ರಾಜಕೀಯ ಅಂದರೆ ಮೋಸ, ಸುಳ್ಳು, ವಂಚನೆ: ಜನಾರ್ದನ ರೆಡ್ಡಿ

|

Updated on: Mar 12, 2023 | 3:11 PM

ಈ ಹಿಂದೆ ನಾನು ಬೇರೆ ರಾಜಕೀಯ ಪಕ್ಷ ನಂಬಿ ಮೋಸ ಹೋದೆ. ರಾಜಕೀಯ ಅಂದರೆ ಮೋಸ, ಸುಳ್ಳು, ವಂಚನೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಜನಾರ್ದನ ರೆಡ್ಡಿ ಹೇಳಿದರು.

ರಾಜಕೀಯ ಅಂದರೆ ಮೋಸ, ಸುಳ್ಳು, ವಂಚನೆ: ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ
Image Credit source: publictv.in
Follow us on

ಚಿಕ್ಕಬಳ್ಳಾಪುರ: ಈ ಹಿಂದೆ ನಾನು ಬೇರೆ ರಾಜಕೀಯ ಪಕ್ಷ ನಂಬಿ ಮೋಸ ಹೋದೆ. ರಾಜಕೀಯ ಅಂದರೆ ಮೋಸ, ಸುಳ್ಳು, ವಂಚನೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಜನಾರ್ದನ ರೆಡ್ಡಿ (Janardhana Reddy) ಹೇಳಿದರು. ಜಿಲ್ಲೆಯ ಬಾಗೇಪಲ್ಲಿಯಲ್ಲಿ ಆಯೋಜಿಸಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಮಾವೇಶದಲ್ಲಿ ಅವರು ಮಾತನಾಡಿ, ನದಿಯಲ್ಲಿ ಈಜುವ ಮೀನನನ್ನು ಬಂಧಿಸಿದ ಹಾಗೆ ನನ್ನನ್ನು ಬಲೆಯಲ್ಲಿ ಬಂಧಿಸಿದರು. ಮೂವತ್ತಕ್ಕೂ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಳ್ಳುವ ತಾಕತ್ತು ನನಗಿದೆ‌. ಬದುಕಿದರೆ ವೈ ಎಸ್. ರಾಜಶೇಖರ ರೆಡ್ಡಿ, ಮಾಜಿ ಸಿಎಂ. ಜಯಲಲಿತ ಹಾಗೆ ಬದುಕಬೇಕು. ಹದಿನೈದು ವರ್ಷಗಳ ಬಳಿಕ ನಾನು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್​ಗೆ ಟಕ್ಕರ್ ಕೊಟ್ಟ ರೆಡ್ಡಿ

ಕಾಂಗ್ರೆಸ್​​ನ ಗೃಹಲಕ್ಷ್ಮೀ ಘೋಷಣೆಗೆ ಟಕ್ಕರ್​ ನೀಡಿರುವ ರೆಡ್ಡಿ, ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 2,500 ರೂ. ಆರ್ಥಿಕ ನೆರವು ನೀಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. ಚೆನ್ನಮ್ಮ ಅಭಯಹಸ್ತ ಎಂಬ ಹೆಸರಿನಲ್ಲಿ ಪ್ರಣಾಳಿಕೆ ಪ್ರಕಟಿಸಲಾಗಿದೆ. ಸ್ತ್ರೀ ಶಕ್ತಿ ಗುಂಪಿಗೆ ಬಡ್ಡಿ ರಹಿತ 10 ಲಕ್ಷ ರೂ. ಸಾಲ ನಿಡಲಾಗುವುದು ಎಂದೂ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ಸಾವಿರ ವೇತನ ಹೆಚ್ಚಳ ಸೇರಿದಂತೆ ಅನೇಕ ಭರವಸೆಗಳನ್ನು ನೀಡಲಾಗಿದೆ.

