ಲೋಕಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ವಾಕ್ಸಮರ; ಸ್ಮೃತಿ ಇರಾನಿ ಮಾತಿಗೆ ನನ್ನಲ್ಲಿ ಮಾತನಾಡಬೇಡಿ ಎಂದ ಸೋನಿಯಾ ಗಾಂಧಿ

ಮುರ್ಮು ಅವರು ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ ಅಂದಿನಿಂದ ಹಿಡಿದು ಕಾಂಗ್ರೆಸ್ ಪಕ್ಷ ಅವರನ್ನು ಅವಮಾನ ಮಾಡುವ ಚಾಳಿ ಮುಂದುವರಿಸಿಕೊಂಡು ಬಂದಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ...

ಲೋಕಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ವಾಕ್ಸಮರ; ಸ್ಮೃತಿ ಇರಾನಿ ಮಾತಿಗೆ ನನ್ನಲ್ಲಿ ಮಾತನಾಡಬೇಡಿ ಎಂದ ಸೋನಿಯಾ ಗಾಂಧಿ
ಸೋನಿಯಾ ಗಾಂಧಿ- ಸ್ಮೃತಿ ಇರಾನಿ
Updated By: ರಶ್ಮಿ ಕಲ್ಲಕಟ್ಟ

Updated on: Jul 28, 2022 | 3:39 PM

ಲೋಕಸಭೆಯಲ್ಲಿ(Lok sabha) ಗುರುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಮತ್ತು ಕೇಂದ್ರ ಸಚಿವೆ ಸ್ಮತಿ ಇರಾನಿ (Smriti Irani) ಅವರ ನಡುವೆ ವಾಕ್ಸಮರ ನಡೆದಿದೆ. ಸೋನಿಯಾ ಗಾಂಧಿ ಅಮೇಥಿ ಸಂಸದೆ ಸ್ಮೃತಿ ಇರಾನಿ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ದೂರಿದ್ದು, ರಾಯ್ ಬರೇಲಿ ಸಂಸದೆ,  ಸೋನಿಯಾ ಗಾಂಧಿಯನ್ನು ಬಿಜೆಪಿ ಸಚಿವೆ ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸದನದಲ್ಲಿ ಕಲಾಪ ಮುಂದೂಡಿದ ವೇಳೆ ಈ ವಾಕ್ಸಮರ ನಡೆದಿದೆ ಎಂದು ಹೇಳಲಾಗಿದ್ದು ಈ ಬಗ್ಗೆ ವಿಡಿಯೊ ಸಾಕ್ಷ್ಯ ಅಥವಾ ದಾಖಲೆಗಳು ಇಲ್ಲ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಮೂಲಗಳು ಅಲ್ಲಿ ಏನು ನಡೆಯಿತು ಎಂಬುದನ್ನು ಅವರದ್ದೇ ರೀತಿಯಲ್ಲಿ ವಿವರಿಸಿದ್ದಾರೆ.

ಅಲ್ಲಿ ನಡೆದಿದ್ದೇನು?

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ನಿನ್ನೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಹೇಳಿದ್ದು ಇದನ್ನು ಲೋಕಸಭೆಯಲ್ಲಿ ಬಿಜೆಪಿ ಖಂಡಿಸಿದೆ. ಮುರ್ಮು ಅವರು ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ ಅಂದಿನಿಂದ ಹಿಡಿದು ಕಾಂಗ್ರೆಸ್ ಪಕ್ಷ ಅವರನ್ನು ಅವಮಾನ ಮಾಡುವ ಚಾಳಿ ಮುಂದುವರಿಸಿಕೊಂಡು ಬಂದಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಬಿಜೆಪಿ ಸಂಸದರು ಘೋಷಣೆ ಕೂಗಿ ಕ್ಷಮೆಯಾಚನೆಗೆ ಒತ್ತಾಯಿಸಿದ್ದಾರೆ. ಗದ್ದಲ, ಘೋಷಣೆಗಳ ನಡುವೆ ಸದನ ಕಲಾಪ ಮುಂದೂಡಲೇ ಬೇಕಾಗಿ ಬಂತು. ಆ ಹೊತ್ತಲ್ಲಿ ಬಿಜೆಪಿ ಸಂಸದರು ಸೋನಿಯಾ ಗಾಂಧಿ ಮಾಫೀ ಮಾಂಗೋ ( ಸೋನಿಯಾ ಗಾಂಧಿ ಕ್ಷಮೆ ಕೇಳಿ) ಎಂದು ಘೋಷಣೆ ಕೂಗಿದ್ದಾರೆ.

