Karnataka Breaking Kannada News highlights: ‘ಅನ್ನಭಾಗ್ಯ’ ಯೋಜನೆಯ ನೇರ ನಗದು ವರ್ಗಾವಣೆಗೆ ಸಿಎಂ ಸಿದ್ಧರಾಮಯ್ಯ ಚಾಲನೆ

| Updated By: ಗಂಗಾಧರ​ ಬ. ಸಾಬೋಜಿ

Updated on:Jul 10, 2023 | 10:41 PM

Breaking News Today highlights Updates: ರಾಜ್ಯ ರಾಜಕೀಯ, ಮಳೆ ಸೇರಿದಂತೆ ರಾಜ್ಯದ ಪ್ರಮುಖ ಘಟನೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್​ ಮೂಲಕ ಪಡೆಯಿರಿ.

ಕಾಂಗ್ರೆಸ್(Congress) ಸರ್ಕಾರದ ಮೊದಲ ಅಧಿವೇಶನದಲ್ಲೇ ವಿಪಕ್ಷಗಳು ಸರ್ಕಾರದ ವಿರುದ್ಧ ಸಮರ ಸಾರಿವೆ. ಅದ್ರಲ್ಲೂ ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy) ಪೆನ್ ಡ್ರೈವ್ ಹಿಡಿದು ಸರ್ಕಾರದ ವಿರುದ್ಧ ವರ್ಗಾವಣೆ ಬಾಂಬ್ ಸಿಡಿಸಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ(Siddaramaiah) ತಮ್ಮ 14ನೇ ಬಜೆಟ್ ಮಂಡಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಹಾಗೂ ಇಂದಿನಿಂದ ‘ಅನ್ನಭಾಗ್ಯ’ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ. ಇನ್ನು ಮತ್ತೊಂದೆಡೆ ಜೈನಮುನಿ(Jain Muni Murder Case) ಹತ್ಯೆಯೂ ಸದನದಲ್ಲಿ ಪ್ರಸ್ತಾಪವಾಗಲಿದ್ದು, ಕಲಾಪ ಕಾವೇರುವ ಸಾಧ್ಯತೆ ಇದೆ. ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಘೋರ ಕೃತ್ಯ ಖಂಡಿಸಿ ಚಿಕ್ಕೋಡಿಯಲ್ಲಿ ಜೈನ ಸಮುದಾಯದಿಂದ ಮೌನ ಪ್ರತಿಭಟನೆ ನಡೆಯಲಿದೆ. ಜೊತೆಗೆ ರಾಜ್ಯದ ಹಲವು ಕಡೆ ಮುಂಗಾರು ಮಳೆ ಅಬ್ಬರ ಜೋರಾಗಿದೆ(Monsoon). ನದಿಗಳು ಉಕ್ಕಿ ಹರಿಯುತ್ತಿವೆ. ಮನೆ, ದೇಗುಲಗಳೇ ಜಲಾವೃತಗೊಂಡಿವೆ. ರಾಜ್ಯದ ಪ್ರಮುಖ ಸುದ್ದಿಗಳ ಇಂದಿನ ಲೇಟೆಸ್ಟ್​​ ಅಪ್ಡೆಟ್ಸ್​​ ಟಿವಿ9 ಕನ್ನಡ ಡಿಜಿಟಲ್​ನಲ್ಲಿ.

LIVE NEWS & UPDATES

The liveblog has ended.
  • 10 Jul 2023 09:27 PM (IST)

    Karnataka Breaking Kannada News Live: ಜೈನಮುನಿಗಳನ್ನು ಕಳೆದುಕೊಂಡಿದ್ದು ನಮ್ಮೆಲ್ಲರಿಗೂ ನೋವು ತಂದಿದೆ

    ಧಾರ್ಮಿಕ ಸಂಸ್ಥೆಗಳಿಗೆ ಸಂತಸದಿಂದ ಹೋಗಿ ದರ್ಶನ ಪಡೆದು ಬರುತ್ತೇವೆ. ಇಂದು ನಾನು ಬಂದಿದ್ದು ವಿಭಿನ್ನ ಸಂದರ್ಭ, ಇದಕ್ಕೆ ವಿಷಾದ ವ್ಯಕ್ತಪಡಿಸುವೆ ಎಂದು ನಂದಿಪರ್ವತ ಆಶ್ರಮದಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ್​ ಹೇಳಿದರು. ಜೈನಮುನಿಗಳನ್ನು ಕಳೆದುಕೊಂಡಿದ್ದು ನಮ್ಮೆಲ್ಲರಿಗೂ ನೋವು ತಂದಿದೆ ಎಂದರು.

  • 10 Jul 2023 08:16 PM (IST)

    Karnataka Breaking Kannada News Live: ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ನೇಮಕ

    ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ಅಧ್ಯಕ್ಷರು, ಸದಸ್ಯರ ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಆಯೋಗಕ್ಕೆ ಸೀಮಾ ನಿರ್ಣಯ ಕಾರ್ಯ ಪೂರ್ಣಗೊಳಿಸಿ ವರದಿ ನೀಡುವಂತೆ ನಾಲ್ಕು ವಾರಗಳ ಕಾಲ ರಾಜ್ಯ ಸರ್ಕಾರ ಗಡುವು ನೀಡಿದೆ.

  • 10 Jul 2023 07:54 PM (IST)

    Karnataka Breaking Kannada News Live: ರಾಜ್ಯದ ನೂತನ ಎಸ್ ಪಿಪಿಯಾಗಿ ಬಿಎ ಬೆಳ್ಳಿಯಪ್ಪ ನೇಮಕ

    ರಾಜ್ಯದ ನೂತನ ಎಸ್ ಪಿಪಿಯಾಗಿ ಬಿ.ಎ.ಬೆಳ್ಳಿಯಪ್ಪ ನೇಮಕ ಮಾಡಲಾಗಿದೆ. ರಾಜ್ಯ ಅಭಿಯೋಜಕ 2 – ವಿಜಯಕುಮಾರ್ ಮಜಗೆ, ಹೆಚ್ಚುವರಿ ಎಸ್ ಪಿಪಿಯಾಗಿ ಬಿ.ಎನ್.ಜಗದೀಶ್​ ಮತ್ತು ಕಿರಣ್ ಜವಳಿ, ವಿ.ಎಸ್.ಹೆಗ್ಡೆ ರಾಜಿನಾಮೆ‌ಯಿಂದ ತೆರವಾಗಿದ್ದ ರಾಜ್ಯ ಅಭಿಯೋಜಕರ ಸ್ಥಾನಕ್ಕೆ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

  • 10 Jul 2023 07:19 PM (IST)

    Karnataka Breaking Kannada News Live: ಹಂಪಿ ಸಾಮ್ರಾಜ್ಯದ ಇತಿಹಾಸದ ಮೆಲುಕು ಹಾಕಿದ ಸಚಿವ ಪ್ರಲ್ಹಾದ ಜೋಶಿ

    ವಿಜಯನಗರ: ಹಂಪಿಯ ಕಲೆ, ಸಾಂಸ್ಕೃತಿಕ ವೈಭವ ಅಂದಿನ ಕಾಲದಿಂದ ಇಂದಿನವರೆಗೂ ಪ್ರಸ್ತುತವಾಗಿದೆ. ಇದೊಂದು ಶ್ರೀಮಂತ ಸಾಮ್ರಾಜ್ಯ. ಐತಿಹಾಸಿಕ ಹಂಪಿಯಲ್ಲಿ ಜಿ.20 ಸಭೆ ನಡೆಯುತ್ತಿರೋದು ಹೆಮ್ಮೆಯ ವಿಷಯವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

  • 10 Jul 2023 07:15 PM (IST)

    Karnataka Breaking Kannada News Live: ನಾಳೆ ಬೆಳಗ್ಗೆ 11 ಗಂಟೆಗೆ ಪರಿಷತ್ ಕಲಾಪ

    ಪರಿಷತ್ ಕಲಾಪ ನಾಳೆ ಬೆಳಗ್ಗೆ ಹನ್ನೊಂದು ಗಂಟೆಗೆ ಮುಂದೂಡಿಕೆ.

