ಸರ್ಕಾರ ಕೊಟ್ಟ ಭಾಷಣ ಓದದ ಗವರ್ನರ್​​: ಸದನದಲ್ಲೇ ಸಿಡಿದೆದ್ದ ಕಾಂಗ್ರೆಸ್​​ ನಾಯಕರು

ಕರ್ನಾಟಕ ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸರ್ಕಾರ ಸಿದ್ಧಪಡಿಸಿದ ಭಾಷಣ ಓದಲು ನಿರಾಕರಿಸಿದ ಪ್ರಸಂಗ ನಡೆದಿದೆ. ಕೇವಲ ಎರಡು ಸಾಲು ಓದಿ ಗವರ್ನರ್​​ ನಿರ್ಗಮಿಸಿದ್ದರಿಂದ ಸದನದಲ್ಲಿ ಹೈಡ್ರಾಮಾ ಸೃಷ್ಟಿಯಾಗಿದೆ. ರಾಜ್ಯಪಾಲರ ನಡೆಗೆ ಕಾಂಗ್ರೆಸ್ ಪಕ್ಷ ಆಕ್ರೋಶ ವ್ಯಕ್ತಪಡಿಸಿದರೆ, ಸಿಎಂ ಸಿದ್ದರಾಮಯ್ಯ ಇದು ಸಂವಿಧಾನ ಬಾಹಿರ ಎಂದು ಖಂಡಿಸಿ, ಸುಪ್ರೀಂ ಕೋರ್ಟ್ ಮೊರೆ ಹೋಗುವ ಸುಳಿವು ನೀಡಿದ್ದಾರೆ.

ಸರ್ಕಾರ ಕೊಟ್ಟ ಭಾಷಣ ಓದದ ಗವರ್ನರ್​​: ಸದನದಲ್ಲೇ ಸಿಡಿದೆದ್ದ ಕಾಂಗ್ರೆಸ್​​ ನಾಯಕರು
ರಾಜ್ಯಪಾಲರ ನಡೆಗೆ ಕಾಂಗ್ರೆಸಿಗರ ಆಕ್ರೋಶ

Updated on: Jan 22, 2026 | 11:58 AM

ಬೆಂಗಳೂರು, ಜನವರಿ 22: ಇಂದಿನಿಂದ ಆರಂಭವಾಗಿರುವ ವಿಧಾನ ಮಂಡಲ ಅಧಿವೇಶನ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ್ದ ರಾಜ್ಯಪಾಲ ಥಾವರ್​​​ಚಂದ್​​ ಗೆಹ್ಲೋಟ್​​, ಸರ್ಕಾರ ನೀಡಿದ ಭಾಷಣ ಓದದೆ, ಕೇವಲ ಎರಡು ಸಾಲು ಓದಿ ಅಧಿವೇಶನದಿಂದ ಹೊರನಡೆದಿದ್ದಾರೆ. ಗವರ್ನರ್​​ ನಡೆಗೆ ಕಾಂಗ್ರೆಸಿಗರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯಪಾಲರ ನಿರ್ಗಮನ ವೇಳೆ ಘೋಷಣೆ ಕೂಗುವ ಮೂಲಕ ವಿರೋಧ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ. ಹೀಗಾಗಿ ಜಂಟಿ ಅಧಿವೇಶನ ಹೈಡ್ರಾಮಾಗೆ ಸಾಕ್ಷಿಯಾಗಿದೆ.

