Draupadi Murmu: ದ್ರೌಪದಿ ಮುರ್ಮು ನೂತನ ರಾಷ್ಟ್ರಪತಿ; ಶಿಕ್ಷಕಿಯಿಂದ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆವರೆಗಿನ ಪಯಣ

Draupadi Murmu Profile: ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ ಮುರ್ಮುವರು ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕರಾದರು. ಆಕೆಯ ತಂದೆ ಮತ್ತು ಅಜ್ಜ ಇಬ್ಬರೂ ಪಂಚಾಯತ್ ರಾಜ್ ವ್ಯವಸ್ಥೆಯಡಿ ಗ್ರಾಮದ ಮುಖ್ಯಸ್ಥರಾಗಿದ್ದರು.

Draupadi Murmu: ದ್ರೌಪದಿ ಮುರ್ಮು ನೂತನ ರಾಷ್ಟ್ರಪತಿ; ಶಿಕ್ಷಕಿಯಿಂದ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆವರೆಗಿನ ಪಯಣ
ದ್ರೌಪದಿ ಮುರ್ಮ
Follow us
| Updated By: ರಶ್ಮಿ ಕಲ್ಲಕಟ್ಟ

Updated on:Jul 21, 2022 | 8:03 PM

Draupadi Murmu Profile | ದ್ರೌಪದಿ ಮುರ್ಮ ಭಾರತದ 15ನೇ ರಾಷ್ಟ್ರಪತಿ ಆಗಿ ಆಯ್ಕೆಯಾಗಿದ್ದಾರೆ. ಈ ಗೆಲುವಿನ ಮೂಲಕ ದೇಶದ ಉನ್ನತ ಹುದ್ದೆಯನ್ನಲಂಕರಿಸಿದ ಬುಡಕಟ್ಟು ಜನಾಂಗದ ಮೊದಲ ಮತ್ತು ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ ಎರಡನೇ ಎಂಬ ಹೆಗ್ಗಳಿಕೆಗೆ ಮುರ್ಮು ಪಾತ್ರವಾಗಿದ್ದಾರೆ. 2007 ಜುಲೈ 25ರಂದು ಪ್ರತಿಭಾ ಪಾಟೀಲ್ ರಾಷ್ಟ್ರಪತಿ ಆಗಿದ್ದರು. ಮುರ್ಮ ಅವರನ್ನು ಎನ್​​ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದಾಗ ಮೊದಲಿಗೆ ಚರ್ಚೆಯಾಗಿದ್ದು ಅವರ ಸಮುದಾಯದ ಬಗ್ಗೆ ಆಗಿತ್ತು. ಒಡಿಶಾದ ಬುಡಕಟ್ಟು ಜನಾಂಗದವರು ಮುರ್ಮು. ನಿರ್ದಿಷ್ಟವಾಗಿ ಹೇಳಬೇಕಾದರೆ ಸಂತಾಲರು. ಸಂತಾಲಿಗಳು ಒಡಿಶಾ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನಿಂದ ಬಂದವರು. ಆದರೆ ಅವರು ತಮ್ಮ ರಾಜ್ಯದಲ್ಲಿನ ಗುರುತಿನಿಂದಾಗಿ ತಮ್ಮ ಅಸ್ಮಿತೆ ಕಳೆದುಕೊಂಡಿದ್ದಾರೆ. ದ್ರೌಪದಿ ಮುರ್ಮು ವಿಷಯದಲ್ಲೂ ಇದೇ ಆಗಿದೆ. ಆಕೆ ಒಡಿಶಾದ ಕಡಿಮೆ ಪರಿಚಿತ ಮಯೂರ್‌ಭಂಜ್ ಜಿಲ್ಲೆಯ ಸಂತಾಲ ಆಗಿದ್ದಾರೆ. ಮೂಲತಃ, ಅವರು ಬರಿಪಾದದಿಂದ 82 ಕಿಮೀ ಮತ್ತು ರಾಜ್ಯದ ರಾಜಧಾನಿ ಭುವನೇಶ್ವರದಿಂದ 287 ಕಿಮೀ ದೂರದಲ್ಲಿರುವ ತಹಸಿಲ್ ಪ್ರಧಾನ ಕಚೇರಿಯಾದ ರಾಯಿರಂಗಪುರದವರು. ಆಕೆಯ ಮನೆ ಈ ಹಿಂದೆ ಉಪರಬೇಡ ಗ್ರಾಮದಲ್ಲಿತ್ತು, ಇದು ಇತ್ತೀಚಿನವರೆಗೂ ವಿದ್ಯುತ್ ಸಂಪರ್ಕವನ್ನು ಹೊಂದಿಲ್ಲ.

