ಪೂರ್ಣಾವಧಿ ಸಿಎಂ ಸ್ಥಾನದ ಭರವಸೆ ನಂತರ ಗ್ಯಾರಂಟಿ ಜಾಮೀನಿಗೆ ಸಹಿ ಹಾಕಿದ ಸಿದ್ದರಾಮಯ್ಯ: ಮುನಿರತ್ನ

|

Updated on: Jun 24, 2023 | 7:38 PM

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಬನ್ನಿ ಎಂದು ನನಗೆ ಆಹ್ವಾನ ನೀಡಿದ್ದರು. ಭಾರೀ ಬೇಡಿಕೆಯೂ ವ್ಯಕ್ತಪಡಿಸಿದ್ದರು. ಆದರೆ ನಾನು ಹೋಗಲಿಲ್ಲ ಎಂದು ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಶಾಸಕ ಮುನಿರತ್ನ ಹೇಳಿದ್ದಾರೆ.

ಪೂರ್ಣಾವಧಿ ಸಿಎಂ ಸ್ಥಾನದ ಭರವಸೆ ನಂತರ ಗ್ಯಾರಂಟಿ ಜಾಮೀನಿಗೆ ಸಹಿ ಹಾಕಿದ ಸಿದ್ದರಾಮಯ್ಯ: ಮುನಿರತ್ನ
ಬಿಜೆಪಿ ಶಾಸಕ ಮುನಿರತ್ನ ಮತ್ತು ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು: ಪೂರ್ಣಾವಧಿ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್​ ನಾಯಕರು ಭರವಸೆ ನೀಡಿದ ನಂತರವೇ ಸಿದ್ದರಾಮಯ್ಯ (Siddaramaiah) ಅವರು ಗ್ಯಾರಂಟಿ ಯೋಜನೆಗಳ ಜಾಮೀನಿಗೆ ಸಹಿ ಹಾಕಿದ್ದಾರೆ ಎಂದು ಬಿಜೆಪಿ ಶಾಸಕ ಮುನಿರತ್ನ (Munirathna) ಹೇಳಿದ್ದಾರೆ. ಲೋಕಸಭಾ ಚುನಾವಣೆ ಸಿದ್ಧತೆಗಾಗಿ ಬೆಂಗಳೂರು ಕೇಂದ್ರ ಜಿಲ್ಲೆಯಲ್ಲಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ಅರಮನೆ ಮೈದಾನದಲ್ಲಿ ಆಯೋಜಿಸಿದ ಸಮಾವೇಶದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಇತ್ತು, ಭಾರೀ ಬೇಡಿಕೆ ಇತ್ತು. ಆದರೆ ನಾನು ಹೋಗಲಿಲ್ಲ. ನನಗೆ ಕಾಂಗ್ರೆಸ್​ನಲ್ಲಿ ಅನೇಕ ಸ್ನೇಹಿತರು ಇದ್ದಾರೆ. ಅವರು ನೀಡಿದ ಮಾಹಿತಿ ಪ್ರಕಾರ, ಚುನಾವಣಾ ಪೂರ್ವದಲ್ಲಿ ಸುರ್ಜೇವಾಲಾ, ವೇಣುಗೋಪಾಲ್ ನೇತೃತ್ವದಲ್ಲಿ ಒಂದು ಸಭೆ ನಡೆದಿತ್ತು. ಅಂದು ಗ್ಯಾರಂಟಿ ಕಾರ್ಡ್​​ಗೆ ಸಹಿ ಹಾಕುವ ಬಗ್ಗೆ ಚರ್ಚೆ ಆಯಿತು. ಡಿ.ಕೆ. ಶಿವಕುಮಾರ್ ಒಬ್ಬರೇ ಸಹಿ ಹಾಕುವ ನಿರ್ಣಯಕ್ಕೆ ಬಂದಾಗ ಇದು ತಪ್ಪಾಗುತ್ತದೆ, ಸಿದ್ದರಾಮಯ್ಯ ಕೂಡ ಸಹಿ ಹಾಕಬೇಕು ಎಂದು ಹೇಳಿದ್ದಾರಂತೆ. ಸಹಿ ಹಾಕುತ್ತೇನೆ, ಆದರೆ ಐದು ವರ್ಷ ನನಗೆ ಅಧಿಕಾರ ಕೊಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರಂತೆ. ಇದಕ್ಕೆ ನಾಯಕರು ಒಪ್ಪಿಕೊಂಡ ನಂತರವೇ ಗ್ಯಾರಂಟಿ ಜಾಮೀನಿಗೆ ಸಿದ್ದರಾಮಯ್ಯ ಸಹಿ ಹಾಕಿದ್ದಾರೆ ಎಂದರು.