ಗವರ್ನರ್​​ ಅಡ್ಡಗಟ್ಟಿದ ಹರಿಪ್ರಸಾದ್​​

ಕೇವಲ ಎರಡು ಸಾಲು ಭಾಷಣ ಮಾಡಿ ಸದನದಿಂದ ಹೊರ ನಡೆಯುತ್ತಿದ್ದ ಗವರ್ನರ್​​ ಬಳಿಗೆ ತೆರಳಲು ಅನೇಕ ಕಾಂಗ್ರೆಸ್​​ ನಾಯಕರು ಯತ್ನಿಸಿದ್ದಾರೆ. ಈ ವೇಳೆ ಪರಿಷತ್​​ ಸದಸ್ಯ ಬಿ.ಕೆ. ಹರಿಪ್ರಸಾದ್​​ ರಾಜ್ಯಪಾಲರನ್ನು ಅಡ್ಡಗಟ್ಟಿದ್ದು, ಭಾಷಣ ಓದುವಂತೆ ಪಟ್ಟು ಹಿಡಿದಿದ್ದಾರೆ.  ಕಾಂಗ್ರೆಸ್​​ ನಾಯಕರನ್ನು ಮಾರ್ಷಲ್​​ಗಳು ತಡೆದಿದ್ದು, ರಾಜ್ಯಪಾಲರು ಹೊರ ಹೋಗಲು ಅನುವು ಮಾಡಿಕೊಟ್ಟರು.

ಇದನ್ನೂ ಓದಿ: ಒಂದೇ ವಾಕ್ಯದಲ್ಲಿ ಮಾತು ಮುಗಿಸಿದ ರಾಜ್ಯಪಾಲರು, ಸರ್ಕಾರದ ಭಾಷಣ ಓದಲು ನಕಾರ; ವಿಧಾನಸಭೆಯಲ್ಲಿ ಹೈಡ್ರಾಮಾ

ರಾಜ್ಯಪಾಲರ ನಡೆಗೆ ಸಿಎಂ ಕಿಡಿ


ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ರೀತಿ ವರ್ತಿಸಿದ್ದು, ಈ ನಡೆ ಸಂವಿಧಾನ ಬಾಹಿರ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ರಾಜ್ಯಪಾಲ ಗೆಹ್ಲೋಟ್​ ತಮ್ಮ ಕರ್ತವ್ಯವನ್ನು ಪಾಲನೆ ಮಾಡಿಲ್ಲ. ಹೀಗಾಗಿ ಸುಪ್ರೀಂಕೋರ್ಟ್​ ಮೊರೆ ಹೋಗುವ ಬಗ್ಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ರಾಜ್ಯಪಾಲರು ತಾವೇ ತಯಾರು ಮಾಡಿದ ಭಾಷಣ ಮಾಡಿದ್ದಾರೆ. ಈ ಮೂಲಕ ಸಂವಿಧಾನದ ವಿಧಿಗಳನ್ನು ವಿರೋಧಿಸಿದ್ದಾರೆ. ರಾಜ್ಯಪಾಲರ ನಡೆ ಖಂಡಿಸಿ ನಮ್ಮ ಶಾಸಕರು ಪ್ರತಿಭಟನೆ ಮಾಡ್ತಾರೆ ಎಂದು ತಿಳಿಸಿದ್ದಾರೆ.

ಸಂವಿಧಾನದ ಪ್ರಕಾರ ಭಾಷಣ ಮಾಡೋದು ರಾಜ್ಯಪಾಲರ ಕರ್ತವ್ಯ. ರಾಜ್ಯಪಾಲರು ಅವರು ರೆಡಿ ಮಾಡಿ ಭಾಷಣವನ್ನು ಓದುವಂತಿಲ್ಲ. ಸರ್ಕಾರ ರೆಡಿ ಮಾಡಿದ ಭಾಷಣವನ್ನು ರಾಜ್ಯಪಾಲರು ಓದಲೇಬೇಕು. ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಬೇಕು ಎಂದು ರಾಜ್ಯಪಾಲರ ನಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮನ್‌ರೇಗಾ ಮರುಸ್ಥಾಪನೆ‌ ಮಾಡಿ, ವಿಬಿ ಜಿ ರಾಮ್‌ಜೀ ರದ್ದು ಮಾಡುವವರೆಗೂ ನಿರಂತರ ಹೋರಾಟ ಮಾಡೋದಾಗಿ ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us