ಆಕೆಯ ದಿವಂಗತ ಪತಿ ಶ್ಯಾಮ್ ಚರಣ್ ಮುರ್ಮು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆಕೆಯ ಮಗಳು ಇತಿಶ್ರೀ ಮುರ್ಮು ಕೂಡ ಭುವನೇಶ್ವರದ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದಾರೆ. ಮುರ್ಮ ಅವರ ಇಬ್ಬರು ಪುತ್ರರು 2009 ಮತ್ತು 2012 ರ ನಡುವಿನ ಮೂರು ವರ್ಷಗಳ ಅವಧಿಯಲ್ಲಿ ನಿಧನರಾದರು.

ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ ಮುರ್ಮುವರು ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕರಾದರು. ಆಕೆಯ ತಂದೆ ಮತ್ತು ಅಜ್ಜ ಇಬ್ಬರೂ ಪಂಚಾಯತ್ ರಾಜ್ ವ್ಯವಸ್ಥೆಯಡಿ ಗ್ರಾಮದ ಮುಖ್ಯಸ್ಥರಾಗಿದ್ದರು. ದ್ರೌಪದಿ ಮುರ್ಮು 1997 ರಲ್ಲಿ ರಾಯಿರಂಗಪುರ ಪುರಸಭೆಯ ಸದಸ್ಯರಾದರು ನಂತರ ಅಧ್ಯಕ್ಷರಾಗಿ ಆಯ್ಕೆಯಾದರು.

2000ರಲ್ಲಿ ಅವರು ರಾಯಿರಂಗಪುರದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಬಿಜು ಜನತಾ ದಳ (ಬಿಜೆಡಿ)-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ರಾಜ್ಯ ಸಚಿವರಾದರು. ಅವರು 2005 ರವರೆಗೆ ವಾಣಿಜ್ಯ ಮತ್ತು ಸಾರಿಗೆ, ಮತ್ತು ನಂತರ ಪಶುಸಂಗೋಪನೆ ಮತ್ತು ಮೀನುಗಾರಿಕೆಯಂತಹ ಖಾತೆಗಳನ್ನು ಹೊಂದಿದ್ದರು. 2007ರಲ್ಲಿ ಒಡಿಶಾ ವಿಧಾನಸಭೆಯಲ್ಲಿ ಉತ್ತಮ ಶಾಸಕರಾಗಿ ನೀಡುವ ನೀಲಕಂಠ ಪ್ರಶಸ್ತಿಗೂ ಮುರ್ಮು ಭಾಜನರಾಗಿದ್ದಾರೆ.

2015 ರಲ್ಲಿ ಮುರ್ಮು ಜಾರ್ಖಂಡ್‌ನ ರಾಜ್ಯಪಾಲರಾಗಿ ನೇಮಕಗೊಂಡರು. ಜಾರ್ಖಂಡ್ ಗವರ್ನರ್ ಆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು. ಅಧಿಕಾರದಲ್ಲಿದ್ದಾಗ, ಅವರು ಚೋಟಾನಾಗ್‌ಪುರ ಟೆನೆನ್ಸಿ ಆಕ್ಟ್ 1908 ಮತ್ತು ಸಂತಾಲ್ ಪರಗಣ ಟೆನೆನ್ಸಿ ಆಕ್ಟ್ 1949 ಎಂಬ ಎರಡು ಮಸೂದೆಗಳ ಅಂಗೀಕಾರಕ್ಕೆ ನಿರಾಕರಿಸಿದರು. ಇದು ಭೂಮಿಯ ಹಕ್ಕುಗಳನ್ನು ಬದಲಾಯಿಸದೆ ವಾಣಿಜ್ಯ ಉದ್ದೇಶಕ್ಕಾಗಿ ಭೂಮಿಯನ್ನು ಬಳಸಲು ಪ್ರಯತ್ನಿಸುವ ಮಸೂದೆಯಾಗಿದೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಮೂರು ಸುತ್ತಿನ ಮತ ಎಣಿಕೆ ನಂತರ ದ್ರೌಪದಿ ಮುರ್ಮು ಪಡೆದ ಮತಗಳ ಮೌಲ್ಯ 5,77,777 ಆಗಿದ್ದು ಯಶವಂತ ಸಿನ್ಹಾ ಪಡೆದ ಮತಗಳ ಮೌಲ್ಯ 2,61,062 ಆಗಿದೆ.

Published On - 7:55 pm, Thu, 21 July 22