ಕಟುಕರಿಗೆ ದನ ಕೊಡಬಾರದು: ಕಾರ್ಕಳದಲ್ಲಿ ತಮ್ಮ ನೂತನ ಕಚೇರಿಯಲ್ಲಿ ಮಾತಾನಾಡಿದ ಪ್ರಮೋದ್ ಮುತಾಲಿಕ್

| Updated By: Rakesh Nayak Manchi

Updated on: Feb 09, 2023 | 6:27 PM

ಪಾಂಚಜನ್ಯ ಸಂಘಟನಾ ಕಾರ್ಯಾಲಯ ಉದ್ಘಾಟನೆ ಆಗಿದೆ. ಜನರ ಕೊರತೆ ನೊವು ಕಷ್ಟ ಇದ್ದಲ್ಲಿ ಪಾಂಚಜನ್ಯ 24 ಗಂಟೆ ತೆರೆದಿರುತ್ತದೆ. ಭಯಮುಕ್ತವಾಗಿ ಜನ ಕಾರ್ಯಾಲಯಕ್ಕೆ ಬರಬಹುದು ಎಂದು ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಕಟುಕರಿಗೆ ದನ ಕೊಡಬಾರದು: ಕಾರ್ಕಳದಲ್ಲಿ ತಮ್ಮ ನೂತನ ಕಚೇರಿಯಲ್ಲಿ ಮಾತಾನಾಡಿದ ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್ (ಮಧ್ಯದಲ್ಲಿರುವವರು) ಮತ್ತು ಕಲಬುರಗಿಯ ಸಿದ್ದಲಿಂಗ ಸ್ವಾಮೀಜಿ (ಬಲಬದಿ)
Follow us on

ಉಡುಪಿ: ನನಗೆ ಹಣಬಲ ಇಲ್ಲ ನಾನೊಬ್ಬ ಸನ್ಯಾಸಿಯಾಗಿದ್ದೇನೆ. ವೋಟಿನ ಜೊತೆ ನೂರು ರೂಪಾಯಿ ನೋಟೂ ಕೊಡಲು ನನ್ನ ಬಳಿ ಬ್ಯಾಂಕ್ ಅಕೌಂಟ್ ಇಲ್ಲ. ಬಿಲ್ಡಿಂಗ್, ಪೆಟ್ರೊಲ್ ಬಂಕ್ ಇಲ್ಲ. ಆದರೆ ನಾನು ಕರ್ನಾಟಕದ ಜನರಲ್ಲಿ ವಿನಂತಿ ಮಾಡಿದ್ದೇನೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದ್ದಾರೆ. ಇಂಧನ ಸಚಿವ ಸುನಿಲ್ ಕುಮಾರ್ (Sunil Kumar) ಕ್ಷೇತ್ರವಾದ ಕಾರ್ಕಳದಿಂದ ಮುತಾಲಿಕ್ ಅವರು ಪಕ್ಷೇತರವಾಗಿ ಕಣಕ್ಕಿಳಿಯುತ್ತಿರುವ ಹಿನ್ನಲೆ ಚುನಾವಣಾ ಪ್ರಚಾರಕ್ಕಾಗಿ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಕಾರ್ಕಳದ ನಕ್ರೆ ರಸ್ತೆಯಲ್ಲಿ ‘ಪಾಂಚಜನ್ಯ’ ಕಾರ್ಯಾಲಯವನ್ನು ತೆರೆಯಲಾಗಿದೆ.

ಪಾಂಚಜನ್ಯ ಸಂಘಟನಾ ಕಾರ್ಯಾಲಯ ಉದ್ಘಾಟನೆ ಆಗಿದೆ. ಜನರ ಕೊರತೆ ನೊವು ಕಷ್ಟ ಇದ್ದಲ್ಲಿ ಪಾಂಚಜನ್ಯ 24 ಗಂಟೆ ತೆರೆದಿರುತ್ತದೆ. ಭಯಮುಕ್ತವಾಗಿ ಜನ ಕಾರ್ಯಾಲಯಕ್ಕೆ ಬರಬಹುದು. ಸಂತ್ರಸ್ತರು ಮಹಿಳೆಯರು ವಿದ್ಯಾರ್ಥಿಗಳು ರೈತರು ಬರಬೇಕು. ರೈತರ ಉಪಯೋಗಕ್ಕೆ ಮಂಕಿ ಪಾರ್ಕ್ ಯೋಜನೆಗೆ ಒತ್ತಾಯಿಸುತ್ತೇವೆ. ಅಡಿಕೆಗೆ ಎಲೆಚುಕ್ಕಿ ರೋಗ ಬಂದಿದೆ, ಶೀಘ್ರವಾಗಿ ಪರಿಹಾರ ಕೊಡಬೇಕಿದೆ ಎಂದರು.

