ಒಂದು ಸುತ್ತು ರಾಜಕೀಯ ಪಯಣ ಪೂರ್ಣಗೊಳಿಸಿದ 68 ವರ್ಷದ ಜಗದೀಶ್ ಶೆಟ್ಟರ್! ಅದರ ಏಳುಬೀಳುಗಳ ಹಿನ್ನೋಟ ಇಲ್ಲಿದೆ

|

Updated on: Jan 25, 2024 | 3:28 PM

68ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಜಗದೀಶ್ ಶೆಟ್ಟರ್ ಒಂದು ಸುತ್ತು ತಮ್ಮ ರಾಜಕೀಯ ಪಯಣ ಪೂರ್ಣಗೊಳಿಸಿದಂತಾಗಿದೆ. ಇನ್ನೇನಿದ್ದರೂ ಬಿಜೆಪಿಯಲ್ಲಿ ಅವರದು ಸೆಕೆಂಡ್​ ಇನ್ನಿಂಗ್ಸ್​​! ಹಾಗಂತ ಅವರೇನೂ ಬಿಜೆಪಿಯಲ್ಲಿ ಇನ್ನು ಸೆಕೆಂಡ್​ಹ್ಯಾಂಡ್​ ಅಂತಲ್ಲ. ಇಲ್ಲಿಂದ ಅವರ ವರ್ಚಸ್ಸು, ಖದರು ಮತ್ತೊಂದು ಮಜಲಿಗೆ ಜಂಪ್ ಹೊಡೆಯಲಿದೆ ಎನ್ನಬಹುದು. ಆದರೆ ಇದರ ಅಂತಿಮ ತೀರ್ಪು ನೀಡಬೇಕಾಗಿರುವುದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾರ ಪ್ರಭುಗಳು ಅಷ್ಟೇ! ​

ಒಂದು ಸುತ್ತು ರಾಜಕೀಯ ಪಯಣ ಪೂರ್ಣಗೊಳಿಸಿದ 68 ವರ್ಷದ ಜಗದೀಶ್ ಶೆಟ್ಟರ್! ಅದರ ಏಳುಬೀಳುಗಳ ಹಿನ್ನೋಟ ಇಲ್ಲಿದೆ
ರಾಜಕೀಯವಾಗಿ ಒಂದು ಸುತ್ತು ಹೊಡೆದುಬಂದ ಜಗದೀಶ್ ಶೆಟ್ಟರ್ ಏಳುಬೀಳುಗಳ ಹಿನ್ನೋಟ
Follow us on