ಇದನ್ನೂ ಓದಿ: Illegal Mining Case: ಚುನಾವಣೆ ಹೊತ್ತಲ್ಲೇ ಜನಾರ್ದನ ರೆಡ್ಡಿಗೆ ಸಿಬಿಐ ಸಂಕಷ್ಟ; ನಾಲ್ಕು ದೇಶಗಳಿಂದ ಹಣದ ವಿವರ ಪಡೆಯಲು ಅನುಮತಿ

ನಾನು ಜನರನ್ನು ನಂಬಿ ಬೆಳೆದಿದ್ದೇನೆ

ನಾನು ಜಾತಿ ನಂಬಿಕೊಂಡು ಬೆಳೆದಿಲ್ಲ, ಜನರನ್ನು ನಂಬಿ ಬೆಳೆದಿದ್ದೇನೆ. ಬೆಂಗಳೂರಿನ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರೂ ಶಾಸಕನಾಗುತ್ತಿದ್ದೆ. ಕನಕಗಿರಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಬೇಡಿ ಎಂದಿದ್ದರು. ಆದರೆ ನಾನು ಕಾಯುವ ಜಾಯಮಾನದವನಲ್ಲ. ಇಲ್ಲಿ ಸೇರಿದ ಜನ ನೋಡಿದ್ರೆ ಅವರು 40 ಮಾತ್ರೆ ತೆಗೆದುಕೊಳ್ಳುತ್ತಾರೆ. ಈ ಹಿಂದೆ 20 ಮಾತ್ರೆ ತೆಗೆದುಕೊಳ್ಳುತ್ತಿದ್ದವರು ಈಗ 40 ಮಾತ್ರೆ ತೆಗೆದುಕೊಳ್ಳಲಿದ್ದಾರೆ ಎಂದು ರೆಡ್ಡಿ ವ್ಯಂಗ್ಯವಾಡಿದ್ದಾರೆ.

ಜನಾರ್ದನ ರೆಡ್ಡಿ ಟೆಂಪಲ್ ರನ್

ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾಗಿರುವ ಜನಾರ್ದನ ರೆಡ್ಡಿ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡಕ್ಕೆ ಗುರುವಾರ ಭೇಟಿ ನೀಡಿ, ಉತ್ತರಾದಿ ಮಠದ ಜಯತೀರ್ಥರ ಬೃಂದಾವನಕ್ಕೆ ಪೂಜೆ ಸಲ್ಲಿಸಿದರು. ಸೇಡಂ ಪಟ್ಟಣದ ಸಮಾವೇಶಕ್ಕೂ ಮುನ್ನ ಉತ್ತರಾಧಿ ಮಠಕ್ಕೆ ಭೇಟಿ ನೀಡಿದ್ದರು.

ಇದನ್ನೂ ಓದಿ: Janardhana Reddy: ಕಾಂಗ್ರೆಸ್​ಗೆ ಜನಾರ್ದನ ರೆಡ್ಡಿ ಟಕ್ಕರ್; ಪ್ರಣಾಳಿಕೆಯಲ್ಲಿ ಪ್ರತಿ ಕುಟುಂಬಕ್ಕೆ 2,500 ರೂ. ನೆರವು ಘೋಷಣೆ

ಕನಕಗಿರಿ ಅಭ್ಯರ್ಥಿ ಘೋಷಣೆ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕನಕಗಿರಿ ಅಭ್ಯರ್ಥಿಯಾಗಿ ಡಾ. ಚಾರುಲ್ ವೆಂಕಟರಮಣ ಅವರ ಹೆಸರನ್ನು ರೆಡ್ಡಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಚುನಾವಣೆ ಸಿದ್ಧತೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಬಗ್ಗೆ ಅವರು ಸಂದೇಶ ರವಾನಿಸಿದ್ದಾರೆ. ಬಿಜೆಪಿಯಲ್ಲಿ ರಾಜಕೀಯವಾಗಿ ಮುಂದುವರಿಯುವ ಅವಕಾಶ ಕಠಿಣವೆಂಬುದನ್ನರಿತಿದ್ದ ರೆಡ್ಡಿ ಇತ್ತೀಚೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿದ್ದರು. ಆ ಮೂಲಕ ಮಿತ್ರ ಶ್ರೀರಾಮುಲು ಹಾಗೂ ತಮ್ಮ ಹಿಂದಿನ ರಾಜಕೀಯ ಪಕ್ಷ ಬಿಜೆಪಿ ವಿರುದ್ಧವೇ ತೊಡೆತಟ್ಟಿದ್ದಾರೆ. ಇದೀಗ ಚುನಾವಣಾ ಸಿದ್ಧತೆ ಚುರುಕುಗೊಳಿಸಿರುವ ಅವರು, ಪ್ರಚಾರ ಅಭಿಯಾನವನ್ನು ತೀವ್ರಗೊಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:10 pm, Sun, 12 March 23