ನಿಮ್ಮ ಕುಟುಂಬದ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಧ್ವನಿ ಎತ್ತಿ ಮಲ್ಲಿಕಾರ್ಜುನ್​ ಖರ್ಗೆ: ಲೆಹರ್ ಸಿಂಗ್ ಸಿರೋಯಾ

ಪ್ರಧಾನಿ ಮೋದಿ ಅವರ ವಿರುದ್ಧ ಮಲ್ಲಿಕಾರ್ಜುನ್​ ಖರ್ಗೆ ಅವರು ನೀಡಿರು ಹೇಳಿಕೆಯನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ ತೀವ್ರವಾಗಿ ಟೀಕಿಸಿದ್ದಾರೆ. ತಮ್ಮ ಪಕ್ಷಕ್ಕೆ ಉಂಟಾದ ಹಾನಿಯನ್ನು ಮರೆಮಾಚಲು ಖರ್ಗೆ ಅವರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಲೆಹರ್​ ಸಿಂಗ್​​ ಹೇಳಿದರು.

ನಿಮ್ಮ ಕುಟುಂಬದ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಧ್ವನಿ ಎತ್ತಿ ಮಲ್ಲಿಕಾರ್ಜುನ್​ ಖರ್ಗೆ: ಲೆಹರ್ ಸಿಂಗ್ ಸಿರೋಯಾ
ಲೆಹರ್​ ಸಿಂಗ್​ ಸಿರೋಯಾ, ಮಲ್ಲಿಕಾರ್ಜುನ್​ ಖರ್ಗೆ

Updated on: Nov 02, 2024 | 2:21 PM

ನವದೆಹಲಿ/ಬೆಂಗಳೂರು, ನವೆಂಬರ್​ 02: ಗ್ಯಾರಂಟಿ ಯೋಜನೆಗಳ (Guarantee Schemes) ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ (Mallikarjun Kharge) ಅವರು ಇತ್ತೀಚಿಗೆ ನೀಡಿದ್ದ ಹೇಳಿಕೆಯಿಂದ ಪಕ್ಷ ಮುಜುಗುರಕ್ಕೆ ಒಳಗಾಗುವಂತೆ ಮಾಡಿದೆ. ತಮ್ಮ ಹೇಳಿಕೆಯಿಂದ ಪಕ್ಷಕ್ಕೆ ಆದ ಡ್ಯಾಮೇಜ್​ ಅನ್ನು ಮರೆಮಾಚಲು ಮಲ್ಲಿಕಾರ್ಜುನ್​ ಖರ್ಗೆ ಅವರು ಪ್ರಧಾನಿ ಮೋದಿಯವರ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ ವಾಗ್ದಾಳಿ ಮಾಡಿದರು.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಟ್ವಿಟ್​ ಮಾಡಿದ ಲೆಹರ್​ ಸಿಂಗ್​ ಸಿರೋಯಾ “​ಖರ್ಗೆ ಕುಟುಂಬ ನೇತೃತ್ವದ “ಸಿದ್ಧಾರ್ಥ ವಿಹಾರ ಟ್ರಸ್ಟ್​” ವಿರುದ್ಧ ಕೇಳಿಬಂದಿರುವ ಭೂ ಕಬಳಿಕೆ ಆರೋಪದ ಬಗ್ಗೆ ಇನ್ನೂವರೆಗೂ ಮಾತನಾಡದ ಮಲ್ಲಿಕಾರ್ಜು ಖರ್ಗೆ ಅವರು ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ಮಾಡಿದ್ದನ್ನು ನೋಡಿ ನನಗೆ ಆಶ್ಚರ್ಯವಾಗಿದೆ” ಎಂದು ಮಲ್ಲಿಕಾರ್ಜು ಖರ್ಗೆ ವಿರುದ್ಧ ವ್ಯಂಗ್ಯವಾಡಿದರು.

​ಖರ್ಗೆ ಕುಟುಂಬ ನೇತೃತ್ವದ ಸಿದ್ಧಾರ್ಥ ವಿಹಾರ ಟ್ರಸ್ಟ್​ಗೆ ಮಂಜೂರಾಗಿದ್ದ ಐದು ಎಕರೆ ಭೂಮಿಯನ್ನು ಸದ್ದಿಲ್ಲದೆ ಕೆಐಎಡಿಬಿ ವಾಪಸ್​ ಮಾಡುವ ಮೂಲಕ ಪರೋಕ್ಷವಾಗಿ ತಪ್ಪಿತಸ್ಥರೆಂದು ಒಪ್ಪಿಕೊಂಡಿದ್ದಾರೆ” ಎಂದು ಹೇಳಿದರು.

