ಲೋಕಸಭಾ ಚುನಾವಣೆಗೆ ಸ್ಪರ್ಧೆ ಬಗ್ಗೆ ಕೊನೆಗೂ ಸ್ಪಷ್ಟನೆ ನೀಡಿದ ಡಾ ಮಂಜುನಾಥ್

ಲೋಕಸಭೆ ಚುನಾವಣೆಗೆ ಹಳೆ ಮೈಸೂರು ಭಾಗದಲ್ಲಿ ಮತ ಕ್ರೋಡೀಕರಣಕ್ಕೆ ಬಿಜೆಪಿ -ಜೆಡಿಎಸ್‌ ಜಂಟಿ ತಾಲೀಮು ಮಹತ್ವದ ಘಟ್ಟ ತಲುಪಿದ್ದು, ಬೆಂಗಳೂರು ಗ್ರಾಮಾಂತರ ಅಥವಾ ಮಂಡ್ಯ ಕ್ಷೇತ್ರದಿಂದ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್‌.ಮಂಜುನಾಥ್‌ ಸ್ಪರ್ಧಿಸುತ್ತಾರೆ ಅಂತೆಲ್ಲಾ ಅಂತೆ-ಕಂತೆ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಈ ಬಗ್ಗೆ ಸ್ವತಃ ಡಾ ಮಂಜುನಾಥ್ ಅವರು ಸ್ಪಷ್ಟನೆ ನೀಡಿದ್ದು ಸದ್ಯಕ್ಕೆ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ

ಲೋಕಸಭಾ ಚುನಾವಣೆಗೆ ಸ್ಪರ್ಧೆ ಬಗ್ಗೆ ಕೊನೆಗೂ ಸ್ಪಷ್ಟನೆ ನೀಡಿದ ಡಾ ಮಂಜುನಾಥ್
ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್‌.ಮಂಜುನಾಥ್‌
Edited By:

Updated on: Feb 21, 2024 | 4:29 PM

ಮಂಡ್ಯ, (ಫೆಬ್ರವರಿ 21): ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ಮುಖ್ಯಸ್ಥರು ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಅಳಿಯ ಡಾ.ಮಂಜುನಾಥ್‌ (Dr CN Manjunath) ಜನಮನದ ಪರಿಚಿತ ವ್ಯಕ್ತಿತ್ವವಾಗಿದ್ದು, ಇವರನ್ನು ರಾಜಕೀಯಕ್ಕೆ ಕರೆತರು ದೇವೇಗೌಡರ ಕುಟುಂಬ ಮುಂದಾಗಿದೆ. ಈ ಬಾರಿ ಲೋಕಸಭಾದಿಂದ (loksabha election 2024) ಕಣಕ್ಕಿಳಿಸುವ ಮೂಲಕವೇ ಅವರನ್ನು ರಾಜಕೀಯ ಕರೆತರುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ.ಮಂಜುನಾಥ್ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿದೆ. ಇನ್ನು ಇದೀಗ ಈ ಬಗ್ಗೆ ಸ್ವತಃ ಪ್ರತಿಕ್ರಿಯಿಸಿರುವ ಮಂಜುನಾಥ್, ನಾನು ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಜನರು ಮಾತಾಡುತ್ತಾ ಇದ್ದಾರೆ. ಆದ್ರೆ, ನಾನು ಇನ್ನೂ ಅದರ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಂಡ್ಯದಲ್ಲಿ ಇಂದು(ಫೆಬ್ರವರಿ 21) ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಮಂಜುನಾಥ್, ನಾನು ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಜನರು ಮಾತಾಡುತ್ತಾ ಇದ್ದಾರೆ. ಆದ್ರೆ, ನಾನು ಇನ್ನೂ ಅದರ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಹಲವು ಕಡೆ ಜನರು ಒತ್ತಡ ಹಾಕುತ್ತಿದ್ದಾರೆ. ರಾಜಕೀಯಕ್ಕೆ ಬರಬೇಕಾ ಅಥವಾ ಲೋಕಸಭೆಗೆ ನಿಲ್ಲಬೇಕೆಂದು ನಿರ್ಧಾರ ಮಾಡಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಡಾ.ಮಂಜುನಾಥ್​​ಗೆ ಹೆಚ್ಚಿದ ಒತ್ತಡ: ಬೆಂಬಲ ಘೋಷಿಸಿದ ಕರವೇ ಪ್ರವೀಣ್ ಶೆಟ್ಟಿ

