HD Kumaraswamy: ಪಂಚರತ್ನ ಯಾತ್ರೆಯಿಂದ ಬಿಜೆಪಿ, ಕಾಂಗ್ರೆಸ್​​ಗೆ ಆತಂಕ; ಹೆಚ್​​​ಡಿ ಕುಮಾರಸ್ವಾಮಿ

|

Updated on: Mar 09, 2023 | 5:36 PM

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕರಗುಂದ ಗ್ರಾಮದಲ್ಲಿ ಮಾತನಾಡಿದ ಹೆಚ್​ಡಿ ಕುಮಾರಸ್ವಾಮಿ, ನಾವು ಅಧಿಕಾರದಲ್ಲಿದ್ದಾಗ ಒತ್ತಡ ಹೇರಿ ಹಣ ಮಾಡುವ ಕೆಲಸ‌ ಮಾಡದೇ ಇರುವುದರಿಂದ ಯಾರೋ ನಾಲ್ಕು ಜನ ಪುಣ್ಯಾತ್ಮರು ಚುನಾವಣೆಗೆ ಹಣ ತಂದು ಕೊಡುತ್ತಾರೆ. ಅದರಿಂದ ಈ ಪಕ್ಷ ನಡೆಯುತ್ತಿದೆ ಎಂದಿದ್ದಾರೆ.

ಹಾಸನ: ಬಿಜೆಪಿ ಹಾಗೂ ಕಾಂಗ್ರೆಸ್ (Congress) ಪಕ್ಷಗಳು ಹಳೆ ಮೈಸೂರು (Old Mysuru) ಭಾಗವನ್ನೇ ಗುರಿಯಾಗಿಸಿಕೊಂಡಿವೆ ಎಂಬ ವರದಿಗಳ ಬಗ್ಗೆ ಜೆಡಿಎಸ್ (JDS) ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯಿಸಿದ್ದು, ಹಳೆ ಮೈಸೂರು ಎನ್ನುವುದಕ್ಕಿಂತಲೂ ಅವರು ನಮ್ಮ ಪಕ್ಷವನ್ನೇ ಗುರಿಯಾಗಿಸಿಕೊಂಡಿದ್ದಾರೆ ಎಂದಿದ್ದಾರೆ. ಜಿಲ್ಲೆಯ ಅರಸೀಕೆರೆ ತಾಲೂಕಿನ ಕರಗುಂದ ಗ್ರಾಮದಲ್ಲಿ ಮಾತನಾಡಿದ ಅವರು, ಜೆಡಿಎಸ್ ಅನ್ನು ಗುರಿಯಾಗಿಸಿಕೊಂಡರೆ ಈ ಬಾರಿ ಪ್ರಯೋಜನವಾಗಲಾರದು. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದು ಜೆಡಿಎಸ್​​ ಅನ್ನು ಕಾಂಗ್ರೆಸ್​​ನ ಬಿ ಟೀಂ ಎನ್ನುತ್ತಾರೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪದೇಪದೇ ಬಿಜೆಪಿಯ ಬಿ ಟೀಂ ಎನ್ನುತ್ತಾರೆ. ಆದರೆ, ನಾವು ನಾಡಿನ ಜನತೆಯ ಬಿ ಟೀಂ ಎಂದು ಹೇಳಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್​ಗೆ ನಮ್ಮ ಪಕ್ಷದ ಬೆಳವಣಿಗೆಯಿಂದ ಆತಂಕವಾಗಿದೆ. ನಾವು ಪಂಚರತ್ನ ಯಾತ್ರೆ ಮೂಲಕ ಜನರನ್ನು ತಲುಪುತ್ತಿದ್ದೇವೆ. ಇದರಿಂದ ಅವರಿಗೆ ಹೆದರಿಕೆಯಾಗಿದೆ ಎಂದು ಹೇಳಿದ್ದಾರೆ.

ನಮ್ಮ ಭದ್ರಕೋಟೆಯನ್ನು ಛಿದ್ರ ಮಾಡುತ್ತೇವೆ ಅಂತ ಹೊರಟಿದ್ದಾರೆ. ಆದರೆ, ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡರು ಬೆಳಿಸಿರುವ ಲಕ್ಷಾಂತರ ಕಾರ್ಯಕರ್ತರು ಇದ್ದಾರಲ್ಲ, ಅವರು ನಮ್ಮ ಶಕ್ತಿ. ಅವರು ಇರುವ ವರೆಗೂ ಈ ಪಕ್ಷಕ್ಕೆ ಅವರು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

ಹಣ ಇದೆ ಎಂದು ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕೆಂಡಾಮಂಡಲವಾದ ಕುಮಾರಸ್ವಾಮಿ, ನನ್ನ ಹತ್ರ ಹಣ ಇದೆಯಂತೆಯಾ? ನಲವತ್ತು ಸೀಟ್ ಏಕಾಂಗಿಯಾಗಿ ಗೆದ್ದಿರುವುದು ಕಡಿಮೆಯೇ ಎಂದು ಪ್ರಶ್ನಿಸಿದ್ದಾರೆ. ಅವತ್ತು ಅವರಿದ್ದಾಗ (ಸಿದ್ದರಾಮಯ್ಯ) ಎಷ್ಟು ಜನ ನಾಯಕರಿದ್ದರು? 58 ಸ್ಥಾನ ಗೆಲ್ಲಬೇಕಾದರೆ ಯಾರು ಎಷ್ಟು ಕೊಡುಗೆ ನೀಡಿದ್ದಾರೆ ಎಂಬುದನ್ನು ಹೇಳಬೇಕಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಒಂದು ರೂಪಾಯಿ ಇರಲಿಲ್ಲ; ಕುಮಾರಸ್ವಾಮಿ

