ಸತೀಶ್ ಜಾರಕಿಹೊಳಿ ಅಸಮಾಧಾನಕ್ಕೆ ಕಾರಣವೇನು? ಮುನಿಸು ತಣಿಸಿದ್ರಾ ಕೆಸಿ ವೇಣುಗೋಪಾಲ್?

| Updated By: ಗಣಪತಿ ಶರ್ಮ

Updated on: Oct 16, 2023 | 4:17 PM

Reason for Satish Jarkiholi's Dissent; ಸತೀಶ್ ಅವರ ಮುನಿಸಿಗೆ ಕಾರಣವೇನು ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್​​ ಮೂಲಗಳು ತಿಳಿಸಿವೆ. ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮೂಗು ತೂರಿಸುತ್ತಿರುವುದು ಹಾಗೂ ಪಕ್ಷದ ಚಟುವಟಿಕೆಗಳಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಆಕ್ಷೇಪ ಅವರಿಂದ ವ್ಯಕ್ತವಾಗಿದೆ ಎನ್ನಲಾಗಿದೆ.

ಸತೀಶ್ ಜಾರಕಿಹೊಳಿ ಅಸಮಾಧಾನಕ್ಕೆ ಕಾರಣವೇನು? ಮುನಿಸು ತಣಿಸಿದ್ರಾ ಕೆಸಿ ವೇಣುಗೋಪಾಲ್?
ಸಚಿವ ಸತೀಶ್ ಜಾರಕಿಹೊಳಿ
Follow us on

ಬೆಂಗಳೂರು, ಅಕ್ಟೋಬರ್ 16: ಕರ್ನಾಟಕ ಕಾಂಗ್ರೆಸ್ (Karnataka Congress) ಸರ್ಕಾರ ಅಸ್ತಿತ್ವಕ್ಕೆ ಬಂದಂದಿನಿಂದಲೂ ಕೆಲವೊಬ್ಬರು ಶಾಸಕರ ಅಸಮಾಧಾನ, ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆಗಳು, ಶಾಸಕಾಂಗ ಪಕ್ಷದ ಸಭೆ ಕರೆಯುವ ವಿಚಾರವಾಗಿ ಬರೆದ ಪತ್ರ ವಿವಾದ ಸೇರಿದಂತೆ ಹಲವು ವಿದ್ಯಮಾನಗಳು ನಡೆದಿವೆ. ಇದೀಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರು ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂಬ ವಿಚಾರ ಭಿನ್ನಮತದ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ. ಆದಾಗ್ಯೂ, ಸತೀಶ್ ಅವರ ಮುನಿಸನ್ನು ತಣಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಬಹುತೇಕ ಯಶಸ್ವಿಯಾಗಿದೆ ಎನ್ನಲಾಗಿದೆ.

ಸತೀಶ್ ಜಾರಕಿಹೊಳಿ ಅವರು 20ಕ್ಕೂ ಹೆಚ್ಚು ಶಾಸಕರ ಜೊತೆ ಮೈಸೂರಿಗೆ ತೆರಳಲು ಯೋಜನೆ ರೂಪಿಸಿದ್ದರು. ಅದಕ್ಕಾಗಿ ಪ್ರತ್ಯೇಕ ಬಸ್ ಕೂಡ ಬುಕ್ ಮಾಡಿದ್ದರು. ಕೊನೆ ಕ್ಷಣದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮಧ್ಯ ಪ್ರವೇಶಿಸಿ ಸತೀಶ್ ಅವರ ಮನವೊಲಿಸಿದ್ದಾರೆ.

ಸತೀಶ್ ಜಾರಕಿಹೊಳಿ ಮುನಿಸಿಗೆ ಕಾರಣವೇನು?

ಸತೀಶ್ ಅವರ ಮುನಿಸಿಗೆ ಕಾರಣವೇನು ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್​​ ಮೂಲಗಳು ತಿಳಿಸಿವೆ. ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮೂಗು ತೂರಿಸುತ್ತಿರುವುದು ಹಾಗೂ ಪಕ್ಷದ ಚಟುವಟಿಕೆಗಳಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಆಕ್ಷೇಪ ಅವರಿಂದ ವ್ಯಕ್ತವಾಗಿದೆ ಎನ್ನಲಾಗಿದೆ. ಜತೆಗೆ, ಕೆಪಿಸಿಸಿ ಸಂಘಟನೆ ಮರು ವಿಂಗಡಣೆಯಲ್ಲೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಯಾವುದೇ ಚರ್ಚೆ ಮಾಡದೇ ಹೆಸರು ಶಿಫಾರಸು ಮಾಡಿದ್ದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕರಿಗೂ ಯಾವುದೇ ಬೆಲೆ ಸಿಗ್ತಿಲ್ಲ, ಸರ್ಕಾರದಲ್ಲಿ ಕೆಲಸಗಳು ಆಗ್ತಿಲ್ಲ. ಈಗಾಗಲೇ ಹೈಕಮಾಂಡ್ ಗಮನಕ್ಕೆ ತಂದರೂ ಸಮಸ್ಯೆಗೆ ಪರಿಹಾರವಾಗ್ತಿಲ್ಲ. ಹೀಗಾಗಿ ನಾವೆಲ್ಲಾ ಶಾಸಕರು ಒಗ್ಗಟ್ಟಾಗಿ ಚರ್ಚೆ ಮಾಡಿದ್ದೀವೆ ಎಂದು ಸತೀಶ್ ಹೇಳಿದ್ದಾರೆ ಎನ್ನಲಾಗಿದೆ. ಶಾಸಕರ ಜೊತೆ ತೆರಳಿ ಪಕ್ಷದಲ್ಲಿ ಅಸಮಾಧಾನವಿದೆ ಎಂಬ ಸಂದೇಶ ರವಾನೆ ಮಾಡಲು ಹಾಗೂ ಪಕ್ಷದೊಳಗೆ ತಮ್ಮ ಸಾಮರ್ಥ್ಯ ಮತ್ತೊಮ್ಮೆ ಸಾಬೀತುಪಡಿಸಲು ಅವರು ಯತ್ನಿಸಿದ್ದಾರೆ. ರಾಜಕೀಯದಲ್ಲಿ ಏನುಬೇಕಾದರೂ ಆಗಬಹುದು. ಹೈಕಮಾಂಡ್ ನಮ್ಮ ಬೇಡಿಕೆಯನ್ನು ನಿರ್ಲಕ್ಷಿಸಬಾರದು ಎಂಬ ಸಂದೇಶ ರವಾನಿಸುವುದು ಸತೀಶ್ ಜಾರಕಿಹೊಳಿ ಉದ್ದೇಶವಾಗಿತ್ತು ಎನ್ನಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಬೆಂಗಳೂರಿಗೆ ಬಂದ ವೇಣುಗೋಪಾಲ್ ಮಾತುಕತೆ ನಡೆಸಿ ಮುನಿಸು ಶಮನಗೊಳಿಸಲು ಯತ್ನಿಸಿದ್ದಾರೆ.

