ರಾಜಕೀಯ ಬೇಳೆ ಬೇಯಿಸಲು ಸಚಿವರನ್ನು ಭೇಟಿಯಾಗುತ್ತಿರುವ ರೇಣುಕಾಚಾರ್ಯ: ಬಸವರಾಜು ಶಿವಗಂಗಾ

ಆಪರೇಷನ್ ಹಸ್ತ ಆರೋಪದ ನಡುವೆ ಬಿಜೆಪಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ಸಚಿವರನ್ನು ಭೇಟಿಯಾಗುತ್ತಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜು ವಿ ಶಿವಗಂಗಾ, ಕ್ಷೇತ್ರದ ಸಮಸ್ಯೆ ಮುಂದಿಟ್ಟು ಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿ ಕೊಳ್ಳಲು ರೇಣುಕಾಚಾರ್ಯ ಸಚಿವರನ್ನ ಭೇಟಿ ಆಗುತ್ತಿದ್ದಾರೆ ಎಂದಿದ್ದಾರೆ.

ರಾಜಕೀಯ ಬೇಳೆ ಬೇಯಿಸಲು ಸಚಿವರನ್ನು ಭೇಟಿಯಾಗುತ್ತಿರುವ ರೇಣುಕಾಚಾರ್ಯ: ಬಸವರಾಜು ಶಿವಗಂಗಾ
ಹೊನ್ನಾಳಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಹಾಲಿ ಶಾಸಕ ಬಸವರಾಜು ವಿ ಶಿವಗಂಗಾ
Follow us
| Updated By: Rakesh Nayak Manchi

Updated on: Aug 27, 2023 | 8:07 PM

ದಾವಣಗೆರೆ, ಆಗಸ್ಟ್ 27: ಹೊನ್ನಾಳಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ (M.P.Renukacharya) ಅವರು ಕಾಂಗ್ರೆಸ್ ಸಚಿವರನ್ನ ಭೇಟಿ ಮಾಡುತ್ತಿದ್ದು, ಸ್ಥಳೀಯ ನಿಷ್ಠಾವಂತ ಕಾರ್ಯಕರ್ತರಿಗೆ ಗೊಂದಲ ಉಂಟಾಗುತ್ತಿದೆ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜು ವಿ ಶಿವಗಂಗಾ (Basavaraju V Shivaganga) ಹೇಳಿದರು. ಪಟ್ಟಣದಲ್ಲಿ ಮಾತನಾಡಿದ ಅವರು, ರೇಣುಕಾಚಾರ್ಯ ಪ್ರಚಾರ ಪ್ರಿಯರು. ಅಧಿಕಾರ ಇರಲಿ ಬಿಡಲಿ ಅವರಿಗೆ ಪ್ರಚಾರ ಬೇಕು, ಹೀಗಾಗಿ ಸಚಿವರ ಭೇಟಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕಿಕೊಳ್ಳುತ್ತಿದ್ದಾರೆ ಎಂದರು.

ಕ್ಷೇತ್ರದ ಸಮಸ್ಯೆಗಳ ನೆಪದಲ್ಲಿ ರೇಣುಕಾಚಾರ್ಯ ಅವರು ಸಚಿವರುಗಳನ್ನ ಭೇಟಿ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರನ್ನೇ ಆಯ್ಕೆ ಮಾಡದ ಬಿಜೆಪಿ ಪಕ್ಷ ನಾವಿಕನಿಲ್ಲದ ದೋಣಿಯಾಗಿದ್ದು, ರಾಜಕೀಯವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳಲು ರೇಣುಕಾಚಾರ್ಯ ಮುಂದಾಗುತ್ತಿದ್ದಾರೆ. ಇಂಥವರಿಗೆ ಕಾಂಗ್ರೆಸ್ ಸಚಿವರು ಪ್ರಾಮುಖ್ಯತೆ ನೀಡಬಾರದು. ಕಾಂಗ್ರೆಸ್ ಶಾಸಕರಿಗೆ ಸಚಿವರನ್ನ ಭೇಟಿ ಮಾಡಲು ಅವಕಾಶ ಸಿಗುತ್ತಿಲ್ಲ. ಕೊನೆ ಪಕ್ಷ ಸಚಿವರುಗಳಿಗೆ ಫೋನ್ ಕರೆ ಮಾಡಿದರೂ ರೆಸ್ಪಾನ್ಸ್ ಮಾಡುತ್ತಿಲ್ಲ. ಆದರೆ ವಿರೋಧ ಪಕ್ಷದ ಮಾಜಿ ಶಾಸಕರಿಗೆ ಸಚಿವರ ಭೇಟಿಗೆ ಅವಕಾಶ ಸಿಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: ಎಂಪಿ ರೇಣುಕಾಚಾರ್ಯ ಕಾಂಗ್ರೆಸ್ ಸೇರಲ್ಲ, ಇದು ಸೌಹಾರ್ದಯುತ ಭೇಟಿ ಅಷ್ಟೇ: ಸಚಿವ ಎಸ್​ಎಸ್​ ಮಲ್ಲಿಕಾರ್ಜುನ ಸ್ಪಷ್ಟನೆ