  • 10 Jul 2023 06:58 PM (IST)

    Karnataka Breaking Kannada News Live: ಆಗಸ್ಟ್​ 16ರಿಂದ ಗೃಹಲಕ್ಷ್ಮೀ ಯೋಜನೆ ಜಾರಿ

    ಆಗಸ್ಟ್​ 16ರಿಂದ ಗೃಹಲಕ್ಷ್ಮೀ ಯೋಜನೆ ಜಾರಿಗೆ ಬರುತ್ತದೆ. ವಿರೋಧ ಪಕ್ಷದವರು ಅನ್ನಭಾಗ್ಯ ವಿಚಾರದಲ್ಲಿ ಟೀಕೆ ಮಾಡುತ್ತಾರೆ. ಅಕ್ಕಿ ಕೊಡದ ಕೇಂದ್ರ ಸರ್ಕಾರದ್ದು ದ್ವೇಷದ ರಾಜಕಾರಣ ಅಲ್ವಾ? ಕೇಂದ್ರದ ಅಕ್ಕಿಯನ್ನು ಈಗ ಯಾರೂ ಖರೀದಿ ಮಾಡಲು ಸಿದ್ಧರಿಲ್ಲ. ನಾವೇನು ಪುಕ್ಕಟೆಯಾಗಿ ಅಕ್ಕಿ ಕೇಳಿರಲಿಲ್ಲ  ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

  • 10 Jul 2023 06:26 PM (IST)

    Karnataka Breaking Kannada News Live: ಒಟ್ಟು 10 ಕೆಜಿ ಅಕ್ಕಿ ಕೊಡ್ತೇವೆ ಅಂತಾ ಹೇಳಿದ್ದೆವು

    ರಾಜ್ಯದ 1.28 ಕೋಟಿ ಕುಟುಂಬಕ್ಕೆ ಅನ್ನಭಾಗ್ಯ ಯೋಜನೆ ತಲುಪುತ್ತದೆ. ರಾಜ್ಯದ 4.42 ಕೋಟಿ ಜನರಿಗೆ ಉಚಿತವಾಗಿ ಅಕ್ಕಿ ಕೊಡುತ್ತಿದ್ದೇವೆ. ಅಂತ್ಯೋದಯ, BPL ಕಾರ್ಡ್​ದಾರರು ಸೇರಿ 4.42 ಕೋಟಿ ಜನರಿಗೆ ಅನುಕೂಲವಾಗಲಿದೆ. ನಾವು ಹೆಚ್ಚುವರಿಯಾಗಿ ತಲಾ 10 ಕೆಜಿ ಅಕ್ಕಿ ಕೊಡ್ತೀವಿ ಅಂತಾ ಹೇಳಿಲ್ಲ. ಒಟ್ಟು 10 ಕೆಜಿ ಅಕ್ಕಿ ಕೊಡ್ತೇವೆ ಅಂತಾ ಹೇಳಿದ್ದೆವು ಎಂದರು.

  • 10 Jul 2023 06:18 PM (IST)

    Karnataka Breaking Kannada News Live: ನಮ್ಮ 5 ಗ್ಯಾರಂಟಿಗಳಲ್ಲಿ ಪ್ರಮುಖವಾದದ್ದು ಅನ್ನಭಾಗ್ಯ ಯೋಜನೆ

    ‘ಅನ್ನಭಾಗ್ಯ’ ಯೋಜನೆಯ ನೇರ ನಗದು ವರ್ಗಾವಣೆಗೆ ಸಿಎಂ ಸಿದ್ಧರಾಮಯ್ಯ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಮ್ಮ 5 ಗ್ಯಾರಂಟಿಗಳಲ್ಲಿ ಪ್ರಮುಖವಾದದ್ದು ಅನ್ನಭಾಗ್ಯ ಯೋಜನೆ. ದೇಶದಲ್ಲಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದಿದ್ದು ಯುಪಿಎ ಸರ್ಕಾರ. ಮನಮೋಹನ್​ ಸಿಂಗ್ ನೇತೃತ್ವದ ಸರ್ಕಾರ ಈ ಕಾಯ್ದೆ ಜಾರಿ ತಂದಿದ್ದು. ರಾಜ್ಯದ 4.42 ಕೋಟಿ ಜನರಿಗೆ ಉಚಿತವಾಗಿ ಅಕ್ಕಿ ಕೊಡುತ್ತಿದ್ದೇವೆ. ಮೊದಲ ಸಂಪುಟದಲ್ಲೇ 5 ಗ್ಯಾರಂಟಿ ಜಾರಿಗೆ ತೀರ್ಮಾನ ಮಾಡಿದ್ದೆವು ಎಂದರು.

  • 10 Jul 2023 06:09 PM (IST)

    Karnataka Breaking Kannada News Live: ಬುಧವಾರ ಫ್ರೀಡಂಪಾರ್ಕ್​ನಲ್ಲಿ ಮೌನ ಪ್ರತಿಭಟನೆ

    ರಾಹುಲ್​ ಗಾಂಧಿ ಬೆಂಬಲಿಸಿ ಬುಧವಾರ ಫ್ರೀಡಂಪಾರ್ಕ್​ನಲ್ಲಿ ಮೌನ ಪ್ರತಿಭಟನೆ ಮಾಡಲಿದ್ದೇವೆ. ಸಿಎಂ ಸೇರಿ ಎಲ್ಲಾ ಶಾಸಕರು ಭಾಗಿಯಾಗಲಿದ್ದಾರೆ ಎಂದರು. ಎಲ್ಲ ವಿರೋಧ ಪಕ್ಷದವರು ರಾಹುಲ್‌ ಪರ ನಿಲ್ಲುತ್ತಿದ್ದೇವೆ ಎನ್ನುವ ಸಂದೇಶ ಕಳಿಸಬೇಕಿದೆ. ರಾಹುಲ್ ಕರ್ನಾಟಕದಲ್ಲಿ ಮಾಡಿದ್ದ ಭಾಷಣಕ್ಕೆ ಕೋರ್ಟ್ ತೀರ್ಪಿನ ಬಗ್ಗೆ ಮಾತಾಡುವುದಿಲ್ಲ.

  • 10 Jul 2023 05:52 PM (IST)

    Karnataka Breaking Kannada News Live: ರಾಹುಲ್ ಗಾಂಧಿ ಜನಪ್ರಿಯತೆಯನ್ನು ನೋಡಿ ಷಡ್ಯಂತ್ರ

    ರಾಹುಲ್ ಗಾಂಧಿ ಜನಪ್ರಿಯತೆಯನ್ನು ನೋಡಿ ಷಡ್ಯಂತ್ರ ನಡೆಯುತ್ತಿದೆ. ರಾಹುಲ್ ಪಾದಯಾತ್ರೆ ಮಾಡಿದ ಕ್ಷೇತ್ರಗಳಲ್ಲೆಲ್ಲ ಕಾಂಗ್ರೆಸ್ ಗೆದ್ದಿದೆ. ಹಾಗಾಗಿ ರಾಜಕೀಯವಾಗಿ ರಾಹುಲ್​ ಮುಗಿಸಬೇಕೆಂಬ ಷಡ್ಯಂತ್ರ ನಡೆಯುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

    ರಾಜಕೀಯವಾಗಿ ರಾಹುಲ್ ಗಾಂಧಿ​ ಮುಗಿಸಲು ಷಡ್ಯಂತ್ರ ನಡೀತಿದೆ ಎಂದ ಡಿಸಿಎಂ ಡಿಕೆ ಶಿವಕುಮಾರ್

  • 10 Jul 2023 05:22 PM (IST)

    Karnataka Breaking Kannada News Live: ಕಸ್ತೂರಿ ರಂಗನ್​ಗೆ ಲಘು ಹೃದಯಾಘಾತ

    ಬೆಂಗಳೂರು: ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ಅವರಿಗೆ ಕೊಲಂಬೊದಲ್ಲಿ ಇಂದು ಲಘು ಹೃದಯಾಘಾತ ಸಂಭವಿಸಿದೆ. ಸದ್ಯ ಕಸ್ತೂರಿ ರಂಗನ್ ಅವರನ್ನು ಏರ್​​ಲಿಫ್ಟ್ ಮೂಲಕ ಕೊಲಂಬೊದಿಂದ ಬೆಂಗಳೂರಿಗೆ ಕರೆತರಲಾಗುತ್ತಿದೆ.

    Kasturi Rangan: ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್​ಗೆ ಲಘು ಹೃದಯಾಘಾತ

  • 10 Jul 2023 04:46 PM (IST)

    Karnataka Breaking Kannada News Live: ಚಿಕ್ಕೋಡಿಯಲ್ಲಿ ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಮಹತ್ವದ ಸಭೆ

    ಬೆಳಗಾವಿ: ಹಿರೇಕೋಡಿಯ ಜೈನ ಮುನಿಗಳ ಬರ್ಬರ ಹತ್ಯೆ ಪ್ರಕರಣ ವಿಚಾರವಾಗಿ ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಗೃಹ ಸಚಿವ ಜಿ. ಪರಮೇಶ್ವರ ನೇತೃತ್ವದಲ್ಲಿ ಮಹತ್ವದ ಸಭೆ ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳು, ಜೈನ‌ ಸಮುದಾಯ ಮುಖಂಡರ, ಸ್ಥಳೀಯ ಶಾಸಕ ಗಣೇಶ ಹುಕ್ಕೇರಿ, ಕಾನೂನು ಮತ್ತು ‌ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ, ಉತ್ತರ ವಲಯ ಐಜಿಪಿ ವಿಕಾಸಕುಮಾರ್, ಬೆಳಗಾವಿ ಎಸ್ಪಿ ಡಾ. ಸಂಜೀವ್ ಪಾಟೀಲ್​ ಭಾಗಿ.

