ರಾಜ್ಯಸಭಾ ಚುನಾವಣೆ: 4ನೇ ಅಭ್ಯರ್ಥಿ ಗೆಲ್ಲಲು ಅಡ್ಡ ಮತದಾನವೇ ನಿರ್ಣಾಯಕ, ಮೂರೂ ಪಕ್ಷಗಳಲ್ಲಿ ತಳಮಳ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 06, 2022 | 9:57 AM

ಜೆಡಿಎಸ್​ಗೆ ತನ್ನ ಕೈಲಿರುವ 32 ಪ್ರಥಮ ಪ್ರಶಸ್ತ್ಯ ಮತಗಳನ್ನು ಹಿಡಿದಿಟ್ಟುಕೊಳ್ಳುವುದೇ ದೊಡ್ಡ ಸವಾಲಾಗಿದೆ. ಪಕ್ಷದ ಕೆಲ ಶಾಸಕರ ಬಗ್ಗೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಬಹಿರಂಗವಾಗಿಯೇ ಅನುಮಾನ ವ್ಯಕ್ತಪಡಿಸಿದ್ದರು.

ರಾಜ್ಯಸಭಾ ಚುನಾವಣೆ: 4ನೇ ಅಭ್ಯರ್ಥಿ ಗೆಲ್ಲಲು ಅಡ್ಡ ಮತದಾನವೇ ನಿರ್ಣಾಯಕ, ಮೂರೂ ಪಕ್ಷಗಳಲ್ಲಿ ತಳಮಳ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ರಾಜ್ಯಸಭಾ ಚುನಾವಣೆಗೆ (Rajyasabha Elections) ದಿನಗಣನೆ ಆರಂಭವಾಗಿದೆ. ಕರ್ನಾಟಕದ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ (Karnataka Politics) 4ನೇ ಅಭ್ಯರ್ಥಿಯನ್ನು ಗೆಲ್ಲಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಚುನಾವಣೆಯಲ್ಲಿ 3ನೇ ಅಭ್ಯರ್ಥಿಯನ್ನು ಗೆಲ್ಲಿಸಲು ಮೂರೂ ಪಕ್ಷಗಳು ಪೈಪೋಟಿ ನಡೆಸುತ್ತಿವೆ. ಜೆಡಿಎಸ್​ಗೆ ತನ್ನ ಕೈಲಿರುವ 32 ಪ್ರಥಮ ಪ್ರಶಸ್ತ್ಯ ಮತಗಳನ್ನು ಹಿಡಿದಿಟ್ಟುಕೊಳ್ಳುವುದೇ ದೊಡ್ಡ ಸವಾಲಾಗಿದೆ. ಪಕ್ಷದ ನಾಲ್ವರು ಶಾಸಕರ ಬಗ್ಗೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ (HD Kumaraswamy), ಬಹಿರಂಗವಾಗಿಯೇ ಅನುಮಾನ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದರು. ಎಚ್​ಡಿಕೆ ಆಕ್ರೋಶಕ್ಕೆ ತುತ್ತಾಗಿದ್ದ ನಾಲ್ವರೂ ಈ ಹಿಂದೆಯೇ ಪಕ್ಷದ ಉನ್ನತ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದರು. ಆದರೆ ನಂತರದ ದಿನಗಳಲ್ಲಿ ವರಸೆ ಬದಲಿಸಿದ ಕುಮಾರಸ್ವಾಮಿ, ನಮ್ಮ ಎಲ್ಲ ಶಾಸಕರೂ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದರು.

ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ (Kupendra Reddy) ಸಹ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ಜೆಡಿಎಸ್​ನ ಎಲ್ಲ ಶಾಸಕರನ್ನೂ ವೈಯಕ್ತಿಕವಾಗಿ ಭೇಟಿಯಾಗುತ್ತಿದ್ದಾರೆ. ಜೆಡಿಎಸ್​ನ 32 ಶಾಸಕರ ಜೊತೆಗೆ ಹೆಚ್ಚುವರಿಯಾಗಿ 3ರಿಂದ 4 ಮತಗಳು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಎಚ್​.ಡಿ.ಕುಮಾರಸ್ವಾಮಿ ಸಹ ‘ಆತ್ಮವಿಶ್ವಾಸದ ಮತಗಳು ನಮಗೆ ಬರುತ್ತವೆ’ ಎಂದು ಹೇಳುವ ಮೂಲಕ ಇದೇ ಆಶಯ ವ್ಯಕ್ತಪಡಿಸಿದ್ದಾರೆ. ಆದರೆ ಅಡ್ಡಮತದಾನ (ಕ್ರಾಸ್ ವೋಟಿಂಗ್) ತಡೆಯದಿದ್ದರೆ ಜೆಡಿಎಸ್​ಗೆ ಸೋಲು ನಿಶ್ಚಿತ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್: 25 ಉಳಿಕೆ ಮತ

ಕಾಂಗ್ರೆಸ್‌ನಲ್ಲಿ ಮೊದಲ ಅಭ್ಯರ್ಥಿಗೆ ನೀಡಿದ ಎಲ್ಲ ಮತಗಳೂ ಸಿಂಧುವಾದರೆ, ಎರಡನೇ ಅಭ್ಯರ್ಥಿಗೆ 25 ಉಳಿಕೆ ಮತಗಳು ಇರುತ್ತವೆ. ಮೊದಲ ಅಭ್ಯರ್ಥಿಗೆ 45 ಮತ ಹಾಕದವರಿಂದ ಮನ್ಸೂರ್ ಖಾನ್‌ಗೆ ಎರಡನೇ ಪ್ರಾಶಸ್ತ್ಯದ ಮತ ಸಿಗುವ ಸಾಧ್ಯತೆಯಿದೆ. ಅಡ್ಡಮತದಾನದಲ್ಲಿ ಹೆಚ್ಚುವರಿಯಾಗಿ ಮತಗಳು ಬರಬಹುದು ಎಂಬ ನಿರೀಕ್ಷೆ ಕಾಂಗ್ರೆಸ್​ ಪಕ್ಷಕ್ಕೆ ಇದೆ. 8ಕ್ಕಿಂತ ಹೆಚ್ಚು ಹೆಚ್ಚುವರಿ ಮತ ಬಂದರೆ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಸುರಕ್ಷಿತರಾಗಿರುತ್ತಾರೆ. 3ರಿಂದ 4 ಹೆಚ್ಚುವರಿ ಮತಗಳು ಬಂದರೆ ಕಾಂಗ್ರೆಸ್​ನ ಮನ್ಸೂರ್ ಖಾನ್ ಸೋಲಿನ ಸುಳಿಗೆ ಸಿಲುಕುತ್ತಾರೆ.

ಬಿಜೆಪಿ: 32 ಉಳಿಕೆ ಮತ

ಮೊದಲ ಅಭ್ಯರ್ಥಿಗಳ ಗೆಲವಿನ ನಂತರ ಬಿಜೆಪಿಗೆ 32 ಉಳಿಕೆ ಮತಗಳು ಇರುತ್ತವೆ. 50 ಶಾಸಕರ ಮತಗಳನ್ನು ಹಂಚಿಕೆ ಮಾಡುವಂತೆ ರಾಜ್ಯಸಭೆಗೆ ಕರ್ನಾಟಕದಿಂದ ಸ್ಪರ್ಧಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ರಾಜ್ಯ ನಾಯಕರಿಗೆ ಮನವಿ ಮಾಡಿದ್ದಾರೆ. 47ಕ್ಕಿಂತ ಹೆಚ್ಚು ಮತ ಬಂದರೆ ಮತ ವರ್ಗಾವಣೆಗೆ ಅವಕಾಶವಿದೆ. 5 ಹೆಚ್ಚುವರಿ ಮತಗಳನ್ನು ಮೂರನೇ ಅಭ್ಯರ್ಥಿಗೆ ವರ್ಗಾವಣೆ ಮಾಡಬಹುದು. ಮೊದಲ ಪ್ರಾಶಸ್ತ್ಯದ ಐದು ಮಗಳು ಲೆಹರ್​ ಸಿಂಗ್​ಗೆ ಸಿಗುತ್ತವೆ. ಯಾವುದೇ ಮತಗಳು ಅಸಿಂಧು ಆಗದಿದ್ದರೆ 3ನೇ ಅಭ್ಯರ್ಥಿಗೆ 32 ಮತಗಳು ಸಿಗುತ್ತವೆ.

