R Dhruvanarayan: ಆರ್​​ ಧ್ರುವನಾರಾಯಣ ನಿಧನದ ಬೆನ್ನೆಲೆ ಭುಗಿಲೆದ್ದ ಆಕ್ರೋಶ: ಪುತ್ರನಿಗೆ ಟಿಕೆಟ್​ ನೀಡುವಂತೆ ಒತ್ತಾಯ

|

Updated on: Mar 12, 2023 | 5:45 PM

ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ನಿಧನದ ಬೆನ್ನೆಲೆ ಧ್ರುವನಾರಾಯಣ್ ಪುತ್ರ ದರ್ಶನ್​ಗೆ ಟಿಕೆಟ್ ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.

ಚಾಮರಾಜನಗರ: ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ (R Dhruvanarayan) ಮಾರ್ಚ್ 11ರಂದು ಹೃದಯ ಸ್ತಂಭನದಿಂದ (Cardiac Arrest) ನಿಧನರಾಗಿದ್ದಾರೆ. ಇಂದು (ಮಾ. 12) ಚಾಮರಾಜನಗರ ತಾಲೂಕಿನ ಹುಟ್ಟೂರಾದ ಹೆಗ್ಗವಾಡಿ ಬಳಿಯ ತೋಟದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇದಿದ್ದು, ಆರ್.ಧ್ರುವನಾರಾಯಣ ಮಣ್ಣಲ್ಲಿ ಮಣ್ಣಾಗಿದ್ದಾರೆ. ಸದ್ಯ ಧ್ರುವನಾರಾಯಣ್ ಪುತ್ರ ದರ್ಶನ್​ಗೆ ಟಿಕೆಟ್ ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ರಾಜ್ಯ ಕಾಂಗ್ರೆಸ್ ನಾಯಕರಿಗೆ ದರ್ಶನ್ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಆಯ್ತು ಸುಮ್ಮನಿರಿ ನಾನಿದ್ದೇನೆ ಎಂದು ಅಭಿಮಾನಿಗಳನ್ನು ಮಾಜಿ ಸಿಎಂ ಸಿದ್ದರಾಮಯ್ಯ ಸಮಾಧಾನಪಡಿಸಿದರು. ಇನ್ನೊಂದು ಕಡೆ ಧ್ರುವನಾರಾಯಣ್ ಭಾವಚಿತ್ರದ ಪೇಪರ್ ತೋರಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೊರಟು ಹೋದರು.

ಮೈಸೂರು ಭಾಗದ ದಲಿತ ಸಮುದಾಯದ ಮೇಲೆ ಧ್ರುವನಾರಾಯಣ್ ಅವರು ಹಿಡಿತ ಸಾಧಿಸಿದ್ದರು. ಇದೀಗ ಧ್ರುವನಾರಾಯಣ್ ಕುಟುಂಬವನ್ನ ಕೈ ಬಿಡಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಸದ್ಯ ದರ್ಶನ್ ಧ್ರುವನಾರಾಯಣ್ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಧ್ರುವನಾರಾಯಣ, ಮಿಂಚಿ ಮರೆಯಾದ ಕಾಂಗ್ರೆಸ್​ನ ಧ್ರುವ ತಾರೆ ಇನ್ನು ನೆನಪು ಮಾತ್ರ

ಟಿಕೆಟ್ ವಿಚಾರಕ್ಕೆ ನೋ ಕಾಮೆಂಟ್ಸ್ ಎಂದ ದರ್ಶನ್ ಧ್ರುವನಾರಾಯಣ್ 

ಟಿಕೆಟ್​ ವಿಚಾರವಾಗಿ ಧ್ರುವನಾರಾಯಣ್ ಪುತ್ರ ದರ್ಶನ್​ ಪ್ರತಿಕ್ರಿಯೆ ನೀಡಿದ್ದು,​ ತಂದೆಯ ಅಂತ್ಯಕ್ರಿಯೆಗೆ ರಾಜ್ಯದ ಎಲ್ಲಾ ಕಡೆಯಿಂದ‌‌ ಅಭಿಮಾನಿಗಳು, ಕಾರ್ಯಕರ್ತರು ಬಂದಿದ್ದಾರೆ‌. ಅಂತ್ಯಕ್ರಿಯೆಯನ್ನ ಯಶಸ್ವಿಯಾಗಿ ನೆರವೇರಿಸಿದ್ದಾರೆ ಅವರೆಲ್ಲರಿಗೆ ಧನ್ಯವಾದಗಳು. ಮುಂದೆ ಏನ್ ಹೇಳ್‌ಬೇಕು ನನಗೆ ಗೊತ್ತಾಗುತ್ತಿಲ್ಲ. ನಂಜನಗೂಡಿನಿಂದ ತಮಗೆ ಟಿಕೆಟ್ ನೀಡುವಂತೆ ಅಭಿಮಾನಿಗಳ ಒತ್ತಾಯ ಕುರಿತು ಪ್ರಸ್ತಾಪಿಸಿದ್ದು, ನೋ ಕಾಮೆಂಟ್ಸ್ ಎಂದಿದ್ದಾರೆ.