  • 10 Jul 2023 04:21 PM (IST)

    Karnataka Breaking Kannada News Live: ಅನ್ನಭಾಗ್ಯ ಯೋಜನೆ ಹತ್ತು ವರ್ಷ ಪೂರೈಕೆ

    ಬೆಂಗಳೂರು: ಕರ್ನಾಟಕದ ಯಾರೊಬ್ಬರೂ ಹಸಿದು ಮಲಗಬಾರದು ಎಂಬ ಸದಾಶಯದೊಂದಿಗೆ ಆರಂಭವಾದ ಕಾಂಗ್ರೆಸ್​ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಜಾರಿಗೆ ಬಂದು ಇದೀಗ 10 ವರ್ಷಗಳಾಗಿವೆ. ಬಡಕುಟುಂಬಗಳಿಗೆ ತಲಾ 5 ಕೆ.ಜಿ ಆಹಾರಧಾನ್ಯವನ್ನು ವಿತರಣೆ ಮಾಡುವ ಯೋಜನೆಯನ್ನು 10 ಜುಲೈ 2013 ರಂದು ಜಾರಿಗೊಳಿಸಿ, ನಾಡಿನ ಹಸಿದವರಿಗೆ ನೆಮ್ಮದಿಯ ಅನ್ನ ನೀಡಿದ್ದೆ ಎಂದು ಸಿಎಂ ಸಿದ್ಧರಾಮಯ್ಯ ಟ್ವೀಟ್​ ಮಾಡಿದ್ದಾರೆ.

  • 10 Jul 2023 03:57 PM (IST)

    Karnataka Breaking Kannada News Live: ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಬಸದಿಗೆ ಜಿ.ಪರಮೇಶ್ವರ್​ ಭೇಟಿ

    ಬೆಳಗಾವಿ: ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಹಲಗಾ ಗ್ರಾಮದ ಬಸದಿಗೆ ಗೃಹ ಸಚಿವ ಜಿ.ಪರಮೇಶ್ವರ್ ಇಂದು​ ಭೇಟಿ ನೀಡಿದರು. ಘಟನೆ ಬಗ್ಗೆ ಜೈನಮುನಿಗಳ ಜತೆ ಗೃಹಸಚಿವರು ಚರ್ಚೆ ಮಾಡಿದ್ದಾರೆ. ಈ ವೇಳೆ ಜೈನಮುನಿ ಸಿದ್ದಸೇನ ಮಹಾರಾಜರು ಮಾತನಾಡಿದ್ದು, ಈ ಘಟನೆಯಿಂದ ಜೈನ ಸಮುದಾಯದ ಜನರಲ್ಲಿ ರೋಷ ಬಂದಿದೆ ಎಂದರು.

    ಜೈನಮುನಿ ಕಾಮಕುಮಾರನಂದಿ ಮಹಾರಾಜರ ಹತ್ಯೆ: ಸ್ಥಳಕ್ಕೆ ಗೃಹ ಸಚಿವ ಡಾ ಜಿ ಪರಮೇಶ್ವರ್​ ಭೇಟಿ

  • 10 Jul 2023 03:20 PM (IST)

    Karnataka Breaking Kannada News Live: ಜೈನ ಮುನಿಗಳ ಹತ್ಯೆ ಖಂಡಿಸಿ ಪ್ರತಿಭಟನೆ

    ಶಿವಮೊಗ್ಗ: ಜೈನಮುನಿ ಕಾಮಕುಮಾರನಂದಿ ಹತ್ಯೆ ಖಂಡಿಸಿ ಸಾಗರ ಪಟ್ಟಣದ ಎಸಿ ಕಚೇರಿ ಎದುರು ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಜೈನ ಮುನಿಗಳನ್ನು ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ. ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಪ್ರಕರಣದ ಸೂಕ್ತ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

  • 10 Jul 2023 03:14 PM (IST)

    Karnataka Assembly Session Live: ಐಎಸ್ಐ ಉಗ್ರರು ಮಾಡುವುದಕ್ಕಿಂತ ಅತ್ಯಂತ ಹೇಯ ಕೃತ್ಯ

    ವಿಧಾನಸಭೆ: ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸದ್ಯ ರಾಜಕೀಯ ತಿರುವು ಪಡೆದುಕೊಂಡಿದೆ. ವಿಧಾನಸಭೆಯಲ್ಲಿಯೂ ಈ ಬಗ್ಗೆ ಚರ್ಚೆಗಳು ಆಗುತ್ತಿವೆ. ಶೂನ್ಯವೇಳೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಕರಣ ಕುರಿತಾಗಿ ಪ್ರಸ್ತಾಪ ಮಾಡಿದ್ದು, ಜೈನಮುನಿ ಮಹಾರಾಜರನ್ನು ವ್ಯವಸ್ಥಿತವಾಗಿ, ಅತ್ಯಂತ ಹತ್ತಿರದವರೇ ಕೊಲೆ ಮಾಡಿದ್ದಾರೆ. ಐಎಸ್ಐ ಉಗ್ರರು ಮಾಡುವುದಕ್ಕಿಂತ ಅತ್ಯಂತ ಹೇಯ ಕೃತ್ಯವೆಸಗಿದ್ದಾರೆ ಎಂದು ಹೇಳಿದರು.

    ಹಣಕಾಸಿನ ವ್ಯವಹಾರವೇ ಆಗಿದ್ದರೂ ಮುನಿಗಳ ಹತ್ಯೆ ಏಕೆ ಆಯ್ತು: ಮಾಜಿ ಸಿಎಂ ಬೊಮ್ಮಾಯಿ ಪ್ರಶ್ನೆ

  • 10 Jul 2023 02:32 PM (IST)

    Karnataka Assembly Session Live: ತನಿಖೆ ಹಂತದಲ್ಲಿ ದಿಕ್ಕು ತಪ್ಪಿಸುವುದು ಬೇಡ-ಲಕ್ಷ್ಮಣ ಸವದಿ

    ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸರ್ಕಾರಕ್ಕೆ ವಿಧಾನಸಭೆಯಲ್ಲಿ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಆಗ್ರಹಿಸಿದ್ದಾರೆ. ಈ ವೇಳೆ ಹಣದ ವ್ಯವಹಾರದ ಬಗ್ಗೆಯೂ ತನಿಖೆ ಆಗಲಿ ಎಂದು ಅಭಯ್ ಪಾಟೀಲ್ ಹೇಳಿದ್ದು, ತನಿಖೆ ಹಂತದಲ್ಲಿ ದಿಕ್ಕು ತಪ್ಪಿಸುವುದು ಬೇಡ. ರಾಜಕಾರಣ ಬೆರೆಸುವುದು ಬೇಡ ಎಂದರು.

  • 10 Jul 2023 01:33 PM (IST)

    Karnataka Assembly Session Live: ಜೈನಮುನಿ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ -ಅಭಯ್ ಪಾಟೀಲ್

    ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣವನ್ನು ಬಿಜೆಪಿ ಸದಸ್ಯ ಅಭಯ್ ಪಾಟೀಲ್ ಸಂಬಂಧಿಸಿ ವಿಧಾನಸೌಧದಲ್ಲಿ ಪ್ರಸ್ತಾಪಿಸಿದ್ದು ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ. ಜೈನಮುನಿಗಳ ಕೊಲೆ ಹಲವು ಸಂಶಯಗಳಿಗೆ ಕಾರಣವಾಗಿದೆ. ತನಿಖೆ ಪೂರ್ಣವಾಗದೆ ಮಾಹಿತಿ ಸೋರಿಕೆ ಆಗಿದೆ. ಪ್ರಕರಣದ ಮೊದಲನೇ ಆರೋಪಿ ಹೆಸರನ್ನು ಮಾತ್ರ ಹೇಳುತ್ತಿದ್ದಾರೆ. ಎರಡನೇ ಆರೋಪಿಯ ಹೆಸರು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ ಎಂದರು.

