ಇಂದಿನಿಂದ ಕುಮಾರಸ್ವಾಮಿ ರೆಸಾರ್ಟ್ ರಾಜಕೀಯ, ಸಮಲತಾ ಬಗ್ಗೆ ಅಚ್ಚರಿ ಹೇಳಿಕೆ

|

Updated on: Jan 09, 2024 | 5:23 PM

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ ಅವರು ಮುಂಬರುವ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದಾರೆ. ರಾಜಕೀಯ ಕಾರ್ಯತಂತ್ರಗಳನ್ನು ರೂಪಿಸಲು ಹಾಗೂ ರಾಜ್ಯ ರಾಜಕಾರಣದ ಬಗ್ಗೆ ಮಹತ್ವದ ಚರ್ಚೆ ನಡೆಸಲು ರೆಸಾರ್ಟ್ ಮೊರೆ ಹೋಗಿದ್ದಾರೆ. ಅಲ್ಲದೇ ರಾಜಕೀಯ ಬದ್ಧ ವೈರಿ ಸುಮಲತಾ ಅಂಬರೀಶ್​ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಇಂದಿನಿಂದ ಕುಮಾರಸ್ವಾಮಿ ರೆಸಾರ್ಟ್ ರಾಜಕೀಯ, ಸಮಲತಾ ಬಗ್ಗೆ ಅಚ್ಚರಿ ಹೇಳಿಕೆ
ಸುಮಲತಾ-ಕುಮಾರಸ್ವಾಮಿ
Follow us on

ಚಿಕ್ಕಮಗಳೂರು, (ಡಿಸೆಂಬರ್ 09): ಲೋಕಸಭೆ ಚುನಾವಣೆ (Loksabha Elections 2024) ಹತ್ತಿರವಾಗುತ್ತಿದ್ದಂತೆಯೇ ಎನ್​ಡಿಎ ಮೈತ್ರಿ ಪಕ್ಷದವಾದ ಜೆಡಿಎಸ್​ನಲ್ಲಿ(JDS) ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಬಾರಿ ಕರ್ನಾಟಕದಲ್ಲಿ 28 ಕ್ಷೇತ್ರಗಳಲ್ಲಿ ಮೈತ್ರಿ ಗೆಲ್ಲಬೇಕೆಂದು ಜೆಡಿಎಸ್​ ನಾಯಕರಿಗೆ ಬಿಜೆಪಿ ಹೈಕಮಾಂಡ್​ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಈಗಿನಿಂದಲೇ ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇದಕ್ಕಾಗಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಇಂದಿನಿಂದ ಮೂರು ದಿನಗಳ ರೆಸಾರ್ಟ್ ರಾಜಕೀಯ ಮಾಡಲಿದ್ದಾರೆ.

ಹೌದು…ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆ ರಾಜಕೀಯ ಚರ್ಚೆ ಮಾಡಲು ಚಿಕ್ಕಮಗಳೂರಿನ ಮಲ್ಲೇನಹಳ್ಳಿ ಸಮೀಪದ ಹನಿ ಡ್ಯೂ ರೆಸಾರ್ಟ್​ನಲ್ಲಿ 10 ರೂಮ್​ಗಳನ್ನು ಬುಕ್​ ಮಾಡಿದ್ದು, ಇಂದಿನಿಂದ ಕುಮಾರಸ್ವಾಮಿ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ವೇಳೆ ಪ್ರಮುಖವಾಗಿ ಜೆಡಿಎಸ್​ಗೆ ಸಿಗುವ ಕ್ಷೇತ್ರಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಹೆಚ್ಚು ತೆಲೆಕೆಡಿಸಿಕೊಂಡಿದ್ದಾರೆ. ಹೀಗಾಗಿ ಮಂಡ್ಯ ರಾಜಕೀಯದ ಬಗ್ಗೆ ಚರ್ಚಿಸಲು ಜಿಲ್ಲೆಯ ಜೆಡಿಎಸ್​ ನಾಯಕರಿಗೆ ಬುಲಾವ್ ನೀಡಿದ್ದು, ಒಂದು ವೇಳೆ ಬಿಜೆಪಿ, ಮಂಡ್ಯ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟರೆ ಯಾರನ್ನು ಕಣಕ್ಕಳಿಸಬೇಕು. ಒಂದು ವೇಳೆ ಬಿಜೆಪಿ ಸುಮಲತಾ ಅವರನ್ನು ಅಖಾಡಕ್ಕಿಳಿಸಿದರೆ ಏನು ಮಾಡಬೇಕೆಂದು ಸಭೆಯಲ್ಲಿ ಮಾತುಕತೆ ನಡೆಸಲಿದ್ದಾರೆ.

ಇದನ್ನೂ ಓದಿ: ಸುಮಲತಾ ಅಂಬರೀಶ್​ ಮತ್ತೆ ಮಂಡ್ಯದಿಂದಲೇ ಸ್ಪರ್ಧೆ: ಆಪ್ತ ಹನಕೆರೆ ಶಶಿಕುಮಾರ್

ಇನ್ನು ಈ ಬಗ್ಗೆ ಹಾಸನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಎಂಪಿ ಚುನಾವಣೆಯಲ್ಲಿ 28 ಕ್ಷೇತ್ರದಲ್ಲೂ ಮೈತ್ರಿ ಅಭ್ಯರ್ಥಿ ಗೆಲ್ಲಬೇಕು. ಈ ಕಾರಣಕ್ಕೆ ಯಾರನ್ನು ಬೇಕಾದ್ರೂ ಭೇಟಿಯಾಗಲು ತಯಾರಿದ್ದೇನೆ. ಅಗತ್ಯಬಿದ್ದರೆ ಸಂಸದೆ ಸುಮಲತಾ ಅಂಬರೀಶ್​ರನ್ನು ಭೇಟಿ ಮಾಡುತ್ತೇನೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಈ ಮೂಲಕ ಎಲ್ಲಾವನ್ನೂ ಮರೆತು ರಾಜಕೀಯ ಬದ್ಧ ವೈರಿ ಸುಮಲತಾ ಅಂಬರೀಶ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಸುಳಿವು ನೀಡಿದ್ದಾರೆ. ಇನ್ನು ಮಂಡ್ಯ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಸುಮಲತಾರನ್ನು ಮನವೊಲಿಸುವ ತಂತ್ರ ಸಹ ಕುಮಾರಸ್ವಾಮಿಯವರದ್ದಾಗಿದೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಎನ್​ಡಿಎ ಮೈತ್ರಿಕೂಟ ಸೇರಿರುವ ಜೆಡಿಎಸ್ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಪಣತೊಟ್ಟಿದೆ. ಹೀಗಾಗಿ ಕುಮಾರಸ್ವಾಮಿ ಈಗಿನಿಂದಲೇ ಲೋಕಸಭಾ ಚುನಾವಣೆಗೆ ಬೇಕಾಗುವ ತಂತ್ರಗಳನ್ನು ಹೆಣೆಯಲು ರೆಸಾರ್ಟ್​ ಮೊರೆ ಹೋಗಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:19 pm, Tue, 9 January 24