ಜಾತಿ ಗಣತಿ ವರದಿ: ಅತ್ತ ಹೈಕಮಾಂಡ್, ಇತ್ತ ಸಮುದಾಯ: ಅಡಕತ್ತರಿಯಲ್ಲಿ ಸಿಲುಕಿದ ಡಿಕೆ ಶಿವಕುಮಾರ್

|

Updated on: Nov 03, 2023 | 2:45 PM

Kantharaj Caste Census Report: ಕಾಂಗ್ರೆಸ್ ಪಕ್ಷದ ಜಾತಿ ಗಣತಿ ಅಸ್ತ್ರದ ಬಗ್ಗೆ ಚರ್ಚೆ ನಡೆದಿದೆ. ಇದೆ ತಿಂಗಳು ಸಿದ್ದವಾಗಲಿರುವ ಜಾತಿಗಣತಿ ವರದಿಯ ಸಾಧಕ ಬಾಧಕಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಜಾತಿ ಗಣತಿ ಪ್ರಕಟಕ್ಕೆ ಮುಂದುವರೆದ ಜಾತಿಗಳು ವಿರೋಧ ವ್ಯಕ್ತಪಡಿಸುತ್ತಿವೆ. ಇನ್ನು ಈ ಬಗ್ಗೆ ಡಿಕೆ ಶಿವಕುಮಾರ್​ ನುಂಗುವುದಕ್ಕೆ ಆಗದೇ ಉಗುಳುವುದಕ್ಕೆ ಆಗದೇ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ.

ಜಾತಿ ಗಣತಿ ವರದಿ: ಅತ್ತ ಹೈಕಮಾಂಡ್, ಇತ್ತ ಸಮುದಾಯ: ಅಡಕತ್ತರಿಯಲ್ಲಿ ಸಿಲುಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Follow us on

ಬೆಂಗಳೂರು, (ನವೆಂಬರ್ 03): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಕಾಂತರಾಜ್ ಜಾತಿ ಗಣತಿ ವರದಿ(Kantharaj Caste Census Report) ಭಾರೀ ಸುದ್ದು ಮಾಡುತ್ತಿದೆ. ಮುಂದೆ ಲೋಕಸಭಾ ಚುನಾವಣೆ ಇರುವುದರಿಂದ ಜಾತಿ ಗಣತಿ ವರದಿಯಿಂದಾಗುವ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ಚಿಂತನೆ ನಡೆಸಿವೆ. ಮುಖ್ಯವಾಗಿ ಜಾತಿಗಣತಿ ವರದಿ ಜಾರಿಗೆ ಕಾಂಗ್ರೆಸ್​ ಉತ್ಸುಕವಾಗಿದೆ. ದೇಶದಲ್ಲಿ ಜಾತಿ ಗಣತಿಯನ್ನು ಬೆಂಬಲಿಸಲು ಸಿಡಬ್ಲೂಸಿ ಸರ್ವಾನುಮತದಿಂದ ನಿರ್ಧರಿಸಿದೆ. ಅದರಂತೆ ಕರ್ನಾಟಕದಲ್ಲಿ ಜಾತಿ ಗಣತಿ ವರದಿ ಬಿಡುಗಡೆಗೆ ಕ್ರಮಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ಗೆ ರಾಹುಲ್​ ಗಾಂಧಿ ಫಾರ್ಮಾನು ಹೊರಡಿಸಿದ್ದಾರೆ. ಆದ್ರೆ, ಇತ್ತ ಪ್ರಬಲ ಸಮುದಾಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ಅದರಲ್ಲೂ ಪ್ರಮುಖವಾಗಿ ಡಿಕೆ ಶಿವಕುಮಾರ್ ಅವರ ಸಮುದಾಯವಾಗಿರುವ ಒಕ್ಕಲಿಗರು ಈ ಜಾತಿ ಗಣತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಡಿಕೆ ಶಿವಕುಮಾರ್​ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ.