ಟಿಕೆಟ್​ ವಿಚಾರವಾಗಿ ಧ್ರುವನಾರಾಯಣ ಬೇಸರ 

ಧ್ರುವನಾರಾಯಣಗೆ ಟಿಕೇಟ್ ಬಗ್ಗೆ ಡಿ.ಕೆ ಶಿವಕುಮಾರ್ ಒಲವು ಹೊಂದಿದ್ದರು. ಆದರೆ ಮಹದೇವಪ್ಪಗೆ ಟಿಕೆಟ್​ ನೀಡುವುದರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಒಲವು ಹೊಂದಿದ್ದರು. ಇಬ್ಬರ ನಡುವೆಯೂ ಸಮನ್ವಯತೆ ಬಾರದ ಹಿನ್ನೆಲೆ ಇಬ್ಬರ ಹೆಸರನ್ನೂ ಶಿಫಾರಸು ಮಾಡಿ ದೆಹಲಿಗೆ ರವಾನಿಸಲಾಗಿತ್ತು. ಇಬ್ಬರೂ ಹೆಸರು ಇದ್ದ ಬಗ್ಗೆ ಧ್ರುವನಾರಾಯಣ ಕೊಂಚ ಬೇಸರಗೊಂಡಿದ್ದರು. ಕಾರ್ಯಾಧ್ಯಕ್ಷರಾಗಿದ್ದುಕೊಂಡು ತಮಗೆ ಟಿಕೆಟ್​ ಖಚಿತವಾಗದ ಬಗ್ಗೆ ಬೇಸರ ಹೊಂದಿದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ: R Dhruvanarayan: ಆರ್​​ ಧ್ರುವನಾರಾಯಣ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ

ಎಚ್​.ಸಿ ಮಹದೇವಪ್ಪ ಹಾಗೂ ಧ್ರುವನಾರಾಯಣ ನಡುವೆ ಟಿಕೆಟ್​ ವಿಚಾರವಾಗಿ ಪೈಪೋಟಿ ನಡೆದಿತ್ತು. ಆದರೆ ಮಹದೇವಪ್ಪಗೆ ಟಿಕೆಟ್​ ನೀಡಬಾರದು. ಧ್ರುವನಾರಾಯಣ ಪಕ್ಷದ ಒತ್ತಡದಿಂದಲೇ ಸಾವನ್ನಪ್ಪಿದ್ದು. ಹಾಗಾಗಿ ಧ್ರುವನಾರಾಯಣ  ಮಗನಿಗೆ ನಂಜನಗೂಡು ಟಿಕೆಟ್​ ಈಗಲೇ ಘೋಷಣೆ ಮಾಡಬೇಕು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಣ್ಣಲ್ಲಿ ಮಣ್ಣಾದ ಆರ್.ಧ್ರುವನಾರಾಯಣ  

ಸರಳತೆ, ಮಿತ ಭಾಷಿ, ಸಜ್ಜನಿಕೆ, ವಿನಯತೆಯ ಸಹಕಾರ ಮೂರ್ತಿಯಂತಿದ್ದ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮಣ್ಣಲ್ಲಿ ಮಣ್ಣಾಗಿದ್ದಾರೆ. ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಬಳಿ ತೋಟದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿದೆ. ತಂದೆ, ತಾಯಿ ಸಮಾಧಿ ಪಕ್ಕದಲ್ಲೇ ಧ್ರುವನಾರಾಯಣ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಪುತ್ರರಾದ ದರ್ಶನ್​, ಧೀರನ್ ಅಂತಿಮ ವಿಧಿವಿಧಾನ ಪೂರೈಸಿದರು.

ಅಂತ್ಯಕ್ರಿಯೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಶಾಮನೂರು ಶಿವಶಂಕರಪ್ಪ, ಜಿ.ಟಿ.ದೇವೇಗೌಡ, ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್​, ಆರ್.ನರೇಂದ್ರ, ಪುಟ್ಟರಂಗಶೆಟ್ಟಿ, ಹರ್ಷವರ್ಧನ್, ಅನಿಲ್ ಚಿಕ್ಕಮಾದು, ಡಾ.ಯತೀಂದ್ರ, ಡಾ.ಪುಷ್ಪಾ ಅಮರನಾಥ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ರು. ಅಪಾರ ಜನಸ್ತೋಮ ನೆರದಿದ್ದು ಅಗಲಿದ ನಾಯಕನಿಗೆ ಕಣ್ಣೀರಿನ ವಿದಾಯ ಹೇಳಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.