ಕಲಾಪ ಮುಂದೂಡಿದ ಹೊತ್ತಲ್ಲಿ ಅಲ್ಲಿಂದ ಹೊರ ಹೋಗುತ್ತಿದ್ದ ಸೋನಿಯಾ ಈ ಘೋಷಣೆ ಕೇಳಿದ ಕೂಡಲೇ ಟ್ರಷರಿ ಬೆಂಚ್ ಬಳಿ ಹೋಗಿದ್ದಾರೆ. ವಿವಿಧ ವರದಿಗಳ ಪ್ರಕಾರ ಸೋನಿಯಾ ಗಾಂಧಿ ಅವರು ಬಿಜೆಪಿ ನಾಯಕಿ ರಮಾ ದೇವಿ ಬಳಿ ಹೋಗಿ ಈ ವಿವಾದದಲ್ಲಿ ನನ್ನ ಹೆಸರನ್ನೇಕೆ ಎಳೆದುತರಲಾಗುತ್ತಿದೆ ಎಂದು ಕೇಳಿದ್ದಾರೆ. ಚೌಧರಿ ಬಾಯ್ತಪ್ಪಿ ಹಾಗೆ ಹೇಳಿದ್ದಾರೆ. ಈ ಬಗ್ಗೆ ಅವರು ಈಗಲೇ ತಮ್ಮ ನಿಲುವು ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದಿದ್ದಾರೆ. ರಮಾ ದೇವಿ ಮತ್ತು ಸೋನಿಯಾ ಗಾಂಧಿ ಮಾತಾಡುತ್ತಿದ್ದಂತೆ ಇರಾನಿ ಮಧ್ಯಪ್ರವೇಶಿಸಿದ್ದಾರೆ .

ಬಿಜೆಪಿ ಹೇಳುವ ಪ್ರಕಾರ ಸ್ಮೃತಿ ಇರಾನಿ,  ಸೋನಿಯಾ ಗಾಂಧಿ ಅವರಲ್ಲಿ ಸಮಸ್ಯೆ ಏನು ಎಂದು ಕೇಳಿದ್ದಾರೆ. ಇನ್ನು ಕೆಲವು ವರದಿಗಳ ಪ್ರಕಾರ, ನಾನೇನಾದರೂ ಸಹಾಯ ಮಾಡಲೇ ಮೇಡಂ ಎಂದು ಅವರು ಕೇಳಿದ್ದಾರೆ. ಅಷ್ಟೊತ್ತಿಗೆ ಸಿಟ್ಟುಗೊಂಡ ಕಾಂಗ್ರೆಸ್ ಅಧ್ಯಕ್ಷೆ ಸ್ಮೃತಿ ಇರಾನಿಯತ್ತ ತಿರುಗಿ, ನನ್ನಲ್ಲಿ ನೀವು ಮಾತನಾಡಬೇಡಿ ಎಂದಿದ್ದಾರೆ.


ಅಲ್ಲಿ ಏನು ನಡೆದಿತ್ತು ಎಂಬುದನ್ನು ರಾಜ್ಯಸಭಾ ಸಂಸದೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದು ಹೀಗೆ.


ಆದಾಗ್ಯೂ, ಕಾಂಗ್ರೆಸ್ ಸಂಸದೆ ಗೀತಾ ಕೋಡಾ ಅವರು ಸ್ಮೃತಿ ಇರಾನಿ ಸಿಟ್ಟಿನಿಂದ ಸೋನಿಯಾ ಗಾಂಧಿಯತ್ತ ಬೆರಳು ತೋರಿಸಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಸೋನಿಯಾ ಮತ್ತೊಬ್ಬ ಸಂಸದರ ಜತೆ ಮಾತನಾಡಿದ್ದು ಅವರು ಇರಾನಿ ಜತೆ ಮಾತನಾಡಿಲ್ಲ ಎಂದಿದ್ದಾರೆ.

Published On - 3:38 pm, Thu, 28 July 22