‘ಗ್ಯಾರಂಟಿ’ ನಿಷೇಧ ಬಿಜೆಪಿ ಹಣೆಬರದಲ್ಲಿ ಸಾಧ್ಯವಿಲ್ಲ: ಡಿಕೆ ಶಿವಕುಮಾರ್

ಬಿಜೆಪಿ ಚುನಾವಣೆ ಪ್ರಣಾಳಿಕೆ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಡಿಸಿಎಂ ಡಿಕೆ ಶಿವಕುಮಾರ್, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸುವುದಿಲ್ಲ ಎಂದಿದ್ದಾರೆ. ಅಲ್ಲದೆ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸುವುದು ಬಿಜೆಪಿಯಿಂದಾಗದು ಎಂದಿದ್ದಾರೆ. ಆ ಮೂಲಕ ಗ್ಯಾರಂಟಿ ಕುರಿತ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

‘ಗ್ಯಾರಂಟಿ’ ನಿಷೇಧ ಬಿಜೆಪಿ ಹಣೆಬರದಲ್ಲಿ ಸಾಧ್ಯವಿಲ್ಲ: ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Edited By:

Updated on: Apr 17, 2024 | 12:41 PM

ಬೆಂಗಳೂರು, ಏಪ್ರಿಲ್ 17:  ಯಾವುದೇ ಕಾರಣಕ್ಕೂ ಕಾಂಗ್ರೆಸ್ (Congress) ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು (Guarantee Schemes) ನಿಷೇಧಿಸಲು ಬಿಜೆಪಿಯಿಂದ ಸಾಧ್ಯವಾಗದು. ಬಿಜೆಪಿಯ ಹಣೆಬರಹದಲ್ಲೇ ಅದು ಬರೆದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ಮಂಗಳವಾರವಷ್ಟೇ ಬಿಜೆಪಿ ತೊರೆದಿದ್ದ ಕರಡಿ ಸಂಗಣ್ಣ ಅವರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಗ್ಯಾರಂಟಿ ಮುಂದುವರಿಯಲ್ಲ ಎಂದು ಬಿಜೆಪಿಯವರು ಹೇಳ್ತಿದ್ದಾರೆ. ಆದರೆ, ಅವರ ಹಣೆಬರಹದಲ್ಲಿ ಗ್ಯಾರಂಟಿ ತೆಗೆಯಲು ಸಾಧ್ಯವಿಲ್ಲ. ಬಿಎಸ್ ಯಡಿಯೂರಪ್ಪ, ಅಶೋಕ್, ವಿಜಯೇಂದ್ರ ಎಲ್ಲರಿಗೂ ಈ ಮಾತನ್ನು ಹೇಳುತ್ತಿದ್ದೇನೆ ಎಂದರು.

ಸೋಲಿನ ಭಯದಿಂದಲೇ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ನಮ್ಮ ಕಾರ್ಯಕ್ರಮ ಬಿಜೆಪಿಯನ್ನು ತೊಳೆಯುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಗ್ಯಾರಂಟಿಯ ಪರ ದೊಡ್ಡ ಅಲೆ ಇದೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಬಿಜೆಪಿಯಲ್ಲಿ ಸುಮಾರು 100 ಸಂಸದರಿಗೆ ಈ ಬಾರಿ ಟಿಕೆಟ್ ಕೊಟ್ಟಿಲ್ಲ. ಗೆಲ್ಲುವುದಿಲ್ಲ ಎಂಬುದು ಸಮೀಕ್ಷೆಯಲ್ಲಿ ಗೊತ್ತಾಗಿರುವುರಿಂದ ಸಂಸದರಿಗೆ ಟಿಕೆಟ್ ನಿರಾಕರಿಸಿದ್ದಾರೆ. ಎನ್‌ಡಿಎ ಪರಿಸ್ಥಿತಿ ಏನು ಅಂತಾ ಇದರಲ್ಲೇ ಗೊತ್ತಾಗ್ತಿದೆ. ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ಎಂದು ಮೋದಿ ಹೇಳುತ್ತಾರೆ. ಆದರೆ, ಅವರ ಪಕ್ಷದವರು ಸಂವಿಧಾನ ಬದಲಿಸುತ್ತೇವೆ ಎಂದಿದ್ದಾರೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ 20 ಕ್ಕೂ ಹೆಚ್ಚು ಸೀಟು ನಾವು ಗೆಲ್ಲುತ್ತೇವೆ. ಸೋಲುವ ಭೀತಿಯಿಂದ ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿಕೆಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.