ಹೌದು…ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಒಕ್ಕಲಿಗ ಸಮುದಾಯದ ಸಹಾಯ ಕೇಳಿ ನಿರೀಕ್ಷೆ ಮಟ್ಟಿಗೆ ಯಶಸ್ಸು ಕಂಡಿರುವ ಡಿಕೆ ಶಿವಕುಮಾರ್, ರಾಜಕೀಯ ಶಕ್ತಿ ಬಳಸಿ ಒಕ್ಕಲಿಗ ಸಮುದಾಯಕ್ಕೆ ಬೇಕಾದ ಮೀಸಲಾತಿ ಹೆಚ್ಚಳಕ್ಕೆ ಹೋರಾಟ ಮಾಡಬೇಕಿದೆ ಎಂದಿದ್ದರು. ಹೀಗಾಗಿ ಇಡೀ ಒಕ್ಕಲಿಗ ಸಮುದಾಯ ಡಿಕೆ ಶಿವಕುಮಾರ್ ಅವರ ಬೆಂಬಲಕ್ಕೆ ನಿಂತಿತ್ತು. ಇದೀಗ ಒಕ್ಕಲಿಗ ಸಮುದಾಯ ಜಾತಿ ಗಣತಿ ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್, ಜಾತಿ ಗಣತಿ ವರದಿ ಬಿಡುಗಡೆ ಮಾಡಲ್ಲ ಎನ್ನು ಅಭಯವನ್ನು ತಮ್ಮ ಸಮುದಾಯಕ್ಕೆ ನೀಡಿದ್ದಾರೆ. ಮತ್ತೊಂದೆಡೆ ರಾಹುಲ್ ಗಾಂಧಿಯೇ ಜಾತಿ ಗಣತಿ ವರದಿ ಬಿಡುಗಡೆಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ದೇಶಾದ್ಯಂತ ಜಾತಿ ಗಣತಿ ಬೆಂಬಲಿಸುವ ನಿರ್ಣಯ ಅಂಗೀಕರಿಸಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ

ಯಾಕಂದ್ರೆ ಡಿಕೆ ಶಿವಕುಮಾರ್, ಉಪಮುಖ್ಯಮಂತ್ರಿ ಜೊತೆ ಕರ್ನಾಟಕ ಪ್ರದೇಶ ಕಾಂಗ್ರೆಸ್​ನ ಅಧ್ಯಕ್ಷರು. ಹೀಗಾಗಿ ಹೈಕಮಾಂಡ್​ನ ಸಲಹೆ ಸೂಚನೆಗಳನ್ನು ಪಾಲಿಸಲೇಬೇಕು. ಇಲ್ಲವಾದರಲ್ಲಿ ಹೈಕಮಾಂಡ್​ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತೆ. ಮತ್ತೊಂದೆಡೆ ಹೈಕಮಾಂಡ್​ ಮಾತಿಗೆ ಬೆಲೆ ಕೊಟ್ಟು ಜಾತಿ ಗಣತಿ ವರದಿ ಬಿಡುಗಡೆಗೆ ಬೆಂಬಲಿಸಿದರೆ ಇಡೀ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತೆ. ಅಷ್ಟೇ ಅಲ್ಲದೇ ಮುಂದೆ ರಾಜಕೀಯ ಭವಿಷ್ಯಕ್ಕೆ ಕಂಟಕವಾಗಬಹುದು. ಹೀಗಾಗಿ ಡಿಕೆ ಶಿವಕುಮಾರ್​​ ಇತ್ತ ಸಮುದಾಯದ ಪರ ನಿಲ್ಲಬೇಕಾ? ಅಥವಾ ರಾಹುಲ್ ಗಾಂಧಿ ಮಾತಿಗೆ ಬೆಲೆ ಕೊಡಬೇಕಾ ಎನ್ನುವ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ.

ಪುನರ್ ಪರಿಶೀಲನೆಗೆ ಒಕ್ಕಲಿಗೆ ಸಮುದಾಯ ಒತ್ತಾಯ

ಜಾತಿ ಗಣತಿ ವರದಿ ಬಿಡುಗಡೆಗೆ ಪರ-ವಿರೋಧ ವ್ಯಕ್ತವಾಗಿದೆ. ಕಾಂತರಾಜು ವರದಿಯನ್ನು ಒಕ್ಕಲಿಗ ಸಮುದಾಯದ ನಾಯಕರು ವಿರೋಧಿಸಿದ್ದಾರೆ. ನಿನ್ನೆ(ನವೆಂಬರ್ 02) ಸಭೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತಶ್ರೀ ನೇತೃತ್ವದಲ್ಲಿ ಈ ಕುರಿತು ಚರ್ಚಿಸಲು ಸಭೆ ನಡೆಯಿತು. ಡಿಸಿಎಂ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಚಲುವರಾಯಸ್ವಾಮಿ, ಶಾಸಕರಾದ ಅಶ್ವತ್ಥ್ ನಾರಾಯಣ್, ಶರತ್ ಬಚ್ಚೇಗೌಡ, ಎಂ.ಕೃಷ್ಣಪ್ಪ, S.T.ಸೋಮಶೇಖರ್, ಆರಗ ಜ್ಞಾನೇಂದ್ರ ಹಾಗೂ ಒಕ್ಕಲಿಗ ಸಂಘದ ನಾಯಕರು ಪಾಲ್ಗೊಂಡಿದ್ರು.