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೈಗೆ ಮತ್ತೆ ಅಧಿಕಾರದ ಚುಕ್ಕಾಣಿ ದೊರಕಿಸಿಕೊಡುವ ಮಹತ್ವಾಕಾಂಕ್ಷೆಯೊಂದಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹಾಲಿ ಕಾಂಗ್ರೆಸ್​ ಮೇಲ್ಮನೆ ಸದಸ್ಯತ್ವವನ್ನು ತೊರೆದು ಕ್ಷಿಪ್ರ ಬೆಳವಣಿಗೆಯಲ್ಲಿ ಇದೀಗತಾನೆ ತಮ್ಮ ಮಾತೃಪಕ್ಷಕ್ಕೆ ಮರಳಿದ್ದಾರೆ. ಇದರೊಂದಿಗೆ ಕಟ್ಟರ್​ ಬಿಜೆಪಿಗ ಜಗದೀಶ್ ಶೆಟ್ಟರ್ ಅವರು ರಾಜಕೀಯವಾಗಿ ಒಂದು ಸುತ್ತು ಹಾಕಿ ಬಂದಂತಾಗಿದೆ. ಇದರೊಂದಿಗೆ 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷವೂ ಅಂಕಿತ ಹಾಕಿದಂತಾಗಿದೆ. ಗಮನಾರ್ಹವೆಂದರೆ ಅತ್ತ ಉತ್ತರಪ್ರದೇಶದ ಬುಲಂದಷಹರದಲ್ಲಿ​ ಪ್ರಧಾನಿ ಮೋದಿ ಇಂದು ಪಕ್ಷದ ಲೋಕಸಭಾ ಚುನಾವಣೆಯ ರಣಕಹಳೆ ಮೊಳಗಿಸುವ ಕಾರ್ಯಕ್ರಮವಿದ್ದು, ಅದಕ್ಕೂ ಮುನ್ನ ದೆಹಲಿ ಮಟ್ಟದಲ್ಲಿ ಕರ್ನಾಟಕದ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಶೆಟ್ಟರ್​ ಬಿಜೆಪಿಗೆ ಮರುಸೇರ್ಪಡೆಯಾಗಿರುವುದು ಕುತೂಹಲಕಾರಿಯಾಗಿದೆ. ಆದರೆ ಆತಂಕಕಾರಿ ಸಂಗತಿಯೆಂದರೆ ಶೆಟ್ಟರ್ ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ್ತೆ ಹೋಗುವುದಿಲ್ಲ ಎಂದು ಸಿಎಂ -ಡಿಸಿಎಂ ಆದಿಯಾಗಿ ಹೇಳಿದ 24 ಗಂಟೆಯಲ್ಲಿಯೇ ಶೆಟ್ಟರ್ ಘರ್​ವಾಪಸಾತಿಯಾಗಿದೆ. ಶೆಟ್ಟರ್​​ ರಾಜಕೀಯ ಒಳಾಸಕ್ತಿಗಳು ಮತ್ತು ಬಿಜೆಪಿ ಒಳತಂತ್ರಗಳು ಏನು ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲವಾದರೂ ಪ್ರಧಾನವಾಗಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಬೇಕು ಎಂಬುದು ಅವರ ಧ್ಯೇಯೋದ್ದೇಶ ಇದ್ದಂತಿದೆ. ಈ ರಾಜಕೀಯ ಬೆಳವಣಿಗೆಗಳ ಸಮ್ಮುಖದಲ್ಲಿ ಜಗದೀಶ್ ಶೆಟ್ಟರ್ ಅವರ ರಾಜಕೀಯ ಹಿನ್ನೆಲೆಯನ್ನು ಒಮ್ಮೆ ನೋಡೋಣಾ…

ಕಳೆದ ತಿಂಗಳಷ್ಟೇ 68ನೇ ಹುಟ್ಟುಹಬ್ಬ ಆಚರಿಸಿಕೊಂಡ (17 ಡಿಸೆಂಬರ್​ 1955) ಜಗದೀಶ್ ಶೆಟ್ಟರ್ ಒಂದು ಸುತ್ತು ತಮ್ಮ ರಾಜಕೀಯ ಪಯಣ ಪೂರ್ಣಗೊಳಿಸಿದಂತಾಗಿದೆ. ಇನ್ನೇನಿದ್ದರೂ ಬಿಜೆಪಿಯಲ್ಲಿ ಅವರದು ಸೆಕೆಂಡ್​ ಇನ್ನಿಂಗ್ಸ್​​! ಹಾಗಂತ ಅವರೇನೂ ಬಿಜೆಪಿಯಲ್ಲಿ ಇನ್ನು ಸೆಕೆಂಡ್​ಹ್ಯಾಂಡ್​ ಅಂತಲ್ಲ. ಇಲ್ಲಿಂದ ಅವರ ವರ್ಚಸ್ಸು, ಖದರು ಮತ್ತೊಂದು ಮಜಲಿಗೆ ಜಂಪ್ ಹೊಡೆಯಲಿದೆ ಎಂದು ಹೇಳಬಹುದು. ಆದರೆ ಈ ಬೆಳವಣಿಗೆಯ ಅಂತಿಮ ತೀರ್ಪು ನೀಡಬೇಕಾಗಿರುವುದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾರ ಪ್ರಭುಗಳು ಅಷ್ಟೇ! ​