ಫೆ. 14 ದೇಶದಲ್ಲಿ ವಿದೇಶಿ ಸಂಸ್ಕೃತಿ ಹುಚ್ಚಾಟ ನಡೆಯುತ್ತದೆ, ಪ್ರೇಮ ವಿಚಾರ ಇಟ್ಟುಕೊಂಡು ಕಾಮದ ವಿಕೃತಿ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮುತಾಲಿಕ್, ಶ್ರೀರಾಮ ಸೇನೆ ಮಾತಾ ಪಿತಾ ಪೂಜನಾ ಮಾಡುತ್ತಿದೆ ಎಂದರು. ಗೋವು ಅಪ್ಪುಗೆ ಮೂಲಕ ಗೋ ರಕ್ಷಣೆ ಮಾಡಲು ಕೇಂದ್ರ ಕರೆ ನೀಡಿದೆ. ಇದಕ್ಕೆ ನನ್ನ ಸ್ವಾಗತವಿದೆ ಎಂದರು.

ಇದನ್ನು ಓದಿ: ಕಾರ್ಕಳದಲ್ಲಿ ಹಿಂದುತ್ವಕ್ಕೆ ಯಾವುದೇ ರೀತಿಯಿಂದಲೂ ಧಕ್ಕೆಯಾಗಿಲ್ಲ: ಮುತಾಲಿಕ್​ಗೆ ಟಕ್ಕರ್ ಕೊಟ್ಟ ಸುನಿಲ್ ಕುಮಾರ್

ಕಾರ್ಕಳದಲ್ಲಿ ಗೋವು ಕಳ್ಳರ ವಿರುದ್ಧ ಕಟ್ಟುನಿಟ್ಟಿನ ಕ್ರಮ

ಕಾರ್ಕಳದಲ್ಲಿ ನಿರಂತರ ಗೋವು ಕಳ್ಳತನ ಆಗುತ್ತಿದೆ. ಹೀಗಾಗಿ ಕಾರ್ಕಳದಲ್ಲಿ ಗೋವು ಕಳ್ಳರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಏಳು ಹೋಬಳಿ ಜನ ಕಟುಕರಿಗೆ ದನ ಕೊಡಬಾರದು ಎಂದು ಮನವಿ ಮಾಡಿದ ಮುತಾಲಿಕ್, ಗೋವುಗಳಿಗೆ ಕಾಡುವ ಗಂಟುರೋಗಕ್ಕೆ ಸಮರ್ಪಕ ಔಷಧಿ ಒದಗಿಸಬೇಕು. ಗೋವು ಮೃತಪಟ್ಟರೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಹೆಬ್ರಿಯ ಸಮುದಾಯ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆ ಮಾಡಬೇಕು ಎಂದು ಹೇಳಿರುವ ಮುತಾಲಿಕ್, ಕಾರ್ಕಳಕ್ಕೆ ರಾಜ್ಯದಿಂದ ಬಂದ ಅನುದಾನ ಎಷ್ಟು ಬಹಿರಂಗಪಡಿಸಲೇಬೇಕು. ಹಳ್ಳಿಯಲ್ಲಿ ಸರಿಯಾದ ರಸ್ತೆ ನಿರ್ಮಾಣ ಆಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು, ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಮೂರು ವರ್ಷದಿಂದ ಕಾರ್ಕಳದಲ್ಲಿ ಗ್ರಂಥಾಲಯ ಉದ್ಘಾಟನೆ ಆಗಿಲ್ಲ. ವೆಂಕಟರಮಣ ದೇಗುಲದ ವನಭೋಜನ ಕಾರ್ಯಕ್ರಮ ನಡೆಯುತ್ತದೆ. ಇದಕ್ಕೆ ಮೂಲಭೂತ ಸೌಕರ್ಯ ಒದಗಿಸಬೇಕು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.

