ಯಾರಾದರು ತಲೆಬಾಗಿ ನಮಸ್ಕಾರ ಮಾಡಿದರೆ ನನಗೆ ಭಯವಾಗುತ್ತದೆ: ಗಾಂಧಿ ಹತ್ಯೆ ನೆನೆದ ಮಾಜಿ ಸ್ಪೀಕರ್ ಕೆ.ಆರ್.ರಮೇಶ್

ಮಹಾತ್ಮರನ್ನು ಕೊಂದ ವಂಶಸ್ಥರಿಗೆ ಆಡಳಿತದ ಹಗ್ಗ ಕೊಟ್ಟಿದ್ದೇವೆ. ಇಂದು ಪರಸ್ಪರ ಜಾತಿ, ಧರ್ಮದ ಹೆಸರಲ್ಲಿ ಕಲಹಗಳು ನಡೆಯುತ್ತಿವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಹೇಳಿದ್ದಾರೆ.

ಯಾರಾದರು ತಲೆಬಾಗಿ ನಮಸ್ಕಾರ ಮಾಡಿದರೆ ನನಗೆ ಭಯವಾಗುತ್ತದೆ: ಗಾಂಧಿ ಹತ್ಯೆ ನೆನೆದ ಮಾಜಿ ಸ್ಪೀಕರ್ ಕೆ.ಆರ್.ರಮೇಶ್
ಕೆ.ಆರ್.ರಮೇಶ್ ಕುಮಾರ್ (ಎಡ ಚಿತ್ರ)
Updated By: Rakesh Nayak Manchi

Updated on: Feb 01, 2023 | 5:43 PM

ಕೋಲಾರ: ಗಾಂಧಿ ಹತ್ಯೆಯನ್ನು ನೆನಪಿಸುತ್ತಾ, “ಯಾರಾದ್ರು ತಲೆಬಾಗಿ ನಮಸ್ಕಾರ ಮಾಡಿದ್ರೆ ನನಗೆ ಭಯವಾಗುತ್ತೆ” ಎಂದು ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ (K.R.Ramesh Kumar) ಹೇಳಿದ್ದಾರೆ. ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿಯಲ್ಲಿ ಹೇಳಿಕೆ ನೀಡಿದ ಅವರು, ಗಾಂಧೀಜಿಗೆ ತಲೆಬಾಗಿ ನಮಸ್ಕರಿಸುತ್ತಲೇ ಎದ್ದು ಶೂಟ್ ಮಾಡಿದರು. ಹೀಗಾಗಿ ನನಗೆ ಯಾರಾದರು ತಲೆಬಾಗಿ ನಮಸ್ಕಾರ ಮಾಡಿದಾಗ ಭಯವಾಗುತ್ತದೆ. ಗಾಂಧಿಜಿಗೆ ಅಂದು ತಲೆ ಬಗ್ಗಿಸಿ ನಮಸ್ಕಾರ ಮಾಡುತ್ತಲೇ ಎದ್ದು ಶೂಟ್ ಮಾಡಿದ್ದ. ಗಾಂಧಿಯನ್ನು ಕೊಂದ ಗೋಡ್ಸೆ ಆರ್​ಎಸ್​ಎಸ್​ನವರು. ಅರ್​ಎಸ್​ಎಸ್​, ಬಿಜೆಪಿ ಹಾಗೂ ಗೋಡ್ಸೆ ಒಂದೆ. ಸದ್ಯ ಮಹಾತ್ಮರನ್ನು ಕೊಂದ ವಂಶಸ್ಥರಿಗೆ ಆಡಳಿತದ ಹಗ್ಗ ಕೊಟ್ಟಿದ್ದೇವೆ. ಸಂವಿಧಾನ ಹಾಗೂ ಕಷ್ಟದಲ್ಲಿದ್ದವರಿಗೆ ಧ್ವನಿಯಾದವರನ್ನು ಕೊಂದರು. ಇಂದು ಪರಸ್ಪರ ಜಾತಿ, ಧರ್ಮದ ಹೆಸರಲ್ಲಿ ಕಲಹಗಳು ನಡೆಯುತ್ತಿವೆ ಎಂದರು.

