ಸುಮಲತಾ ಅಂಬರೀಶ್​ ಮತ್ತೆ ಮಂಡ್ಯದಿಂದಲೇ ಸ್ಪರ್ಧೆ: ಆಪ್ತ ಹನಕೆರೆ ಶಶಿಕುಮಾರ್

ಮುಂಬರುವ 2024ರ ಲೋಕಸಭೆ ಚುನಾವಣೆ ಸಂಬಂಧ ಬಿಜೆಪಿ ಜೊತೆ ಜೆಡಿಎಸ್​ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿ ಬೆನ್ನಲ್ಲೇ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್​ ಯಾರ ಪಾಲಾಗುತ್ತದೆ ಎಂಬ ಪ್ರಶ್ನೆ ಉದ್ಭವವಾಗಿದೆ. ಇನ್ನು ಮಂಡ್ಯದಿಂದ ಸಂಸದೆ ಸುಮಲತಾ ಅಂಬರೀಶ್​ ಸ್ಪರ್ಧಿಸುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಆಪ್ತ ಹನಕರೆ ಶಶಿಕುಮಾರ್​​​​​ ಸ್ಪಷ್ಟನೆ ನೀಡಿದ್ದಾರೆ.

ಸುಮಲತಾ ಅಂಬರೀಶ್​ ಮತ್ತೆ ಮಂಡ್ಯದಿಂದಲೇ ಸ್ಪರ್ಧೆ: ಆಪ್ತ ಹನಕೆರೆ ಶಶಿಕುಮಾರ್
ಸಂಸದೆ ಸುಮಲತಾ ಅಂಬರೀಶ್​
Follow us
| Updated By: ವಿವೇಕ ಬಿರಾದಾರ

Updated on: Jan 09, 2024 | 12:37 PM

ಮಂಡ್ಯ, ಜನವರಿ 09: ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ಮಂಡ್ಯ ಜಿಲ್ಲೆಯಲ್ಲಿ ಚುನಾವಣಾ ಅಖಾಡ ರಂಗೇರುತ್ತಿದೆ. ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿಯಾದ ನಂತರ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದೆ ಸುಮಲತಾ ಅಂಬರೀಶ್​​ ಸ್ಪರ್ಧಿಸುವುದು ಅನುಮಾನ ಎನ್ನಲಾಗುತ್ತಿದೆ. ಈ ಬಗ್ಗೆ ಸಂಸದೆ ಸುಮಲತಾ ಅಂಬರೀಶ್​ ಆಪ್ತ ಹನಕೆರೆ ಶಶಿಕುಮಾರ್​ ಮಾತನಾಡಿ, ಸುಮಲತಾ ಅಂಬರೀಶ್​ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲೇ ಮತ್ತೆ ಸ್ಪರ್ಧಿಸುತ್ತಾರೆ ಎಂದಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಂಡ್ಯ ಕ್ಷೇತ್ರವನ್ನು ಬಿಜೆಪಿಯೇ ಉಳಿಸಿಕೊಳ್ಳುವ ವಿಶ್ವಾಸವಿದೆ. ಕಳೆದ ನಾಲ್ಕು ವರ್ಷದಿಂದ ಸುಮಲತಾ ಅಂಬರೀಶ ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲೂ ಸುಮಲತಾ ಅಭ್ಯರ್ಥಿ ಆಗಿರುತ್ತಾರೆ. ಎಲ್ಲಾ ಹೋರಾಟಗಳಲ್ಲೂ ಸುಮಲತಾ ಮುಂಚೂಣಿಯಲ್ಲಿದ್ದಾರೆ. ಅತಿ ಹೆಚ್ಚು ದಿಶಾ ಸಭೆ ನಡೆಸಿದ ಹೆಗ್ಗಳಿಕೆ ಸುಮಲತಾ ಅವರದ್ದು. ಚುನಾವಣೆಯಲ್ಲಿ ಬಿಜೆಪಿಗೆ ಸುಮಲತಾ ಅಂಬರೀಶ ಅವರು ಬಾಹ್ಯ ಬೆಂಬಲ ಕೊಟ್ಟಿದ್ದರು. ಆದರೆ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಆಗಿದೆ ಎಂದರು.

