ಕರ್ನಾಟಕ ವಿರೋಧ ಪಕ್ಷದ ನಾಯಕನ ಆಯ್ಕೆಗೆ ವೀಕ್ಷಕರನ್ನ ಕಳುಹಿಸಿದ ಬಿಜೆಪಿ ಹೈಕಮಾಂಡ್, ಯಾರಾಗ್ತಾರೆ ವಿಪಕ್ಷ ನಾಯಕ?

|

Updated on: Jul 03, 2023 | 12:17 PM

ವಿರೋಧ ಪಕ್ಷದ ಇಲ್ಲದೇ ನೂತನ ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್ ಅಧಿವೇಶನ ಆರಂಭವಾಗಿದೆ., ಇತ್ತ ಬಿಜೆಪಿ ಹೈಕಮಾಂಡ್​ ವಿಪಕ್ಷ ನಾಯಕನ ಆಯ್ಕೆಗೆ ವೀಕ್ಷಕರನ್ನು ಕರ್ನಾಟಕಕ್ಕೆ ಕಳುಹಿಸಿದೆ.

ಕರ್ನಾಟಕ ವಿರೋಧ ಪಕ್ಷದ ನಾಯಕನ ಆಯ್ಕೆಗೆ ವೀಕ್ಷಕರನ್ನ ಕಳುಹಿಸಿದ ಬಿಜೆಪಿ ಹೈಕಮಾಂಡ್, ಯಾರಾಗ್ತಾರೆ ವಿಪಕ್ಷ ನಾಯಕ?
Follow us on

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇದೀಗ ಮೊದಲ ಬಜೆಟ್​ ಮಂಡಿಸಲು(Karnataka Budget Session 2023) ತಯಾರಿ ನಡೆಸಿದೆ. ಅಲ್ಲದೇ ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಿದೆ. ಆದ್ರೆ, ಇದುವರೆಗೂ ಬಿಜೆಪಿ ತನ್ನ ವಿರೋಧ ಪಕ್ಷದ ನಾಯಕನ(Opposition leader) ಆಯ್ಕೆ ಮಾಡಿಲ್ಲ. ವಿಪಕ್ಷ ನಾಯಕನ ಅನುಪಸ್ಥಿತಿಯಲ್ಲೇ ಮೊದಲ ದಿನದ ಅಧಿವೇಶನ ಶುರುವಾಗಿದೆ. ಬಿಜೆಪಿ ಹೈಕಮಾಂಡ್ ಖುದ್ದು ಮಾಜಿ ,ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಯಿಸಿಕೊಂಡು ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಚರ್ಚೆ ಮಾಡಿದೆ. ಆದ್ರೆ, ಯಾರು ವಿಪಕ್ಷ ನಾಯಕ ಎನ್ನುವುದು ಪ್ರಕಟಿಸಿಲ್ಲ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ದೆಹಲಿಯಿಂದ ಬರಿಗೈನಲ್ಲಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಇನ್ನು ಹೈಕಮಾಂಡ್​ ವಿರೋಧ ಪಕ್ಷ ನಾಯಕನ ಆಯ್ಕೆ ಮಾಡಲು ವೀಕ್ಷಕರನ್ನು ನೇಮಿಸಿದೆ.

Karnataka Assembly Session 2023 Live: ನೂತನ ಕಾಂಗ್ರೆಸ್​ ಸರ್ಕಾರದ ಮೊದಲ ಬಜೆಟ್ ಅಧಿವೇಶನ ಲೈವ್​ 

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಇಂದು ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಕೇಂದ್ರೀಯ ವೀಕ್ಷಕರಾಗಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರನ್ನು ನೇಮಿಸಿದ್ದಾರೆ. ಅವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಇಂದು( ಜುಲೈ 03) ರಾಜ್ಯ ಬಿಜೆಪಿ ನಾಯಕ ಅಭಿಪ್ರಾಯ ಸಂಗ್ರಹಿಸಿ ರಾತ್ರಿ ವೇಳೆಗೆ ವಿಪಕ್ಷ ನಾಯಕನ್ನು ಆಯ್ಕೆ ಮಾಡಿ ಘೋಷಣೆ ಮಾಡುವ ಸಾಧ್ಯತೆಗಳಿವೆ.