ನಮ್ಮ ದೇಶದ ದೊಡ್ಡ ಪಿಡುಗು ಅಂದರೆ ಅದು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ. ಎನ್​ಆರ್​ಸಿ ಮೂಲಕ ನಮ್ಮ ನಡುವೆಯೇ ಗೋಡೆ ನಿರ್ಮಿಸಿದರು ಎಂದರು. ಮುಸ್ಲಿಂ ಮಹಿಳೆಯರ ಬುರ್ಖಾ, ಲವ್‌ ಜಿಹಾದ್ ಪ್ರಸ್ತಾಪ ಮಾಡಿದ ರಮೇಶ್ ಕುಮಾರ್, ಪ್ರೀತಿಸಿ ಮದುವೆಯಾಗುವವರಿಗೆ ಅಡ್ಡಿ ಮಾಡಿದ್ದೇ ಇವರ (ಬಿಜೆಪಿ) ಸಾಧನೆ. ಎಲ್ಲಾ ಧರ್ಮದವರು ಒಂದಾಗಿ ಬಾಳಬೇಕೆನ್ನುವುದು ನಮ್ಮ ಉದ್ದೇಶ. ಅದಕ್ಕಾಗಿಯೇ ರಾಹುಲ್ ಗಾಂಧಿ ಜೋಡೋ ಯಾತ್ರೆ ಮಾಡಿದರು. ಅದರಂತೆ ಇಂದು ಬಿಜೆಪಿಯವರ ವಾಯ್ಸ್ ಡೌನ್ ಆಗಿದೆ ಎಂದರು.

ಇದನ್ನೂ ಓದಿ: ಸಚಿವ ಸ್ಥಾನ ಸಿಗದಿದ್ದಕ್ಕೆ ರಮೇಶ್​ ಜಾರಕಿಹೊಳಿ ಹತಾಶೆಗೊಂಡಿದ್ದಾರೆ, ಅದಕ್ಕೆ ಹೀಗೆ ಮಾತನಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್ ವ್ಯಂಗ್ಯ

ಅಂದು ಇಂದಿರಾಗಾಂಧಿ ಅವರನ್ನ ಕೊಂದು ಏನ್ ಸಾಧಿಸಿದ್ದೀರಿ ಎಂದು ಪ್ರಶ್ನಿಸಿದ ರಮೇಶ್ ಕುಮಾರ್, 1984ರಲ್ಲಿ ಇಂದಿರಾ ಗಾಂಧಿಯನ್ನು, ಇದಾದ 7 ವರ್ಷದ ಬಳಿಕ ರಾಜೀವ್ ಗಾಂಧಿಯನ್ನ ಕೊಂದರು. ರಾಜೀವ್ ಗಾಂಧಿ ಹತ್ಯೆ ಬಳಿಕ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಭಯ ಸೃಷ್ಟಿಸಿದರು. ಕಾಂಗ್ರೇಸ್ ನಾಯಕರ ದಾರಿ ತಪ್ಪಿಸಿದರು. ಹೀಗಾಗಿ ಅಂದು ಜನತಾ ದಳ ಅಧಿಕಾರಕ್ಕೆ ಬಂತು ಎಂದರು.

ರಾಹುಲ್ ಗಾಂಧಿ ಅವರನ್ನ ಅಪಹಾಸ್ಯ ಮಾಡುತ್ತಾರೆ. ಜೊತೆಯಲ್ಲೆ ಇದ್ದು ಬೆನ್ನಿಗೆ ಚೂರಿ ಹಾಕಿದರು, ಸಂಸತ್​ನಲ್ಲಿ ಮೈಕ್ ಆಫ್ ಮಾಡುತ್ತಿದ್ದರು. ಇದರಿಂದ ಹೊರ ಬಂದ ರಾಹುಲ್ ಗಾಂಧಿ ಭಾರತ್ ಜೋಡೊ ಮಾಡಿದರು ಎಂದರು. ನಾನು ಗೆದ್ದರೆ ವಿಧಾನಸೌಧಕ್ಕೆ ಹೋಗುತ್ತೇನೆ, ಸೋತರೆ ಮನೆಗೆ ಹೋಗುತ್ತೇನೆ. ಆದರೆ ನಾನು ಯಾಕೆ ವಿಧಾನಸಭೆಗೆ ಹೋಗಬೇಕು ಅಂದರೆ ನಿಮ್ಮೆಲ್ಲರ ಧ್ವನಿಯಾಗಲು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