ಕರ್ನಾಟಕ ಕಾಂಗ್ರೆಸ್​ನಲ್ಲಿ ಮೂಡಿದ ಬಿರುಕಿಗೆ ತೇಪೆ ಹಚ್ಚುವ ಭರದಲ್ಲಿ ಮಲ್ಲಿಕಾರ್ಜುನ್​ ಖರ್ಗೆಯವರು ಗ್ಯಾರಂಟಿಯಿಂದ ಆಗುವ ಸಮಸ್ಯೆ ಬಗ್ಗೆ ಹೇಳಿದ್ದಾರೆ. ಅಪರೂಪಕ್ಕೆ ಸತ್ಯವನ್ನು ಹೇಳಿದ್ದಾರೆ. ತೇಪೆ ಹಚ್ಚಲು ಹೋಗಿ ಪಕ್ಷಕ್ಕೆ ಇನ್ನಷ್ಟು ಹಾನಿಯುಂಟು ಮಾಡಿದೆ ಅಂತ ಮಲ್ಲಿಕಾರ್ಜುನ್​ ಖರ್ಗೆ ಅವರು ಅರಿತುಕೊಂಡಿರಬೇಕು. ಇದನ್ನು ಮರೆಮಾಚಲು ಮಲ್ಲಿಕಾರ್ಜುನ್​ ಖರ್ಗೆ ಅವರು ಪ್ರಧಾನಿ ಮೋದಿಯವರ ವಿರುದ್ಧ ಮಾತನಾಡಿದ್ದಾರೆ ಎಂದರು.

ಇದನ್ನೂ ಓದಿ: ಗ್ಯಾರಂಟಿ ಬಗ್ಗೆ ಖರ್ಗೆ ನೀಡಿದ ಎಚ್ಚರಿಕೆಯಿಂದ ಕಾಂಗ್ರೆಸ್ ಬಣ್ಣ ಬಯಲು: ಮೋದಿ ವಾಗ್ದಾಳಿ

ಆದರೆ, ಗ್ಯಾರಂಟಿಯಿಂದ ಆಗುತ್ತಿರುವ ಹಾನಿ ಬಗ್ಗೆ ಮಲ್ಲಿಕಾರ್ಜು ಖರ್ಗೆ ಅವರು ಪ್ರಾಮಾಣಿಕವಾಗಿ ಒಪ್ಪಿಕೊಂಡಿದನ್ನು ಮತ್ತು ಕರ್ನಾಟಕದ ಈ ಸ್ಥಿತಿಗೆ ಕನ್ನಡಿ ಹಿಡಿದಿರುವ ಮಲ್ಲಿಕಾರ್ಜುನ ಖರ್ಗೆಜಿಯವರ ಪ್ರಾಮಾಣಿಕತೆಯನ್ನು ನಾನು ಪ್ರಶಂಸಿಸುತ್ತೇನೆ ಎಂದು ವ್ಯಂಗ್ಯವಾಡಿದರು.

ಟ್ವಿಟರ್​ ಪೋಸ್ಟ್​

ಅಲ್ಲದೇ, ಕಾಂಗ್ರೆಸ್ ನಾಯಕರುಗಳಾದ ಆರ್ ಸುರ್ಜೆವಾಲಾ ಮತ್ತು ಕೆ ಸಿ ವೇಣುಗೋಪಾಲ್ ಅವರು ಹರ್ಯಾಣ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಲ್ಲಿಕಾರ್ಜುನ್​ ಖರ್ಗೆ ಅವರ ಬೆಂಬಲಕ್ಕೆ ನಿಂತು, ಪ್ರಧಾನಿ ಅವರನ್ನು ಕಟುವಾಗಿ ಟೀಕಿಸಿದರು ಎಂದು ತಿಳಿಸಿದರು.

ಆದರೆ, ಈ ನಾಯಕರು ಮಲ್ಲಿಕಾರ್ಜುನ್​ ಖರ್ಗೆ ಅವರ ಕುಟುಂಬದ ನೇತೃತ್ವದ ಟ್ರಸ್ಟ್ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಆಪ್ತರ ವಿರುದ್ಧ ಕೇಳಿಬಂದಿರುವ ಭೂಕಬಳಿಕೆ ಆರೋಪದ ಬಗ್ಗೆ ಪ್ರಶ್ನಿಸಿದ್ದಾರೆಯೇ? ಎಂದು ಲೆಹರ್ ಸಿಂಗ್ ಸಿರೋಯಾ ಪ್ರಶ್ನಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:10 pm, Sat, 2 November 24