  • 10 Jul 2023 01:22 PM (IST)

    Karnataka Assembly Session Live: ವಿಧಾನಸಭೆಯಲ್ಲಿ ಅಮರನಾಥ ಯಾತ್ರಿಗಳ ಸುರಕ್ಷತೆ ಬಗ್ಗೆ ಪ್ರಸ್ತಾಪ

    ವಿಧಾನಸಭೆಯಲ್ಲಿ ಅಮರನಾಥ ಯಾತ್ರಿಗಳ ಸುರಕ್ಷತೆ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರು ಸುರಕ್ಷಿತವಾಗಿದ್ದಾರೆ ಎಂದು ಕನ್ನಡಿಗರ ಸುರಕ್ಷತೆ ಬಗ್ಗೆ ಮಾಗಡಿ ಶಾಸಕ ಬಾಲಕೃಷ್ಣ ಮಾಹಿತಿ ನೀಡಿದರು. ಬುಧವಾರದವರೆಗೂ ಆರ್ಮಿ ಕ್ಯಾಂಪ್​ನಲ್ಲಿ ಇರಲು ಅವಕಾಶವಿದೆ. ಬುಧವಾರ ರಸ್ತೆಯಲ್ಲಿ ಬಿದ್ದಿರುವ ಮಣ್ಣು ತೆರವು ಕಾರ್ಯ ನಡೆಯಲಿದೆ. ರಸ್ತೆ ತೆರವು ಕಾರ್ಯದ ಬಗ್ಗೆ ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಸಂಬಂಧಿಕರು ಮಾಹಿತಿ ನೀಡಿದರೆ ಯಾತ್ರಾರ್ಥಿಗಳ ಸಂಪರ್ಕಕ್ಕೆ ಪ್ರಯತ್ನ ನಡೆಯುತ್ತೆ. ಈಗಾಗಲೇ ನಮ್ಮ ರಾಜ್ಯದ 4 ಅಧಿಕಾರಿಗಳ ತಂಡಗಳನ್ನು ಕಳಿಸಲಾಗಿದೆ ಎಂದು ಸದನದಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಮಾಗಡಿ ಶಾಸಕ ಬಾಲಕೃಷ್ಣ ಮಾಹಿತಿ ನೀಡಿದರು.

  • 10 Jul 2023 01:19 PM (IST)

    Karnataka Breaking Kannada News Live: ಜೈನಮುನಿ ಹತ್ಯೆ ಕೇಸನ್ನು ಸಿಬಿಐಗೆ ವಹಿಸಿ -ಮಹಾಂತೇಶ ಕವಟಗಿಮಠ

    ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಮಹಾಂತೇಶ ಕವಟಗಿಮಠ ಆಗ್ರಹಿಸಿದ್ದಾರೆ. ಜೈನಮುನಿ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಸ್ವಾಮೀಜಿಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯ ಮಾಡುತ್ತೇವೆ. ಸರ್ವಪಕ್ಷ ಸಭೆ ಕರೆದು ಸ್ವಾಮೀಜಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಚಿಕ್ಕೋಡಿಯಲ್ಲಿ ಮಾಜಿ MLC ಮಹಾಂತೇಶ ಕವಟಗಿಮಠ ಹೇಳಿದ್ರು.

  • 10 Jul 2023 01:11 PM (IST)

    Karnataka Assembly Session Live: ವಿಧಾನಸೌಧ ಸುತ್ತಮುತ್ತ ಸೂಕ್ತ ಭದ್ರತೆ

    ಬಜೆಟ್ ಮಂಡನೆ ವೇಳೆ ಅಪರಿಚಿತ ವಿಧಾನಸಭೆ ಪ್ರವೇಶಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ವಿಧಾನಸಭೆಯಲ್ಲಿ ಸ್ಪೀಕರ್​ ಯು.ಟಿ.ಖಾದರ್​ ಸ್ಪಷ್ಟನೆ ನೀಡಿದ್ದಾರೆ. ವಿಧಾನಸಭೆ ಪ್ರವೇಶದ ಸಂದರ್ಭದಲ್ಲಿ ಪಾಸ್ ತೋರಿಸಬೇಕು. ವಿಧಾನಸೌಧ ಸುತ್ತಮುತ್ತ ಸೂಕ್ತ ಭದ್ರತೆ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದರು. ಈ ವೇಳೆ ಫೇಸ್ ಡಿಟೆಕ್ಟರ್ ವ್ಯವಸ್ಥೆ ಕಲ್ಪಿಸಲು ಬಸವರಾಜ ರಾಯರೆಡ್ಡಿ ಸಲಹೆ ನೀಡಿದರು. ಇದೇ ವೇಳೆ ಶಾಸಕರಿಗೆ ಐಡಿ ಕಾರ್ಡ್ ಸಿಕ್ಕಿಲ್ಲ ಎಂದು ಶಾಸಕ ಭರತ್ ಶೆಟ್ಟಿ ಸ್ಪೀಕರ್ ಗಮನಕ್ಕೆ ತಂದರು.

  • 10 Jul 2023 01:07 PM (IST)

    Karnataka Breaking Kannada News Live: ಕೋಲಾರದ ಹೊರವಲಯದಲ್ಲಿ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ

    ಕೋಲಾರ ಹೊರವಲಯದ ಎಪಿಎಂಸಿ ಮಾರುಕಟ್ಟೆ ಬಳಿ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದೆ. ಶಾಹೀದ್ ನಗರ ನಿವಾಸಿ ಅಮೀರ್ ಖಾನ್ ಅಲಿಯಾಸ್​ ತನು ಹತ್ಯೆಯಾದ ವ್ಯಕ್ತಿ. ಸ್ಥಳಕ್ಕೆ ಕೋಲಾರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • 10 Jul 2023 01:05 PM (IST)

    Karnataka Breaking Kannada News Live: ಪತ್ನಿ ತಲೆಗೆ ಕೊಡಲಿಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದ ಪತಿ

    ಹುಬ್ಬಳ್ಳಿಯ ಆನಂದನಗರದ ಬ್ಯಾಹಟ್ಟಿ ಪ್ರದೇಶದಲ್ಲಿ ಪತ್ನಿ ತಲೆಗೆ ಕೊಡಲಿಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ಮಂಜುಳಾ ಕೊಲೆಯಾದ ಮಹಿಳೆ. ಪತ್ನಿ ಕೊಂದು ಪತಿ ಭೀಮಪ್ಪ ಮುತ್ತಲಗಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿ ಕೊಂದು ಪೊಲೀಸರಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ದಕ್ಷಿಣ ಉಪ ವಿಭಾಗದ ಎಸಿಪಿ ಆರ್.ಕೆ.ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • 10 Jul 2023 12:59 PM (IST)

    Karnataka Assembly Session Live: ಸದನದಲ್ಲಿ ಜೈನ ಮುನಿ ಹತ್ಯೆ ಪ್ರಕರಣ ಪ್ರಸ್ತಾಪಿಸಿದ ಬೊಮ್ಮಾಯಿ

    ಜೈನ ಮುನಿ ಹತ್ಯೆ ಪ್ರಕರಣ ಸದನದಲ್ಲಿ ಪ್ರಸ್ತಾಪಿಸಿದ ಮಾಜಿ ಸಿಎಂ ಬೊಮ್ಮಾಯಿ. ಬೊಮ್ಮಾಯಿ ಪ್ರಸ್ತಾಪಕ್ಕೆ ಸ್ಪೀಕರ್ ಖಾದರ್ ಉತ್ತರ.

  • 10 Jul 2023 12:29 PM (IST)

    Karnataka Assembly Session Live: ಬೈಂದೂರಿನಲ್ಲಿ ಪಶುವೈದ್ಯರ ಕೊರತೆ ಬಗ್ಗೆ ಶಾಸಕ ಗುರುರಾಜ್ ಪ್ರಸ್ತಾಪ

    ಬೈಂದೂರಿನಲ್ಲಿ ಪಶುವೈದ್ಯರ ಕೊರತೆ ಬಗ್ಗೆ ವಿಧಾನಸಭೆಯಲ್ಲಿ ಬೈಂದೂರು ಶಾಸಕ ಗುರುರಾಜ್​ ಗಂಟಿಹೊಳೆ ಪ್ರಸ್ತಾಪ ಮಾಡಿದರು. ನಮ್ಮ ಕ್ಷೇತ್ರದ 83 ಸಾವಿರ ಜಾನುವಾರುಗಳಿಗೆ 2 ಪಶು ವೈದ್ಯರಿದ್ದಾರೆ. ಸರ್ಕಾರದ ಉತ್ತರ ನೋಡಿ ನನಗೆ ತಲೆಬಿಸಿಯಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಪಶುಸಂಗೋಪನಾ ಸಚಿವ ವೆಂಕಟೇಶ್ ಉತ್ತರಿಸಿದ್ದು ಡಿಸೆಂಬರ್​ ಒಳಗೆ ಅಗತ್ಯ ಪಶುವೈದ್ಯರ ನೇಮಕ ಮಾಡಲಾಗುವುದು. ಶೀಘ್ರದಲ್ಲೇ 200 ಪಶು ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳುತ್ತೇವೆ. ಹೆಚ್ಚುವರಿ ಪಶುವೈದ್ಯರ ವರ್ಗಾವಣೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಕೊಟ್ಟರು. ಆಗ ನಮ್ಮ ಕಡೆಯೂ ಪಶುವೈದ್ಯರ ಕೊರತೆ ಇದೆ, ಗಮನಹರಿಸಿ ಎಂದು ಸ್ಪೀಕರ್ ಮನವಿ ಮಾಡಿದ್ರು.