ಜಗದೀಶ್ ಶೆಟ್ಟರ್ ಕರ್ನಾಟಕದ ರಾಜಕೀಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು. ಡಿಸೆಂಬರ್ 17, 1953 ರಂದು ಕರ್ನಾಟಕದ ಹುಬ್ಬಳ್ಳಿಯಲ್ಲಿ ಜನಿಸಿದ ಶೆಟ್ಟರ್ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಯೊಂದಿಗೆ ತಮ್ಮ ರಾಜಕೀಯ ಬದುಕನ್ನು ಆರಂಭಿಸಿದವರು. ಇದಕ್ಕೆ ಪ್ರಮುಖ ಕಾರಣವಾಗಿದ್ದು ಅದಾಗಲೇ ಜನಸಂಘದಲ್ಲಿ ತಳವೂರಿದ್ದ ಅವರ ತಂದೆ. ಅವರ ಗಾಢ ಪ್ರಭಾವದಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಜಗದೀಶ್ ಶೆಟ್ಟರ್ ಆರಂಭದ ದಿನಗಳಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ರಾಜಕೀಯದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಿ ಮೇಲೆ ಬಂದವರು. ಮುಂದೆ ಬಿಜೆಪಿ ವತಿಯಿಂದ ರಾಜ್ಯದ ಮುಖ್ಯಮಂತ್ರಿಯೂ ಆದರು.

ಶೆಟ್ಟರ್ ಅವರ ರಾಜಕೀಯ ಪ್ರಯಾಣವು 1980 ರ ದಶಕದ ಆರಂಭ ಪಡೆಯಿತು. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಅವರ ಬದ್ಧತೆ ಮತ್ತು ಸಂಘಟನಾ ಕೌಶಲ್ಯಗಳನ್ನು ಪಕ್ಷದ ಹಿರಿಯ ನಾಯಕರು ತ್ವರಿತಗತಿಯಲ್ಲಿ ಗುರುತಿಸಲು ಪ್ರಾರಂಭಿಸಿದರು.

1994 ರಲ್ಲಿ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಯ ಸ್ಥಾನವನ್ನು ಗೆಲ್ಲುವ ಮೂಲಕ ರಾಜಕೀಯ ಮುಖ್ಯವಾಹಿನಿ ಪ್ರವೇಶಿಸಿದರು. ಅವರ ಶ್ರದ್ಧೆಯ ಕೆಲಸ ಮತ್ತು ಸಾರ್ವಜನಿಕ ಸೇವಾ ಸಮರ್ಪಣೆ ಅವರನ್ನು ರಾಜಕೀಯದಲ್ಲಿ ಪ್ರಭಾವಶಾಲಿ ಮತ್ತು ದೀರ್ಘ ಕಾಲಕ್ಕೆ ಕೊಂಡೊಯ್ದಿದೆ.

ಹಲವು ವರ್ಷಗಳ ಕಾಲ ಶೆಟ್ಟರ್ ಅವರು ಕರ್ನಾಟಕ ರಾಜ್ಯ ಸರ್ಕಾರದಲ್ಲಿ ವಿವಿಧ ಇಲಾಖೆಗಳಲ್ಲಿ ಸಚಿವ ಸ್ಥಾನಗಳನ್ನು ನಿಭಾಯಿಸಿದರು. ತಮ್ಮ ಆಡಳಿತ ಚಾತುರ್ಯವನ್ನು ಪ್ರದರ್ಶಿಸುತ್ತಾ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದರು.

ಶೆಟ್ಟರ್ ಅವರ ರಾಜಕೀಯ ಜೀವನದ ಮಹತ್ವದ ಮೈಲುಗಲ್ಲುಗಳಲ್ಲಿ ಒಂದಾದ ಸಂಗತಿಯೆಂದರೆ 2008 ರಲ್ಲಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದು. ಆದಾಗ್ಯೂ, ಅವರ ಅಧಿಕಾರಾವಧಿಯು ಅಲ್ಪಕಾಲಿಕವಾಗಿತ್ತು ಎಂಬುದು ಖೇದಕರ ಸಂಗತಿ. ಅಲ್ಲಿಯವರೆಗೂ ಜಗದೀಶ್​ ಶೆಟ್ಟರ್ ಅವರ ಸಾರ್ವಜನಿಕ ಸೇವಾ ಬದ್ಧತೆ ಅಚಲವಾಗಿ ಉಳಿದುಕೊಂಡಿತ್ತು. ಮುಂದೆಯೂ ನೀತಿ ನಿರೂಪಣೆ ಮತ್ತು ಶಾಸಕಾಂಗ ಚರ್ಚೆಗಳಿಗೆ ಕೊಡುಗೆ ನೀಡುತ್ತಲೇ ಅವರು ವಿಧಾನಸಭೆಯ ಸದಸ್ಯರಾಗಿ (ಎಂಎಲ್‌ಎ) ಸೇವೆ ಸಲ್ಲಿಸುತ್ತಾ ಬಂದವರು. ಕೃಷಿ ಅಭಿವೃದ್ಧಿ, ಗ್ರಾಮೀಣ ಮೂಲಸೌಕರ್ಯ ಮತ್ತು ಶಿಕ್ಷಣ ಉಪಕ್ರಮಗಳ ಮೇಲೆ ಅವರ ಗಮನವು ಅವರ ಕ್ಷೇತ್ರದ ವೈವಿಧ್ಯಮಯ ಅಗತ್ಯಗಳನ್ನು ಪರಿಹರಿಸುವಲ್ಲಿ ಅವರ ಬದ್ಧತೆಯನ್ನು ಪ್ರದರ್ಶಿಸಿತು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಜಗದೀಶ್ ಶೆಟ್ಟರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಜೆಪಿಯೊಂದಿಗಿನ ದೀರ್ಘಕಾಲದ ಒಡನಾಟ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಅವರ ಅಚಲ ಬದ್ಧತೆಗೆ ಹೆಸರುವಾಸಿಯಾದ ಅನುಭವಿ ರಾಜಕಾರಣಿ ಎನಿಸಿದರು.