ಸತೀಶ್ ಜಾರಕಿಹೊಳಿ ಜೊತೆ ಮಾತುಕತೆ ನಡೆಸಿದ ಬಳಿಕ ವೇಣುಗೋಪಾಲ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನೂ ಕರೆಸಿ ಮಾತನಾಡಿದ್ದಾರೆ. ಇದೇ ವೇಳೆ ಅವರು, ರಾಜ್ಯ ಕಾಂಗ್ರೆಸ್ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಯಾವುದೇ ಉದ್ದೇಶದಿಂದ ಪ್ರವಾಸ ಹೊರಟಿಲ್ಲ: ಸತೀಶ್ ಜಾರಕಿಹೊಳಿ

ಯಾವುದೇ ಉದ್ದೇಶದಿಂದ ಪ್ರವಾಸ ಹೊರಟಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ‘ಟಿವಿ9’ಗೆ ಹೇಳಿಕೆ ನೀಡಿದ ಅವರು, ಶಾಸಕರ ಪ್ರವಾಸ ರದ್ದಾಗಿಲ್ಲ, ಮುಂದೆ ಆಯೋಜನೆ ಆಗಬೇಕಿದೆ. ನನಗೆ ಯಾವುದೇ ಅಸಮಾಧಾನ ಇಲ್ಲ. ಇಷ್ಟು ದೊಡ್ಡ ಖಾತೆ ಕೊಟ್ಟಿದ್ದಾರೆ ನಾನ್ಯಾಕೆ ಅಸಮಾಧಾನ ಆಗಲಿ? ಕಾರ್ಯಾಧ್ಯಕ್ಷರ ನೇಮಕ ವಿಚಾರದಲ್ಲಿ ಕೆಲವರ ಹೆಸರು ಕೊಟ್ಟಿದ್ದೇನೆ. ಹೈಕಮಾಂಡ್ ಯಾರನ್ನು ನೇಮಕ ಮಾಡುತ್ತದೆಯೋ ಗೊತ್ತಿಲ್ಲ. ಯಾವುದೇ ಸಂದೇಶ ರವಾನೆ ಮಾಡಲು ಪ್ರವಾಸ ಹೊರಟಿಲ್ಲ. ಕೆಲವರು ಬೇರೆ ಕಡೆ ಹೋಗಿದ್ದಾರೆ, ಕೆಲವರು ದುಬೈಗೆ ಹೋಗಿದ್ದಾರೆ. ನಾವೂ ಹಾಗೆ ಹೊರಟಿದ್ದೇವೆ ಅಷ್ಟೇ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 20ಕ್ಕೂ ಹೆಚ್ಚು ಶಾಸಕರನ್ನು ಒಗ್ಗೂಡಿಸಿ ಟ್ರಿಪ್​: ಸತೀಶ್ ಜಾರಕಿಹೊಳಿ ನಡೆಗೆ ಹೈಕಮಾಂಡ್ ಶಾಕ್!!

ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಪ್ರವಾಸ ತೆರಳಲು ಕಾಂಗ್ರೆಸ್​ನ 20 ಶಾಸಕರ ಸೋಮವಾರ ಬೆಳಗ್ಗೆಯೇ ಬೆಂಗಳೂರಿಗೆ ಆಗಮಿಸಿದ್ದರು. ಬಾಗಲಕೋಟೆ, ಚಿತ್ರದುರ್ಗ, ಧಾರವಾಡ, ಬೆಳಗಾವಿ ಭಾಗದ ಶಾಸಕರು ಸತೀಶ್ ಜಾರಕಿಹೊಳಿ ಮನೆಗೆ ಆಗಮಿಸಿದ್ದರು. ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಮಾತುಕತೆ ಬಳಿಕ ಪ್ರವಾಸ ರದ್ದಾಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