣೆ ನಡೆಸುವ ಬಗ್ಗೆ ಖೂಬಾ ಸಂಚು ರೂಪಿಸಿದ್ದಾರೆ ಎಂದು ಪ್ರಭು ಚೌಹಾಣ್ ಆರೋಪಿಸಿದ್ದರು.

ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಭಗವಂತ ಖೂಬಾ, ಮಂಡಲದ ಕಾರ್ಯಕಾರಣಿಯಲ್ಲಿ ಮಾತನಾಡುವ ಎಲ್ಲ ಮಾತು ಬಿಟ್ಟು ನನ್ನ ಮೇಲೆ ಸಾರ್ವಜನಿಕವಾಗಿ ಆರೋಪ ಮಾಡಿದ್ದಾರೆ. ಇದರಿಂದ ಆಘಾತನಾಗಿದ್ದೇನೆ. ಹೇಳಿಕೊಳ್ಳಲಾಗದಷ್ಡು ಮನಸ್ಸಿಗೆ ನೋವಾಗಿದೆ. ನನ್ನ ಕುಟುಂಬ ಕೂಡಾ ವಿಚಲಿತವಾಗಿದೆ. ಪಕ್ಷದ ಕಾರ್ಯಕರ್ತರು, ಹಿತೈಶಿಗಳು ನಿರಂತರವಾಗಿ ಸಂಪರ್ಕ ಮಾಡಿ ಧೈರ್ಯ ತುಂಬುತ್ತಿದ್ದಾರೆ ಎಂದರು.

ಪ್ರಭು ಚೌಹಾಣ್ ಆರೋಪ ಮೋಸ ಮತ್ತು ಕಪಟದಿಂದ ಕೂಡಿದೆ. ಒಂಭತ್ತು ವರ್ಷದ ಹಿಂದೆ ಇದೇ ರೀತಿ ಆರೋಪ ಮಾಡಿದ್ದರು. ನಮ್ಮ ಪಕ್ಷದಲ್ಲಿ ಈ ಎಲ್ಲ ಸಮಸ್ಯೆ ಬಗೆಹರಿಯುತ್ತವೆ. ತಪ್ಪು ತಿಳುವಳಿಕೆ ಸರಿಯಾಗಬಹುದು ಎಂದು ಭಾವಿಸಿದ್ದೆ. ಆದರೆ ಇದರ ಹಿಂದೆ ತಂತ್ರ ಕುತಂತ್ರ ಮೋಸ ಕಪಟದಿಂದ‌ ಕೂಡಿದೆ ಎಂದು ಅರ್ಥವಾಗಿದೆ ಎಂದರು.

ಇದನ್ನೂ ಓದಿ: ಸಂಸತ್ತಿನಲ್ಲಿ ಫ್ಲೈಯಿಂಗ್ ಕಿಸ್; ರಾಹುಲ್ ಗಾಂಧಿ ವರ್ತನೆ ಬಾಲಿಶ ಮತ್ತು ಹೇವರಿಕೆ ಹುಟ್ಟಿಸುವಂಥದ್ದು: ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಪಕ್ಷದ ಸೇವೆ ನೋಡಿ ಮೋದಿ ಅವರು ಮಂತ್ರಿ ಮಂಡಲದಲ್ಲಿ ಅವಕಾಶ ನೀಡಿದ್ದಾರೆ. ಮಂತ್ರಿ ಮಾಡುವ ಮುನ್ನ ನನ್ನ ಚರಿತ್ರೆ ಗಮನ ಹರಿಸುತ್ತಾರೆ. ನಾನು ಜನ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ಆದರೆ ಈ ಆರೋಪ ಯಾಕೆ ಮಾಡುತ್ತಿದ್ದಾರೆ ಗೊತ್ತಿಲ್ಲ. ಜಿಲ್ಲೆಯಲ್ಲಿ ಶಾಸಕರ ಸಂಖ್ಯೆಯನ್ನು ಒಂದರಿಂದ ನಾಲ್ಕಕ್ಕೆ ಹೆಚ್ಚಿಸಿದೆ. ಇಂತಹ ಸಮಯದಲ್ಲಿ ಪ್ರಭು ಚೌಹಾಣ್ ಎಲ್ಲರ ಜೊತೆಗೆ ಸಂಭ್ರಮ‌ ಮಾಡಬೇಕಿತ್ತು. ಆದರೆ ದೋಷಣೆ ಮಾಡುತ್ತಿದ್ದಾರೆ ಎಂದರು.

ಇದು ಚೌಹಾಣ್ ಅವರ ತಂತ್ರ ಕುತಂತ್ರದ ಆಟ. ಎಲ್ಲ ಆದರೂ ಮಾಧ್ಯಮಕ್ಕೆ ಹೋಗಿಲ್ಲ. ನಮ್ಮ ನಾಯಕರು ಮಾಹಿತಿ ಪಡೆದುಕೊಂಡಿದ್ದಾರೆ. ನನ್ನ ಭಾವನೆ ಹೇಳಿಕೊಂಡಿದ್ದೇನೆ. ಪಕ್ಷದ ವೇದಿಕೆಯಲ್ಲಿ ಸತ್ಯಾಸತ್ಯತೆಯನ್ನು ವರಿಷ್ಠರ ಹೊರ ಹಾಕಲಿದ್ದಾರೆ. ನೂರು ಕೋಟಿ ಮಾನ ಹಾನಿ ಕೇಸ್ ಹಾಕಲು ನಿರ್ಧರಿಸಿದ್ದೇನೆ. ವರಿಷ್ಠರು ಅನುಮತಿ ನೀಡಿದರೆ ದೂರು ದಾಖಲಿಸುತ್ತೇನೆ ಎಂದರು.

ಪ್ರಭು ಚೌಹಾಣ್ ಅವರ ಆರೋಪಕ್ಕೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಆರೋಪದ ಬಗ್ಗೆ ಸತ್ಯಾಸತ್ಯೆತೆ ಪರಿಶೀಲಿಸಲಾಗುವುದು. ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