ಆದರೆ ಆರೇಳು ತಿಂಗಳ ಹಿಂದಿನ ರಾಜಕೀಯ ಬೆಳವಣಿಗೆಗಳು ಮತ್ತು ಪಕ್ಷದೊಳಗಿನ ಅಂತರ್ಯುದ್ಧ ಅವರನ್ನು ಬಿಜೆಪಿಯಿಂದ ಹೊರಬರುವಂತೆ ಪ್ರೇರೇಪಿಸಿತು. ಅದುವೆರಗೂ ಪ್ರಮುಖವಾಗಿ ಯಾವ ಪಕ್ಷದ ಸಿದ್ಧಾಂತಗಳನ್ನು ಅವರು ಧಿಕ್ಕರಿಸುತ್ತಾ ಬಂದಿದ್ದರೋ ಅಷ್ಟೇ ವೇಗದಲ್ಲಿ ಸ್ವತಃ ತಮ್ಮದೇ ಬಿಜೆಪಿ ಪಕ್ಷವನ್ನು ಧಿಕ್ಕರಿಸಿ ಕಾಂಗ್ರೆಸ್​ ಪಕ್ಷವನ್ನು ಅಪ್ಪಿಕೊಂಡರು. ಕಾಂಗ್ರೆಸ್​ ಸೇರ್ಪಡೆಯಾಗುತ್ತಿದ್ದಂತೆ ಆ ಪಕ್ಷದ ವತಿಯಿಂದ ಮೇಲ್ಮನೆ ಸದಸ್ಯರಾದರು.

ಶೆಟ್ಟರ್ ಕಾಂಗ್ರೆಸ್​​ನಲ್ಲಿದ್ದಾಗ ಬಿಜೆಪಿಯ ನಾಲ್ವರು ನಾಯಕರು ಕಾಂಗ್ರೆಸ್​​ ಸೇರ್ಪಡೆಯಾಗುವುದಕ್ಕೆ ಕಾರಣೀಭೂತರಾದರು. ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಶೆಟ್ಟರ್ ಮುಂದಾಳತ್ವ ವಹಿಸಿದ್ರು. ನವಲಗುಂದ ಕ್ಷೇತ್ರದ ಮಾಜಿ ಶಾಸಕ ಶಂಕರ್ ಪಾಟೀಲ್ ಮುನೇನಕೊಪ್ಪ, ಶಿರಹಟ್ಟಿ ಮಾಜಿ ಶಾಸಕ ರಾಮಣ್ಣ, ಕುಂದಗೋಳ ಮಾಜಿ ಶಾಸಕ ಚಿಕ್ಕನಗೌಡರ್ ಮತ್ತು ಚಿಕ್ಕಮಗಳೂರು ಜಿಲ್ಲೆಯ ಮೂಡಿಗರೆ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಕೈಹಿಡಿದಿದ್ದು ಗಮನಾರ್ಹವಾಗಿತ್ತು. ನಾಲ್ವರ ಪೈಕಿ ರಾಮಣ್ಣ ಲಮಾಣಿ ಮಾತ್ರ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರೆ ಉಳಿದ ಮೂವರು ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ತಡೆ ಬಿದ್ದಿತ್ತು.