  • 10 Jul 2023 12:22 PM (IST)

    Karnataka Assembly Session Live: ಪರಶುರಾಂಪುರವನ್ನು ತಾಲೂಕು ಕೇಂದ್ರ ಮಾಡುವಂತೆ ಶಾಸಕ ಟಿ.ರಘುಮೂರ್ತಿ ಮನವಿ

    ಪರಶುರಾಂಪುರವನ್ನು ತಾಲೂಕು ಕೇಂದ್ರ ಮಾಡುವಂತೆ ವಿಧಾನಸಭೆಯಲ್ಲಿ ಚಳ್ಳಕರೆ ಶಾಸಕ ಟಿ.ರಘುಮೂರ್ತಿ ಮನವಿ ಮಾಡಿದ್ದಾರೆ. ಈ ಅವಧಿಯಲ್ಲೇ ಪರಶುರಾಂಪುರವನ್ನು ತಾಲೂಕು ಮಾಡಬೇಕು. ಇಲ್ಲದಿದ್ರೆ 2028ರ ಬಳಿಕ ರಾಜಕೀಯದಲ್ಲಿ ಇರಲ್ಲ ಎಂದಿದ್ದಾರೆ. ಇದಕ್ಕೆ ಕಂದಾಯ ಸಚಿವ ಕೃಷ್ಣಭೈರೇಗೌಡ ಪರಶುರಾಂಪುರ ತಾಲೂಕು ಕೇಂದ್ರ ಮಾಡುವ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿ ಭರವಸೆ ನೀಡಿದರು.

  • 10 Jul 2023 12:19 PM (IST)

    Karnataka Breaking Kannada News Live: ಸಂತೆಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ-66ರ ಸರ್ವಿಸ್ ರಸ್ತೆ ಕುಸಿತ

    ಉಡುಪಿ ಜಿಲ್ಲೆಯಲ್ಲಿ ಮಳೆ ನಿಂತರೂ ಮಳೆಯಿಂದ ಭಾರೀ ಅವಾಂತರಗಳು ಸಂಭವಿಸುತ್ತಲೇ ಇದೆ. ಸಂತೆಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ-66ರ ಸರ್ವಿಸ್ ರಸ್ತೆ ಕುಸಿದಿದೆ. ಐದಾರು ದಿನಗಳಿಂದ ಸುರಿದ ಮಳೆಗೆ ಮಣ್ಣು ಸಡಿಲಗೊಂಡಿದ್ದು ಬಹುಮಹಡಿ ಕಟ್ಟಡದ ಮುಂದಿನ ಸರ್ವಿಸ್ ರಸ್ತೆ ಕುಸಿದಿದೆ. ಪಾದೆ ಕಲ್ಲು ಸಿಕ್ಕ ಪರಿಣಾಮ ರಸ್ತೆ ಕಾಮಗಾರಿ ಮೊಟಕುಗೊಂಡಿತ್ತು.

  • 10 Jul 2023 12:16 PM (IST)

    Karnataka Breaking Kannada News Live: ಕೊಪ್ಪಳ ನಗರದಲ್ಲಿ ಜೈನ ಸಮುದಾಯದಿಂದ ಮೌನ ಪ್ರತಿಭಟನೆ

    ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೊಪ್ಪಳ ನಗರದಲ್ಲಿ ಜೈನ ಸಮುದಾಯದಿಂದ ಮೌನ ಪ್ರತಿಭಟನೆ ನಡೆಯುತ್ತಿದೆ. ಕೊಪ್ಪಳದ ಅಶೋಕ ವೃತ್ತದಲ್ಲಿ ಸಮುದಾಯದ ಜನರು, ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಪ್ಪು ಪಟ್ಟಿ ಧರಿಸಿ ಡಿಸಿ ಕಚೇರಿವರೆಗೆ ತೆರಳಿ ಮನವಿ ಸಲ್ಲಿಸಿದ್ದಾರೆ.

  • 10 Jul 2023 12:08 PM (IST)

    Karnataka Breaking Kannada News Live: ಪವಿತ್ರ ಕ್ಷೇತ್ರ ಭಾಗಮಂಡಲ ಪಟ್ಟಣ ಸಂಪೂರ್ಣ ಕೆಸರುಮಯ

    ಕೊಡಗು ಜಿಲ್ಲೆಯಲ್ಲಿ ಮಳೆ ಕಡಿಮೆಯಾದ್ರೂ ಅವಾಂತರ ಮಾತ್ರ ನಿಂತಿಲ್ಲ. ಪವಿತ್ರ ಕ್ಷೇತ್ರ ಭಾಗಮಂಡಲ ಪಟ್ಟಣ ಸಂಪೂರ್ಣ ಕೆಸರುಮಯವಾಗಿದೆ. ಭಾಗಮಂಡಲ ಪಟ್ಟಣದಲ್ಲಿ ಪ್ರವಾಹ ಇಳಿದ ಹಿನ್ನೆಲೆ ರಸ್ತೆಗಳು ಕೆಸರುಮಯವಾಗಿದ್ದು ವಾಹನ ಸವಾರರು, ಗ್ರಾಮಸ್ಥರು, ಪ್ರವಾಸಿಗರು ಪರದಾಡುವಂತಾಗಿದೆ. ಭಾಗಮಂಡಲ‌ದಲ್ಲಿ ಅಪೂರ್ಣ ಫ್ಲೈಓವರ್​ ನಿರ್ಮಾಣದಿಂದ ಎಡವಟ್ಟು.

  • 10 Jul 2023 11:46 AM (IST)

    Karnataka Assembly Session Live: ಕಲಪಾ ಆರಂಭವಾಗ್ತಿದ್ದಂತೆ ಶರಣಗೌಡ ಕಂದಕೂರ್​​ಗೆ ಸ್ಪೀಕರ್ ಕ್ಲಾಸ್

    ಕಲಾಪ ಆರಂಭವಾಗುತ್ತಿದ್ದಂತಯೇ ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರ್​ಗೆ ಸ್ಪೀಕರ್ ಯುಟಿ ಖಾದರ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಭಿತ್ತಿ ಪತ್ರ ತೆಗೆದುಕೊಂಡು ಸದನದಲ್ಲಿ ಹಾಜರಾಗಿದ್ದ ಶರಣಗೌಡ ಕಂದಕೂರ್ ಅವರನ್ನು ನೋಡುತ್ತಿದ್ದಂತೆ, ಮತ ಪಡೆಯುವ ಲೆಕ್ಕಾಚಾರ, ಬಿಟ್ಟಿ ಪ್ರಚಾರ ಪಡೆಯುವ ಲೆಕ್ಕಾಚಾರ ಹಾಕಿಕೊಂಡು ಈ ರೀತಿ ಭಿತ್ತಿಪತ್ರ ಸದನದಲ್ಲಿ ತೋರಿಸುವ ಅವಶ್ಯಕತೆ ಇಲ್ಲ, ನಾನು ಕೂಡಾ ಶಾಸಕ ಆಗಿ ಬಂದವನು ಎಂದು ಸ್ಪೀಕರ್ ಕ್ಲಾಸ್ ತೆಗೆದುಕೊಂಡರು. ವಿಪಕ್ಷ ಬಿಜೆಪಿ ಸದಸ್ಯರು ಸ್ಪೀಕರ್ ಮಾತಿಗೆ ಲಘು ಆಕ್ಷೇಪ ವ್ಯಕ್ತಪಡಿಸಿದರು.

  • 10 Jul 2023 11:43 AM (IST)

    Karnataka Assembly Session Live: ವಿಧಾನಸಭಾ, ವಿಧಾನಪರಿಷತ್​​​ ಕಲಾಪ ಆರಂಭ

    ಉಭಯ ಸದನಗಳಲ್ಲಿ ಕಲಾಪ ಆರಂಭವಾಗಿದೆ. ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಮಧುಮಾದೇಗೌಡ ಪ್ರಶ್ನೆ ಕೇಳಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಎಷ್ಟು ಕೋರ್ಸ್ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಯಾವ ತರಗತಿಗೆ ಯಾವ ಪರೀಕ್ಷೆಯನ್ನ ನಡೆಸಲಾಗುತ್ತಿದೆ. ಇದಕ್ಕೆ ಸಚಿವ ಡಾ ಸುಧಾಕರ್ ಉತ್ತರ ನೀಡಿದ್ದು, ಕೆಎಸ್ಓ​ಯು ನಡಿ ವಾರ್ಷಿಕ ಪರೀಕ್ಷೆ ನಡೆಸುವುದನ್ನು ಮುಂದುವರೆಸಿದೆ. ಕೆಲವು ಸೆಮಿಸ್ಟರ್ ಪರೀಕ್ಷೆ ಇದೆ. ದೂರ ಶಿಕ್ಷಣಕ್ಕೂ, ಕಾಲೇಜು ಶಿಕ್ಷಣಕ್ಕೂ ಸಮಾನವಾದ ಸ್ಥಾನ ಮಾನ ಸಿಗಬೇಕು ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.

