ಸದನದಲ್ಲಿ ಸಚಿವ ನಿರಾಣಿ ಹಾಗೂ ಮರಿತಿಬ್ಬೇಗೌಡ ನಡುವೆ ತೀವ್ರ ವಾಗ್ವಾದ; ಕಲಾಪ ನಾಳೆಗೆ ಮುಂದೂಡಿಕೆ

|

Updated on: Feb 21, 2023 | 10:56 PM

ಬ್ರಿಗೇಡ್ ಗ್ರೂಪ್​ಗೆ ಜಮೀನು ಮಂಜೂರು ಬಗ್ಗೆ ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಇದರಲ್ಲಿ ದೊಡ್ಡ ಅಕ್ರಮ ನಡೆದಿದೆ. ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ, ಈ ಬಗ್ಗೆ ತನಿಖೆ ಮಾಡುವಂತೆ ಆಗ್ರಹಿಸಿದರು. ಇದಕ್ಕೆ ಸಚಿವ ನಿರಾಣಿ ಉತ್ತರಿಸಿದರೂ ಅಕ್ರಮ ನಡೆದಿದೆ ಎಂದು ಮರಿತಿಬ್ಬೇಗೌಡ ಪಟ್ಟು ಹಿಡಿದರು. ಇದು ಇವರಿಬ್ಬರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಸದನದಲ್ಲಿ ಸಚಿವ ನಿರಾಣಿ ಹಾಗೂ ಮರಿತಿಬ್ಬೇಗೌಡ ನಡುವೆ ತೀವ್ರ ವಾಗ್ವಾದ; ಕಲಾಪ ನಾಳೆಗೆ ಮುಂದೂಡಿಕೆ
ಮುರುಗೇಶ್ ನಿರಾಣಿ ಮತ್ತು ಮರಿತಿಬ್ಬೇಗೌಡ
Follow us on

ವಿಧಾನ ಪರಿಷತ್: ಇಂದು ನಡೆದ ಪರಿಷತ್ (Karnataka Legislative Council) ಕಲಾಪದಲ್ಲಿ ದೇವನಹಳ್ಳಿ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್​ ಪಾರ್ಕ್​ಗೆ (Devanahalli Hi-Tech Defence Aerospace Park) ನೀಡಲಾದ ಜಮೀನು ಕುರಿತು ಭಾರೀ ಚರ್ಚೆ ನಡೆದು ಕಲಾಪ ನಾಳೆಗೆ ಮುಂದೂಡುವಂತಾಯಿತು. ಬ್ರಿಗೇಡ್ ಗ್ರೂಪ್​ಗೆ ಜಮೀನು ಮಂಜೂರು ಬಗ್ಗೆ ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ (Marithibbe Gowda), ಬ್ರಿಗೇಡ್ ಗ್ರೂಪ್​ಗೆ ಮೊದಲು 25 ಎಕರೆ ಜಮೀನು ಕೊಡಲಾಗಿದೆ. 7 ವರ್ಷಗಳ ನಂತರ ಗುತ್ತಿಗೆ ಮತ್ತು ಮಾರಾಟ ಕರಾರು ಮಾಡಿದ್ದಾರೆ‌. ಆ ಮೂಲಕ ಕೆಐಎಡಿಬಿ (KIADB) ನಿಯಮ ಉಲ್ಲಂಘಿಸಿದ್ದಾರೆ. ಇನ್ನೂ ಯಾವುದೇ ಕೆಲಸ ಆಗಿಲ್ಲ, ಇದರಲ್ಲಿ ದೊಡ್ಡ ಅಕ್ರಮ ನಡೆದಿದೆ. ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ, ಈ ಬಗ್ಗೆ ತನಿಖೆ ಮಾಡುವಂತೆ ಆಗ್ರಹಿಸಿದರು.

ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಕೈಗಾರಿಕಾ‌ ಇಲಾಖೆ ಸಚಿವ ಮುರುಗೇಶ್ ನಿರಾಣಿ, ಈವರೆಗೆ 190ಕ್ಕೂ ಹೆಚ್ಚು ಕೆಐಎಡಿಬಿ ನಿವೇಶನ ಪ್ರಾರಂಭ ಮಾಡಿದ್ದೇವೆ. ಮೂಲಭೂತ ಸೌಕರ್ಯ ಕಲ್ಪಿಸುವ ಕೆಲಸ ಕೆಐಎಡಿಬಿ ಮಾಡಿದೆ. ಬ್ರಿಗೇಡ್ ಗ್ರೂಪ್​ಗೆ ನೀಡಿರುವ ಜಮೀನಿನಲ್ಲಿ ಕಾನೂನು ಉಲ್ಲಂಘಿಸಿಲ್ಲ. 2012ರಲ್ಲಿ 50 ಎಕರೆ ಮತ್ತು 5 ಎಕರೆಗೆ ಪೂರ್ತಿ ಹಣ ಅವರು ಕಟ್ಟಿದ್ದಾರೆ. ಈಗಾಗಲೇ ಉದ್ಯೋಗಿಗಳಿಗೆ ಮನೆ ನಿರ್ಮಾಣ ಕೆಲಸ ನಡೆಯುತ್ತಿದೆ. ಮಂಜೂರಾದ ಜಾಗದಲ್ಲಿ 15% ಮನೆ, ಶಾಲೆ, ಆಸ್ಪತ್ರೆ, ಉದ್ಯೋಗಿಗಳಿಗೆ ನಿರ್ಮಾಣ ಮಾಡಲು ಅವಕಾಶ ನಿಯಮದಲ್ಲಿ ಇದೆ. ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದರು.