ಇದನ್ನೂ ಓದಿ: ಯಾರೇನೆ ಮೈತ್ರಿ ಮಾಡಿಕೊಂಡರೂ ನನ್ನ ನಿಲುವಿಗೆ ನಾನು ಬದ್ಧ: ಸುಮಲತಾ ಅಂಬರೀಶ್, ಸಂಸದೆ 

ಜೆಡಿಎಸ್‌‌ಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಡುತ್ತಾರೆ ಎಂಬ ಚರ್ಚೆ ಆಗುತ್ತಿದೆ. ಸುಮಲತಾ ಈಗಲೂ ಪಕ್ಷೇತರ ಸಂಸದೆ, ಬಿಜೆಪಿ ಸದಸ್ಯತ್ವ ಪಡೆದಿಲ್ಲ. ಪಕ್ಷ ಯಾವುದಾದರೂ ಸುಮಲತಾ ಅಂಬರೀಶ ಅವರು ಮಂಡ್ಯ ಅಭ್ಯರ್ಥಿ ಆಗಿರಬೇಕು. ಯಾವುದೇ ಪಕ್ಷದಿಂದ ಸ್ಪರ್ಧೆ ಮಾಡಿದರೂ ನಮ್ಮ ಬೆಂಬಲ ಇರುತ್ತದೆ. ಜೆಡಿಎಸ್​ಗೆ ಮಂಡ್ಯ ಕ್ಷೇತ್ರ ಬಿಟ್ಟು ಕೊಟ್ಟರೂ ಸುಮಲತಾ ಅಂಬರೀಶ ಸ್ಪರ್ಧೆ ಖಚಿತವಾಗಿದೆ. ಬಿಜೆಪಿ ಮಂಡ್ಯ ಉಳಿಸಿಕೊಳ್ಳುವ ವಿಶ್ವಾಸವಿದೆ. ಸುಮಲತಾ ಅವರ ಅವಶ್ಯಕತೆ ಇದ್ದರೆ ಮಂಡ್ಯ ಕ್ಷೇತ್ರ ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿದರು.

ಅಂಬರೀಶ್‌ರವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು. ರಾಜಕೀಯದಲ್ಲಿ ಬದಲಾವಣೆ ಗಾಳಿ ಯಾವಾಗ ಬೇಕಾದರೂ ಬೀಸಬಹುದು. ಏನೇ ಆದರೂ ಸುಮಲತಾರವರು ಕಣದಲ್ಲಿರುತ್ತಾರೆ. ಚರ್ಚೆ ‌ನಡೆಸಿ, ಸುಮಲತಾ ಅಂಬರೀಶ ಅವರ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ಸಂಸದೆ ಸುಮಲತಾ ಅಂಬರೀಶ ಅವರು ಬೆಂಗಳೂರಿಗೆ ಬಂದ ತಕ್ಷಣ ಭೇಟಿ ಮಾಡುತ್ತೇವೆ ಎಂದು ಹೇಳಿದರು.

ಮತ್ತೊಮ್ಮೆ ಮಂಡ್ಯ ಅಖಾಡಕ್ಕೆ ನಿಖಿಲ್?

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ನಿಖಿಲ್ ಹೆಸರು ಕೇಳಿ ಬರುತ್ತಿದೆ. ಮತ್ತೊಮ್ಮೆ ನಿಖಿಲ್‌ರನ್ನೇ ಕಣಕ್ಕೆ ಇಳಿಸುವಂತೆ ಮಂಡ್ಯ ಜೆಡಿಎಸ್ ನಾಯಕರು ಒತ್ತಡ ಹಾಕುತ್ತಿದ್ದಾರೆ. ಈ ಮೂಲಕ ಲೋಕಸಭೆ, ವಿಧಾನಸಭೆ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ, ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರ ಜೊತೆ ಜಿಲ್ಲೆಯ ಜೆಡಿಎಸ್ ನಾಯಕರು ಚರ್ಚೆ ಮಾಡಿದ್ದು ನಿಖಿಲ್​ರನ್ನು ಕಣಕ್ಕೆ ಇಳಿಸಲು ಒತ್ತಡ ಹಾಕಿದ್ದಾರೆ. ಜೊತೆಗೆ ನಿಖಿಲ್ ಸ್ವರ್ಧೆ ‌ಮಾಡಿದ್ರೆ ಗೆಲುವು ಸಾಧಿಸಲು ಅನುಕೂಲ ಎಂಬ ಲೆಕ್ಕಚಾರ ಹಾಕಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