ಈಗ ತಾನೇ ದೇವರಿಗೆ ಕೈಮುಗಿದು ಬಂದಿದ್ದೇನೆ. ನಾನು ಪಂಚರತ್ನ ಯಾತ್ರೆ ಕಾರ್ಯಕ್ರಮ ಮಾಡಿದ್ದ ದಿನವೂ ನನ್ನ ಬಳಿ ಒಂದು ರೂಪಾಯಿ ಇರಲಿಲ್ಲ, ಒಂದು ರೂಪಾಯಿಯನ್ನೂ ಖರ್ಚು ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಜತೆಗೆ, ಈ ನಾಡಿನ ಜನತೆ ಉತ್ತಪ ಸ್ಪಂದನೆ ವ್ಯಕ್ತಪಡಿಸಿದ್ದಾರೆ. ಮುಂದಿನ ಚುನಾವಣೆ ಎದುರಿಸಲು ಈ ಕ್ಷಣದವರೆಗೂ ನನ್ನ ಬಳಿ ಹಣವಿಲ್ಲ. ಸಿದ್ದರಾಮಯ್ಯ ಅವರಿಗೆ ಬಹಳ ಜನ ಇದ್ದಾರೆ. ಯಾಕೆಂದರೆ ರಿಡೂ ಗಿಡೂ ಮಾಡಿದ್ದರಲ್ಲ, ಅವರೆಲ್ಲಾ ಸಂಪಾದನೆ ಮಾಡಿ ಕೊಟ್ಟಿದ್ದಾರೆ. ಆದರೆ, ನಾವು ಆ ರೀತಿ ಮಾಡಿಲ್ಲ, ರೇವಣ್ಣ ಕೂಡ ಹಾಗೆ ಮಾಡಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ನಾಡಿನ ಸಂಪತ್ತನ್ನು ಲೂಟಿ ಮಾಡಲು ಬಿಟ್ಟಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: HD Kumaraswamy: ದ್ವೇಷ ಮತ್ತು ಹಿಂಸೆ ಬಿಜೆಪಿ ನಾಯಕರ ಹಿಡನ್ ಅಜೆಂಡಾ: ಹೆಚ್ ಡಿ ಕುಮಾರಸ್ವಾಮಿ

‘ಯಾರೋ ಪುಣ್ಯಾತ್ಮರು ಹಣ ತಂದು ಕೊಡುತ್ತಾರೆ’

ನಾವು ಅಧಿಕಾರದಲ್ಲಿದ್ದಾಗ ಒತ್ತಡ ಹೇರಿ ಹಣ ಮಾಡುವ ಕೆಲಸ‌ ಮಾಡದೇ ಇರುವುದರಿಂದ ಯಾರೋ ನಾಲ್ಕು ಜನ ಪುಣ್ಯಾತ್ಮರು ಚುನಾವಣೆಗೆ ಹಣ ತಂದು ಕೊಡುತ್ತಾರೆ. ಅದರಿಂದ ಈ ಪಕ್ಷ ನಡೆಯುತ್ತಿದೆ. ಹಣ ಇದೆ ಅಂತ ಸುಮ್ಮನೆ ಖರ್ಚು ಮಾಡಲು ಈ ಕಾರ್ಯಕ್ರಮ ಇಟ್ಟುಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ಸುಮಲತಾ ಬಿಜೆಪಿ ಸೇರ್ಪಡೆ ವರದಿ ಬಗ್ಗೆ ಏನಂದರು?

ಮಂಡ್ಯದ ರಾಜಕೀಯ ಬೆಳವಣಿಗೆಯನ್ನು ಗಮನಿಸಿದ್ದೇನೆ. ಪ್ರಧಾನಿ ನರೇಂದ್ರಮೋದಿ ಅವರು ಬರುವ ಸಂದರ್ಭದಲ್ಲಿ ಅಲ್ಲಿಯ ಸಂಸದರು ಬಿಜೆಪಿ ಸೇರುವುದಕ್ಕೆ ನಾನೇನು ಮಹತ್ವ ಕೊಡುವುದಿಲ್ಲ, ಅದರ ಅವಶ್ಯಕತೆಯೂ ಇಲ್ಲ. ಮಂಡ್ಯ ಜಿಲ್ಲೆಯ ಜನತೆ ಆ ಬಗ್ಗೆ ತೀರ್ಮಾನ ಮಾಡುತ್ತಾರೆ. ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಮಂಡ್ಯ ಜಿಲ್ಲೆಯ ಜನ ತೀರ್ಮಾನ ಮಾಡಬೇಕು, ಅದನ್ನು ಅವರಿಗೆ ಬಿಟ್ಟಿದ್ದೇನೆ. ಸ್ವಾಭಿಮಾನದ ವಿಷಯದ ಬಗ್ಗೆ ಅವರನ್ನೇ (ಸುಮಲತಾ) ಕೇಳಬೇಕು. ನಾನು ಆ ಬಗ್ಗೆ ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:43 pm, Thu, 9 March 23