  • 10 Jul 2023 11:38 AM (IST)

    Karnataka Breaking Kannada News Live: ಸ್ವಾಮೀಜಿ ನಾಲ್ಕು ಬೇಡಿಕೆ ಇಟ್ಟಿದ್ದಾರೆ, ಅದಕ್ಕೆ ನಾವು ಸ್ಪಂದಿಸುತ್ತೇವೆ -ಗೃಹ ಸಚಿವ ಪರಮೇಶ್ವರ್

    ಸ್ವಾಮೀಜಿ ನಾಲ್ಕು ಬೇಡಿಕೆ ಇಟ್ಟಿದ್ದಾರೆ. ಜೈನ ಸ್ವಾಮೀಜಿಗಳ ಯಾತ್ರೆ ವೇಳೆ ರಕ್ಷಣೆ ಕೊಡಬೇಕು ಎಂದು ತಿಳಿಸಿದ್ದಾರೆ. ಜೈನ ಸಮುದಾಯದ ಸಂಘ ಸಂಸ್ಥೆಗಳ ಲಿಖಿತ ರೂಪದಲ್ಲಿ ತಿಳಿಸಿದರೇ ನಾವು ರಕ್ಷಣೆ ಕೊಡುತ್ತೇವೆ. ಅವರು ತಂಗೋ ಜಾಗ ಅಧಿಕೃತ ಆಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಜೈನ ಸ್ವಾಮೀಜಿ ಶಾಲಾ ಕಾಲೇಜುಗಳಲ್ಲಿ ಉಳಿದುಕೊಳ್ಳುತ್ತಾರೆ. ಈ ವಿಚಾರವಾಗಿ ನಾನು ಮಧು ಬಂಗಾರಪ್ಪ ಜೊತೆ ಮಾತಾಡುತ್ತೇನೆ. ಜೈನ ಮಂಡಳಿ ಮಾಡಬೇಕು ಎಂದು ಹೇಳಿದ್ದಾರೆ. ಈಗಾಗಲೇ ಹಿಂದೂಳಿದ ವರ್ಗಗಳ ನಿಮಗ ಮಂಡಳಿ ಇದೆ. ಮುಖ್ಯಮಂತ್ರಿ ಗಮನಕ್ಕೆ ತಂದು ಜೈನ ಸಮುದಾಯದ ಮಂಡಳಿ ಮಾಡೋಕೆ ಕ್ರಮ ಕೈಗೊಳ್ಳುತ್ತೇವೆ. ಬಜೆಟ್ ಮೊದಲೆ ಆಗಿದ್ದರೇ ನಾವು ಪ್ರಕಟಣೆ ಮಾಡುತ್ತಿದ್ವಿ. ಜೈನ ಮಂದಿರಗಳಿಗೆ ರಕ್ಷಣೆ ಕೊಡಬೇಕು ಎಂದಿದ್ದಾರೆ. ನಾವು ಜೈನ ಮಂದಿರಕ್ಕೆ ರಕ್ಷಣೆ ಕೊಡುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.

  • 10 Jul 2023 11:35 AM (IST)

    Karnataka Breaking Kannada News Live: ಕೆಆರ್​ಎಸ್​​ ಜಲಾಶಯ ನೀರಿನ ಮಟ್ಟ 86 ಅಡಿಗೆ ಏರಿಕೆ

    ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್ ಡ್ಯಾಂ ಇಂದಿನ ನೀರಿನ ಮಟ್ಟ 86.26 ಅಡಿ ಏರಿಕೆಯಾಗಿದೆ. ಕೆಆರ್​ಎಸ್ ಡ್ಯಾಂನ ಗರಿಷ್ಠ ನೀರಿನ ಮಟ್ಟ 124.80 ಅಡಿ. ಒಳಹರಿವು 11.029 ಕ್ಯೂಸೆಕ್, ಹೊರಹರಿವು 324 ಕ್ಯೂಸೆಕ್

  • 10 Jul 2023 11:17 AM (IST)

    Karnataka Breaking Kannada News Live: ಭದ್ರತಾ ಪರಿಶೀಲನೆ ವೇಳೆ ಚಾಕು ಪತ್ತೆ

    ಬೆಂಗಳೂರು: ಇನ್ನೇನು ಕೆಲವೆ ಕ್ಷಣದಲ್ಲಿ ಅಧಿವೇಶನ ಆರಂಭವಾಗಲಿದ್ದು, ಈ ಹಿನ್ನೆಲೆ ಪೊಲೀಸರು ಭದ್ರತಾ ಪರಿಶೀಲನೆ ನಡೆಸಿದ್ದಾರೆ. ವಿಧಾನಸೌಧದ ಪೂರ್ವ ಗೇಟ್ ಬಳಿ ಭದ್ರತಾ ಪರಿಶೀಲನೆ ವೇಳೆ ಮಹಿಳೆಯ ಒಬ್ಬರ ಬ್ಯಾಗ್​​ಲ್ಲಿ ಚಾಕು ಪತ್ತೆಯಾಗಿದೆ. ಈ ಹಿನ್ನೆಲೆ ಪೊಲೀಸರು ಮಹಿಳೆಯನ್ನು ಒಳಗೆ ಬಿಡದೆ ವಾಪಸ್ ಕಳುಹಿಸಿದ್ದಾರೆ.

  • 10 Jul 2023 10:59 AM (IST)

    Karnataka Breaking Kannada News Live: ದೇಶಾದ್ಯಂತ ಬುಧವಾರ ಕಾಂಗ್ರೆಸ್ ನಾಯಕರ ಮೌನ ಪ್ರತಿಭಟನೆ

    ರಾಹುಲ್ ಗಾಂಧಿ​ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ ವಿಚಾರಕ್ಕೆ ಸಂಬಂಧಿಸಿ ಬುಧವಾರ ಬೆಳಗ್ಗೆ 10ಕ್ಕೆ ಕಾಂಗ್ರೆಸ್ ನಾಯಕರು ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಕಾಂಗ್ರೆಸ್​​ ನಾಯಕರು ದೇಶಾದ್ಯಂತ ಮೌನ ಪ್ರತಿಭಟನೆ ನಡೆಸಲಿದ್ದಾರೆ. ರಾಜ್ಯದ ಜಿಲ್ಲಾ ಕೇಂದ್ರಗಳಲ್ಲೂ ‘ಕೈ’ ನಾಯಕರಿಂದ ಮೌನ ಪ್ರತಿಭಟನೆ ನಡೆಯಲಿದೆ. ಗಾಂಧಿ ಪ್ರತಿಮೆ ಅಥವಾ ಸ್ವಾತಂತ್ರ್ಯ ಹೋರಾಟಗಾರ ಪ್ರತಿಮೆ ಬಳಿ ಧರಣಿ ನಡೆಸಲಿದ್ದಾರೆ.

  • 10 Jul 2023 10:49 AM (IST)

    Karnataka Breaking Kannada News Live: ಉಪವಾಸ ಸತ್ಯಾಗ್ರಹ ನಿರ್ಧಾರ ವಾಪಸ್​ಗೆ ಜೈನಮುನಿ ಗುಣಧರನಂದಿಶ್ರೀ ನಿರ್ಧಾರ

    ಜೈನಮುನಿ ಕಾಮಕುಮಾರನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉಪವಾಸ ಸತ್ಯಾಗ್ರಹ ನಿರ್ಧಾರ ವಾಪಸ್​ ತೆಗೆದುಕೊಳ್ಳಲು ಜೈನಮುನಿ ಗುಣಧರನಂದಿಶ್ರೀ ನಿರ್ಧರಿಸಿದ್ದಾರೆ. ಸಚಿವ ಪರಮೇಶ್ವರ್ ಭೇಟಿ ಬಳಿಕ ಜೈನಮುನಿ ಗುಣಧರನಂದಿಶ್ರೀ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ.

  • 10 Jul 2023 10:44 AM (IST)

    Karnataka Breaking Kannada News Live: ತಾಯಿ ಚಾಮುಂಡೇಶ್ವರಿಗೆ ಮೈಸೂರು ರಾಜವಂಶಸ್ಥರಿಂದ ವಿಶೇಷ ಪೂಜೆ

    ಇಂದು ಅಧಿದೇವತೆ ತಾಯಿ ಚಾಮುಂಡೇಶ್ವರಿ ವರ್ಧಂತಿ ಹಿನ್ನೆಲೆ ತಾಯಿ ಚಾಮುಂಡೇಶ್ವರಿಗೆ ಮೈಸೂರು ರಾಜವಂಶಸ್ಥರಿಂದ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಯದುವಂಶದ ಪ್ರಮೋದದೇವಿ ಒಡೆಯರ್, ಯದುವೀರ ಕೃಷ್ಣದತ್ತ, ತ್ರಿಷಿಕಾ ಕುಮಾರಿ, ಆದ್ಯವೀರ ಹಾಗೂ ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ.