ಸಭೆ ಬಳಿಕ ಮಾತನಾಡಿದ ನಿರ್ಮಲಾನಂದನಾಥ ಸ್ವಾಮೀಜಿ, ಕಾಂತರಾಜು ವರದಿ ಅವೈಜ್ಞಾನಿಕ ಮತ್ತು ಲೋಪದೋಷದಿಂದ ಕೂಡಿದೆ. ಸರ್ಕಾರ ಇದನ್ನು ಪ್ರಕಟಮಾಡುವ ಮುನ್ನ ನಮ್ಮ ಅಭಿಪ್ರಾಯವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸಂಸದ ಡಿ.ಕೆ.ಸುರೇಶ್ ಹೇಳಿದ್ದೇನು?

ನಿರ್ಮಲಾನಂದನಾಥ ಶ್ರೀಗಳು ಸಮಾಜದ ಅಭಿಪ್ರಾಯ ತಿಳಿಸಿದ್ದಾರೆ. ಇದರಲ್ಲಿ ರಾಜಕೀಯ ಉದ್ದೇಶ ಏನಿಲ್ಲ. ಕಾಂತರಾಜ್ ಸಮಿತಿ ವರದಿ ಬಗ್ಗೆ ಚರ್ಚೆ ನಡೆಯುತ್ತಿದೆ. ವರದಿ ಸರ್ಕಾರದ ಮುಂದೆ ಬಂದಿಲ್ಲ. ಸರ್ಕಾರ ಇನ್ನೂ ಸಮ್ಮತಿಸಿಲ್ಲ. ಸಮಾಜದ‌ ಆಗುಹೋಗುಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಸಮಾಜದ ಅಭಿಪ್ರಾಯವನ್ನ ಹೇಳಿದ್ದಾರೆ ತಪ್ಪೇನಿಲ್ಲ. ವರದಿ ಬಂದ ಮೇಲೆ ತಾನೆ ನನಗೆ ಗೊತ್ತಾಗುವುದು. ವರದಿಯಲ್ಲಿ ಏನಿದ್ಯೋ ನನಗೇನು ಗೊತ್ತು. ಕಾಂತರಾಜ್ ಸಮಿತಿಗೆ ಸರ್ಕಾರ ಇನ್ನ ಒಪ್ಪಿಲ್ಲ. ಊಹಾಪೋಹಗಳಲ್ಲಿ ತೇಲುತ್ತಿದ್ದೇವೆ. ಕಾಂತರಾಜ್ ಸಮಿತಿ ವರದಿ ರಾಜಕೀಯ ವಸ್ತುವಲ್ಲ ಎಂದರು.

ಇತ್ತ ಕಾಂಗ್ರೆಸ್ ಹೈಕಮಾಂಡ್​ ಜಾತಿ ಗಣತಿ ವರದಿಗೆ ಬೆಂಬಲಿಸಿದ್ದು, ವರದಿ ಬಿಡುಗಡೆಗೆ ಸೂಚಿಸಿದೆ. ಆದ್ರ ಇತ್ತ, ಸ್ವಸಮುದಾಯ ಜಾತಿ ಗಣತಿ ವರದಿಗೆ ತೀವ್ರ ವಿರೋಧಸುತಿದೆ. ಇದರಿಂದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ಈ  ಜಾತಿ ಗಣತಿ ವರದಿಯನ್ನು ನುಂಗುವುದಕ್ಕೆ ಆಗದೇ ಉಗುಳುವುದಕ್ಕೆ ಆಗದ ಪರಿಸ್ಥಿತಿಯಲ್ಲಿ ಸಿಲುಕೊಂಡಿದ್ದು,  ಮುಂದೆ ಡಿಕೆಶಿ ಯಾವ ಕಡೆ ಹೆಜ್ಜೆ ಹಿಡುತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:40 pm, Fri, 3 November 23