ಶಟ್ಟರ್ ಕಾಂಗ್ರೆಸ್ ತೊರೆಯಲು ಕಾರಣಗಳನ್ನು ಕೆದಕುವುದಾದರೆ ಉತ್ತರ ಕರ್ನಾಟಕದ ಹಿರಿಯ ಲಿಂಗಾಯತ ಸಚಿವರೊಬ್ಬರಿಂದ ಶಟ್ಟರ್ ತುಳಿಯಲು ಯತ್ನ ನಡೆದಿತ್ತು ಮತ್ತೊಬ್ಬ ಲಿಂಗಾಯತ ಮುಖಂಡ ಕಾಂಗ್ರೆಸ್ ನಲ್ಲಿ ಬೆಳೆಯಲು ಬಿಡಬಾರದು ಎನ್ನುವುದು ಆ ಹುನ್ನಾರದ ವಾಸ್ತವ ಸಂಗತಿಯಾಗಿತ್ತು ಎನ್ನಬಹುದು. ಜೊತೆಗೆ ಕಾಂಗ್ರೆಸ್​ನ ಸ್ಥಳೀಯ ಮುಖಂಡರು ಶೆಟ್ಟರ್ ಕಾಂಗ್ರೆಸ್​​ ಸೇರ್ಪಡೆಯನ್ನು ವಿರೋಧಿಸುತ್ತಾ, ವಿನಾಕಾರಣ ಶಟ್ಟರ್ ವಿರುದ್ಧ ಅಪ್ರಚಾರ ನಡೆಸಿದ್ದರು ಎನ್ನಲಾಗಿದೆ. ಸಚಿವ ಸ್ಥಾನ ಸಿಗಲಿದೆ ಎಂದು ನಂಬಿದ್ದ ಶಟ್ಟರ್ ಗೆ ಕಾಂಗ್ರೆಸ್ ನಲ್ಲಿ ನಿರಾಶೆ ಕಾದಿತ್ತು.

ಜೊತೆಗೆ ರಾಜ್ಯದಲ್ಲಿ ಬದಲಾದ ಬಿಜೆಪಿ ಆಡಳಿತ, ಕೊನಗೊಂಡ ಬಿ ಎಲ್ ಸಂತೋಷ ಹಿಡಿತ, ಲಿಂಗಾಯತರಿಗೆ ಪಕ್ಷದ ಚುಕ್ಕಾಣಿ ನೀಡಿದ್ದು, ಅದರಂತೆ ಪಕ್ಷದ ನೂತನ ಸಾರಥಿ ವಿಜಯೇಂದ್ರ ಅವರು ಶೆಟ್ಟರ್​ ಘರ್ ವಾಪ್ಸಿಗೆ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಸ್ಥಳೀಯವಾಗಿ ಶಟ್ಟರ್ ಗೆ ಆಪ್ತವಾಗಿದ್ದ ಬಿಜೆಪಿ ಮುಖಂಡರು ಸಹ ಅವರ ಮೇಲೆ ಘರ್ ವಾಪಸಿಗೆ ತೀವ್ರ ಒತ್ತಡ ಹೇರಿದ್ದರು ಎನ್ನಲಾಗಿದೆ.

ಒಟ್ಟಾರೆಯಾಗಿ ಕಾಂಗ್ರೆಸ್​​ ಪಕ್ಷದಲ್ಲಿ ಜಗದೀಶ್ ಶೆಟ್ಟರ್ ಅವರ ರಾಜಕೀಯ ಜೀವನ ನಿಂತ ನೀರಾದಂತಾಯಿತು. ಬಹುಶಃ ಉಸಿರುಗಟ್ಟಿಸುವ ಆ ವಾತಾವರಣದಿಂದ ಹೊರಬರುವ ನಿಟ್ಟಿನಲ್ಲಿ ಅವರು ಮತ್ತೆ ಬಿಜೆಪಿ ಪಕ್ಷವನ್ನು ಅಪ್ಪಿಕೊಂಡಿರಬಹುದು ಎನ್ನುತ್ತಾರೆ ರಾಜಕೀಯ ಪರಿಣತರು.

Published On - 3:26 pm, Thu, 25 January 24