ಶಿವಮೊಗ್ಗದಲ್ಲಿ ಯಾವುದೇ ಕಾರಣಕ್ಕೂ ಯಡಿಯೂರಪ್ಪ ಪುತ್ರ ರಾಘವೇಂದ್ರ ಗೆಲ್ಲೋದಿಲ್ಲ. ಗೀತಾ ಶಿವಕುಮಾರ್ ಗೆಲ್ಲುತ್ತಾರೆ. ಇದು ಶಿವಮೊಗ್ಗ ಫಲಿತಾಂಶ ಎಂದು ಡಿಕೆ ಶಿವಕುಮಾರ್ ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಏಪ್ರಿಲ್ 20 ರಂದು ಮತ್ತೆ ಕರ್ನಾಟಕಕ್ಕೆ ಪ್ರಧಾನಿ ಮೋದಿ; ಬೆಂಗಳೂರು, ಚಿಕ್ಕಬಳ್ಳಾಪುರದಲ್ಲಿ ಸಮಾವೇಶ

ಬಿಜೆಪಿ ಈ ಹಿಂದೆ ಕೊಟ್ಟ ಪ್ರಣಾಳಿಕೆಯೇ ಕಾರ್ಯರೂಪಕ್ಕೆ ಬಂದಿಲ್ಲ. ಸಂಸತ್ ಸದಸ್ಯರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅಬ್ಬರ ಮಾಡ್ತಿರುವ ಬಿಜೆಪಿಯನ್ನ ಬಿಟ್ಟು ಕಾಂಗ್ರೆಸ್ ಸೇರ್ತಿದ್ದಾರೆ. ನಮ್ಮ ಕಾರ್ಯಕ್ರಮ ಬಿಜೆಪಿಯನ್ನು ತೊಳೆಯುತ್ತದೆ. ಗ್ಯಾರಂಟಿಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆಂದು ಕುಮಾರಸ್ವಾಮಿ ಹೇಳಿದ್ದಾರೆ. ಅವರಿಗೆ ಮಹಿಳೆಯರು ಬುದ್ಧಿ ಕಲಿಸುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸಿದ್ಧಾಂತ ಮೆಚ್ಚಿ ಪಕ್ಷ ಸೇರ್ಪಡೆ: ಸಂಗಣ್ಣ

ಕಾಂಗ್ರೆಸ್​​​ನ ಸಿದ್ಧಾಂತ ಮೆಚ್ಚಿ ಪಕ್ಷ ಸೇರ್ಪಡೆಯಾಗಿದ್ದೇನೆ ಎಂದು ಪಕ್ಷ​ ಸೇರ್ಪಡೆ ಬಳಿಕ ಕರಡಿ ಸಂಗಣ್ಣ ಹೇಳಿದರು. ನಾನು ಅಧಿಕಾರಕ್ಕೋಸ್ಕರ ಕಾಂಗ್ರೆಸ್​ ಪಕ್ಷಕ್ಕೆ ಬಂದಿಲ್ಲ. ಕಾಂಗ್ರೆಸ್ ‌ಪಕ್ಷ ಸೇರ್ಪಡೆ ಖುಷಿ ಕೊಟ್ಟಿದೆ. ಕಾಂಗ್ರೆಸ್​ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವೆ ಎಂದು ಸಂಗಣ್ಣ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:34 pm, Wed, 17 April 24

Loading...
Unable to load recommendations.
Follow Us