ಈಗಾಗಲೇ ಸಿದ್ದರಾಮಯ್ಯ ತಾನೇ ಮುಂದಿನ ಐದು ವರ್ಷದ ವರೆಗೆ ಮುಖ್ಯಮಂತ್ರಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಇದ್ದಾರೆ‌. ಎಂ.ಬಿ. ಪಾಟೀಲ್ ಮೂಲಕ ಹೇಳಿಸುತ್ತಿದ್ದರು. ಈಗ ಎಂ.ಬಿ. ಪಾಟೀಲ್​ ಅವರನ್ನು ಹೆದರಿಸಿ ಸುಮ್ಮನೆ ಕೂರಿಸಿದ್ದಾರೆ. ಯಾರು ಹೇಗೆ ಹೆದರಿಸಿದರೋ, ಗದರಿದರೋ, ಬೆದರಿಸಿದರೋ ಗೊತ್ತಿಲ್ಲ ಎಂದರು.

ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ವಿರುದ್ಧ ಸೇಡು ತೀರಿಸಿಕೊಳ್ಳಲು ಮತ್ತೆ ಯಡಿಯೂರಪ್ಪ ಮೊರೆ ಹೋದ ಬಿಜೆಪಿ, ಇಲ್ಲಿದೆ ಕೇಸರಿ ಪಡೆಯ ಪಕ್ಕಾ ಪ್ಲಾನ್

ನಮ್ಮ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್​ನವರು ಪೇ ಸಿಎಂ ಎಂದು ತೇಜೋವಧೆ ಮಾಡಿದರು. ಅವತ್ತೇ ಅವರನ್ನು ಎತ್ತಿಕೊಂಡು ಹೋಗಿ ಒಳಗೆ ಹಾಕಿದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ. ಬಿಟ್ ಕಾಯಿನ್, ಗುತ್ತಿಗೆದಾರರು 40% ಆರೋಪ ಮಾಡಿದಾಗ ನಾವು ಸರಿಯಾಗಿ ಅವತ್ತೇ ಉತ್ತರ ನೀಡಿರಲಿಲ್ಲ. ಇದು ಕಾಂಗ್ರೆಸ್ ಗೆಲುವಲ್ಲ, ನಮ್ಮ ಸ್ವಯಂ ಅಪರಾಧ. ಇನ್ನೂ ಅನೇಕ ನಮ್ಮ ತಪ್ಪುಗಳು ಇವೆ. ಈಗ ವಿಮರ್ಶೆ ಮಾಡಲು ಹೋಗಲ್ಲ ಎಂದರು.

ಮೋದಿಯವರು ಅಕ್ಕಿ ಉಚಿತವಾಗಿ ಕೊಡುತ್ತಿದ್ದಾರೆ. ಈಗ ಮೋದಿ ಅದನ್ನೂ ನಿಲ್ಲಿಸಿದರೆ ಫ್ರೀ ಅಕ್ಕಿಯನ್ನು ಕಾಂಗ್ರೆಸ್ ನವರಿಗೆ ನಾವು ಕೊಡಬೇಕಾಗತ್ತದೆ ಎಂದು ಹೇಳಿದ ಮುನಿರತ್ನ, 5 ಕೆಜಿ ಅಕ್ಕಿ ಕೊಡುತ್ತಿರುವುದು ನಾವು ಅಂತಾ ಬಂದು ಕಾಂಗ್ರೆಸ್​​ನವರು ಧರ್ಮಸ್ಥಳ ಮಂಜುನಾಥನ ಮೇಲೆ ಆಣೆ ಮಾಡಲಿ. ಮಾತು ಕೊಟ್ಟಂತೆ 10 ಕೆಜಿ ಅಕ್ಕಿ ಕೊಡಿ. ಉಚಿತ ವಿದ್ಯುತ್ ಅಂತ ಹೇಳಿ ಈಗ 75, 80 ಯುನಿಟ್ ಅಂತ ಷರತ್ತು ಹಾಕಿದರೆ ಹೇಗೆ ಅಂತ ವಾಗ್ದಾಳಿ ನಡೆಸಿದರು.

ಭೀಷ್ಮ ಯಡಿಯೂರಪ್ಪ ನೇತೃತ್ವದಲ್ಲಿ ಲೋಕಸಭೆ ಚುನಾವಣೆ: ಮುನಿರತ್ನ

ನಮ್ಮಲ್ಲಿ ಭೀಮ, ಅರ್ಜುನ, ನಕುಲ, ಸಹದೇವ ಎಲ್ಲರೂ ಇದ್ದಾರೆ. ಭೀಷ್ಮ ಇರುವ ತನಕ ಯುದ್ಧ ಸೋಲಲ್ಲ. ನಮ್ಮಲ್ಲಿ ಭೀಷ್ಮ ಯಡಿಯೂರಪ್ಪ ಇದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳೇ ದಲ್ಲಾಳಿಗಳು. ದಲ್ಲಾಳಿ ಕೆಲಸ ಮಾಡಲು ರೆಡಿ ಇದ್ದರೆ ನನ್ನ ಹತ್ತಿರ ಬನ್ನಿ ಎಂದು ಇವರು ಹೇಳುತ್ತಾರೆ. ಸಿಕ್ಕಿಹಾಕಿಕೊಂಡರೆ ಅಧಿಕಾರಿ ಜೈಲಿಗೆ, ಇವರು ಸೇಫ್ ಆಗಬೇಕು ಅಂತ ಅಧಿಕಾರಿಗಳನ್ನು ದಲ್ಲಾಳಿಗಳಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:27 pm, Sat, 24 June 23