ಇದನ್ನೂ ಓದಿ: ಧಮ್​ ಇದ್ದರೆ, ತಾಕತ್ತಿದ್ದರೆ ನನ್ನನ್ನು ಹೊಡೆದು ಹಾಕಿ ನೋಡೋಣ: ಸದನದಲ್ಲಿ ಗುಡುಗಿದಲ್ಲಿ ಸಿದ್ದರಾಮಯ್ಯ

ಈ ವೇಳೆ ಬ್ರಿಗೇಡ್ ಗ್ರೂಪ್​​ಗೆ ಲಾಭ ಮಾಡಿಕೊಡಲು ಕೆಐಎಡಿಬಿ ನಿಯಮ ಉಲ್ಲಂಘನೆ ಆಗಿದೆ, ತನಿಖೆ ಆಗಲೇಬೇಕು ಎಂದು ಮರಿತಿಬ್ಬೇಗೌಡ ಅವರು ಪಟ್ಟುಹಿಡಿದರು. ಹೀಗೆ ಮರಿತಿಬ್ಬೇಗೌಡ ಮತ್ತು ನಿರಾಣಿ ನಡುವೆ ಆರಂಭವಾದ ವಾಗ್ವಾದ ತೀವ್ರತೆ ಪಡೆದುಕೊಳ್ಳಲು ಆರಂಭಿಸಿತು. ಅದರಂತೆ ವಿಧಾನಪರಿಷತ್ ಕಲಾಪ ನಾಳೆ ಬೆಳಗ್ಗೆ 10.30ಕ್ಕೆ ಮುಂದೂಡಿಕೆ ಮಾಡಲಾಯಿತು. ಕಲಾಪ ಮುಂದೂಡಿಕೆ ಬಳಿಕವೂ ಪರಸ್ಪರ ಕಿತ್ತಾಟ ಮುಂದುವರೆಯಿತು. ಈ ವೇಳೆ ವಿವರಣೆ ನೀಡಲು ಹೋದ ನಿರಾಣಿಗೆ ಮರಿತಿಬ್ಬೇಗೌಡ ಅವರು, ನೀ ಏನೂ ಮಾತನಾಡಬೇಡಪ್ಪ. ನನಗೆ ಎಲ್ಲವೂ ಗೊತ್ತಿದೆ ಹೋಗು ಎಂದು ಕೈಮುಗಿದು ಹೊರಗೆ ಕೈ ತೋರಿಸಿದರು.

ಮರಿತಿಬ್ಬೇಗೌಡ ಮಾತು ಹಾಗೂ ವರ್ತನೆಯಿಂದ ಸಿಟ್ಟಾದ ಸಚಿವ ಮುರುಗೇಶ್ ನಿರಾಣಿ, ನಿನ್ನ ಯೋಗ್ಯತೆ ನನಗೆ ಗೊತ್ತಿಲ್ವೆನಪ್ಪಾ ಎಂದು ಏಕವಚನದಲ್ಲೇ ಬೈದರು. ಈ ವೇಳೆ ಕೋಟ ಶ್ರೀನಿವಾಸ್ ಪೂಜಾರಿ ಅವರು ನಿರಾಣಿ ಅವರನ್ನು ಸಮಾಧಾನಪಡಿಸಲು ಮುಂದಾದರು. ಅದಾಗ್ಯೂ, ನಿರಾಣಿಗೆ ಬೆಂಬಲವಾಗಿ ನಿಂತರ ಕೆಲವು ಬಿಜೆಪಿ ಸದಸ್ಯರು, ಮರಿತಿಬ್ಬೇಗೌಡ ವಿರುದ್ಧ ಹರಿಹಾಯ್ದರು. ನಿನಗಿಂತ ಹತ್ತು ಪಟ್ಟು ಮಾತಾಡಲು ನಮಗೂ ಬರುತ್ತೆ ಎಂದು ಮುರುಗೇಶ್ ನಿರಾಣಿ ಸಹೋದರ ಹನುಮಂತ ಅವರು ಆಕ್ರೋಶ ಹೊರಹಾಕಿದರು. ಗದ್ದಲ ಜೋರಾಗುತ್ತಿದ್ದಂತೆ ಮಾರ್ಷಲ್​ಗಳು ಒಳ ಪ್ರವೇಶಿಸಿದರು. ಇಷ್ಟಾಗಿದ್ದರೂ ಕಾಂಗ್ರೆಸ್ ಸದಸ್ಯರು ಜಗಳ ನೋಡುತ್ತಾ ಸುಮ್ಮನಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:11 pm, Tue, 21 February 23