ಬಿಕೆ ಹರಿಪ್ರಸಾದ್ ಯಾರ ಬಗ್ಗೆ ಯಾಕೆ ಟೀಕೆ ಮಾಡುತ್ತಿದ್ದಾರೆ ಅರ್ಥವಾಗುತ್ತಿಲ್ಲ: ದಿನೇಶ್ ಗುಂಡೂರಾವ್

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಕೆ ಹರಿಪ್ರಸಾದ್ ನಿರಂತರವಾಗಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಯಾರ ಎಚ್ಚರಿಕೆಗೂ ಬಗ್ಗದ ಹರಿಪ್ರಸಾದ್ ಅವರ ಮನಿಸು ಕಾಂಗ್ರೆಸ್ ಹೈಕಮಾಂಡ್​ಗೆ ತಲೆಬಿಸಿಯಾಗಿ ಪರಿಣಮಿಸಿದೆ. ಹೀಗಾಗಿ ಅವರ ಮುನಿಸು ಶಮನಕ್ಕೆ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಯತ್ನಿಸಿದ್ದಾರೆ.

ಬಿಕೆ ಹರಿಪ್ರಸಾದ್ ಯಾರ ಬಗ್ಗೆ ಯಾಕೆ ಟೀಕೆ ಮಾಡುತ್ತಿದ್ದಾರೆ ಅರ್ಥವಾಗುತ್ತಿಲ್ಲ: ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್ ಮತ್ತು ಬಿಕೆ ಹರಿಪ್ರಸಾದ್
Edited By: Rakesh Nayak Manchi

Updated on: Sep 11, 2023 | 2:44 PM

ಮಂಗಳೂರು, ಸೆ.11: ಬಿ.ಕೆ.ಹರಿಪ್ರಸಾದ್ (B.K.Hariprasad) ಅವರು ಯಾರ ಬಗ್ಗೆ ಟೀಕೆ ಮಾಡುತ್ತಿದ್ದಾರೆ, ಯಾಕೆ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ. ಕಾಂಗ್ರೆಸ್ ಎಂಎಲ್​ಸಿ ಬಿ.ಕೆ.ಹರಿಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ಹೈಕಮಾಂಡ್ ಅವರಿಗೆ ಏನೂ ಮಾತನಾಡಬೇಡಿ ಹೇಳಿದೆ. ಅವರು ಹೇಳುವುದು ಸರಿಯಲ್ಲ, ಒಬ್ಬ ರಾಜಕಾರಣಿ ಆ ರೀತಿ ಮಾತನಾಡಬಾರದು ಎಂದರು.

ಬಿಕೆ ಹರಿಪ್ರಸಾದ್ ಅವರಿಗೆ ಅಸಮಾಧಾನ ಯಾಕೆ ಎಂಬುದು ಗೊತ್ತಿಲ್ಲ. ಪಕ್ಷದಲ್ಲಿ ಸ್ಥಾನ ಸಿಗುತ್ತದೆ ಮತ್ತು ಹೋಗುತ್ತದೆ. ಆದರೆ ಒಂದು ಸಾರ್ವಜನಿಕ ವೇದಿಕೆಯಲ್ಲಿ ಆ ರೀತಿ ಮಾತನಾಡಬಾರದು. ಇದರಿಂದ ಯಾರಿಗೂ ತೊಂದರೆ ಆಗಿಲ್ಲ, ಅವರಿಗೇ ಡ್ಯಾಮೇಜ್ ಆಗುತ್ತಿದೆ. ನಮ್ಮ ಪಕ್ಷ ಬೇಧಬಾವ ಮಾಡಿಲ್ಲ, ಅಂಥದ್ದೂ ಮಾಡಿಯೂ ಇಲ್ಲ ಎಂದರು.

ಇದನ್ನೂ ಓದಿ: ನನ್ನನ್ನು ಮಂತ್ರಿ ಮಾಡದಿದ್ದಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಗೆ ಧನ್ಯವಾದ: ಸಿಎಂ ವಿರುದ್ಧ ಬಿಕೆ ಹರಿಪ್ರಸಾದ್ ವ್ಯಂಗ್ಯ ​

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಕೆ ಹರಿಪ್ರಸಾದ್ ನಿರಂತರವಾಗಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಯಾರ ಎಚ್ಚರಿಕೆಗೂ ಬಗ್ಗದ ಹರಿಪ್ರಸಾದ್ ಅವರ ಮನಿಸು ಕಾಂಗ್ರೆಸ್ ಹೈಕಮಾಂಡ್​ಗೆ ತಲೆಬಿಸಿಯಾಗಿ ಪರಿಣಮಿಸಿದೆ. ಹೀಗಾಗಿ ಅವರ ಮುನಿಸು ಶಮನಕ್ಕೆ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಯತ್ನಿಸಿದ್ದಾರೆ.