ಇದನ್ನೂ ಓದಿ: ಪ್ರಮೋದ್ ಮುತಾಲಿಕ್ ಸ್ಪರ್ಧೆಯಿಂದ ಹಿಂದೂ ಪರ ರಾಜಕೀಯ ಪಕ್ಷಕ್ಕೆ ಹಿನ್ನಡೆ: ಸುನಿಲ್ ಕುಮಾರ್

ನನಗೆ ಯಾವುದೇ ಒತ್ತಡ ಇಲ್ಲ, ಬಿಡುವಿಲ್ಲದೆ ಓಡಾಟ ಮಾಡುತ್ತಿದ್ದೇನೆ ಎಂದು ಹೇಳಿದ ಮುತಾಲಿಕ್, ನಾನು ಯಾರೆಂದು ಹಳ್ಳಿ ಹಳ್ಳಿಯಲ್ಲಿನ ಮನೆ ಮನೆಗೆ ಗೊತ್ತಿದೆ. ಹೀಗಾಗಿ ಅಭ್ಯರ್ಥಿ ಯಾರು ಎಂದು ಪರಿಚಯಿಸುವ ಅಗತ್ಯ ಇಲ್ಲ. ಹಿಂದುತ್ವ ಉಳಿವಿಗೆ ರಾಷ್ಟ್ರಭಕ್ತಿ, ಕಾರ್ಯಕರ್ತರಿಗಿಗಾಗಿ ಈ ಸ್ಪರ್ಧೆ ಎಂದರು.

ಬಿಜೆಪಿ ಅಭ್ಯರ್ಥಿ ಸೋಲಿಸಲು ಅಲ್ಲ, ಹಿಂದುತ್ವದ ಗೆಲುವಿಗಾಗಿ ಮುತಾಲಿಕ್ ಸ್ಪರ್ಧೆ

ಬಿಜೆಪಿ ಅಭ್ಯರ್ಥಿ ಸೋಲಿಸಲು ಅಲ್ಲ, ಹಿಂದುತ್ವದ ಗೆಲುವಿಗಾಗಿ, ಹಿಂದೂ ಸಂಘಟಕರ ಸಂಕಟ ವಿಮೋಚನೆಗಾಗಿ, ಹಿಂದೂಗಳಿಗೆ ಶಕ್ತಿ ತುಂಬಲು ಹಾಗೂ ಭಗವಾ ಧ್ವಜ ವಿಧಾನಸೌಧಕ್ಕೆ ಹೋಗಬೇಕು ಎಂಬ ಧ್ಯೇಯೋದ್ದೇಶದಿಂದ ಕಾರ್ಕಳ ಕ್ಷೇತ್ರದಲ್ಲಿ ಚುನಾವಣಾ ಅಖಾಡಕ್ಕಿಳಿಯುತ್ತಿದ್ದೇನೆ ಎಂದು ಕಲಬುರ್ಗಿಯ ಸಿದ್ಧಲಿಂಗ ಸ್ವಾಮೀಜಿ ಹೇಳಿದ್ದಾರೆ. ಪಾಂಡವರು ಐದುಹಳ್ಳಿಗೆ ಬೇಡಿಕೆ ಇಟ್ಟರು, ನಾವು ಒಂದು ಸೀಟ್ ಇಟ್ಟಿದ್ದೆವು ಎಂದು ಹೇಳುವ ಮೂಲಕ ಕಾರ್ಕಳ ಕ್ಷೇತ್ರ ಬಿಟ್ಟುಕೊಡುವಂತೆ ಒತ್ತಾಯಿಸಿದ್ದರೂ ಕ್ಯಾರೇ ಎನ್ನದ ಬಿಜೆಪಿಗೆ ಮಹಾಭಾರತದ ಘಟನೆಯನ್ನು ಉಲ್ಲೇಖಿಸಿ ಟಾಂಗ್ ನೀಡಿದರು.

ಕಚೇರಿ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಶ್ರೀರಾಮ ಸೇನೆಗೆ ವಿಶೇಷವಾದ ಸುದಿನ. ಬೆಳಗಾವಿಯಲ್ಲಿ ಹುಟ್ಟಿದರೂ ಮಲೆನಾಡು ಕರಾವಳಿಯಲ್ಲಿ ಮುತಾಲಿಕ್ ಕಾರ್ಯಚಟುವಟಿಕೆ ನಡೆಸುತ್ತಿದ್ದಾರೆ. ಸ್ಥಳೀಯ ಶಾಸಕ (ಸುನೀಲ್ ಕುಮಾರ್), ಮುತಾಲಿಕ್ ಶಿಷ್ಯನಿಗೆ ಜನ ಪೊಲಿಟಿಕಲ್ ಪವರ್ ಕೊಟ್ಟರೂ ಅವರು ಹಿಂದುತ್ವ ಪರವಾಗಿ ಮಾತನಾಡುತ್ತಿಲ್ಲ ಎಂದು ಆರೋಪಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:26 pm, Thu, 9 February 23