ಸಂಜೆ 6 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ

ಇನ್ನು ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧ ಇಂದು (ಜುಲೈ 03) ಸಂಜೆ 6 ಗಂಟೆಗೆ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದೆ. ವೀಕ್ಷಕರಾದ ವಿನೋದ್ ತಾವಡೆ, ಮನ್ಸುಖ್ ಮಾಂಡವೀಯ ಉಪಸ್ಥಿತಿಯಲ್ಲಿ ಬೆಂಗಳೂರಿನ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಶಾಸಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಬಳಿಕ ವೀಕ್ಷಕರು ಶಾಸಕರ ಅಭಿಪ್ರಾಯವನ್ನು ಹೈಕಮಾಂಡ್​ಗೆ ತಿಳಿಸಲಿದ್ದಾರೆ.

ಲಿಂಗಾಯತ ಅಥವಾ ನಾನ್ ಲಿಂಗಾಯತ ಲೆಕ್ಕಾಚಾರದೊಂದಿಗೆ ಮುಂದಿನ ಲೋಕಸಭಾ ಚುನಾವಣೆ ಹಾಗೂ ಸಿದ್ದರಾಮಯ್ಯನವರನ್ನು ಎದುರಿಸಬಲ್ಲ ಸಮರ್ಥ ನಾಯಕನನ್ನು ಆಯ್ಕೆಗೆ ಹೈಕಮಾಂಡ್ ಕಸರತ್ತು ನಡೆಸಿದೆ. ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡಿದರೆ ಬಸವರಾಜ ಬೊಮ್ಮಾಯಿ ಅವರಿಗೆ ಮಣೆ ಹಾಕುವ ಸಾಧ್ಯತೆಗಳಿವೆ. ನಾನ್ ಲಿಂಗಾಯತ ನಿರ್ಧಾರಕ್ಕೆ ಬಂದರೆ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್​ ಅವರನ್ನು ವಿಪಕ್ಷ ನಾಯಕನನ್ನಾಗಿ ಮಾಡುವ ಚಿಂತನೆಗಳು ನಡೆದಿವೆ ಎಂದು ತಿಳಿದುಬಂದಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ ಬಿ.ಎಸ್ ಯಡಿಯೂರಪ್ಪ ಮಾತುಕತೆ ನಡೆಸಿದೆ.. ವಿಪಕ್ಷ ನಾಯಕ ಸ್ಥಾನದ ರೇಸ್‌ನಲ್ಲಿ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್, ಆರ್.ಅಶೋಕ್, ಆರಗ ಜ್ಞಾನೇಂದ್ರ ಇದ್ದಾರೆ. ಹೀಗಾಗಿ ಬಿಎಸ್‌ವೈ ಸೂಚಿಸಿದವರಿಗೆ ವಿಪಕ್ಷ ನಾಯಕ ಹುದ್ದೆ ಸಿಗುತ್ತಾ ಅನ್ನೋದು ಕುತೂಹಲ ಮೂಡಿಸಿದೆ.

ಮೂಲಗಳ ಪ್ರಕಾರ ಅಂತಿಮವಾಗಿ ಬಸವರಾಜ ಬೊಮ್ಮಾಯಿ ಅವರನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡುವ ಸಾಧ್ಯತೆಗಳಿದ್ದು, ಇಂದು ರಾತ್ರಿಯೇ ವಿರೋಧ ಪಕ್ಷ ನಾಯಕನ ಆಯ್ಕೆ ಫೈನಲ್ ಆಗಲಿದೆ ಎಂದು ತಿಳಿದುಬಂದಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