ಗಣೇಶ ಹಬ್ಬ ಆಚರಣೆ ಮಂಗಳೂರು ವಿವಿಯ ವಿವೇಚನೆಗೆ ಬಿಟ್ಟ ವಿಚಾರ

ಮಂಗಳೂರು ವಿಶ್ವವಿದ್ಯಾನಿಲಯದ ಹಾಸ್ಟೆಲ್​ನಲ್ಲಿ ನಡೆಯುವ ಗಣೇಶೋತ್ಸವ ವಿವಾದ ವಿಚಾರವಾಗಿ ಮಾತನಾಡಿದ ದಿನೇಶ್ ಗುಂಡೂರಾವ್, ಮಂಗಳೂರು ವಿವಿ ಬಿ ಗ್ರೇಡ್​ಗೆ ಹೋಗಿದೆ, ಅದನ್ನ ಎ ಗ್ರೇಡ್​ಗೆ ಹೆಚ್ಚಿಸಲು ಯೋಚನೆ ಮಾಡಬೇಕಿದೆ. ವಿವಿ ಸ್ವಯತ್ತ ಸಂಸ್ಥೆ, ಅದರಲ್ಲಿ ಯಾರೂ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಹೊರಗಿನವರು ಏನು ಹೇಳುತ್ತಾರೋ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ವಿವಿಯ ವಿಸಿ ಹಾಗೂ ರಾಜ್ಯಪಾಲರು ಅದನ್ನ ತೀರ್ಮಾನ ಮಾಡುತ್ತಾರೆ ಎಂದರು.

ಪ್ರಭಾಕರ ಭಟ್ ಏನ್ ಮಾತನಾಡ್ತಾರೆ ಅನ್ನೋದು ನಮಗೆ ಬಿಟ್ಟಿದ್ದಲ್ಲ. ವಿಶ್ವಿದ್ಯಾಲಯ ಚೆನ್ನಾಗಿ ಅಭಿವೃದ್ಧಿಯಾಗಬೇಕು, ಅದರ ಬಗ್ಗೆ ಚರ್ಚೆಯಾಗಲಿ. ಅನಾವಶ್ಯಕ ವಿಚಾರಕ್ಕೆ ಹೊರಗಿನವರು ಯಾಕೆ ಕೈ ಹಾಕಬೇಕು? ನಾವು ಇದರಲ್ಲಿ ಹಸ್ತಕ್ಷೇಪ ಮಾಡಲ್ಲ, ಅದಕ್ಕೆ ಕುಲಪತಿ ಇದ್ದಾರೆ ಎಂದರು.

ವಿಶ್ವವಿದ್ಯಾಲಯದಲ್ಲಿ 40 ವರ್ಷಗಳಿಂದ ಗಣೇಶೋತ್ಸವ ಆಚರಿಸುತ್ತಿದ್ದಾರೆ. ಈಗ ಯಾಕೆ ವಿವಾದ ಮಾಡುತ್ತಿದ್ದಾರೆ ಅಂತ ಅರ್ಥ ಆಗುತ್ತಿಲ್ಲ. ವಿಶ್ವವಿದ್ಯಾಲಯದ ಹಣ ಸಾರ್ವಜನಿಕರ ಹಣ, ಅದು ಶಿಕ್ಷಣಕ್ಕೆ ಬಳಕೆ ಆಗಬೇಕು. ಕೆಲವರಿಗೆ ಸಂಬಳ, ಪೆನ್ಶನ್ ಕೊಟ್ಟಿಲ್ಲ, ಅದು ಮೊದಲು ಸರಿ ಆಗಲಿ ಎಂದರು.

ಹಬ್ಬ ಆಚರಣೆ ವಿವಿಯ ವಿವೇಚನೆಗೆ ಬಿಟ್ಟ ವಿಚಾರ. ಅಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ತೀರ್ಮಾನ ಮಾಡುತ್ತಾರೆ. ಅದರ ಬಗ್ಗೆ ಗೊಂದಲ ನಿರ್ಮಾಣ ಸರಿಯಲ್ಲ. ಶಾಂತಿ ಸಾಮರಸ್ಯ ಮುಖ್ಯ, ಚುನಾವಣೆ ಹತ್ತಿರ ಬರುವಾಗ ಅಶಾಂತಿ ಸೃಷ್ಟಿ ಸರಿಯಲ್ಲ. ಇದನ್ನ ಜಿಲ್ಲೆಯ ಜನತೆ ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ashok

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸುದ್ದಿಬಿಡುಗಡೆ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಪ್ರಜಾ ಟಿ.ವಿಯ ಉಡುಪಿ ಜಿಲ್ಲಾ ವರದಿಗಾರರಾಗಿ ಒಂದು ವರ್ಷ ಏಳು ತಿಂಗಳು ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ, ಒಂದು ವರ್ಷ ನಾಲ್ಕು ತಿಂಗಳಿನಿಂದ ಟಿ.ವಿ 9 ವಾಹಿನಿಯಲ್ಲಿ ದಕ್ಷಿಣಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ ಇಂಡಿಯಾ ಟೆಲಿವಿಷನ್​ . ಕಾಮ್​ 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Follow Us