AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಬಜೆಟ್​ನಿಂದ ಅಕ್ಬರ್, ಅಂತೋನಿ ಫುಲ್ ಖುಷ್: ಸಿಸಿ ಪಾಟೀಲ್ ವ್ಯಂಗ್ಯ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಂಡಿಸಿದ ಬಜೆಟ್ 2023 ಹಿಂದೂ ವಿರೋಧಿಯಾಗಿದ್ದು, ಬಜೆಟ್​ನಿಂದ ಅಕ್ಬರ್, ಅಂತೋನಿ ಸಂತಸಗೊಂಡಿದ್ದಾರೆ ಎಂದು ಮಾಜಿ ಸಚಿವ ಸಿಸಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.

ಕರ್ನಾಟಕ ಬಜೆಟ್​ನಿಂದ ಅಕ್ಬರ್, ಅಂತೋನಿ ಫುಲ್ ಖುಷ್: ಸಿಸಿ ಪಾಟೀಲ್ ವ್ಯಂಗ್ಯ
ಸಿಸಿ ಪಾಟೀಲ್ ಮತ್ತು ಸಿದ್ದರಾಮಯ್ಯ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on:Jul 09, 2023 | 6:06 PM

Share

ಗದಗ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಂಡಿಸಿದ ರಾಜ್ಯ ಬಜೆಟ್ (Karnataka Budget 2023) ಸಂಪೂರ್ಣ ಹಿಂದೂ ವಿರೋದಿಯಾಗಿದೆ ಎಂದು ಮಾಜಿ ಸಚಿವ ಸಿಸಿ ಪಾಟೀಲ್ (CC Patil) ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಜೆಟ್​ನಿಂದ ಅಕ್ಬರ್ ಮತ್ತು ಅಂತೋನಿ ಸಂತಸಗೊಂಡಿದ್ದು, ಅಮರ್ ಮಟಾಶ್ ಎಂದು ವ್ಯಂಗ್ಯ ಮಾಡಿದ್ದಾರೆ.

ಕಿಸಾನ್ ಸಮ್ಮಾನ್, ರೈತವಿದ್ಯಾನಿಧಿ ಬಜೆಟ್​ನಲ್ಲಿ ಉಲ್ಲೇಖ ಇಲ್ಲ. ಬಜೆಟ್ ಮುಖಪುಟದಲ್ಲಿ 200 ಯುನಿಟ್ ಎಂದು ಮುದ್ರಿಸುತ್ತಾರೆ. ಆದರೆ ಒಳಗಿನ ಪುಟದಲ್ಲಿ ವಾರ್ಷಿಕ ಸರಾಸರಿ ವಿದ್ಯುತ್ ಬಳಕೆಯ ಶೇ.10 ವಿದ್ಯುತ್ ನೀಡುವುದಾಗಿ ಹೇಳುತ್ತಾರೆ. ಇದು ಇತಿಹಾಸಲ್ಲೇ ಮೊದಲ ಬಾರಿ ಆಗಿದೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಪ್ರಮುಖ ಮಠಗಳಿಗೆ ಬಿಜೆಪಿ ಸರ್ಕಾರ ನೀಡಿದ್ದ ಅನುದಾನ ಹಿಂಪಡೆದಿದ್ದಾರೆ. ಬಾಳೆಹೊನ್ನುರು ಪೀಠಕ್ಕೆ ಕೊಟ್ಟ 5 ಕೋಟಿ ಹಾಗೂ ಶ್ರೀಶೈಲ ಪೀಠಕ್ಕೆ ನೀಡಿದ್ದ ಅನುದಾನ ಹಿಂಪಡೆದು ಹಿಂದೂ ವಿರೋಧಿ ಎಂದು ತೋರಿಸಿಕೊಟ್ಟಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಉಚಿತ ಗ್ಯಾರಂಟಿ ನಂಬಿ ಅಧಿಕಾರ ಕೊಟ್ಟ ಜನರಿಗೆ ಈ ಬಜೆಟ್ ನಲ್ಲಿ ಸಿಕ್ಕಿದ್ದು “ಬೆಲೆ ಏರಿಕೆಯ ಗ್ಯಾರಂಟಿ” ಮಾತ್ರ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರದ ಅನುದಾನ ಕಡಿತ ಮಾಡಲಾಗಿದೆ. ರೈತರಿಗೆ ಕಾಂಗ್ರೆಸ್ ಮೋಸ ಮಾಡಿದೆ ಎಂದು ಆರೋಪಿಸಿದ ಸಿಸಿ ಪಾಟೀಲ್, ರೈತ ವಿರೋಧಿ ನೀತಿ ಅನುಸರಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಅಂತ ಎಚ್ಚರಿಕೆ ನೀಡಿದ್ದಾರೆ. ಇದು ಕುರುಡರ ಬಜೆಟ್ ಎಂದು ಆರೋಪಿಸಿದರು.