ಮೊದಲು ಪ್ರಾಶಸ್ತ್ಯ ಮತಗಳಲ್ಲಿ ಯಾರಿಗೂ 45 ಮತಗಳು ಸಿಗುವುದಿಲ್ಲವಾದ ಕಾರಣ, ಎರಡನೇ ಸುತ್ತಿನ ಮತ ಎಣಿಕೆ ಅನಿವಾರ್ಯವಾಗುತ್ತದೆ. ಎರಡನೇ ಸುತ್ತಿನಲ್ಲಿ ಎಲಿಮೆನೇಷನ್ ಪ್ರಕ್ರಿಯೆ ಆರಂಭವಾಗುತ್ತದೆ. ಕನಿಷ್ಠ ಪ್ರಥಮ ಪ್ರಾಶಸ್ತ್ಯ ಮತ ಗಳಿಸಿದ ಅಭ್ಯರ್ಥಿಯ ಮತಗಳಿಂದ ಎಲಿಮೆನೇಷ್ ಪ್ರಕ್ರಿಯೆ ಆರಂಭ. ಕ್ರಾಸ್ ವೋಟ್ ಆಗದಿದ್ದರೆ ಎರಡನೇ ಸ್ಥಾನದಲ್ಲಿರುವ ಮನ್ಸೂರ್ ಖಾನ್, ಮೊದಲ ಸ್ಥಾನದಲ್ಲಿ ಕುಪೇಂದ್ರ ರೆಡ್ಡಿ, ಲೆಹರ್‌ಸಿಂಗ್ ಸಮಬಲ ಸಾಧಿಸಲಿದ್ದಾರೆ. ಸ್ಪರ್ದೆಯಿಂದ ಕಾಂಗ್ರೆಸ್‌ ಅಭ್ಯರ್ಥಿ ಎಲಿಮೇನೆಟ್ ಆಗಬಹುದು. ನಂತರ ಮೊದಲ ಸ್ಥಾನದಲ್ಲಿರುವ ಇಬ್ಬರ ಮತ ಎಣಿಕೆ ನಡೆಯಲಿದ್ದು, ಎರಡನೇ ಪ್ರಾಶಸ್ತ್ಯ ಮತಗಳ ಮೂಲಕ ಬಿಜೆಪಿಗೆ ಗೆಲುವಿನ ಅವಕಾಶ ಸಿಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಲೆಹರ್ ಸಿಂಗ್ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ

ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿರುವ ಲೆಹರ್‌ಸಿಂಗ್ ಕಲಬುರಗಿ ನಿವಾಸಿ ಎಂದು ಅಫಿಡವಿಟ್‌ನಲ್ಲಿ ನಮೂದಿಸಿರುವುದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕ್, ಮೇಯರ್ ಹುದ್ದೆಗಾಗಿ ಅವರು ಕಲಬುರಗಿ ನಿವಾಸಿಯಾಗಿದ್ದರು. ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಬಿಜೆಪಿ ಮುಂದಾಗಿತ್ತು’ ಎಂದು ವ್ಯಂಗ್ಯವಾಡಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