ರಾಜ್ಯ ಮಟ್ಟದಲ್ಲಿ ಹೃದ್ರೋಗ ಚಿಕಿತ್ಸಾ ಕೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದೀರಾ. ಇದೇ ರೀತಿ ರಾಷ್ಟ್ರ ಮಟ್ಟದಲ್ಲೂ ಈ ರೀತಿಯ ಸುಧಾರಣೆ ಯಾಕೆ ತರಬಾರದು ಎಂದು ಹೇಳುತ್ತಿದ್ದಾರೆ. ಮುಂದೆ ಸ್ಪರ್ಧೆಯ ಬಗ್ಗೆ ತೀರ್ಮಾನ ಮಾಡಿದರೆ ಹೇಳುತ್ತೇನೆ. ನಾನು ಈಗಲೂ ಆಲೋಚನೆಯಲ್ಲಿಯೇ ಇದ್ದೇನೆ. ಲೋಕಸಭೆ ಪ್ರವೇಶ ಕೇವಲ ರಾಜಕೀಯ ಮೂಲಕವೇ ಅಲ್ಲ. ಲೋಕಸಭೆನೆ ಬೇರೆ ರಾಜಕೀಯವೇ ಬೇರೆ ಅರ್ಥ. ಸದ್ಯ ಆಲೋಚನೆಯಲ್ಲಿ ಇದ್ದೇನೆ. ಮುಂದೆ ಈ ಬಗ್ಗೆ ಸ್ಪಷ್ಟ ನಿಲುವು ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ರಾಜಕೀಯ ಪ್ರವೇಶದ ಬಗ್ಗೆ ಚಿಂತನೆ ನಡೆಸುತ್ತಿರುವುದರಂತೂ ಸತ್ಯ ಎನ್ನುವುದನ್ನು ಅವರೇ ಒಪ್ಪಿಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರದಿಂದ ಕಣಕ್ಕಿಳಿಸುವ ಬಗ್ಗೆ ಚರ್ಚೆ

ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ಮುಖ್ಯಸ್ಥರು ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಅಳಿಯ ಡಾ.ಮಂಜುನಾಥ್‌ ಜನಮನದ ಪರಿಚಿತ ವ್ಯಕ್ತಿತ್ವವಾಗಿದ್ದು, ಇತ್ತೀಚಿಗಷ್ಟೇ ಜಯದೇವ ಆಸ್ಪತ್ರೆಯ ನಿರ್ದೇಶಕ ಸ್ಥಾನದಿಂದ ನಿವೃತ್ತಿ ಹೊಂದಿದ್ದಾರೆ. ಮಂಜುನಾಥ್‌ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಸುವ ನಿರೀಕ್ಷೆಯಿದೆ. ಹಳೆ ಮೈಸೂರು ಭಾಗದಲ್ಲಿ ಮೈತ್ರಿಯ ಮತಬ್ಯಾಂಕ್‌ ಕ್ರೋಡೀಕರಣ ದೃಷ್ಟಿಯಿಂದ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ನಡೆದಿದೆ. ಸದ್ಯ ಡಿ.ಕೆ.ಸುರೇಶ್‌ ರಾಜ್ಯದ ಏಕೈಕ ಕಾಂಗ್ರೆಸ್‌ ಸಂಸದರಾಗಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಈ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಗಾಗಿ ಶೋಧದಲ್ಲಿ ತೊಡಗಿದ್ದ ಬಿಜೆಪಿ -ಜೆಡಿಎಸ್‌ ಮೈತ್ರಿ ಪಾಳಯದಲ್ಲಿ ಡಾ.ಮಂಜುನಾಥ್‌ ಸಮರ್ಥ ಅಭ್ಯರ್ಥಿ ಎಂಬ ಒಲವು ಮೂಡಿದೆ.

ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್ ಸ್ಪರ್ಧೆಗೆ ಹಿಂದೇಟು ಹಿನ್ನಲೆಯಲ್ಲಿ ಡಾ.ಮಂಜುನಾಥ್ ರನ್ನ ಕಣಕ್ಕಿಳಿಸಲು ಮೈತ್ರಿ ನಾಯಕರು ಚಿಂತನೆ ನಡೆಸಿದ್ದು, ಈಗಾಗಲೇ ಡಾ ಮಂಜುನಾಥ್ ಜೊತೆ ಮಾತುಕತೆ ಮೈತ್ರಿ ನಾಯಕರು ನಡೆಸಿದ್ದಾರೆ. ಅಲ್ಲದೇ ಬಿಜೆಪಿ ಚಿಹ್ನೆಯಿಂದ ಸ್ಪರ್ಧಿಸಿದ್ರೆ ಹೆಚ್ಚಿನ ಲಾಭ ಎನ್ನುವ ಚಿಂತನೆಯೂ ಇದೆ. ಡಾ ಮಂಜುನಾಥ್ ಸ್ಪರ್ಧಿಸಿದ್ರೆ ಸಂಸದ ಡಿಕೆ ಸುರೇಶ್‌ಗೆ ಟಫ್ ಫೈಟ್ ಇದ್ದು, ಎರಡು ಪಕ್ಷದ ನಾಯಕರ ಜೊತೆ ಉತ್ತಮ ಬಾಂಧವ್ಯವನ್ನು ಡಾ ಮಂಜುನಾಥ್ ಹೊಂದಿದ್ದಾರೆ.