ಕೇಂದ್ರದ ವಿರುದ್ಧ ಟೀಕೆಗೆ ಸಿಸಿ ಪಾಟೀಲ್ ಕಿಡಿ

ರಾಜ್ಯದ ಇತಿಹಾಸದಲ್ಲಿ ಬಜೆಟ್ ವೇಳೆ ಅತೀ ಹೆಚ್ಚ ಬಾರಿ ಕೇಂದ್ರ ಸರ್ಕಾರ ವಿರುದ್ಧ ಟೀಕೆ ಮಾಡಿದ್ದು ಖಂಡನೀಯ. ಟೀಕೆ ಮಾಡಬೇಕಿದ್ದರೆ ಕೆಪಿಸಿಸಿ ಕಚೇರಿ ಬಳಸಿಕೊಳ್ಳಬೇಕಿತ್ತು. ಇಂತಹ ಬಜೆಟ್ ಮಂಡನೆಯಿಂದ ವಿಧಾನ ಮಂಡಲದ ಗೌರಕ್ಕೆ ಕುಂದು ಬಂದಿದೆ ಎಂದು ಸಿ.ಸಿ. ಪಾಟೀಲ ಕಿಡಿಕಾರಿದರು.

ಸಿದ್ದರಾಮಯ್ಯ ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿದ್ದಾರೆ. ಕೇಂದ್ರದ ವಿರುದ್ದ ಟೀಕೆ ಮಾಡಲು ಬೇರೆ ವೇದಿಕೆ ಬಳಸಿಕೊಳ್ಳುವುದು ಅವರಿಗೆ ಅರಿವಿಗೆ ಬರಬೇಕಿತ್ತು ಎಂದು ಮಾಜಿ ಸಚಿವರು ಟೀಕಿಸಿದರು. ತೆರಿಗೆ, ಶುಲ್ಕದ ಕುರಿತು ಮಾತನಾಡಿದ ಸಿಸಿ ಪಾಟೀಲ್, 8000 ಕೋಟಿ ಸಾಲ ಪಡೆಯಲು ಸರ್ಕಾರ ಇಚ್ಚಿಸಿದೆ. ಶುಲ್ಕ, ತೆರಿಗೆ ಹೆಚ್ಚಿಸಿದೆ. ಸಾಲ, ತೆರಿಗೆ ಮೂಲಕ ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸಿದರೂ ಇಲಾಖೆಗಳಿಗೆ ಅನುದಾನ ಹಂಚಿಕೆ ಕಡಿಮೆ ಮಾಡಿದೆ ಎಂದು ಆರೋಪಿಸಿದರು.

ಈಗಾಗಲೇ ಆರ್ಥಿಕ ವರ್ಷದ ಮೂರು ತಿಂಗಳು ಕಳೆದಿದೆ. ಇನ್ನೂ ಗ್ಯಾರಂಟಿ ಯೋಜನೆ ಜಾರಿ ಆಗುತ್ತಿಲ್ಲ. ಇನ್ನೂ ಮೂರು ತಿಂಗಳು ಈ ಯೋಜನೆ ಜಾರಿ ಆಗುವುದಿಲ್ಲ. ಜನರ ನಂಬಿಕೆಯನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಸಿಸಿ ಪಾಟೀಲ್ ಹೇಳಿದರು.

ಹತ್ಯೆ ಆರೋಪಿಗಳಿಗೆ ಕಾಂಗ್ರೆಸ್ ರಕ್ಷಣೆ

ಜೈನಮುನಿ ಹತ್ಯೆ ಕುರಿತು ಮಾತನಾಡಿದ ಸಿ.ಸಿ. ಪಾಟೀಲ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಇಂತಹ ಘಟನೆಗಳು ನಡೆಯುತ್ತವೆ. ಪರೇಶ ಮೇಸ್ತಾ, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲೂ ಕಾಂಗ್ರೆಸ್ ಪಕ್ಷ ಆರೋಪಿಗಳಿಗೆ ರಕ್ಷಣೆ ನೀಡಿದೆ. ಕೇರಳದಿಂದ ಆಗಮಿಸಿ ಹಂತಕರು ಹತ್ಯೆ ಮಾಡಿದ್ದು, ಪೊಲೀಸರು ಮೂಖವಿಸ್ಮಿತರಾಗಿದ್ದು ಜಗತ್ತೀಗೆ ತಿಳಿದಿದೆ ಎಂದರು.

ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರದ ಬಜೆಟ್​ಗಿಂತಲೂ ಶೇ.1 ರಷ್ಟು ಅನುದಾನ ಕಡಿಮೆ ಮಾಡಿದೆ. ಮೀನುಗಾರರ, ನೇಕಾರ, ಅಕ್ಕಸಾಲಿಗ, ಸಿಂಪಿಗರ ಮಕ್ಕಳಿಗೆ ಅನುಕೂಲ ಆಗುವ ಸಿಎಂ ವಿದ್ಯಾ ನಿಧಿ ಬಗ್ಗೆ ಬಜೆಟ್​​ನಲ್ಲಿ ಉಲ್ಲೇಖ ಇಲ್ಲ ಎಂದು ಆರೋಪಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Sun, 9 July 23