  • 10 Jul 2023 10:43 AM (IST)

    Karnataka Breaking Kannada News Live: ಆಲದಕೆರೆ ಅರಣ್ಯ ಪ್ರದೇಶದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಸಾವು

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿಜಿ ಪಾಳ್ಯ ಸಮೀಪದ ಆಲದಕೆರೆ ಅರಣ್ಯ ಪ್ರದೇಶದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ. ಪೊರಕೆ ಕಡ್ಡಿ ಸಂಗ್ರಹಕ್ಕೆ ಪುತ್ರ ಚಂದ್ರು ಜೊತೆ ಹೋಗಿದ್ದ ಪ್ರಭುಲಿಂಗಸ್ವಾಮಿ ಮೇಲೆ ಕಾಡಾನೆ ದಾಳಿ ಮಾಡಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • 10 Jul 2023 10:39 AM (IST)

    Karnataka Breaking Kannada News Live: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಟ್ವೀಟ್ ಟಾಂಗ್

    ಇಂದಿನಿಂದ 3ನೇ ಗ್ಯಾರಂಟಿ ಅನ್ನಭಾಗ್ಯ ಯೋಜನೆ ಅನುಷ್ಠಾನ ಹಿನ್ನೆಲೆ BJP ಕಾಲೆಳೆದು ಕಾಂಗ್ರೆಸ್ ಟ್ವೀಟ್​​ ಮಾಡಿದೆ. ಇಂದಿನಿಂದ 3ನೇ ಗ್ಯಾರಂಟಿ ಅನ್ನಭಾಗ್ಯ ಯೋಜನೆ ಜಾರಿಯಾಗುತ್ತಿದೆ. ಅನ್ನಕ್ಕೆ ಕಲ್ಲು ಹಾಕುವ ಕೇಂದ್ರ ಸರ್ಕಾರದ ಕುತಂತ್ರವನ್ನೂ ಮೀರಿ ಹಣ ನೀಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿದ್ದೇವೆ. ಈಗಾಗಲೇ ನಾವು ಮೂರು ಗ್ಯಾರಂಟಿಗಳನ್ನು ನೀಡಿದರೂ ಬಿಜೆಪಿಗೆ ವಿಪಕ್ಷ ನಾಯಕ ಸಿಗುವ ಗ್ಯಾರಂಟಿ ಇಲ್ಲ. ಸದನವನ್ನು, ಕನ್ನಡಿಗರನ್ನು ಕುಚೋದ್ಯ ಮಾಡುತ್ತಿದೆಯೇ ಬಿಜೆಪಿ? ಎಂದು ಟ್ವೀಟ್​ ಮೂಲಕ ಬಿಜೆಪಿಗೆ ಕಾಂಗ್ರೆಸ್​​​​​​​​​ ಟಾಂಗ್​​ ಕೊಟ್ಟಿದೆ.

  • 10 Jul 2023 10:06 AM (IST)

    Karnataka Breaking Kannada News Live: ನವಗ್ರಹ ತೀರ್ಥಕ್ಷೇತ್ರ ಜೈನಮುನಿ ಗುಣಧರನಂದಿಶ್ರೀಗಳ ಜೊತೆ ಗೃಹ ಸಚಿವ ಚರ್ಚೆ

    ಜೈನಮುನಿ ಕಾಮಕುಮಾರನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹುಬ್ಬಳ್ಳಿ ತಾಲೂಕು ವರೂರು ಗ್ರಾಮಕ್ಕೆ ಸಚಿವ ಪರಮೇಶ್ವರ್ ಭೇಟಿ ನೀಡಿದ್ದು ನವಗ್ರಹ ತೀರ್ಥಕ್ಷೇತ್ರ ಜೈನಮುನಿ ಗುಣಧರನಂದಿಶ್ರೀಗಳ ಜೊತೆ ಚರ್ಚೆ ನಡೆಸಿದ್ದಾರೆ. ಇದಕ್ಕೂ ಮುನ್ನ ವರೂರು ಗ್ರಾಮಕ್ಕೆ ಭೇಟಿ ನೀಡಿದ್ದ ಎಡಿಜಿಪಿ ಹಿತೇಂದ್ರ ಜೈನಮುನಿ ಗುಣಧರನಂದಿಶ್ರೀಗಳ ಜೊತೆ ಚರ್ಚೆ ನಡೆಸಿದ್ದರು.

  • 10 Jul 2023 10:03 AM (IST)

    Karnataka Breaking Kannada News Live: ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೋರಿಕೆ, ಆತಂಕಗೊಂಡ ಜನ

    ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಕಡೇಕೋಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗಿದೆ. ದಿಢೀರ್ ಅನಿಲ ಸೋರಿಕೆಯಿಂದ ವಾಹನ ಸವಾರರು ಮತ್ತು ರಸ್ತೆ ಅಕ್ಕಪಕ್ಕದ ಮನೆಯ ಜನರು ಆತಂಕಗೊಂಡಿದ್ದಾರೆ. ಗೋವಾದಿಂದ ಮಂಗಳೂರಿನತ್ತ ಸಾಗುತ್ತಿದ್ದ ಟ್ಯಾಂಕರ್ ಲಾರಿಯಲ್ಲಿ ಅನಿಲ ಸೋರಿಗೆಯಾಗಿದ್ದು ಗ್ಯಾಸ್ ಲಿಕೇಜ್ ಎಂದು ತಿಳಿದು ಜನ ಗಾಬರಿಯಾಗಿದ್ದಾರೆ. ಆದರೆ ಇದು ಲಿಕ್ವಿಡ್ ನೈಟ್ರೋಜನ್ ಎಂದು ತಿಳಿದಾಗ ನಿಟ್ಟುಸಿರು ಬಿಟ್ಟಿದ್ದಾರೆ.

  • 10 Jul 2023 09:58 AM (IST)

    Karnataka Breaking Kannada News Live: ಹಿರೇಕೋಡಿ ನಂದಿಪರ್ವತ ಆಶ್ರಮದಲ್ಲಿ ರಕ್ಷಾ ವಿಸರ್ಜನಾ ಕಾರ್ಯ

    ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹಿರೇಕೋಡಿ ನಂದಿಪರ್ವತ ಆಶ್ರಮದಲ್ಲಿ ರಕ್ಷಾ ವಿಸರ್ಜನಾ ಕಾರ್ಯ ನಡೆಯಲಿದೆ. ಪೂರ್ವಾಶ್ರಮದ ಅಣ್ಣನ ಮಗ ಭೀಮಗೊಂಡ ಉಗಾರೆ ನೇತೃತ್ವದಲ್ಲಿ ಜೈನಮುನಿಗಳ ಪೂರ್ವಾಶ್ರಮದ ಸಂಬಂಧಿಕರು, ಭಕ್ತರು ರಕ್ಷಾ ವಿಸರ್ಜನೆ ಮಾಡಲಿದ್ದಾರೆ. ಕಳಸದಲ್ಲಿ ಚಿತಾಭಸ್ಮ ಸಂಗ್ರಹಿಸಿ ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ಶಾಸ್ತ್ರೋಕ್ತವಾಗಿ ಹೂಳಲು ನಿರ್ಧಾರ ಮಾಡಲಾಗಿದೆ.

  • 10 Jul 2023 09:52 AM (IST)

    Karnataka Breaking Kannada News Live: ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಅಧಿವೇಶನ ಆರಂಭವಾಗಿ ವಾರ ಕಳೆದರೂ ವಿಪಕ್ಷ ನಾಯಕನ ನೇಮಕವಾಗದ ಹಿನ್ನೆಲೆ ಪ್ರತಿಪಕ್ಷ ಬಿಜೆಪಿ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ. ವಿರೋಧ ಪಕ್ಷದ ನಾಯಕನಿಲ್ಲದೆ ರಾಜ್ಯಪಾಲರ ಭಾಷಣ ಆಯಿತು. ಬಜೆಟ್ ಮಂಡನೆಯೂ ಆಯ್ತು. ಸದನ ಶುರುವಾಗಿ ಒಂದು ವಾರಕ್ಕೂ ಹೆಚ್ಚು ದಿನಗಳಾದವು. ಕರ್ನಾಟಕದ ವಿಧಾನಸಭೆಯ ಭವ್ಯಪರಂಪರೆಗೆ ಮೊದಲ ಬಾರಿ ಇಂತಹದ್ದೊಂದು ಕಪ್ಪು ಚುಕ್ಕೆ ಅಂಟಿದೆ ಎಂದು ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

  • 10 Jul 2023 09:46 AM (IST)

    Karnataka Breaking Kannada News Live: ವಿಧಾನಸಭೆ ಪ್ರವೇಶ ದ್ವಾರದಲ್ಲಿ ಪೊಲೀಸರಿಂದ ಪ್ರತಿಯೊಬ್ಬರ ತಪಾಸಣೆ

    ಜುಲೈ 7ರಂದು ಬಜೆಟ್ ಮಂಡನೆ ವೇಳೆ ಭದ್ರತಾ ಲೋಪ ಕಂಡು ಬಂದಿತ್ತು. ಈ ಹಿನ್ನೆಲೆ ಇಂದು ವಿಧಾನಸಭೆ ಪ್ರವೇಶ ದ್ವಾರದಲ್ಲಿ ಪೊಲೀಸರು ಪ್ರತಿಯೊಬ್ಬರ ತಪಾಸಣೆ ಮಾಡಿ ಐಡಿ ಕಾರ್ಡ್ ಚೆಕಿಂಗ್ ಮಾಡಿ ಒಳ ಬಿಡುತ್ತಿದ್ದಾರೆ. ವಿಧಾನಸಭೆಯ ಪಶ್ಚಿಮ ದ್ವಾರದ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.

