
ಲಕ್ಷ್ಮೇಶ್ವರ, ಮೇ.29: ಗದಗದ “ಈ ಜಾಗಕ್ಕೆ ಇರುವ ಶಕ್ತಿ ಮತ್ತು ಮಹಿಮೆಯ ಬಗ್ಗೆ ನಾನು ನಿಮಗೆ ಬಿಡಿಸಿ ಹೇಳಲ್ಲ…” ಎಂದು ಈ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದ ಮಾತುಗಳು ಈಗ ಅಕ್ಷರಶಃ ನಿಜವಾಗಿವೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರ ‘ಮುಕ್ತಿಮಂದಿರ’ಕ್ಕೆ ಭೇಟಿ ನೀಡಿ ವಿಶೇಷ ಸಂಕಲ್ಪ ಮಾಡಿದ ಕೇವಲ 40 ದಿನಗಳ ಒಳಗಾಗಿಯೇ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯದ ಮುಖ್ಯಮಂತ್ರಿ ಪಟ್ಟ ಒಲಿದು ಬಂದಿರುವುದು ಈಗ ಇಡೀ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಕಳೆದ ಏಪ್ರಿಲ್ 19 ರಂದು ಡಿ.ಕೆ. ಶಿವಕುಮಾರ್ ಅವರು ತಮಗೆ ಅತ್ಯಂತ ಆಪ್ತರು ಹಾಗೂ ಸ್ವಂತ ಪಕ್ಷದ ನಾಯಕರಿಗೂ ಯಾವುದೇ ಮಾಹಿತಿ ನೀಡದೆ ಮುಕ್ತಿಮಂದಿರಕ್ಕೆ ಅತ್ಯಂತ ರಹಸ್ಯವಾಗಿ ಆಗಮಿಸಿದ್ದರು. ಕೇವಲ ಪೊಲೀಸ್ ಸೆಕ್ಯೂರಿಟಿ (ಭದ್ರತೆ) ನಡುವೆ ಕ್ಷೇತ್ರಕ್ಕೆ ಬಂದಿದ್ದ ಅವರು, ಮುಕ್ತಿಮಂದಿರದ ಲಿಂಗೈಕ್ಯ ವೀರ ಗಂಗಾಧರ ಮಹಾಸ್ವಾಮಿಗಳ ಪವಿತ್ರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಶ್ರದ್ಧಾಭಕ್ತಿಯಿಂದ ಸಂಕಲ್ಪ ಮಾಡಿದ್ದರು.
ಈ ರಹಸ್ಯ ಪೂಜೆಯ ವೇಳೆ ಗರ್ಭಗುಡಿಯೊಳಗೆ ಮಾಧ್ಯಮದವರು ಹಾಗೂ ಸ್ಥಳೀಯ ಮುಖಂಡರಿಗೆ ಪ್ರವೇಶ ನಿರಾಕರಿಸಿ ಹೊರಗಿಡಲಾಗಿತ್ತು. ಗರ್ಭಗುಡಿಯೊಳಗೆ ಕೇವಲ ಮುಕ್ತಿಮಂದಿರದ ಪೀಠಾಧಿಪತಿಗಳಾದ ಶ್ರೀ ವಿಮಲರೇಣುಕಾ ವೀರಮುಕ್ತಿ ಮುನಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಪ್ರಧಾನ ಅರ್ಚಕರಿಗೆ ಮಾತ್ರ ಪ್ರವೇಶವಿತ್ತು. ವೀರಗಂಗಾಧರ ಶ್ರೀಗಳ ಗದ್ದುಗೆ ಮುಂದೆ ಸುದೀರ್ಘ ಸಮಯ ಕುಳಿತುಕೊಂಡಿದ್ದ ಡಿಕೆಶಿ, ಕಣ್ಣು ಮುಚ್ಚಿ ಏಕಾಗ್ರತೆಯಿಂದ ಭಕ್ತಿಯ ಧ್ಯಾನ, ಜಪ ಮತ್ತು ತಪಗಳನ್ನು ಮಾಡಿದ್ದರು.
ಇದನ್ನೂ ಓದಿ: ಡಿಕೆ ಶಿವಕುಮಾರ್ಗೆ ಸದ್ಯದಲ್ಲೇ ಸಾಡೇ ಸಾತಿ ಶನಿ ಕಾಟ! ಮಾತಾಡಿದ್ರೆ ಪಟ್ಟ ಕೈ ತಪ್ಪುವ ಸಾಧ್ಯತೆ, ಅಜ್ಜಯ್ಯ ಭವಿಷ್ಯ
ಅಂದು ಡಿಕೆಶಿ ಅವರು ಶ್ರೀಗಳ ಸನ್ನಿಧಿಯಲ್ಲಿ ರಾಜ್ಯದ ಅತ್ಯುನ್ನತ ರಾಜಕೀಯ ಅಧಿಕಾರ ಪ್ರಾಪ್ತಿಗಾಗಿ ವಿಶೇಷ ಸಂಕಲ್ಪ ಮಾಡಿದ್ದರು ಎನ್ನಲಾಗಿದ್ದು, ಅದಾಗಿ ಸರಿಯಾಗಿ 40 ದಿನಗಳು ಕಳೆಯುವಷ್ಟರಲ್ಲೇ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಯಾಗಿ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿದು ಬಂದಿದೆ. ಈ ಮೂಲಕ ಮುಕ್ತಿಮಂದಿರ ಕ್ಷೇತ್ರದ ಅದ್ಭುತ ಆಧ್ಯಾತ್ಮಿಕ ಶಕ್ತಿ ಮತ್ತು ಲಿಂಗೈಕ್ಯ ಶ್ರೀಗಳ ಆಶೀರ್ವಾದದ ಪವಾಡ ಈಗ ಮತ್ತೊಮ್ಮೆ ಸಾಬೀತಾದಂತಾಗಿದ್ದು, ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಈ ಸುದ್ದಿ ಭಾರಿ ವೈರಲ್ ಆಗುತ್ತಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