ಸಚಿವರನ್ನ ಭೇಟಿ ಮಾಡಿರುವ ಫೋಟೋಗಳನ್ನ ರೇಣುಕಾಚಾರ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪ್ರಚಾರ ಪಡೆಯುತ್ತಿರುವುದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗೆ ಗೊಂದಲ ಉಂಟಾಗಿದೆ. ಇಂಥವರಿಗೆ ಕಾಂಗ್ರೆಸ್ ನಾಯಕರು ಪ್ರಾಮುಖ್ಯತೆ ಕೊಡುವ ಅವಶ್ಯಕತೆ ಇಲ್ಲ ಎಂದು ಬಸವರಾಜು ವಿ ಶಿವಗಂಗಾ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರೇಣುಕಾಚಾರ್ಯಗೆ ಹೊನ್ನಾಳಿಯಲ್ಲಿ ರಾಜಕೀಯ ಜೀವನ ನೀಡಿ, ಅಧಿಕಾರ ಕೊಟ್ಟು ಬೆಳಸಿದವರು. ಆದರೆ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಜನಾರ್ದನ ರೆಡ್ಡಿ ಸೇರಿದಂತೆ ಹಲವು ಶಾಸಕರೊಂದಿಗೆ ರೆಸಾರ್ಟ್ ರಾಜಕೀಯ ಮಾಡಿ ಅಧಿಕಾರದಿಂದ ಕೆಳಗಿಳಿಸಿದ್ದು ಇದೇ ರೇಣುಕಾಚಾರ್ಯ ಅವರು. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಇದೀಗ ಅಧಿಕಾರ ಇಲ್ಲದ ಕಾರಣ ಪ್ರಚಾರಕ್ಕಾಗಿ ಕಾಂಗ್ರೆಸ್ ಸಚಿವರ ಭೇಟಿ ಮಾಡುವ ನಾಟಕ ಶುರು ಮಾಡಿದ್ದಾರೆ ಎಂದರು.

ಕಳೆದ ಬಾರಿ ಅವರದ್ದೇ ಸರ್ಕಾರವಿದ್ದರೂ ಜನರ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಹೊನ್ನಾಳಿ ಜನರು ತಿರಸ್ಕಾರ ಮಾಡಿದ್ದು, ಇತ್ತೀಚೆಗೆ ಗ್ಯಾರಂಟಿಗಳ ವಿರುದ್ಧ ಅಭಿಯಾನ ಮಾಡಿದಂತ ರೇಣುಕಾಚಾರ್ಯಗೆ ಕಾಂಗ್ರೆಸ್ ನಾಯಕರು ಇಂಥವರನ್ನ ಹತ್ತಿರಕ್ಕೂ ಬಿಟ್ಟುಕೊಳ್ಳಬಾರದು. ಲೋಕಸಭಾ ಚುನಾವಣೆ ಹತ್ತಿರವಿದ್ದು ಕಾಂಗ್ರೆಸ್ ಕಾರ್ಯಕರ್ತರಿಗೆ ಇಂಥ ವಿಚಾರ ಗೊಂದಲಕ್ಕೆ ಕಾರಣವಾಗುತ್ತಿದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