  • 10 Jul 2023 09:43 AM (IST)

    Karnataka Breaking Kannada News Live: ಚಾರ್ಮಾಡಿ ಘಾಟ್​ನಲ್ಲಿ ಹೆಚ್ಚಾದ ಪ್ರವಾಸಿಗರ ಪುಂಡಾಟ

    ಚಾರ್ಮಾಡಿ ಘಾಟ್​ನಲ್ಲಿ ಪ್ರವಾಸಿಗರ ಪುಂಡಾಟ ಹೆಚ್ಚಾಗಿದೆ. ಬೇಕಾಬಿಟ್ಟಿ ವಾಹನ ಪಾರ್ಕ್ ಮಾಡಿ ರಸ್ತೆ ಮಧ್ಯೆ ಭರ್ಜರಿ ಡ್ಯಾನ್ಸ್ ಮಾಡುವ ದೃಶ್ಯಗಳು ಕಂಡು ಬಂದಿವೆ. ರಸ್ತೆ ಮಧ್ಯೆ ಡ್ಯಾನ್ಸ್ ಮಾಡಿ ಅತಿರೇಕದ ವರ್ತನೆ ಮಾಡುತ್ತಿದ್ದಾರೆ. ಅಪಾಯದ ಸ್ಥಳದಲ್ಲಿ, ದಟ್ಟ ಮಂಜು ಮಳೆಯಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡ್ತಿದ್ದಾರೆ. ಪ್ರವಾಸಿಗರ ವಾಹನಗಳ ಪಾರ್ಕಿಂಗ್ ನಿಂದ ಟ್ರಾಫಿಕ್ ಜಾಮ್ ಕಿರಿಕಿರಿ ಉಂಟಾಗಿದೆ.

  • 10 Jul 2023 08:51 AM (IST)

    Karnataka Breaking Kannada News Live: ‘ಅನ್ನಭಾಗ್ಯ’ಕ್ಕೆ ದಶಕದ ಸಂಭ್ರಮ

    2013ರ ಮೇ 13 ರಂದು ಕರ್ನಾಟಕದ 22ನೇ ಮುಖ್ಯಮಂತ್ರಿಯಾಗಿ ಸಿಎಂ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ್ದರು. ಮೇ 13ರಂದು ಸಿದ್ದರಾಮಯ್ಯರಿಂದ ಐತಿಹಾಸಿಕ ನಿರ್ಧಾರ-ಅನ್ನಭಾಗ್ಯ ಯೋಜನೆ ಘೋಷಣೆ ಮಾಡಲಾಯಿತು. 2013ರ ಜುಲೈ ತಿಂಗಳಿನಲ್ಲಿ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದರು. ಅನ್ನಭಾಗ್ಯ ಆರಂಭವಾದಾಗ 1.08 ಕೋಟಿ ಕುಟುಂಬಗಳು ಯೋಜನೆಯ ಲಾಭ ಪಡೆದಿದ್ದವು. 2013ರಲ್ಲಿ ಪ್ರತಿ ತಿಂಗಳು 2.93 ಲಕ್ಷ ಟನ್ ಆಹಾರ ಧಾನ್ಯ ಬಿಡುಗಡೆಯಾಗುತ್ತಿತ್ತು. 2013ರಲ್ಲಿ ಅನ್ನಭಾಗ್ಯ ಯೋಜನೆಗಾಗಿ 4,300 ಕೋಟಿ ರೂಪಾಯಿಗಳನ್ನ ಮೀಸಲಿರಿಸಲಾಗಿತ್ತು. 2013-2014ರ ಸಾಲಿನಲ್ಲಿ ಅನ್ನಭಾಗ್ಯಕ್ಕಾಗಿ 3,050 ಕೋಟಿ ವೆಚ್ಚವಾಗಿತ್ತು.

  • 10 Jul 2023 08:17 AM (IST)

    Karnataka Breaking Kannada News Live: ಟೊಮ್ಯಾಟೊ ರೇಟ್ ಗಗನಕ್ಕೇರಿದ್ದೇ ತಡ, ಟೊಮ್ಯಾಟೋ ಗಾಡಿಯೇ ಕಿಡ್ನ್ಯಾಪ್ 

    ಟೊಮೆಟೊ ಬೆಲೆ ಶತಕ ದಾಟಿದ ಹಿನ್ನೆಲೆ ಫುಲ್​​ ಡಿಮ್ಯಾಂಡ್​​ ಆಗಿದ್ದು ಕಳವು ಪ್ರಕರಣಗಳು ವರದಿಯಾಗುತ್ತಿವೆ. ಬೆಂಗಳೂರಿನ ಯಲಹಂಕ ಬಳಿಯ ಚಿಕ್ಕಜಾಲ ಗ್ರಾಮದ ಬಳಿ ಟೊಮ್ಯಾಟೊ ಗಾಡಿ ಕದ್ದ ಘಟನೆ ನಡೆದಿದೆ.

  • 10 Jul 2023 08:09 AM (IST)

    Karnataka Breaking Kannada News Live: ಭೋಗನಂದೀಶ್ವರ ಸ್ವಾಮಿ ದೇವಸ್ಥಾನದಲ್ಲಿ ಜನಸಾಗರ

    ಇಂದು ನಂದಿಗಿರಿ ಪ್ರದಕ್ಷಣೆ ಹಿನ್ನಲೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿಯಲ್ಲಿರುವ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಸ್ಥಾನಕ್ಕೆ ಜನಸಾಗರವೇ ಹರಿದು ಬಂದಿದೆ. ಶಿವ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.

    ಭೋಗನಂದೀಶ್ವರ ಸ್ವಾಮಿ ದೇವಸ್ಥಾನ

  • 10 Jul 2023 08:05 AM (IST)

    Karnataka Breaking Kannada News Live: ಇಂದು ಅಧಿದೇವತೆ ತಾಯಿ ಚಾಮುಂಡೇಶ್ವರಿ ವರ್ಧಂತಿ

    ಇಂದು ಅಧಿದೇವತೆ ತಾಯಿ ಚಾಮುಂಡೇಶ್ವರಿ ವರ್ಧಂತಿ. ಈ ಹಿನ್ನೆಲೆ ಭಕ್ತರಿಗೆ ಬೆಳಗ್ಗೆ 8 ಗಂಟೆಯ ನಂತರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮುಂಜಾನೆ 3.30ರಿಂದಲೇ ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ ನಡೆಯುತ್ತಿದ್ದು ಬೆಳಗ್ಗೆ 10 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿ ವರ್ಧಂತಿ ಉತ್ಸವ ಆರಂಭವಾಗಲಿದೆ. ಯದುವಂಶದ ಪ್ರಮೋದದೇವಿ ಒಡೆಯರ್, ಯದುವೀರ ಕೃಷ್ಣದತ್ತ ತ್ರಿಷಿಕಾ ಕುಮಾರಿ, ಆದ್ಯವೀರ ಹಾಗೂ ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ.

  • 10 Jul 2023 08:03 AM (IST)

    Karnataka Breaking Kannada News Live: 5 ಕೆಜಿ ಅಕ್ಕಿ ಬದಲು ಇಂದು ಫಲಾನುಭವಿಗಳ ಖಾತೆಗೆ ಹಣ

    ಇಂದಿನಿಂದ ‘ಅನ್ನಭಾಗ್ಯ’ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ. 5 ಕೆಜಿ ಅಕ್ಕಿ ಬದಲು ಇಂದು ಫಲಾನುಭವಿಗಳ ಖಾತೆಗೆ ಹಣ ಹಾಕಲಾಗುತ್ತೆ. ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸರ್ಕಾರ 5 ಕೆಜಿ ಅಕ್ಕಿ ಬದಲು ತಲಾ 170 ರೂ. ಪಾವತಿಸಲಿದೆ.

  • Published On - Jul 10,2023 8:02 AM

    Follow us